ಸೋಮವಾರ, ಮೇ 28, 2018

ಅಮುಗೆ ರಾಯಮ್ಮ ನವರ ವಚನ ಸಾಹಿತ್ಯ

ಮುಗೆ ರಾಯಮ್ಮ

ಅಮುಗೆ ರಾಯಮ್ಮ ಸೊನ್ನಲಿಗೆ(ಈಗಿನ ಸೊಲ್ಲಾಪುರ) ಊರಿನವಳು, ನೇಕಾರ ಕುಲದವಳು, ಅಮುಗೆ ದೇವಯ್ಯನ ಧರ್ಮಪತ್ನಿ. ಇವಳ ಮೊದಲ ಹೆಸರು ವರದಾನಿಯಮ್ಮ. ಶರಣೆ ಅಕ್ಕಮ್ಮ ಳಂತೆ ಈಕೆಯೂ ಆಚಾರಶೀಲೆ. ಸಮಾಜದ ಓರೆಕೋರೆಗಳ ಬಗ್ಗೆ ತೀಕ್ಷ್ಣವಾಗಿ ವಿಮರ್ಶಿಸಿದ್ದಾಳೆ. ಹಲವಾರು ವಚನಗಳಲ್ಲಿ ಆತ್ಮನಿರೀಕ್ಷೆಯೂ ಕಂಡುಬರುತ್ತದೆ. ಅಲ್ಲದೆ ಕೆಚ್ಚು, ಧ್ಯೆರ್ಯ,ಛಲ, ನಿಷ್ಟುರತೆ, ಆಧ್ಯಾತ್ಮ ಅಭಿಮಾನ, ವಿಡಂಬನೆ, ವಿರಾಗಿಗಳ ಕಟುಟೀಕೆ ಇತ್ಯಾದಿ ಮೂಡಿ ಬಂದಿವೆ. ಇವಳ ಲಿಂಗನಿಷ್ಠೆ ಗಾಢವಾದುದು. ಈಕೆಯ ಪಾಲಿಗೆ ಗುರು, ಲಿಂಗ, ಪತಿ ಮೂರು ಒಂದೇ. ರಾಯಮ್ಮನ ಅಂಕಿತ "ಅಮುಗೇಶ್ವರ".

ಅಮುಗೆ ರಾಯಮ್ಮ
ಜನನ
೧೧೬೦
ಅಂಕಿತನಾಮ
ಅಮುಗೇಶ್ವರಲಿಂಗ
ಸಂಗಾತಿ(ಗಳು)
ಅಮುಗೆದೇವಯ್ಯ
'ಎನ್ನ ಕಣ್ಣೊಳಗಿನ ಕಟ್ಟಿಗೆಯ ಮುರಿದವರಾರನೂ ಕಾಣೆ
ಎನ್ನ ಕಾಲೊಳಗಿನ ಮುಳ್ಳ ತೆಗೆದವರಾರನೂ ಕಾಣೆ
ಎನ್ನ ಅಂಗದಲ್ಲಿಪ್ಪ ಅಹಂಕಾರವ ಸುಡುವವರಾರನೂ ಕಾಣೆ
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ
ಕೆಡಿಸುವರಾರನೂ ಕಾಣೆನಯ್ಯಾ
ಆದ್ಯರ-ವೇದ್ಯರ ವಚನಗಳಿಂದ
ಅರಿದೆವೆಂಬುವರು ಅರಿಯಲಾರರು ನೋಡಾ!
ಎನ್ನ ಕಣ್ಣೊಳಗಿನ ಕಟ್ಟಿಗೆಯ ನಾನೇ ಮುರಿಯಬೇಕು
ಎನ್ನ ಕಾಲೊಳಗಿನ ಮುಳ್ಳ ನಾನೇ ತೆಗೆಯಬೇಕು
ಎನ್ನ ಅಂಗದಲ್ಲಿಪ್ಪ ಅಹಂಕಾರವ ನಾನೇ ಸುಡಬೇಕು
ಎನ್ನ ಮನದಲ್ಲಿಪ್ಪ ಮಾಯ ಪ್ರಪಂಚವ ನಾನೇ ಕಳೆಯಬೇಕು
ಅಮುಗೇಶ್ವರಲಿಂಗವ ನಾನೇ ಅರಿಯಬೇಕು'.

ಅಮುಗೆ ರಾಯಮ್ಮ ವಚನಗಳು
ಪರಿವಿಡಿ (index)
589
ಅಂಗಕ್ಕಾಚಾರ ಮನಕ್ಕೆ ಜ್ಞಾನ ಸಮರಸಾದ್ವೈತವಾದ ಮತ್ತೆ
ಪುನರಪಿ ಪುನರ್ದಿಕ್ಷೆಯುಂಟೆ ?
ಗರುಡಿಯಲ್ಲಿ ಕೋಲಲ್ಲದೆ, ಕಾಳಗದಲ್ಲಿ ಉಂಟೆ ಕೋಲು ?
ಭವಿಗೆ ಮೇಲುವ್ರತ ಪುನರ್ದಿಕ್ಷೆಯಲ್ಲದೆ, ಭಕ್ತರಿಗುಂಟೆ ?
ವ್ರತತಪ್ಪಿ ಅನುಗ್ರಹವಿಡಿದ ನರಕಿಗಳಿಗೆ ಮುಕ್ತಿ ಇಲ್ಲ ಎಂದೆ ಅಮುಗೇಶ್ವರಲಿಂಗದಲ್ಲಿ.

590
ಅಂಗದ ಆಪ್ಯಾಯನಕ್ಕೆ ಲಿಂಗವ ಮರೆದು ತಿರುಗುವ
ಭಂಡಭವಿಗಳನೇನೆಂಬೆನಯ್ಯಾ ?
ಲಿಂಗದಲ್ಲಿ ನಿತ್ಯರಲ್ಲ ; ಜಂಗಮದಲ್ಲಿ ಪ್ರೇಮಿಗಳಲ್ಲ ;
ಹಿಡಿದ ಛಲದಲ್ಲಿ ಕಡುಗಲಿಗಳಲ್ಲ.
ಮೃಡನ ಕಂಡೆಹೆನೆಂಬ ಮೂರ್ಖರ ಮುಖವ ನೋಡಲಾಗದು ;
ಅವರಡಿಯ ಮೆಟ್ಟಲಾಗದು ಕಾಣಾ ಅಮುಗೇಶ್ವರಾ.

591
ಅಂಗದ ಮೇಲೆ ಲಿಂಗವಿಲ್ಲದವರಲ್ಲಿ
ಲಿಂಗಾರ್ಪಿತವ ಬೇಡಲೇಕೆ ?
ಅಂಗದ ಮೇಲೆ ಲಿಂಗವುಳ್ಳ ಲಿಂಗವಂತರಲ್ಲಿ
ಲಿಂಗಾರ್ಪಿತವ ಬಿಡಲೇತಕ್ಕೆ ?
ಜಾತಿಗೋತ್ರವನೆತ್ತಿ ನುಡಿಯಲೇಕೆ ?
ಸಹಜ ಶಿವಭಕ್ತರೆಂದು, ಶೀಲವಂತರೆಂದು, ವ್ರತಾಚಾರಿಗಳೆಂದು,
ವ್ರತಭ್ರಷ್ಟರೆಂದು ಅವರ ಕುಲಛಲವ ಕೇಳಿಕೊಂಡು
ಆಚಾರವುಳ್ಳವರು ಅನಾಚಾರಿಗಳು ಎಂದು
ಬೇಡುವ ಭಿಕ್ಷವ ಬಿಡಲೇತಕ್ಕೆ ?
ಮದ್ಯಮಾಂಸವ ಭುಂಜಿಸುವವರು ಅನಾಚಾರಿಗಳು.
ಆವ ಕುಲವಾದಡೇನು, ಅಂಗದ ಮೇಲೆ ಲಿಂಗವುಳ್ಳವರೆಲ್ಲರು
ಆಚಾರವುಳ್ಳವರೆಂಬೆನಯ್ಯಾ ; ಅಮುಗೇಶ್ವರಲಿಂಗಕ್ಕೆ ಅವರೆ ಸದ್ಭಕ್ತರೆಂಬೆನಯ್ಯಾ.

592
ಅಂದ ಚಂದಕ್ಕೆ ಲಿಂಗವ ಮರೆದು ತಿರುಗುವರು !
ಕಂಡ ಕನಸರಿಯರು ಅ ಮುಂದಣ ಸುದ್ದಿಯ ನುಡಿವರು.
ನಿಜವನರಿಯದೆ ಲಿಂಗಸಂಗಿಗಳೆಂದಡೆ ಅಮುಗೇಶ್ವರನ ಶರಣರು ಅತ್ತತ್ತ ಹೋಗೆಂಬರು.
593
ಅನುಭಾವಿ ಅನುಭಾವಿಗಳೆಂಬ ಅಜ್ಞಾನಿಗಳ
ಮುಖವ ನೋಡಲಾಗದು.
ಕಂಗಳ ಮುಂದಣ ಕಾಮ, ಮನದ ಮುಂದಣ ಆಸೆ,
ಅಂಗದಲ್ಲಿ ಅಹಂಕಾರವಾಗಿಪ್ಪವರ ಅನುಭಾವಿಗಳೆಂಬೆನೆ ?
ಸೂಳೆಯ ಮನೆಯಲ್ಲಿಪ್ಪ ಗವುಡಿಯಂತೆ
ತಮ್ಮ ತಮ್ಮ ಹಿರಿಯತನವ ಮುಂದುಗೊಂಡು
ಕುರಿಗಳಂತೆ ತಿರುಗುವ ಜಡರುಗಳ ಅನುಭಾವಿಗಳೆಂಬೆನೆ ?
ಹತ್ತೈದ ಕೂಡಿಕೊಂಡು ಇಕ್ಕಿ ಎರೆವವರ ಮನೆಗೆ ಹೋಗಿ,
ಭಕ್ತಿಬಿನ್ನಹವ ಕೈಕೊಂಡಡೆ ಬೆಕ್ಕು ಹಾಲುಕುಡಿದಂತೆ.
ಅತ್ಯತಿಷ್ಠದ್ದಶಾಂಗುಲನೆಂದು ಘಟವ ಹೊರೆವ ಮಿಟ್ಟೆಯ ಭಂಡರು
ಕಟ್ಟಿಗೆ ಮಣ್ಣ ಹಾಕಿ ಹೊಟ್ಟೆಯ ಹೊರೆವವನಂತೆ.
ಇಷ್ಟಲಿಂಗವನರಿಯದೆ ಸತ್ಯರೆಂದು ಘಟವ ಹೊರೆವ
ಘಟಕರ್ಮಿಗಳ ಮುಖವ ನೋಡಲಾಗದು ಅಮುಗೇಶ್ವರಲಿಂಗವೆ.

594
ಅನುಭಾವಿಗೆ ಅಂಗಶೃಂಗಾರವುಂಟೆ ?
ಅನುಭಾವಿಗೆ ಕಾಮಕ್ರೋಧವುಂಟೆ ?
ಅನುಭಾವಿಗೆ ನಾಹಂ ಕೋಹಂ ಸೋಹಂ ಎಂಬ
ಭ್ರಾಂತಿನ ಭ್ರಮೆಯುಂಟೆ ?
ಅನುಭಾವಿಗೆ ನನ್ನವರು ತನ್ನವರೆಂಬ
ಗನ್ನಗದಕಿನ ಮಾತುಂಟೆ ?
ಅನುಭಾವಿಗಳೆಂಬವರು ಅಲ್ಲಿಗಲ್ಲಿಗೆ
ತಮ್ಮ ಅನುಭಾವಂಗಳ ಬೀರುವರೆ ?
ಅನುಭಾವಿಗಳ ಪರಿಯ ಹೇಳಿಹೆ ಕೇಳಿರಣ್ಣಾ ;
ನೀರಮೇಲಣ ತೆಪ್ಪದಂತೆ, ಸಮುದ್ರದೊಳಗಣ ಬೆಂಗುಂಡಿನಂತೆ
ಇರಬಲ್ಲಡೆ ಅನುಭಾವಿಗಳೆಂಬೆನಯ್ಯಾ.
ವಚನಂಗಳ ಓದಿ ವಚನಂಗಳ ಕೇಳಿ
ಕಂಡ ಕಂಡ ಠಾವಿನಲ್ಲಿ ಬಂಡುಗೆಲೆವ ಜಗಭಂಡರ,
ಆತ್ಮತೇಜಕ್ಕೆ ತಿರುಗುವ ವೇಷಧಾರಿಗಳ ಕಂಡು
ಅನುಭಾವಿಗಳೆಂದಡೆ ಅಘೋನರಕ ತಪ್ಪದು ಕಾಣಾ, ಅಮುಗೇಶ್ವರಾ.

602
ಆಕಾಶಕ್ಕೆ ಹಾರುವಂಗೆ ದೋಟಿಯ ಕೋಲ ಹಂಗೇತಕಯ್ಯಾ ?
ಭೂಮಿಯ ಸೋಂಕದೆ ನಡೆವವಂಗೆ ಭೂಮಿಯ ಹಂಗೇತಕಯ್ಯಾ ?
ತನ್ನ ತಾನರಿಯದವಂಗೆ ಬಿನ್ನಾಣಿಗಳ ಮಾತೇತಕಯ್ಯಾ ?
ಅಗಮ್ಯವಾಗಿ ಚರಿಸುವಂಗೆ ಅಂಗನೆಯರ ಹಂಗೇತಕಯ್ಯಾ ?
ಅಮುಗೇಶ್ವರಲಿಂಗವನರಿದ ಶರಣಂಗೆ ಕಾವಿ ಕಾಷಾಂಬರವ ಹೊದ್ದು ತಿರುಗುವ ಕರ್ಮಿಗಳ ಹಂಗೇತಕಯ್ಯಾ ?

608
ಉತ್ತಮತೇಜಿಗೆ ಚಬುಕಿನಲ್ಲಿ ತೆಗೆವರುಂಟೆ ?
ಪಟ್ಟಣಕ್ಕೆ ಒಡೆಯನಾದ ಬಳಿಕ, ಜಾತಿಗೋತ್ರವನರಸಲುಂಟೆ ?
ಪರಮಸುಜ್ಞಾನಿಗೆ ಪ್ರಾಣದ ಹಂಗುಂಟೆ ?
ಲಿಂಗವನಪ್ಪಿದ ಶರಣನ ಕಂಡಕಂಡವರು ಜರಿದಡೆ, ಸಂದೇಹವುಂಟೆ ?
ಇಹಲೋಕದವರು ಜರಿದರೆಂದು ವಿಪರೀತಗೊಳಲೇಕೆ ?
ಅಮುಗೇಶ್ವರಲಿಂಗವನರಿದ ಶರಣಂಗೆ ಆರು ಹರಸಿದಡೇನು, ಆರು ಹಳಿದಡೇನು ?

609
ಉತ್ತಮತೇಜಿಯಮರಿಗೆ ಸುಪ್ಪತ್ತಿಗೆಯಲ್ಲದೆ
ಕತ್ತೆಯ ಮರಿಗೆ ಸುಪ್ಪತ್ತಿಗೆಯ ಹಾಸುವರೆ ?
ಅಜ್ಞಾನಿಗಳ ಹೃದಯದಲ್ಲಿ ಪರಮಾಮೃತವ ಸುರಿದಡೆ
ಪರರ ಕಾಡಿ ಬೇಡದೆ ಮಾಣ್ಬರೆ ?
ಕುಂಜರನ ವೇಷವ ತೊಟ್ಟು ಹಂದಿಯಂತೆ ತಿರುಗುವ
ಅಜ್ಞಾನಿಗಳನೇನೆಂಬೆ ಅಮುಗೇಶ್ವರಾ ?

622
ಕತ್ತೆಯಂತೆ ಬತ್ತಲೆಯಿದ್ದಡೆನು, ಇಷ್ಟಲಿಂಗಸಂಬಂಧಿಯಾಗಬಲ್ಲನೆ ?
ಕಟ್ಟಿದ್ದ ಲಿಂಗವ ಕೈಯಲ್ಲಿ ಹಿಡಿದಡೇನು, ನಿತ್ಯನಾಗಬಲ್ಲನೆ ?
ಅನಿತ್ಯವ ಹೊತ್ತುಕೊಂಡು ತಿರುಗುವ ಅಘೋರಿಗಳ ಕಂಡಡೆ
ಮಾಗಿಯ ಕೋಗಿಲೆಯಂತೆ ಮೋರೆಯ ತೋರೆನು ಅಮುಗೇಶ್ವರಾ.

628
ಕಾಗೆಯಮರಿ ಕೋಗಿಲೆಯಾಗಬಲ್ಲುದೆ ?
ಆಡಿನಮರಿ ಆನೆಯಾಗಬಲ್ಲುದೆ ?
ಸೀಳನಾಯಿ ಸಿಂಹದ ಮರಿಯಾಗಬಲ್ಲುದೆ ?
ಅರಿವು ಆಚಾರ ಸಮ್ಯಜ್ಞಾನವನರಿಯದೆ
ನಾಮವ ಹೊತ್ತುಕೊಂಡು ತಿರುಗುವ ಗಾವಿಲರ ಮುಖವ ನೋಡಲಾಗದು ಅಮುಗೇಶ್ವರಾ.

629
ಕಾದ ಹಾಲ ನೊಣ ಮುಟ್ಟಬಲ್ಲುದೆ ?
ಕಿಚ್ಚಿನೊಳಗಣ ಗುಂಡ ಬೆಕ್ಕು ಮುಟ್ಟಬಲ್ಲುದೆ ?
ಮರುಜವಣಿಯ ಕಡ್ಡಿ ಕಯ್ಯಲಿದ್ದವಂಗೆ ಸರ್ಪ ಕಡಿಯಬಲ್ಲುದೆ ?
ಈ ತ್ರಿವಿಧವನರಿದವಂಗೆ ಹಿಂದೆ ಶಂಕೆಯಿಲ್ಲ ; ಮುಂದೆ ಬಿತಿಯಿಲ್ಲ.
ಕಳಂಕು ಇಲ್ಲದೆ ಅಮುಗೇಶ್ವರಲಿಂಗವು ಅಪ್ಪಿಕೊಂಡಿತ್ತು.

630
ಕಾಯವಿಕಾರಕ್ಕೆ ತಿರುಗುವರು ಕೋಟ್ಯಾನುಕೋಟಿ
ಕಡುಗಲಿಗಳನಾರನೂ ಕಾಣೆನಯ್ಯಾ.
ಅಂಗಶೃಂಗಾರಿಗಳಾಗಿ ತಿರುಗುವರು ಕೋಟ್ಯಾನುಕೋಟಿ
ಲಿಂಗಶೃಂಗಾರಿಗಳನಾರನೂ ಕಾಣೆನಯ್ಯಾ.
ವಚನರಚನೆಯ ಅರ್ಥ ಅನುಭಾವವ ಬಲ್ಲೆನೆಂದು
ಒಬ್ಬರನೊಬ್ಬರು ಜರಿದು ಸದ್ಯೋನ್ಮಕ್ತರಾದೆವೆಂಬ ಜಗಭಂಡರ ಮೆಚ್ಚುವನೆ ಅಮುಗೇಶ್ವರಲಿಂಗವು ?

631
ಕಾಲಾಡಿಯಂತೆ ದೇಶದೇಶಕ್ಕೆ ತಿರುಗಲೇತಕ್ಕೆ ?
ಪರಸಮಯದ ಜೈನನಂತೆ ನುಡಿಯಲೇತಕ್ಕೆ ?
ಅರಿವುಳ್ಳವರ ಕಂಡು ಅಗಮ್ಯವ ನುಡಿಯಲೇತಕ್ಕೆ ?
ಲಿಂಗವನಪ್ಪಿದ ನಿಜಮಹಿಮರ ಮಾತ ಕಲಿತು
ಮಂಡೆಯ ಬೋಳಿಸಿಕೊಂಡು ಈಶನ ವೇಷವ ತೊಟ್ಟು,
ಗ್ರಾಸಕ್ಕೆ ತಿರುಗುವ ವೇಷಧಾರಿಗಳ ಲಿಂಗೈಕ್ಯರೆಂದಡೆ ಅಘೋರನರಕ ತಪ್ಪದು ಕಾಣಾ, ಅಮುಗೇಶ್ವರಾ.

633
ಕಾವಿ ಕಾಷಾಂಬರವ ಹೊದ್ದು ಕಾಮವಿಕಾರಕ್ಕೆ ತಿರುಗುವ
ಕರ್ಮಿಗಳಮುಖವ ನೋಡಲಾಗದು.
ಜಂಗಮವಾಗಿ ಜಗದಿಚ್ಫೆಯ ನುಡಿವ
ಜಂಗುಳಿಗಳಮುಖವ ನೋಡಲಾಗದು.
ಲಿಂಗೈಕ್ಯರೆನಿಸಿಕೊಂಡು ಅಂಗವಿಕಾರಕ್ಕೆ ತಿರುಗುವ
ಲಿಂಗದ್ರೋಹಿಗಳ ಮುಖವ ನೋಡಲಾಗದು ಕಾಣಾ, ಅಮುಗೇಶ್ವರಲಿಂಗವೆ     

                                    
                                                                                                ಇಂತಿ                                          
       ಮಂಜುನಾಥ ಕೆ ಎಂ                                     
    ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬಸವಪಟ್ಟಣ [ಚಿರಡೋಣಿ ]

1 ಕಾಮೆಂಟ್‌: