ಶ್ರೀಪಾದರಾಜ (ಶ್ರೀಪಾದರಾಯ)
ಶ್ರೀಪಾದರಾಜರು
ಇವರ ಕಾಲ: ೧೩೮೯ - ೧೪೮೭
ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು.
ಇವರ ಕೀರ್ತನೆಗಳ ಅಂಕಿತ: ರಂಗವಿಠಲ
ಜೀವನ
ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
ಭೂಷಣಕೆ ಭೂಷಣ
ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.
ಶ್ರೀಪಾದರಾಯರ ಬಗ್ಗೆ ಮತಷ್ಟು : ‘ಕಣಜ’ದಿಂದ
ಭೌಂ…. ಭೌಂ…. ಭೌಂ…. ಭೌಂ….’
ಶಬ್ದ ಕೇಳಿ ಬಂತು. ಇದೇನು, ಈ ತರಹದ ಶಬ್ದ ಕೇಳಿ ಬರುತ್ತಿದೆ? ದನ ಕಾಯುತ್ತಿದ್ದ ಹುಡುಗರೆಲ್ಲರೂ ಅತ್ತಕಡೆಗೆ ತಿರುಗಿ ನೋಡಿದರು. ಮೇನೆಯೊಂದು ಬರುತ್ತಿತ್ತು. ಮೇನೆ ಹೊತ್ತಿದ್ದವರು ಭೌಂ…. ಭೌಂ…. ಶಬ್ದ ಮಾಡುತ್ತಿದ್ದರು. ಹಾಗೆ ಬರುತ್ತಿದ್ದ ಮೇನೆ ಇವರ ಕಡೆಗೇ ಬಂದಿತು. ಮತ್ತು ಇವರ ಮುಂದೆಯೇ ನಿಂತಿತು. ಒಳಗೆ ಕುಳಿತಿದ್ದವರು ಒಬ್ಬರು ಯತಿಗಳು. ಅವರ ದೇಹವಾದರೋ ಬಂಗಾರದಂತೆ ಮಿನುಗು ತ್ತಿತ್ತು. ಮುಖವಾದರೋ ಸೌಮ್ಯವಾಗಿ, ತೇಜಪುಂಜವಾಗಿ ಬೆಳಗುತ್ತಿತ್ತು. ಹುಡುಗರು ನೋಡುತ್ತಿದ್ದಂತೆ ಆ ಯತಿ ಗಳು ಮಾತನಾಡಿದರು :
“ಮಕ್ಕಳೇ, ಊರು ಇಲ್ಲಿಂದ ಇನ್ನೆಷ್ಟು ದೂರವಿದೆ?”
ಬಾಲಕನೊಬ್ಬ ಮುಂದೆ ಬಂದ :
“ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ನಾವು ಮೇಯಿಸುತ್ತಿರುವ ದನಗಳನ್ನು ನೋಡಿ” ಎಂದು ಉತ್ತರ ಕೊಟ್ಟ.
ಯತಿಗಳಿಗೆ ಮೆಚ್ಚುಗೆ
ಯತಿಗಳಿಗೆ ಆಶ್ಚರ್ಯವಾಯಿತು. ತಮ್ಮ ಪ್ರಶ್ನೆಗೆ ಈ ಬಾಲಕ ಕೊಟ್ಟ ಉತ್ತರವಾದರೋ ಸಾಮಾನ್ಯ ರೀತಿ ಯಲ್ಲಿರಲಿಲ್ಲ. ಹೊತ್ತನ್ನು ನೋಡಿದರು; ಆ ವೇಳೆ ಗಾಗಲೇ ಸೂರ್ಯ ಮುಳುಗುತ್ತಿದ್ದ. ಬಾಲಕರಾದರೋ ವಯಸ್ಸಿನಲ್ಲಿ ತೀರ ಚಿಕ್ಕವರು; ಅವರು ಮೇಯಿಸುತ್ತಿದ್ದ ಪ್ರಾಣಿಗಳಾದರೋ ಮಂದಗಾಮಿಗಳಾದ ದನಕರು ಗಳು. ಸೂರ್ಯ ಮುಳುಗುವ ಹೊತ್ತಿನಲ್ಲಿ ಈ ಚಿಕ್ಕ ಬಾಲಕರು, ಮಂದಗಾಮಿಗಳಾದ ದನಕರುಗಳನ್ನು ಮೇಯಿಸುತ್ತಿರಬೇಕಾದರೆ, ಊರು ತೀರ ಹತ್ತಿರ ದಲ್ಲಿಯೇ ಇರಬೇಕು;
ಈ ಉತ್ತರವನ್ನು ನೆನೆಸಿಕೊಳ್ಳುತ್ತಿ ದ್ದಂತೆ ಯತಿಗಳಿಗೆ ಹೆಚ್ಚು ಹೆಚ್ಚು ಆಶ್ಚರ್ಯವಾಗುತ್ತಿತ್ತು; ಮೆಚ್ಚುಗೆಯಾಗುತ್ತಿತ್ತು. ಎಂತಹ ಕುಶಾಗ್ರ ಬುದ್ಧಿ ಈ ಬಾಲಕನದು!
ಇದು ನಡೆದುದು ಶ್ರೀರಂಗಕ್ಷೇತ್ರದಲ್ಲಿ. ಮೇನೆ ಯಲ್ಲಿ ಕುಳಿತ ಯತಿಗಳು ಸ್ವರ್ಣವರ್ಣತೀರ್ಥರು. ಶ್ರೀರಂಗದ ಯಾತ್ರೆಗೆಂದು ಅವರು ಹೊರಟಿದ್ದರು. ‘ಸ್ವರ್ಣವರ್ಣ’ ಎಂದರೆ ಬಂಗಾರದ ಬಣ್ಣ ಎಂದು ಅರ್ಥ. ಯತಿಗಳ ಶರೀರ ಬಂಗಾರದಂತೆ ಹೊಳೆಯುತ್ತಿ ದ್ದುದರಿಂದ ಅವರಿಗೆ ‘ಸ್ವರ್ಣವರ್ಣತೀರ್ಥ’ರೆಂದೇ ಹೆಸರು ಬಂದಿತು.
‘ಯಾರೀ ಹುಡುಗ?’
ಕರ್ನಾಟಕದ ಕೊಡಗು ಸೀಮೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ, ‘ದಕ್ಷಿಣಗಂಗೆ’ ಎಂದೇ ಹೆಸರು ಪಡೆದ ಕಾವೇರಿ ತಾಯಿ ಮೂರು ಕಡೆಗಳಲ್ಲಿ ಕವಲಾಗಿ ಒಡೆದು, ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳನ್ನು ಸೃಷ್ಟಿಮಾಡಿದ್ದಾಳೆ. ಮೈಸೂರಿನ ಬಳಿಯ ಶ್ರೀರಂಗಪಟ್ಟಣವೇ ಕಾವೇರಿಯ ಆದಿರಂಗ; ಶಿವನಸಮುದ್ರವೇ ಮಧ್ಯರಂಗ; ತಮಿಳುನಾಡಿನ ತಿರುಚಿರಪಳ್ಳಿಯ ಸಮೀಪದಲ್ಲಿರುವ ಶ್ರೀರಂಗವೇ ಅಂತ್ಯರಂಗ.
ಮಕ್ಕಳನ್ನು ಮಾತನಾಡಿಸಿದ ಸ್ವರ್ಣವರ್ಣತೀರ್ಥರು ಊರನ್ನು ಪ್ರವೇಶಿಸಿದ ತಕ್ಷಣವೇ ‘ಆ ಬಾಲಕ ಯಾರಿರಬಹುದು?’ ಎಂದು ವಿಚಾರ ಮಾಡಿದರು. ಅವನ ತಂದೆ-ತಾಯಿಗಳಿಗೆ ಹೇಳಿ ಕಳುಹಿಸಿದರು.
ಹುಡುಗನ ತಂದೆ ಶೇಷಗಿರಿಯಪ್ಪ, ತಾಯಿ ಗಿರಿಯಮ್ಮ. ತುಂಬ ಬಡತನದಲ್ಲಿ ಅವರು ಜೀವನ ನಡೆಸುತ್ತಿದ್ದರು. ‘ತೋಟಂತಿಲ್ಲಾಯ’ ಮನೆತನದವರೆಂದು ಅವರಿಗೆ ಹೆಸರು, ಅಂದರೆ ತೋಟದ ಮನೆಯವರು ಎಂದರ್ಥ. ತೋಟದ ಕೆಲಸಗಳನ್ನು ಮಾಡುತ್ತಾ ಬಂದದ್ದರಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.
ಈ ದಂಪತಿಗಳಿಗೆ ಒಬ್ಬನೇ ಮಗ. ಅವನು ಹುಟ್ಟಿದ್ದು ೧೪೦೬ರಲ್ಲಿ. ಹುಟ್ಟಿದ ಹನ್ನೆರಡನೆಯ ದಿನ ಮಗನಿಗೆ ಲಕ್ಷ್ಮೀನಾರಾಯಣ ಎಂದು ನಾಮಕರಣ ಮಾಡಿದರು. ಹುಡುಗನಿಗೆ ಯೋಗ್ಯ ಶಿಕ್ಷಣ ಕೊಡಿಸಲು ತಂದೆ ತಾಯಿಗಳಿಗೆ ಅನುಕೂಲವಿಲ್ಲದಿದ್ದುದರಿಂದ ಅವನನ್ನು ದನಕಾಯಲು ಬಿಟ್ಟಿದ್ದರು.
‘ಸ್ವಾಮಿಗಳು ಕೂಡಲೇ ಬರಬೇಕೆಂದು ಕರೆ ಕಳುಹಿಸಿದ್ದಾರೆ’ ಎಂದು ಸ್ವಾಮಿಗಳ ಕಡೆಯವರು ಬಂದು ಹೇಳುತ್ತಲೇ ಹುಡುಗನ ತಂದೆತಾಯಿಗಳಿಗೆ ಹೆದರಿಕೆ ಯಾಯಿತು. ‘ಏನು ಅಚಾತುರ್ಯವಾಯಿತೋ, ಹುಡುಗ ಏನು ತಪ್ಪು ಮಾಡಿದನೋ!’ ಎಂದು ಯೋಚಿಸುತ್ತ ಸ್ವಾಮಿಗಳಿದ್ದ ಕಡೆಗೆ ಬಂದರು. ಅವರಿಗೆ ನಮಸ್ಕಾರ ಮಾಡಿದರು.
ಮಗು ನಿಮ್ಮದೇ?
“ಲಕ್ಷ್ಮೀನಾರಾಯಣ ಎನ್ನುವ ಬಾಲಕ ನಿಮ್ಮ ಮಗ ತಾನೆ?” ಎಂದು ಪ್ರಶ್ನಿಸಿದರು ಸ್ವರ್ಣವರ್ಣ ಯತಿಗಳು.
“ಹೌದು, ನಮ್ಮ ಮಗನೇ” ತಾಯ್ತಂದೆಯರು ಅಂಜುತ್ತಾ ಹೇಳಿದರು!
“ಅವನನ್ನು ನಮ್ಮ ವಶಕ್ಕೆ ಒಪ್ಪಿಸಿಕೊಡಿ. ಬಾಲಕನ ಸಮಸ್ತ ಜವಾಬ್ದಾರಿಯೂ ನಮ್ಮದಾಗಿರಲಿ” ಎಂದರು ಸ್ವರ್ಣವರ್ಣತೀರ್ಥರು.
ಶೇಷಗಿರಿಯಪ್ಪ ಮತ್ತು ಗಿರಿಯಮ್ಮನವರಿಗೆ ಇದು ಅನಿರೀಕ್ಷಿತ ಪ್ರಸಂಗವಾಗಿತ್ತು. ಅವರಿಗೆ ಒಬ್ಬನೇ ಮಗ. ಅವನನ್ನು ಸ್ವಾಮಿಗಳ ವಶಕ್ಕೆ ಒಪ್ಪಿಸಿ ದೂರ ಕಳುಹಿಸಿ ಅವನನ್ನು ಬಿಟ್ಟಿರುವುದು ಹೇಗೆ ಎಂದು ದುಃಖ. ಜತೆಗೆ ಮುಂದೆ ತಮ್ಮ ಗತಿ ಏನು ಎಂಬ ಯೋಚನೆ. ಯೋಚಿಸುತ್ತ ನಿಂತ ಆ ದಂಪತಿಗಳನ್ನು ಕುರಿತು ಸ್ವರ್ಣವರ್ಣ ಯತಿಗಳು ಹೇಳಿದರು.
“ನಿಮ್ಮ ಮಗ ಶುಭ ಲಕ್ಷಣಗಳಿಂದ ಕೂಡಿದ್ದಾನೆ. ನಮ್ಮ ದೇಶದ ಕುಲದೀಪಕನಾಗುವ ಅವನನ್ನು ದನಕಾಯಲು ಬಿಟ್ಟಿರುವಿರಲ್ಲ! ಅವನ ಬಗೆಗೆ ನೀವು ಕಳವಳವನ್ನು ಬಿಡಿ. ನಿಶ್ಚಿಂತೆಯಿಂದ ಬಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದ ಅವರು ನಡೆದ ಸಂಗತಿಯನ್ನು ವಿವರಿಸಿದರು.
ಶೇಷಗಿರಿಯಪ್ಪ-ಗಿರಿಯಮ್ಮ ಸ್ವಾಮಿಗಳಿಗೆ ನಮಸ್ಕರಿಸಿ ದರು.
“ಮಗು ನಿಮ್ಮದೇ, ನಮ್ಮದಲ್ಲ. ಅನುಗ್ರಹಿಸಬೇಕು” ಎಂದರು.
ಅಂದಿನಿಂದ ಆ ಬಾಲಕ ಸ್ವರ್ಣವರ್ಣತೀರ್ಥರ ಸಾಕುಮಗನೆನಿಸಿಕೊಂಡ. ಆಗ ಅವನ ವಯಸ್ಸು ಇನ್ನೂ ಐದು ವರ್ಷ.
ಶಿಕ್ಷಣ
ಲಕ್ಷ್ಮೀನಾರಾಯಣನನ್ನು ಜತೆಯಲ್ಲಿ ಕರೆದು ಕೊಂಡು ಗುರುಗಳು ಸಂಚಾರ ಹೊರಟರು. ಅವನಿಗೆ ಏಳನೆಯ ವರ್ಷದಲ್ಲಿ ಉಪನಯನವನ್ನು ಮಾಡಿದರು. ಮುಂದೆ ವಿದ್ಯಾಭ್ಯಾಸವನ್ನು ಕೊಡಿಸಿದರು. ಲಕ್ಷ್ಮೀನಾರಾಯಣ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಆ ಎಳೆಯ ವಯಸ್ಸಿಗೇ ಅವನ ಜ್ಞಾನ ಅಪಾರವಾಗಿತ್ತು. ಜೊತೆಗೆ ವೈರಾಗ್ಯವೂ ಅವನಲ್ಲಿ ನೆಲಸಿತ್ತು. ಗುರುಗಳಾದ ಸ್ವರ್ಣವರ್ಣತೀರ್ಥರು ತಾವೇ ಲಕ್ಷ್ಮೀ ನಾರಾಯಣನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟರು. ಅಲ್ಲಿಂದ ಮುಂದೆ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ಮುನಿ’ ಎನ್ನಿಸಿಕೊಂಡ. ಈ ತೇಜೋವಂತ ಬಾಲಮುನಿಗೆ ಇನ್ನೂ ಹೆಚ್ಚಿನ ಶಿಕ್ಷಣದ ಅಗತ್ಯವಿತ್ತು. ಆಗಿನ ಕಾಲದಲ್ಲಿ ಮಹಾ ಪಂಡಿತ ರೆನ್ನಿಸಿಕೊಂಡಿದ್ದವರು ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಭುದೇಂದ್ರತೀರ್ಥರು. ಬಾಲಮುನಿಯನ್ನು ಕರೆದು ಕೊಂಡುಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರಲ್ಲಿ ಬಿಡಲಾಯಿತು. ಸಕಲ ವೇದ ಶಾಸ್ತ್ರಗಳನ್ನೂ ಲಕ್ಷ್ಮೀ ನಾರಾಯಣ ಮುನಿ ಅಧ್ಯಯನ ಮಾಡಿ ಸಂಪೂರ್ಣ ವಾಗಿ ತಿಳಿದುಕೊಂಡ. ತರ್ಕ, ನ್ಯಾಯಗಳಲ್ಲಿ ಗಟ್ಟಿಗನಾದ.
ಶ್ರೀಪಾದರಾಜರು
ಒಮ್ಮೆ ವಿಭುದೇಂದ್ರತೀರ್ಥರು ತಮ್ಮ ಶಿಷ್ಯರೊಡನೆ ಸಂಚಾರಮಾಡುತ್ತಾ ಕೊಪ್ರ ಎಂಬ ಗ್ರಾಮಕ್ಕೆ ಬಂದರು. ಕೊಪ್ರ ಎನ್ನುವುದು ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿದೆ. ಇದೇ ಹೊತ್ತಿಗೆ ಸರಿಯಾಗಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ರಘುನಾಥ ತೀರ್ಥರು ತಾವೂ ಸಂಚಾರ ಮಾಡುತ್ತಾ ಅದೇ ಕೊಪ್ರ ಗ್ರಾಮಕ್ಕೆ ಬಂದರು. ಇಬ್ಬರು ಯತಿಗಳ ಸಮಾಗಮವಾಯಿತು. ಉಭಯ ಕುಶಲೋಪರಿಗಳು ಜರುಗಿದವು. ಶ್ರೀ ರಘುನಾಥತೀರ್ಥರ ಕಣ್ಣುಗಳು ಅಲ್ಲಿಯೇ ತೇಜಃಪುಂಜನಾಗಿ ಕಾಣಿಸುತ್ತಿದ್ದ ಬಾಲಮುನಿಯ ಮೇಲೆ ಹರಿದವು.
‘ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ದನಗಳನ್ನು ನೋಡಿ.’
“ಏನೇನು ಓದಿದ್ದೀರಿ?” ಎಂದು ಕುತೂಹಲಕ್ಕಾಗಿ ಪ್ರಶ್ನೆ ಹಾಕಿದರು. ಪ್ರಶ್ನೆ ಕೇಳಿದ್ದೆ ತಡ ಬಾಲಮುನಿ, ಮಧ್ವಾಚಾರ್ಯರ ಗ್ರಂಥಗಳನ್ನೂ ಸುಧಾ ವ್ಯಾಖ್ಯಾನ ವನ್ನೂ ನಿರರ್ಗಳವಾಗಿ ಒಪ್ಪಿಸಿದನಲ್ಲದೆ, ತನ್ನ ಶಾಸ್ತ್ರ ಪಾಂಡಿತ್ಯವನ್ನೂ ನಿವೇದನೆ ಮಾಡಿದ. ಬಾಲಕನ ಮೇಧಾಶಕ್ತಿಯನ್ನೂ ವಿದ್ಯಾಪ್ರೌಢಿಮೆಯನ್ನೂ ಕಂಡು ರಘುನಾಥತೀರ್ಥರು ತಲೆದೂಗುತ್ತಾ ಮತ್ತೆಮತ್ತೆ ಪ್ರಶಂಸೆಗಳನ್ನು ಮಾಡಲು ಆರಂಭಿಸಿದರು.
ತನಗಿಂತ ಹಿರಿಯರೂ ಜ್ಞಾನಸಂಪನ್ನರೂ ಆದ ಯತಿಗಳು ತನ್ನನ್ನು ಈ ರೀತಿ ಹೊಗಳುತ್ತಿರುವುದನ್ನು ಕಂಡು ಬಾಲಮುನಿಗೆ ತೀರಾ ಸಂಕೋಚವೆನಿಸಿತು. ವಿನಯದಿಂದ ಕೈಜೋಡಿಸಿ, “ತಾವು ಮಹಾ ಜ್ಞಾನಿಗಳು. ಮಹಾ ಸಂಸ್ಥಾನವೊಂದರ ಅಪತಿಗಳು. ನಾನೋ ಕೇವಲ ಬಾಲಸಂನ್ಯಾಸಿ. ತಾವು ಶ್ರೀಪಾದಂಗಳವರು, ನನ್ನಂಥವನ ಗುಣಕಥನ ಮಾಡಬಾರದು” ಎಂದರು.
ಶ್ರೀರಘುತೀರ್ಥರಿಗೆ ಬಾಲಸಂನ್ಯಾಸಿಯ ವಿನಯ ಸೌಜನ್ಯಗಳು ತುಂಬ ಮೆಚ್ಚುಗೆಯಾದವು. ಬಹು ಸಂತೋಷದಿಂದ,
“ನಾವು ಶ್ರೀಪಾದಂಗಳವರಾದರೆ, ನೀವು ಶ್ರೀಪಾದ ರಾಜರು” ಎಂದು ಹೇಳಿದರು.
ಅಂದಿನಿಂದ ಲಕ್ಷ್ಮೀನಾರಾಯಣ ಮುನಿ ‘ಶ್ರೀಪಾದರಾಜರು’ ಎಂದೇ ಪ್ರಖ್ಯಾತರಾದರು.
ಶ್ರೀ ವಿಭುದೇಂದ್ರತೀರ್ಥರಲ್ಲಿ ಶ್ರೀಪಾದರಾಜರ ವಿದ್ಯಾಭ್ಯಾಸ ಮುಗಿದಿತ್ತು. ಗುರುಕಾಣಿಕೆಯನ್ನು ಸಲ್ಲಿಸಿ ಶ್ರೀರಂಗದಲ್ಲಿದ್ದ ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರ ಬಳಿಗೆ ಹಿಂದಿರುಗಿದರು.
ಪೀಠ ಬೆಳಗಲು
ಸ್ವರ್ಣವರ್ಣರ ಆನಂದಕ್ಕಂತೂ ಪಾರವೇ ಇಲ್ಲ. ತಾವು ಕರೆದುಕೊಂಡು ಹೋಗಿ ಬಿಟ್ಟ ಲಕ್ಷ್ಮೀನಾರಾಯಣ ಬಾಲಮುನಿ ಇದೀಗ ‘ಶ್ರೀಪಾದರಾಜರು’ ಎಂಬ ಬಿರುದನ್ನು ಪಡೆದು ಬಂದಿದ್ದಾನೆ. ವಿದ್ಯೆ, ವಿನಯ, ವೈರಾಗ್ಯ, ಗಾಂಭೀರ್ಯಗಳ ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಸ್ವರ್ಣವರ್ಣರು ಶ್ರೀಪಾದರಾಜನನ್ನು ಕಂಡು ಉಬ್ಬಿ ಹೋದರು.
ಈ ಹೊತ್ತಿಗೆ ಅವರಿಗೂ ತುಂಬ ವಯಸ್ಸಾಗಿತ್ತು. ತಮ್ಮ ಅನಂತರ ಪೀಠಕ್ಕೆ ಬರಲು ಇಂಥ ಶಿಷ್ಯನಿಗಿಂತ ಬೇರೊಬ್ಬರುಂಟೆ! ಶ್ರೀಪಾದರಾಜರಿಗೇ ತಮ್ಮ ಸಂಸ್ಥಾನ ಸಲ್ಲತಕ್ಕದ್ದೆಂದು ಸ್ವರ್ಣವರ್ಣರು ನಿಶ್ಚಯಿಸಿಕೊಂಡರು. ಶ್ರೀಪಾದರಾಜರಿಗೇ ತಮ್ಮ ಪೀಠವನ್ನು ಅರ್ಪಿಸ ಬೇಕೆಂದು ಅವರಿಗೆ ಕನಸು ಬೇರೆ ಬಿದ್ದಿತ್ತಂತೆ.
ಸ್ವರ್ಣವರ್ಣರು ಶ್ರೀಪಾದರಾಜರ ತಂದೆತಾಯಿಗಳಿಗೆ ಹೇಳಿಕಳುಹಿಸಿದರು, ಬರಮಾಡಿಕೊಂಡರು. ತಮ್ಮ ಮನಸ್ಸಿ ನಲ್ಲಿರುವ ನಿರ್ಧಾರವನ್ನು ತಿಳಿಯಪಡಿಸಿದರು. ಎಲ್ಲರ ಒಪ್ಪಿಗೆ ಪಡೆದು ಸಂತೋಷದಿಂದ ತಮ್ಮ ಪೀಠದ ಮೇಲೆ ಶ್ರೀಪಾದರಾಜರನ್ನು ಕೂಡಿಸಿ ಪಟ್ಟಾಭಿಷೇಕ ನಡೆಸಿದರು.
ಪೀಠಕ್ಕೆ ಬಂದಾಗ ಶ್ರೀಪಾದರಾಜರಿಗೆ ವಯಸ್ಸು ಇನ್ನೂ ಹದಿನಾಲ್ಕು ವರ್ಷ. ಮುಂದೆ ಸ್ವಲ್ಪಕಾಲದಲ್ಲಿ ಸ್ವರ್ಣವರ್ಣತೀರ್ಥರು ಕಾಲವಾದರು. ಶ್ರೀರಂಗಕ್ಷೇತ್ರಕ್ಕೆ ಹೋದವರು ಇಂದಿಗೂ ಸ್ವರ್ಣವರ್ಣರ ವೃಂದಾವನ ವನ್ನು ಅಲ್ಲಿ ಕಾಣಬಹುದು.
ಎಳೆಯ ಬಾಲಕನೊಬ್ಬನಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿ, ಅವನನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡಿ ಕನ್ನಡದೇಶ ಮತ್ತು ಭಾಷೆಗೆ ಶ್ರೀಪಾದರಾಜನೆಂಬ ಮಹಿಮಾನ್ವಿತನನ್ನು ಕೊಟ್ಟ ಶ್ರೇಯಸ್ಸು ಸ್ವರ್ಣವರ್ಣ ತೀರ್ಥರಿಗೆ ಸಲ್ಲುತ್ತದೆ.
ದಾಸಸಾಹಿತ್ಯದ ಅರುಣೋದಯ
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ, ವಿದ್ವತ್ತುಗಳಿಂದ ಶೋಭಿಸುತ್ತಾ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚನೆ ಮಾಡಿದರು. ಕರ್ನಾಟಕದ ನೆಲದಲ್ಲಿ ಧರ್ಮಜಾಗೃತಿ ಯನ್ನು ಉಂಟುಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ತಾಳಗಳನ್ನು ಹಾಕುತ್ತಾ ನರ್ತನ ಮಾಡಿದರು. ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಭಗವನ್ನಾಮ ಸಂಗೀತ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ‘ಶ್ರೀಪಾದ ರಾಜರಿಂದ ದಾಸಸಾಹಿತ್ಯದ ಅರುಣೋದಯ’ ಎಂದೇ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರೆಯಲಾಗಿದೆ.
ನಮ್ಮ ಭರತಖಂಡದಲ್ಲಿ ಭಕ್ತಿಮಾರ್ಗವೆನ್ನುವುದು ಬಹು ದೊಡ್ಡ ಸಂಪ್ರದಾಯ. ನಮ್ಮ ಕರ್ನಾಟಕ ಭೂಮಿ ಯಲ್ಲಿಯೇ ಅದು ಜನಿಸಿತ್ತೆನ್ನುವುದು ನಮಗೆಲ್ಲ ಹೆಮ್ಮೆ. ಮಧ್ವಾಚಾರ್ಯರು ಇದರ ಆದಿ ಪ್ರವರ್ತಕರು. ಅವರನ್ನೇ ಗುರುವಾಗಿಟ್ಟುಕೊಂಡು ವೈಷ್ಣವ ದಾಸಪಂಥ ಕರ್ನಾಟಕದಲ್ಲೆಲ್ಲ ಭಕ್ತಿ ಪ್ರಚಾರ ಮಾಡಿತು. ಇದರ ಪ್ರಭಾವ ಉತ್ತರದ ಬಂಗಾಳ ದೇಶದವರೆಗೂ ವ್ಯಾಪಿಸಿತು. ಭಕ್ತಿ ಸಂಪ್ರದಾಯ ಎಂದರೇನು? ಭಗವಂತನಲ್ಲಿ ಗಾಢವಾದ ಪ್ರೇಮವೇ ಭಕ್ತಿ. ಹೃದಯದಲ್ಲಿ ಉಕ್ಕಿ ಬರುವಂತಹ ಭಾವನಾಲಹರಿಗಳನ್ನು ಯಾವ ಮುಚ್ಚು ಮರೆಯಿಲ್ಲದೆಯೇ ಭಗವಂತನಲ್ಲಿ ತೋಡಿಕೊಳ್ಳ ಲಾಗುತ್ತದೆ. ಅತ್ಯುತ್ಕಟ ಭಾವನೆಗಳು, ಸರಳವಾದ ಹೃದಯ, ಪ್ರೇಮ ಪುರಸ್ಸರವಾದ ಮಾತುಗಳು – ಇವು ಭಕ್ತಿಮಾರ್ಗದವರ ಲಕ್ಷಣ. ಈ ಭಕ್ತಿ ಸಂಪ್ರದಾಯ ನಮ್ಮ ಕನ್ನಡ ದೇಶದಲ್ಲಿ ೧೩ರಿಂದ ೧೮ನೆಯ ಶತಮಾನ ಗಳವರೆಗೂ ತುಂಬು ಪ್ರವಾಹದಂತೆ ಹರಿ ಯಿತು. ಲೋಕ ಕಲ್ಯಾಣದೃಷ್ಟಿಯೇ ಇವರದು. ಇವರನ್ನು ‘ದಾಸಕೂಟದವರು’ ಎಂದು ಕರೆಯ ಲಾಯಿತು. ಇವರ ಕೃತಿಗಳನ್ನೆಲ್ಲ ‘ದಾಸಸಾಹಿತ್ಯ’ ಎಂದು ಹೇಳಲಾಯಿತು. ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಬಹಳ ಹಿಂದಿನವರು. ತ್ಯಾಗರಾಜರ ತಾಯಿ ತಮ್ಮ ಮನೆಯಲ್ಲಿ ಪುರಂದರರ ಕೀರ್ತನೆಗಳನ್ನು ಹಾಡುತ್ತಿದ್ದರಂತೆ. ಪುರಂದರದಾಸರಿ ಗಿಂತಲೂ ಹೆಚ್ಚು ಹಿಂದಿನವರು
ಶ್ರೀಪಾದರಾಜರು.
ನಮಸ್ತೇ ಶ್ರೀಪಾದರಾಜಾಯ
ನಮಸ್ತೇ ವ್ಯಾಸಯೋಗಿನೇ |
ನಮಃ ಪುರಂದರಾರ್ಯಾಯ
ವಿಜಯಾರ್ಯಾ ಯತೇ ನಮಃ ||
ಎಂದೇ ಶ್ರೀಪಾದರಾಜರಿಗೆ ಆದ್ಯಪಟ್ಟವನ್ನು ಕಟ್ಟಲಾ ಗಿದೆ. ದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು – ಹೀಗೆ ಇವರೆಲ್ಲರಿಗೂ ಗುರು ಸಮಾನರಾಗಿ ಇರತಕ್ಕವರು ಶ್ರೀಪಾದರಾಜರು. ದಾಸ ಸಾಹಿತ್ಯದ ಪಿತಾಮಹರೆಂದೇ ಅವರನ್ನು ಕರೆಯಲಾಗಿದೆ.
ತಿಳಿಗನ್ನಡದಲ್ಲಿ ಕೃತಿಗಳು
ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರ ಜತೆಯಲ್ಲಿ ಹಲವು ವರ್ಷಗಳ ಕಾಲವೇ ಶ್ರೀಪಾದರಾಜರು ತಮಿಳು ದೇಶದ ಶ್ರೀರಂಗದಲ್ಲಿ ಇದ್ದರಷ್ಟೆ. ತಮಿಳರು ಶ್ರೀವೈಷ್ಣವ ಪ್ರಬಂಧಗಳನ್ನು ತಮ್ಮ ತಾಯಿನುಡಿಯಾದ ತಮಿಳು ಭಾಷೆಯಲ್ಲಿಯೇ ಅಕ್ಕರೆಯಿಂದ ಸಂಗೀತ ಸಾಹಿತ್ಯಬದ್ಧವಾಗಿ ರಚಿಸುತ್ತಿದ್ದುದನ್ನೂ ಹಾಡುತ್ತಿದ್ದುದನ್ನೂ ಶ್ರೀಪಾದರಾಜರು ಕಂಡಿದ್ದರು. ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃಭಾಷೆಗಿಂತ ಬೇರೆ ಸಾಧನವೇ ಇಲ್ಲವೆಂಬುದನ್ನು ಅವರು ಅರಿತಿ ದ್ದರು. ಶ್ರೀವೈಷ್ಣವ ಪ್ರಬಂಧಗಳಂತೆಯೇ ತಮ್ಮ ಸ್ವಭಾಷೆ ಕನ್ನಡ ದಲ್ಲಿಯೂ ಕೃತಿರಚನೆಗಳನ್ನು ಮಾಡಬೇಕೆಂದು ಶ್ರೀಪಾದ ರಾಜರು ನಿರ್ಧರಿಸಿದರು. ಅದುವರೆಗೂ ದೊಡ್ಡದೊಡ್ಡ ವಿಷಯಗಳನ್ನು ಹೇಳಬೇಕಾದರೆ ಸಂಸ್ಕೃತ ಭಾಷೆಯೊಂದೇ ಯೋಗ್ಯತೆಯುಳ್ಳದ್ದೆಂದು ಪಂಡಿತರೂ ಸಾಹಿತ್ಯ ರಚನ ಕಾರರೂ ನಂಬಿದ್ದರು. ಆದರೆ ಶ್ರೀಪಾದರಾಜರು ತಾವು ಸಂಸ್ಕೃತದಲ್ಲಿ ಘನ ಪಂಡಿತರಾಗಿದ್ದರೂ ‘ವಾಗ್ವಜ್ರ’ ಎಂಬ ತಮ್ಮ ಕೃತಿಯನ್ನು ಸಂಸ್ಕೃತ ಭಾಷೆಯಲ್ಲೆ ರಚಿಸಿದ್ದರೂ ಚತುಶ್ಶಾಸ್ತ್ರಗಳನ್ನು ಓದಿದವರಾಗಿದ್ದರೂ ತಮ್ಮ ಅಂತರಂಗದ ಭಾವನಾಲಹರಿಗಳಿಗೆ, ಭಗವಂತನ ಭಕ್ತಿಗೆ ತಮ್ಮ ತಾಯ್ನುಡಿಯಾದ ಕನ್ನಡವೇ ಯೋಗ್ಯ, ಸರ್ವಶ್ರೇಷ್ಠ ವೆಂದು ತಿಳಿದರು. ತಮ್ಮ ಮಾತೃಭಾಷೆಗೆ ಶ್ರೀಪಾದರಾಜರು ಸಲ್ಲಿಸಿದಂತಹ ಗೌರವ, ಮಹತ್ವದ ಕಾಣಿಕೆ ಇದು. ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಕನ್ನಡ ಭಾಷೆಗೆ ಅವರು ಸಲ್ಲಿಸಿದಂತಹ ಈ ಪ್ರೀತಿ ಅಭಿಮಾನಗಳಿಂದ.
ಶ್ರೀಪಾದರಾಜರು ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರು ಕಾಲವಾದ ಮೇಲೆ ಶ್ರೀರಂಗ ದಿಂದ ನೇರವಾಗಿ ಮುಳಬಾಗಲು ಮಠಕ್ಕೆ ಬಂದರು. ಮುಳಬಾಗಲು ಕೋಲಾರ ಜಿಲ್ಲೆಯಲ್ಲಿದೆ. ಅಂದು ಈ ಮುಳಬಾಗಲು ಸಾಳ್ವ ನರಸಿಂಹನ ರಾಜ್ಯಾಕಾರಕ್ಕೆ ಸೇರಿತ್ತು. ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬ ರಾಗಿದ್ದ ಪದ್ಮನಾಭತೀರ್ಥ ಎಂಬವರು ಈ ಮುಳ ಬಾಗಲು ಮಠವನ್ನು ಸ್ಥಾಪಿಸಿದವರು. ಶ್ರೀಪಾದರಾಜರ ಗುರುಗಳಾಗಿದ್ದ ಸ್ವರ್ಣವರ್ಣತೀರ್ಥರು ಈ ಮಠದ ಯತಿಗಳಲ್ಲಿ ಎಂಟನೆಯವರಾಗಿದ್ದರು. ಮುಂದೆ ಮುಳ ಬಾಗಲು ಮಠವೇ ಶ್ರೀಪಾದರಾಜರ ಸಮಸ್ತ ಕಾರ್ಯ ಕ್ಷೇತ್ರವಾಯಿತು. ಉನ್ನತ ವಿದ್ಯಾಪೀಠವೊಂದನ್ನು ಅವರು ಇಲ್ಲಿ ಸ್ಥಾಪನೆ ಮಾಡಿದರು. ತತ್ತ್ವಶಾಸ್ತ್ರ, ಸಂಗೀತ ಶಾಸ್ತ್ರ, ನೃತ್ಯ ಶಾಸ್ತ್ರಗಳನ್ನು ಶ್ರೀಪಾದರಾಜರು ಚೆನ್ನಾಗಿ ಬಲ್ಲವ ರಾಗಿದ್ದರು. ಸಂಸ್ಕೃತ ವಿದ್ಯಾಭ್ಯಾಸಕ್ಕೂ ಸಂಗೀತ ಕಲಾ ಭ್ಯಾಸಕ್ಕೂ ಮುಳಬಾಗಿಲು ಪ್ರಸಿದ್ಧ ಕೇಂದ್ರವಾಯಿತು.
ವ್ಯಾಸಯೋಗಿಗಳು
ಈ ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು – ವ್ಯಾಸತೀರ್ಥರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ ೫೪ ವರ್ಷ ವಯಸ್ಸು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.
ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯ ದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡು ತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ತನ್ನ ಭಾಷೆಯಲ್ಲಿಯೇ ತನ್ನನ್ನು ಮಾತ ನಾಡಿಸಿದ್ದು ಸರ್ಪಕ್ಕೆ ಸಂತೋಷವಾಯಿತಂತೆ. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ :
‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’ ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಸಿದರು. ಈ ಶಿಷ್ಯನೋ ಮಹಾಮೇಧಾವಿ. ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜ ರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. ಬ್ರಹ್ಮಣ್ಯತೀರ್ಥರ ಸಾಕುಮಗ ನಲ್ಲವೇ ವ್ಯಾಸರಾಜರು? ಶಿಷ್ಯನ ಮೇಲೆ ಶ್ರೀಪಾದರಾಜ ರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವನು ನನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳು ವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ ವ್ಯಾಸರಾಜರದು.
ಕೀರ್ತನೆಗಳು
ಅವರು ಧರ್ಮಪೀಠವೊಂದರಲ್ಲಿ ಕುಳಿತಿದ್ದರು, ಮಹಾ ಮಹಿಮರಾಗಿದ್ದರು. ಮಾತ್ರವಲ್ಲ, ವಿಶೇಷವಾಗಿ ಕನ್ನಡ ನಾಡಿನಲ್ಲಿ, ಕನ್ನಡ ಭಾಷೆಯಲ್ಲಿ ಒಂದು ಹೊಸ ಬಗೆಯ ಸಾಹಿತ್ಯ ಪರಂಪರೆಯನ್ನೆ ಸೃಷ್ಟಿಸಲು ಅವರು ಆದಿಪುರುಷರಾದರು ಎನ್ನುವುದು ತುಂಬ ಮುಖ್ಯ ಸಂಗತಿ. ಕನ್ನಡದಲ್ಲಿ ಸಂಗೀತಕೃತಿ ರಚನೆಗೆ ಅವರೇ ಸೂರ್ತಿದಾಯಕರಾದರು. ಇವರಿಗೂ ಹಿಂದೆ ನರಹರಿ ತೀರ್ಥ ಎಂಬುವರಿದ್ದರು. ಅವರು ಕೂಡ ಕನ್ನಡದಲ್ಲಿ ಕೀರ್ತನೆಗಳನ್ನು ಮಾಡಿದ್ದಾರೆ. ಆದರೆ ನಮಗೆ ಸಿಕ್ಕಿರುವುದು ಕವಲ ಒಂದೋ ಎರಡೋ ಅಷ್ಟೆ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ, ಅನುಪಲ್ಲವಿಗಳನ್ನು ಇಟ್ಟುಕೊಂಡು ವ್ಯಾಪಕವಾಗಿ ಕನ್ನಡದಲ್ಲಿ ಕೃತಿ ರಚನೆ ಮಾಡಿದ ಮೊದಲ ಕೀರ್ತಿ ಶ್ರೀಪಾದರಾಜರಿಗೇ ಸಲ್ಲ ಬೇಕು. ಅದರಿಂದಲೇ ಶ್ರೀಪಾದ ರಾಜರ ಹಸರು ಅಷ್ಟೊಂದು ಗಮನಾರ್ಹವಾಗಿರುವುದು. ‘ರಂಗವಿಠ್ಠಲ’ ಎಂಬ ಅಂಕಿತವನ್ನಿಟ್ಟುಕೊಂಡು ನೂರಾರು ಕೀರ್ತನೆ ಗಳನ್ನು ಶ್ರೀಪಾದರಾಜರು ಮಾಡಿದ್ದಾರೆ. ಸರಳವಾದ ಶೈಲಿ, ಮೃದುಮೃದುವಾದ ಭಾಷೆ, ಭಕ್ತಿರಸದಿಂದ ತುಂಬಿತುಳು ಕಾಡುತ್ತಿರುವ ಅವರ ಕೀರ್ತನೆಗಳು ಕೇಳಲು ತುಂಬ ಮನೋಹರವಾಗಿರುತ್ತವೆ. ರಾಗದ ಹೆಸರುಗಳನ್ನು ಸೇರಿಸಿಕೊಂಡೇ ಅವರು ರಚಿಸಿರುವ ಕೀರ್ತನೆಯೊಂದು, ಹೇಗೆ ಸಂಗೀತದಲ್ಲಿ ಅವರ ಜ್ಞಾನ ಅಪಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಾಡಿ ಕೊಳ್ಳಲು ಈ ಕೀರ್ತನೆ ತುಂಬ ಇಂಪಾಗಿರುವುದರಿಂದ ಅದನ್ನಿಲ್ಲಿ ಕೊಡಲಾಗಿದೆ.
ಲಾಲಿ ಗೋವಿಂದ ಲಾಲಿ, ಕೌಸಲ್ಯ
ಬಾಲ ಶ್ರೀರಾಮ ಲಾಲೀ
ಲಾಲಿ ಮುನಿವಂದ್ಯಲಾಲಿ, ಜಾನಕೀ
ರಮಣ ಶ್ರೀರಾಮ ಲಾಲೀ || ಪ ||
ಪಲ್ಲವಾಧರೆಯರೆಲ್ಲ ಈ ಶಿಶುವ
ತುಲ್ಯ ವರ್ಜಿತವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಂದ ||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವಗಾಂಧಾರದಿಂದ ||
ಶ್ರೀಪಾದರಾಜರ ಹಾಡುಗಳು
ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||
ಅಹಿಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||
ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ
ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||
ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು
ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||
++++++++
ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ||
+++++++++
ಆಡಲು ಪೋಗೊಣು ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||೧||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||೨||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ||೩||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||೪||
+++++++
( ನಾಟಿ ರಾಗ ಖಂಡಛಾಪು ತಾಳ)
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ವಣನಿಭ ಕಪೋಲಗಳಿಗೆ ಶರಣು||೧||
ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು
ಇಂತಿ
ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಬಸವಪಟ್ಟಣ [ಚಿರಡೋಣಿ]
ಅತ್ಯಂತ ಮಾಹಿತಿಪೂರ್ಣ ಬರೆಹ. ಧನ್ಯವಾದ.
ಪ್ರತ್ಯುತ್ತರಅಳಿಸಿ