ಬುಧವಾರ, ಮೇ 30, 2018

ಹರಪನಹಳ್ಳಿ ಭೀಮವ್ವನ ಸಾಹಿತ್ಯ


ಹುಡುಕು

ಸಂಪಾದಿಸಿಈ ಪುಟವನ್ನು ವೀಕ್ಷಿಸಿ

ಹರಪನಹಳ್ಳಿ ಭೀಮವ್ವ

ಹರಪನಹಳ್ಳಿ ಭೀಮವ್ವ (ಜುಲೈ ೬೧೮೨೩ - ಜನವರಿ ೧೧೧೯೦೩) ಅವರು ದಾಸ ಸಾಹಿತ್ಯದಲ್ಲಿ ಪ್ರಮುಖ ಕೊಡುಗೆಯನ್ನಿತ್ತ ಅಪರೂಪದ ಮಹಿಳೆ ಎನಿಸಿದ್ದ್ದಾರೆ. ಇವರ ಕಾವ್ಯನಾಮ 'ಭೀಮೇಶ ಕೃಷ್ಣ'. ಇವರನ್ನು ಜನ ‘ಅವ್ವನವರೂ’ ಎಂದೂ ಹೇಳುತ್ತಾರೆ.

ಹರಪನಹಳ್ಳಿ ಭೀಮವ್ವಜನನಜುಲೈ ೬, ೧೮೨೩
ನಾರಾಯಣ ದೇವರ ಕೆರೆನಿಧನಜನವರಿ ೧೧, ೧೯೦೩ಪ್ರಸಿದ್ಧಿಗೆ ಕಾರಣದಾಸ ಸಾಹಿತ್ಯ

ದಾಸ ಸಾಹಿತ್ಯದಲ್ಲಿಸಂಪಾದಿಸಿ

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ದಾಸ ಸಾಹಿತ್ಯದ ಕೊಡುಗೆ ವೈಶಿಷ್ಟ್ಯಪೂರ್ಣವಾದದ್ದು. ಕರ್ನಾಟಕದ ಧಾರ್ಮಿಕ ಸಾಂಸ್ಕೃತಿಕ ಇತಿಹಾಸದಲ್ಲಿ ಹರಿದಾಸರ ಸ್ಥಾನವೂ ಅಷ್ಟೇ ವಿಶಿಷ್ಟತೆಯಿಂದ ಕೂಡಿದೆ. ಇವರ ಕೀರ್ತನೆಗಳಲ್ಲಿ ಲೋಕಾನುಭವವಿದೆ. ಅಷ್ಟೇ ಅಲ್ಲ, ಲೌಕಿಕ ವಿಡಂಬನೆಯ ಮೂಲಕ ಜನರ ಮಾನಸಿಕ ವಿಕಾಸ ಸಾಧಿಸುವ ಗುಣವೂ ಇದೆ.

ಸುಮಾರು ೧೩೯ ಜನ ದಾಸರು ದಾಸಪರಂಪರೆಯಲ್ಲಿ ಆಗಿ ಹೋಗಿದ್ದಾರೆ. ಅವರಲ್ಲಿ ಪುರುಷವರ್ಗವೇ ಹೆಚ್ಚಿನ ಸಂಖ್ಯೆಯಲ್ಲಿರುವುದು ಈ ಮನುಪ್ರಣೀತ ಪುರುಷಜಗತ್ತಿನಲ್ಲಿ ಸಹಜ. ಅಲ್ಲದೆ ಸ್ತ್ರೀಗೆ ಈ ಜಗತ್ತಿನಲ್ಲಿ ಬಂಧನಗಳೂ ಅಗಣಿತ. ಅಂಥ ಬಂಧನಗಳನ್ನು ಹರಿದೆಸೆದಾಗಲೇ ಅಲ್ಲವೇ ಅಕ್ಕನಂಥ ರತ್ನ ಜನ್ಮ ತಾಳುವುದು. ಆದರೆ ಎಲ್ಲರಿಗೂ ಎಲ್ಲಾ ಬಂಧನಗಳಿಗೆ ಮೋಕ್ಷ ಕಾಣಿಸಲು ಲೌಕಿಕ ಜಗತ್ತಿನ ಆಗುಹೋಗುಗಳಿಗೆ ಬೆನ್ನು ತಿರುಗಿಸಲು ಸಾಧ್ಯವೇ? ಸಂಸಾರದಲ್ಲಿದ್ದುಕೊಂಡೇ ಲೌಕಿಕ ಜಗತ್ತಿನಲ್ಲಿ ಈ ಭೌತಿಕ ಜಗತ್ತಿನಲ್ಲಿ ತನ್ನ ಎಲ್ಲಾ ಕರ್ತವ್ಯಗಳನ್ನು ಮಾಡುತ್ತಲೇ ಮುಕ್ತಿಯ ಸೋಪಾನವನ್ನು ತಾನು ಸ್ವತಃ ಏರುವುದಲ್ಲದೇ ತನ್ನಂಥ ನಾರಿಯರಿಗೆ ದಾರಿ ತೋರಿಸಿದವರಲ್ಲಿ ನಮ್ಮ ಹರಿದಾಸಿಯರಲ್ಲಿ ಪ್ರಮುಖರಾದವರು ಹೆಳವನ ಕಟ್ಟೆ ಗಿರಿಯಮ್ಮ ಹಾಗೂ ಹರಪನಹಳ್ಳಿಯ ಭೀಮವ್ವನವರು.

ಜೀವನಸಂಪಾದಿಸಿ

ಭೀಮವ್ವನವರು ೧೮೨೩ರ ಜುಲೈ ೬ನೇ ತಾರೀಖು ನಾರಾಯಣ ದೇವರ ಕೆರೆ ಎಂಬ ಊರಲ್ಲಿ ನರೇಭಟ್ಟರ ವಂಶದ ರಘುನಾಥಾಚಾರ್ಯ ಮತ್ತು ರಾಘಮ್ಮ ದಂಪತಿಗಳ ಮಗಳಾಗಿ ಜನಿಸಿದರು. ಇವರ ಹುಟ್ಟುಹೆಸರು ಕಮಲಾಕ್ಷಿ. ಇವರು ಹುಟ್ಟಿದ ಕೆಲವಾರು ತಿಂಗಳುಗಳವರೆಗೆ ಇವರ ಮೈಮೇಲೆ ಚಕ್ರಗಳೂ ಕಾಲುಗಳಲ್ಲಿ ಪದ್ಮಗಳೂ ಇದ್ದುವಂತೆ. ಪುಟ್ಟ ಮಗು ಅಳತೊಡಗಿದಾಗಳೆಲ್ಲಾ ತೊಟ್ಟಿಲು ತೂಗುತ್ತಾ ಹರಿನಾಮ ಹಾಡಿದರೆ ಕೂಡಲೇ ಸುಮ್ಮನಾಗುತ್ತಿತ್ತಂತೆ.

ಭೀಮವ್ವನ ನೆನಪಿನ ಶಕ್ತಿಯೂ ಘನವಾಗಿತ್ತು. ಹಾಗಾಗಿಯೇ ಅವರು ಸಾವಿರಾರು ಕೀರ್ತನೆಗಳನ್ನೂ ನೂರಾರು ನುಡಿಗಳ ಕಥನ ಕೀರ್ತನೆಗಳನ್ನೂ ಬಾಯಿಯಿಂದಲೇ ನಿರರ್ಗಳವಾಗಿ ಹೇಳುತ್ತಿದ್ದರು. ಮಗು ಆರು ವರ್ಷದವಳಿರುವಾಗಲೇ ಆಕೆಗೆ ಶ್ರೀ ವೇದವ್ಯಾಸ ದೇವರ ದರ್ಶನವಾಗಿತ್ತು. ಅಂದಿನಿಂದಲೇ ಅವಳಲ್ಲಿ ಗುರುತರ ಬದಲಾವಣೆ ಕಾಣಿಸಿಕೊಂಡಿತ್ತು. ಈಕೆಗೆ 11 ವರ್ಷವಾದಾಗ ರಾಯದುರ್ಗ ತಾಲೂಕಿನ ಹರೇ ಸಮುದ್ರ ಗ್ರಾಮದ ಗೋಪಾಲಪ್ಪ ಎಂಬುವರ ವಂಶದ ಮುನಿಯಪ್ಪನವರ ಜೊತೆ ಮದುವೆಯಾಯಿತು. ವರನ ವಯಸ್ಸು 45 ವರ್ಷ. ಅವರಿಗೆ ಇದು ಮೂರನೆಯ ಮದುವೆ. ಮದುವೆಯಾದ 14 ವರ್ಷಕ್ಕೆ ಇವರಿಗೆ ಒಬ್ಬ ಮಗ ಹಾಗೂ ನಾಲ್ಕು ವರ್ಷಗಳ ನಂತರ ಮಗಳೂ ಜನಿಸಿದರು. ಇವರ ೩೫ನೇ ವರ್ಷಕ್ಕೆ ಪತಿ ವಿಯೋಗವಾಯಿತು. ಇಲ್ಲಿಂದ ಇವರ ಜೀವನ ಮಾರ್ಗ ಬದಲಾಯಿತು.

ಗೀತರಚನೆಸಂಪಾದಿಸಿ

ಒಂದು ದಿನ ಮಧ್ಯಾಹ್ನ ಮಲಗಿದಾಗ ಕನಸಿನಲ್ಲಿ ಒಂದು ಮಹಾ ಅರಣ್ಯದಲ್ಲಿ ಇವರು ಒಂದು ಮರದ ಕೆಳಗೆ ಮಲಗಿದ್ದಾರೆ. ಆಗ ಒಬ್ಬ ತಂಬೂರಿ ಹಿಡಿದ ಮುನಿ (ನಾರದರು) ಒಂದು ಕೃಷ್ಣ ಸರ್ಪದೊಡನೆ ಬಂದಿದ್ದ. ಆ ಸರ್ಪಕ್ಕೆ ಈಕೆಯ ನಾಲಿಗೆಯ ಮೇಲೆ ಮೂರಕ್ಷರ ಬರೆಯಲು ಹೇಳಿದ್ದ. ಆ ನಂತರವೇ ಇವರು ಕೀರ್ತನೆಗಳನ್ನು ರಚಿಸಲು ಪ್ರಾರಂಭಿಸಿದ್ದು.

ಇವರ ಮೊದಲ ಹಾಡು ‘ರಕ್ಷಿಸಬೇಕೆನ್ನ ಲಕ್ಷ್ಮೀನರಸಿಂಹನ ಭಕ್ತನೇ’ ಎಂಬುದು. ಮೊದಲೆಲ್ಲಾ ಇವರು ತಮಗೆ ಬಂದ ಹಾಡುಗಳನ್ನು ಪ್ರಕಟಪಡಿಸಿರಲಿಲ್ಲ. ಇದರಿಂದಾಗಿ ಹೊಟ್ಟೆನೋವು, ತಲೆನೋವುಗಳನ್ನು ಅನುಭವಿಸಬೇಕಾಯಿತು. ಅಲ್ಲದೆ ಆ ಮುನಿಯು ಪದೇ ಪದೇ ಸ್ವಪ್ನದಲ್ಲಿ ಕಾಣಿಸಿಕೊಂಡು ‘ನಾನು ಹೇಳಿಕೊಟ್ಟ ಮಂತ್ರವನ್ನೇಕೆ ಹೇಳುತ್ತಿಲ್ಲ?’ ಎಂದು ಗದರತೊಡಗಿದ್ದ. ಸ್ವಪ್ನದಲ್ಲಿ ಬಂದಾಗ ಈಕೆ ಅದೇ ಮುನಿಯನ್ನು ತನ್ನ ಹಾಡುಗಳಿಗೆ ಮುದ್ರಿಕೆಯನ್ನು ಸೂಚಿಸಲು ಹೇಳಿದಾಗ ಆತನೇ ‘ಭೀಮೇಶಕೃಷ್ಣ’ ಎಂದು ಬಳಸಲು ಸಲಹೆಯಿತ್ತನಂತೆ. ಮುಂದೆ ಕೂಡಾ ಇವರು ಅನೇಕ ಹಾಡುಗಳನ್ನು ರಚಿಸಿದರೂ ತನ್ನನ್ನು ಜನ ಆಡಿಕೊಂಡು ನಕ್ಕಾರೆಂಬ ಹೆದರಿಕೆಯಿಂದ ಸುಮ್ಮನೆ ಇದ್ದಾಗ, ಇವರ ತಮ್ಮನ ಹೆಂಡತಿಯ ಕನಸಿನಲ್ಲಿ ಬಂದ ಆ ಮುನಿಯು ಈ ವಿಷಯವನ್ನು ಹೇಳಿದನಂತೆ. ಅಂದಿನಿಂದ ಇವರು ತಮ್ಮ ಕೀರ್ತನೆಗಳನ್ನು ಪ್ರಚಾರಗೊಳಿಸಿದರಂತೆ. ಮುಂದೆ ಇವರು ಕನಸಿನಲ್ಲಿ ಕಂಡುದೆಲ್ಲವೂ ಕೀರ್ತನೆ – ಹಾಡುಗಳ ರೂಪದಲ್ಲಿ ಬರತೊಡಗಿದವು. ಗೋಪಿಕಾಸ್ತ್ರೀಯರು ಉದ್ಧವನೆದುರು ಮಾಡಿದ ಪ್ರಲಾಪ, ಮುಯ್ಯದ ಹಾಡು, ಸುಭದ್ರಾ ಕಲ್ಯಾಣ, ರತಿ ಕಲ್ಯಾಣ, ನಳಚರಿತ್ರೆ, ಸತ್ಯಭಾಮೆಯು ‘ಪತಿದಾನ ಕೊಟ್ಟ ಹಾಡು’ ಮುಂತಾದ ದೊಡ್ಡ ಕೀರ್ತನೆಗಳನ್ನಲ್ಲದೆ ಸಣ್ಣ ಪುಟ್ಟ ಕೀರ್ತನೆಗಳನ್ನೂ ಇವರು ಮೂಡಿಸಿದರು.

ಕೀರ್ತನೆ, ಸುಳಾದಿ, ಉಗಾಭೋಗ ಹೀಗೆ ಮೂರು ಪ್ರಕಾರಗಳಲ್ಲಿಯೂ ಭೀಮವ್ವನರು ಕೃತಿ ರಚನೆ ಮಾಡಿದ್ದು, ೧೪೩ ಸಣ್ಣ ಕೀರ್ತನೆಗಳನ್ನೂ, ೧೯೩ ದೊಡ್ಡ ಕೀರ್ತನೆಗಳನ್ನೂ ರಚಿಸಿದ್ದಾರೆ. ಇನ್ನೂ ಒಂದು ಆಶ್ಚರ್ಯದ ಸಂಗತಿ ಎಂದರೆ ಸಾಮಾನ್ಯವಾಗಿ ಉತ್ತರ ಕರ್ನಾಟಕದಲ್ಲಿ ಶ್ರಾವಣ ಮಾಸದಲ್ಲಿಯ ಶುಕ್ರವಾರ ಹಾಗೂ ಶನಿವಾರಗಳಂದು ಲಕ್ಷ್ಮೀದೇವಿಯನ್ನು ಗಡಿಗೆಯ ರೂಪದಲ್ಲಿ ಕೂಡ್ರಿಸಿ ಪೂಜಿಸುವಾಗ ಹಾಡುಗಳು, ಮಂಗಳಗೌರಿಯ ಹಾಡುಗಳು, ಅಲ್ಲದೆ ಜಲಕ್ರೀಡೆ ಹಾಡುಗಳು ಇತ್ಯಾದಿ ಕಥನ, ಕವನಗಳೆಲ್ಲವೂ ಭೀಮವ್ವನವರಿಂದ ರಚಿತಗೊಂಡಿವೆ. ಇವರ ಕಥಾ ವಸ್ತುಗಳು ಸಾಮಾನ್ಯವಾಗಿ ರಾಮಾಯಣ, ಮಹಾಭಾರತ, ಭಾಗವತದ ಘಟನೆಗಳೇ ಆಗಿವೆ. ದ್ರೌಪದಿ ವಸ್ತ್ರಾಪಹರಣದ ಸಮಯದ ಸೀರೆಗಳ ವರ್ಣನೆ, ಇತರ ಕಾವ್ಯಗಳಲ್ಲಿಯ ಆಭರಣಗಳು, ಭಕ್ಷ್ಯ ಭೋಜನಗಳ ವರ್ಣನೆ ಮುಂತಾದವು ತುಂಬಾ ಸುಂದರವಾಗಿವೆ.

ಹೆಣ್ಣಿಗೆ ಮುತ್ತೈದೆತನ, ಸಂತಾನ ಪ್ರಾಪ್ತಿ ಇವುಗಳ ಮಹತ್ವವನ್ನು ತೋರುವ ಮನೋಭಾವ ಭೀಮವ್ವನವರ ಕಾವ್ಯಗಳಲ್ಲಿ ಎದ್ದು ಕಾಣುತ್ತದೆ. ಹಸೆಗೆ ಕರೆಯುವ ಆರತಿಯ ಹಾಡು, ಉರುಟಣೆಯ ಹಾಡು ಇತ್ಯಾದಿ ಸಂಪ್ರದಾಯದ ಹಾಡುಗಳನ್ನೂ ಭೀಮವ್ವನವರು ರಚಿಸಿದ್ದಾರೆ. ಅಷ್ಟೇ ಅಲ್ಲದೆ, ಮಧ್ವಮತದ ತತ್ವಗಳೂ ಅವರ ಕೀರ್ತನೆಗಳಲ್ಲಿ ಕಂಡುಬರುತ್ತವೆ. ಪಂಚವಿಧ ಭಾವಗಳಾದ ದಾಸ್ಯ, ಸಖ್ಯ, ಮಧುರ, ವಾತ್ಸಲ್ಯ ಹಾಗೂ ಶಾಂತ ಇವುಗಳಿಂದ ಇವರು ಭಗವಂತನನ್ನು ಸ್ತುತಿಸಿದ್ದಾರೆ.

ಭೀಮವ್ವನವರ ಕಾವ್ಯಗಳಲ್ಲಿಯ ಸಂಭಾಷಣಾ ತಂತ್ರದ ವೈಶಿಷ್ಟ್ಯವನ್ನು ನೋಡಬೇಕೆಂದರೆ ಸತ್ಯಭಾಮೆ, ಪಾರ್ವತಿ, ಸತ್ಯಭಾಮೆ ರುಕ್ಮಿಣಿ ಸಂವಾದದಲ್ಲಿ ನೋಡಬಹುದು. ರುಕ್ಮಿಣಿ ತಾನು ಪಟ್ಟದ ರಾಣಿ, ಸತ್ಯಭಾಮೆ ಮೆಚ್ಚಿ ಬಂದವಳು ಎಂದು ಮೂದಲಿಸಿದರೆ - ಸತ್ಯಭಾಮೆಯು, ತಂದೆ ತಾಯಿ ಅಣ್ಣಂದಿರನ್ನು ವಂಚಿಸಿ ಪತ್ರಬರೆದು ಒಲಿಸಿಕೊಂಡು ಓಡಿಬಂದವಳು ಎಂದು ಹಳಿಯುತ್ತಾಳೆ. ಈ ರೀತಿ ಕಥೆಯನ್ನು ಪಾತ್ರಗಳ ಬಾಯಿಂದಲೇ ಹೇಳಿಸುವ ರೀತಿ ಅನನ್ಯವಾದದ್ದು. ಅಸಾಮಾನ್ಯ ಗ್ರಹಣಶಕ್ತಿ, ಸ್ಮರಣಶಕ್ತಿ, ಧಾರಣ ಹಾಗೂ ಪ್ರತಿಭೆ ಮೆಚ್ಚುವಂತಹದು.

ವಿದಾಯಸಂಪಾದಿಸಿ

ಹರಪನಹಳ್ಳಿ ಭೀಮವ್ವನವರು ಕ್ರಿ. ಶ. ೧೯೦೩ನೇ ಜನವರಿ ತಿಂಗಳ ೧೧ನೇ ತಾರೀಖು ಅಂದರೆ ಪುಷ್ಯ ಶುದ್ಧ ೧೩, ಮುಕ್ಕೋಟಿ ದ್ವಾದಶಿಯ ದಿನ ಮಧ್ಯಾಹ್ನದಲ್ಲಿ ನಿಧನರಾದರು.

ಮಾಹಿತಿ ಕೃಪೆಸಂಪಾದಿಸಿ

ಕರ್ಮವೀರ ಪತ್ರಿಕೆಯಲ್ಲಿ ಶ್ರೀಮತಿ ಮಾಲತಿ ಮುದಕವಿ ಅವರ ಲೇಖನ

Last edited ೫ years ago by Tirusri

RELATED PAGES

ಶ್ರೀ ಕೃಷ್ಣ ಪಾರಿಜಾತ

ಕನ್ನಡದಲ್ಲಿ ಮಹಿಳಾ ಸಾಹಿತ್ಯ

ಕನ್ನಡದಲ್ಲಿ ಪ್ರವಾಸ ಸಾಹಿತ್ಯ

 ಹರಪನಹಳ್ಳಿ

ಅಂಗಳದೊಳಗಾಡಬಾರಯ್ಯ, ಮುದ್ದು

ರಂಗ ನಿನ್ನಯ ಮುಖದೋರಯ್ಯ ||ಪ||


ಅರ್ಧರಾತ್ರಿಯಲ್ಲವತರಿಸಿದ್ಯೊ , ಹೋಗಿ

ಮುದ್ದು ಗೋಪಿಯ ಸುತನೆನಿಸಿದ್ಯೊ 

ಭದ್ರದೇವಿಯರ ನೀ ಕಳಿಸಿದ್ಯೊ , ಬಂ-

ದಿದ್ದ  ಪೂತನಿಯ ಸಂಹರಿಸಿದ್ಯೊ    ||೧||


ವತ್ಸಕಾಯುತಲ್ಹೋಗಿ ವನದೊಳು ಬಂದ 

ಕಿಚ್ಚು ನುಂಗಿದೆ ನಿನ್ವದನದೊಳು 

ಸ್ವಚ್ಛಮಾಡಿದಿ ಕಾಳಿಜಲಗಳು ತೋರೆ

ಕುಕ್ಷಿಯೊಳಗೆ ತ್ರಿಜಗಂಗಳು     ||೨||


ದೇವಕ್ಕಿದೇವಿ ಯಶೋದಾನೆ ವಸು-

ದೇವ ನಂದ ಬಲರಾಮಗೆ ಎದುರು

ಬಾರೋ ಭೂದೇವಿರಮಣನೆ 

ಭೀಮೇಶ ಕೃಷ್ಣನೆ ಶ್ಯಾಮವರಣನೆ ||೩||


---ಹರಪನಹಳ್ಳಿ ಭೀಮವ್ವ

ಮಂಗಳವಾರ, ಮೇ 29, 2018

ಕನಕದಾಸರು


ಹುಡುಕು

ಸಂಪಾದಿಸಿಈ ಪುಟವನ್ನು ವೀಕ್ಷಿಸಿಇನ್ನೊಂದು ಭಾಷೆಯಲ್ಲಿ ಓದು

ಕನಕದಾಸರು

ಕನಕ

ಶ್ರೀ ಕನಕದಾಸರು[ಮೂಲ ಹೆಸರು -ತಿಮ್ಮಪ್ಪನಾಯಕ] (1508-1606) ಕರ್ನಾಟಕದಲ್ಲಿ ೧೫-೧೬ ನೆಯ ಶತಮಾನಗಳಲ್ಲಿ ಜನಪ್ರಿಯವಾದ ಭಕ್ತಿ ಪಂಥದ ಮುಖ್ಯ ಹರಿದಾಸರಲ್ಲಿ ಒಬ್ಬರು. ದಾಸ ಪರಂಪರೆಯಲ್ಲಿ ಬರುವ 250ಕ್ಕೂ ಹೆಚ್ಚು ದಾಸರಲ್ಲಿ ಕನಕದಾಸರೊಬ್ಬರೇ ಶೂದ್ರದಾಸರು. ಹಾಗೆಯೇ ಕನ್ನಡ ಭಾಷೆಯ ಪ್ರಸಿದ್ಧ ಕೀರ್ತನಕಾರರು, ಮತ್ತು ಪುರಂದರದಾಸರೊ೦ದಿಗೆಕರ್ನಾಟಕ ಸಂಗೀತದ ಮೂಲಭೂತ ಸಿದ್ಧಾಂತಗಳಿಗೆ ಕಾಣಿಕೆಯನ್ನಿತ್ತವರು. ಕನಕದಾಸರು ಮತ್ತುಪುರಂದರದಾಸರನ್ನು ಕರ್ನಾಟಕ ಕೀರ್ತನ ಸಾಹಿತ್ಯದ ಅಶ್ವಿನಿ ದೇವತೆಗಳೆಂದು ಬಣ್ಣಿಸಲಾಗಿದೆ. ಕನಕದಾಸರು ದಂಡನಾಯಕರಾಗಿದ್ದು ಯುದ್ದವೊಂದರಲ್ಲಿ ಸೋತ ಅವರಿಗೆ ಉಪರತಿ/ವೈರಾಗ್ಯ ಉಂಟಾಗಿ, ಹರಿಭಕ್ತರಾದರಂತೆ.

ಕನಕದಾಸರು

ಶ್ರೀ ಕನಕ ದಾಸರು

ಜನನತಿಮ್ಮಪ್ಪ ನಾಯಕ
1509
ಬಾಡ, ಹಾವೇರಿ ಜಿಲ್ಲೆ,ಕರ್ನಾಟಕ ರಾಜ್ಯಭಾರತಮರಣ1609
ಬಾಡವೃತ್ತಿಹರಿದಾಸರು, ಕೀರ್ತನಕಾರರು, ಕವಿಪ್ರಕಾರ/ಶೈಲಿಕೀರ್ತನೆಉಗಾಭೋಗ, ಮುಂಡಿಗೆ, ಕಾವ್ಯ

ಜೀವನಸಂಪಾದಿಸಿ

ಜನನಸಂಪಾದಿಸಿ

ಕನಕದಾಸರು ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ 1509ರಲ್ಲಿ ಬೇಡ (ನಾಯಕ) ಜನಾಂಗಕ್ಕೆ ಸೇರಿದ ಬಚ್ಚಮ್ಮ ಮತ್ತು ಬೀರಪ್ಪ ಎಂಬ ದಂಪತಿಗಳ ಮಗನಾಗಿ ಜನಿಸಿದರು. ಕನಕದಾಸರು ಬರಿ ಕುರುಬ ಜಾತಿಗೆ ಸೀಮಿತವಾದ ಭಕ್ತರಲ್ಲ ಎಲ್ಲಾ ಜಾತಿಗಳಿಗೆ ಬೇಕಾದವರು. 15-16 ನೆಯ ಶತಮಾನದಲ್ಲೇ ಜಾತಿ ವ್ಯವಸ್ಥೆಯ ಬಗ್ಗೆ ಸಮರ ಸಾರಿದ ಭಕ್ತ ಎಂದರೆ ಕನಕದಾರು ಎಂದರೆ ತಪ್ಪಾಗಲಾರದು.

ಐತಿಹ್ಯಸಂಪಾದಿಸಿ

ಸುಮಾರು ಐದು ನೂರು ವರ್ಷಗಳ ಹಿಂದಿನ ಮಾತು.ವಿಜಯನಗರ ಸಾಮ್ರಾಜ್ಯದಲ್ಲಿದ್ದ ಬಂಕಾಪುರ ಪ್ರಾಂತದ ಮುಖ್ಯಪಟ್ಟಣದ ಹೆಸರು ಬಾಡ ಎಂದು. ವಿಜಯನಗರದಿಂದ ಗೋವಾಕ್ಕೆ ಹೋಗುವ ಹೆದ್ದಾರಿ. ಈ ಬಾಡದಿಂದಲೇ ಹಾಯ್ದು ಹೋಗುತ್ತಿತ್ತು. ಬಾಡ ಒಳ್ಳೇ ಆಯಕಟ್ಟಿನ ಸ್ಥಳ. ಈ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕ, ಬೀರಪ್ಪನಾಯಕ. (ಡಣ್ಣಾಯಕ ಎಂದರೆ ಆಯಕಟ್ಟಿನ ಸ್ಥಳದಲ್ಲಿ ಕಾದಿಟ್ಟ ಸೈನ್ಯದ ದಳಕ್ಕೆ ಸೇನಾಪತಿ ಎಂದು ನೇಮಿಸಲ್ಪಟ್ಟವನು) ಬೀರಪ್ಪನ ಹೆಂಡತಿ ಬಚ್ಚಮ್ಮ.

ಬೀರಪ್ಪನಾಯಕನಿಗೆ ತಿರುಪತಿ ತಿಮ್ಮಪ್ಪನಲ್ಲಿ ಬಹು ನಂಬಿಕೆ. ದಕ್ಷಿಣದಲ್ಲಿ ಸುಮಾರು ಒಂಬೈನೂರು ವರ್ಷಗಳ ಹಿಂದೆ ಶ್ರೀರಾಮಾನುಜಾಚಾರ್ಯರೆಂಬ ದೊಡ್ಡ ಗುರುಗಳು ಪ್ರಸಿದ್ಧರಾಗಿದ್ದರು. ಅವರು ಸ್ಥಾಪಿಸಿದ ಪಂಥಕ್ಕೆ ಶ್ರೀವೈಷ್ಣವ ಮತವೆಂದು ಹೆಸರು. ಡಣ್ಣಾಯಕ ಬೀರಪ್ಪನಾಯಕ ಮತ್ತು ಆತನ ಮಡದಿ ಬಚ್ಚಮ್ಮ ಇವರು ಶ್ರೀ ವೈಷ್ಣವ ಮತಕ್ಕೆ ಶರಣು ಹೋದ ಕುರುಬರು. ಅಂದಿನಿಂದ ಇವರು ಸಹ ತಿರುಪತಿ ವಂಕಟೇಶ್ವರ ಸ್ವಾಮಿಯನ್ನೇ ತಮ್ಮ ಆರಾಧ್ಯ ದೈವವನ್ನಾಗಿ ಮಾಡಿಕೊಂಡರು.

ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಅನೇಕ ದಿನಗಳಿಂದ ಒಂದು ಹಂಬಲವಿತ್ತು. ಅದೇನೆಂದರೆ, ತಮಗೆ ಒಬ್ಬ ಕುಲದೀಪಕನಾದ ಮಗ ಜನಿಸಬೇಕು ಎಂದು. “ವಂಶೋದ್ಧಾರಕನಾದ ಒಬ್ಬ ಮಗನನ್ನು ಕರುಣಿಸು” ಎಂದು ಈ ದಂಪತಿಗಳು ತಿರುಪತಿ ತಿಮ್ಮಪ್ಪನಿಗೆ ಹರಕೆ ಹೊತ್ತಿದ್ದರು. ಅವರ ಆಸೆ ಫಲಿಸಿತು. ಬೀರಪ್ಪ ನಾಯಕ ಮತ್ತು ಬಚ್ಚಮ್ಮರಿಗೆ ಒಬ್ಬ ಮಗ ಜನಿಸಿದ. ತಂದೆ ತಾಯಿಗಳಿಗೆ ಆನಂದವೋ ಆನಂದ. ತಿರುಪತಿ ತಿಮ್ಮಪ್ಪನ ಆಶೀರ್ವಾದ ಎಂದು ಅವರು ತಮ್ಮ ಮಗುವಿಗೆ “ತಿಮ್ಮಪ್ಪ” ಎಂದೇ ನಾಮಕರಣ ಮಾಡಿದರು. ತಿಮ್ಮಪ್ಪ ಜನಿಸಿದ ಕಾಲ ಇಂತದ್ದೇ ಎಂದು ತಿಳಿಯದು; ಹದಿನೈದನೇಯ ಶತಮಾನದ ಕೊನೆಯ ವರ್ಷಗಳಲ್ಲಿ ಹುಟ್ಟಿದರು ಎಂದು ಹೇಳಬಹುದು.

ತಿಮ್ಮಪ್ಪನಾಯಕ ಒಬ್ಬ ಸೇನಾಧಿಪತಿಯ ಮಗನಾಗಿ ಜನಿಸಿದನಷ್ಟೆ. ಬಾಲ್ಯದಲ್ಲಿಯೇ ಅಕ್ಷರಾಭ್ಯಾಸ, ವ್ಯಾಕರಣಗಳ ಜೊತೆಗೆ ಕತ್ತಿವರಸೆ, ಕುದುರೆ ಸವಾರಿಯನ್ನೂ ಕಲಿತ. ಕೆಲವು ವರ್ಷಗಳಲ್ಲಿ ಬೀರಪ್ಪನಾಯಕ ಮತ್ತು ಬಚ್ಚಮ್ಮ ತೀರಿಕೊಂಡರು. ತಂದೆಯ ಬಳಿಕ ತಿಮ್ಮಪ್ಪ ನಾಯಕ ತನ್ನ ಕಿರಿವಯಸ್ಸಿನಲ್ಲಿಯೇ ಬಂಕಾಪುರ ಪ್ರಾಂತಕ್ಕೆ ಡಣ್ಣಾಯಕನಾದ.

ಸಾಧನೆಸಂಪಾದಿಸಿ

ಕನಕದಾಸರು ಶ್ರೀ ವ್ಯಾಸರಾಯರ ಮೆಚ್ಚಿನ ಶಿಷ್ಯರು. ವ್ಯಾಸರಾಯದಿಂದ ಮಧ್ವ ತತ್ವಶಾಸ್ತ್ರವನ್ನು ಕಲಿತು ಒಪ್ಪಿಕೊಂಡ ಕನಕದಾಸರು ಉಡುಪಿ ಶ್ರೀ ಕೃಷ್ಣನ ಅನನ್ಯ ಭಕ್ತರು. ಕಾಗಿನೆಲೆಯ ಆದಿಕೇಶವನ ಭಕ್ತರಾದ ಕನಕದಾಸರು ಜಾತಿಪದ್ಧತಿಯ ತಾರತಮ್ಯಗಳನ್ನು ಅಲ್ಲಗಳೆದರು. ಇವರ ಕೀರ್ತನೆಗಳ ಅಂಕಿತ ಕಾಗಿನೆಲೆಯ ಆದಿಕೇಶವರಾಯ.

ಕನಕ ದಾಸರ ಸಾಹಿತ್ಯ ರಚನೆಸಂಪಾದಿಸಿ

ಕನಕದಾಸರು ಸಾಹಿತ್ಯದ ವಿವಿಧ ಪ್ರಕಾರಗಳಾದಕೀರ್ತನೆಗಳು, ಸುಳಾದಿಗಳು, ಉಗಾಭೋಗಗಳು ಕನ್ನಡ ಸಾಹಿತ್ಯ ಲೋಕಕ್ಕೆ ಅರ್ಪಿಸಿರುವುದಲ್ಲದೆ, ಸಂಗೀತ ಪ್ರಪಂಚಕ್ಕೆ ತನ್ನದೇ ಆದಂತಹ ಕೊಡುಗೆಯನ್ನು ಮುಂಡಿಗೆಗಳ ರೂಪದಲ್ಲಿ ನೀಡಿದ್ದಾರೆ. ಸುಮಾರು 316ಕೀರ್ತನೆಗಳು ಹಾಗೂ ಇನ್ನಿತರ ಸಾಹಿತ್ಯ ಮಾತ್ರ ಲಭ್ಯವಾಗಿರುವುದನ್ನು ಕಾಣಬಹುದಾಗಿದೆ. ಅವರ ಐದು ಮುಖ್ಯ ಕಾವ್ಯಕೃತಿಗಳು ಇಂತಿವೆ:

ಮೋಹನತರಂಗಿಣಿನಳಚರಿತ್ರೆರಾಮಧಾನ್ಯ ಚರಿತೆಹರಿಭಕ್ತಿಸಾರನೃಸಿಂಹಸ್ತವ (ಉಪಲಬ್ದವಿಲ್ಲ)

ಮೋಹನತರಂಗಿಣಿಸಂಪಾದಿಸಿ

ಮೋಹನತರಂಗಿಣಿಯು 42 ಸಂಧಿಗಳಿಂದ ಕೂಡಿದ್ದುಸಾಂಗತ್ಯದಲ್ಲಿ ರಚಿತವಾಗಿರುವ 2700 ಪದ್ಯಗಳಿವೆ. ಮೋಹನತರಂಗಿಣಿಯಲ್ಲಿ ಕನಕದಾಸರು ಕೃಷ್ಣಚರಿತ್ರೆಯನ್ನು ಹೇಳುತ್ತಾ ತಮ್ಮ ಅಧಿರಾಜ ಕೃಷ್ಣದೇವರಾಯನನ್ನೇ ಕೃಷ್ಣನಿಗೆ ಹೋಲಿಸುತ್ತಾರೆ. ಅವರ ದ್ವಾರಕಾಪುರಿ ಸ್ವಯಂ ವಿಜಯನಗರವೇ ಆಗಿರುವುದು ಇತಿಹಾಸದಿಂದ ತಿಳಿದು ಬರುತ್ತದೆ. ಮೋಹನತರಂಗಿಣಿ ಅಥವಾ ಕೃಷ್ಣಚರಿತೆ ಎಂಬ ಈ ಕಾವ್ಯದಲ್ಲಿ ಕನಕದಾಸರ ಸಮಕಾಲೀನ ಜೀವನ ಚಿತ್ರಗಳು ಹಾಗೂ ಪೌರಾಣಿಕ ಕಥೆಗಳು ಅಚ್ಚಗನ್ನಡದಲ್ಲಿ ನಿರೂಪಿತವಾಗಿವೆ. ದಣ್ಣಾಯಕನಾಗಿ ಕನಕ ಆಗಾಗ್ಗೆ ರಾಜಧಾನಿವಿಜಯನಗರಕ್ಕೆ ಹೋಗಬೇಕಾಗಿತ್ತು. ವಿಜಯನಗರ ಸಾಮ್ರಾಜ್ಯದ ರಾಜವೈಭವ, ರಾಜಸಭೆ, ರಾಜಪರಿವಾರದ ಸರಸ ಸುಮ್ಮಾನ, ಶೃಂಗಾರ ಜೀವನ, ಜಲಕ್ರೀಡೆ, ಓಕುಳಿಯಾಟ, ನವರಾತ್ರಿ, ವಿಜಯನಗರದ ಪುರರಚನೆ, ಉದ್ಯಾನವನ, ಪ್ರಜೆಗಳ ವೇಷಭೂಷಣ, ರಾಜ್ಯದ ಯುದ್ಧ ವಿಧಾನ ಇತ್ಯಾದಿಗಳು ಅವನ ಮನಸೂರೆಗೊಂಡಿದ್ದವು. ಕವಿ ಮನಸಿನ ಕನಕ ತನ್ನ ಅನುಭವವನ್ನೆಲ್ಲ ಬರಹ ರೂಪಕ್ಕೆ ತಂದ. ಆ ಬರಹವೇ ಇಂದು ನಮಗೆ ಲಭ್ಯವಿರುವ ಮೋಹನತರಂಗಿಣಿ. ಕನಕನ ಯೌವನ ಕಾಲದಲ್ಲಿ ರಚಿತವಾದ ತರಂಗಿಣಿಯ ಒಡಲಲ್ಲಿ ಯುದ್ಧದ ವರ್ಣನೆಗಳು ಹೆಚ್ಚೆನ್ನಬಹುದು. ಏಕೆಂದರೆ ಕನಕ ಸ್ವತಃ ಕಲಿಯಾಗಿದ್ದವನೇ ತಾನೇ? ಶಂಬರಾಸುರ ವಧೆ, ಬಾಣಾಸುರ ವಧೆ, ಹರಿಹರ ಯುದ್ಧ ಹೀಗೆ ವೀರರಸ, ರೌದ್ರರಸ ಕಾವ್ಯದಲ್ಲಿ ಮೇಳೈಸಿವೆ.

ಸೋಮಸೂರಿಯ ವೀಥಿಯ ಇಕ್ಕೆಗಳಲಿ
ಹೇಮ ನಿರ್ಮಿತ ಸೌಧದೋಳಿ
ರಮಣೀಯತೆವೆತ್ತ ಕಳಸದಂಗಡಿಯಿರ್ದುಂ
ವಾ ಮಹಾ ದ್ವಾರಕಾಪುರದೇ

ಓರಂತೆ ಮರಕಾಲರು ಹಡಗಿನ ವ್ಯವ
ಹಾರದಿ ಗಳಿಸಿದ ಹಣವ
ಭಾರ ಸಂಖ್ಯೆಯಲಿ ತೂಗುವರು ಬೇಡಿದರೆ ಕು
ಬೇರಂಗೆ ಕಡವ ಕೊಡುವರು

ನಳಚರಿತ್ರೆಸಂಪಾದಿಸಿ

ನಳಚರಿತ್ರೆಯು 9 ಸಂಧಿಗಳಿಂದ ಕೂಡಿದ್ದು ಭಾಮಿನೀ ಷಟ್ಪದಿಯಲ್ಲಿ ರಚನೆಯಾಗಿರುವ 481 ಪದ್ಯಗಳಿವೆ.ಮಹಾಭಾರತದಂತಹ ರಾಷ್ಟ್ರ ಮಹಾಕಾವ್ಯಕ್ಕೆ ಪ್ರೇರಣೆಯಾದ ಉಜ್ವಲ ಆರ್ಯೇತರ ಪ್ರೇಮಕಥೆ ನಳ ದಮಯಂತಿಯರ ಕಥೆ. ೧೩ನೇ ಶತಮಾನದ ನಳ ಚಂಪೂವಿಗಿಂತ ಈ ನಳಚರಿತ್ರೆ ಹೃದಯಸ್ಪರ್ಶಿಯಾದ ಚಿತ್ರಣಗಳಿಂದ ಚಿರಂತನ ಪ್ರೇಮದ ಕಥನದಿಂದ ಅಶ್ಲೀಲತೆಯ ಸೋಂಕಿಲ್ಲದ ಶೃಂಗಾರ ವರ್ಣನೆಯಿಂದ ಶೋಭಿಸುತ್ತಾ ಇಂದಿಗೂ ಅತ್ಯಂತ ಜನಪ್ರಿಯವಾಗಿದೆ. ನಳ ಮತ್ತು ದಮಯಂತಿಯರು ಹಂಸದ ಮೂಲಕ ಪ್ರೇಮ ಸಂದೇಶಗಳನ್ನು ಕಳಿಸುವುದು, ಅವರ ಸಂತೋಷ-ಆಮೋದ-ಪ್ರವೋದ ನಂತರದ ಕಷ್ಟಕಾಲ ಹಾಗೂ ಅದರ ನಂತರದ ಪುನರ್ಮಿಲನ ಹೀಗೆ ಎಲ್ಲರಿಗೂ ಈ ಕಥೆ ಚಿರಪರಿಚಿತ. ಕಷ್ಟ ಕಾಲದಲ್ಲಿ ಕಾಡಿನಲ್ಲಿ ಮಲಗಿರುವಾಗ ದಮಯಂತಿಯನ್ನು ಕುರಿತು ನಳ: ಲಲಿತ ಹೇಮದ ತೂಗಮಂಚದ ಹೊಳೆವ ಮೇಲ್ವಾಸಿನಲಿ ಮಲಗು ಲಲನೆಗೀ ವಿಧಿ ಬಂದುದೇ ಹಾ! ಎನುತ ಬಿಸುಸುಯ್ದ (೫-೨) ಹೀಗೆ ನಳಚರಿತ್ರೆಯಲ್ಲಿ ಕರುಣರಸಕ್ಕೇ ಪ್ರಾಧಾನ್ಯತೆ ಇದೆ. ಇನ್ನು ನಳಚರಿತ್ರೆಯಲ್ಲಿನ ಶೃಂಗಾರರಸದ ಬಗ್ಗೆ ಹೇಳುವುದಾದರೆ ಅದು ಪ್ರೌಢಶೃಂಗಾರ ಎನ್ನಬಹುದೇನೋ? ಅಲ್ಲಿ ಮೋಹನ ತರಂಗಿಣಿಯಲ್ಲಿ ಅದು ಕಣ್ಣು ಕುಕ್ಕುವ ಶೃಂಗಾರ, ಆದರೂ ಅದು ಹುಳಿಮಾವಿನಂತೆ ಹಂಚಿ ತಿನ್ನಲಾಗದು. ಮುಕ್ತವಾಗಿ ಚರ್ಚಿಸಲಾಗದು. ನಳಚರಿತ್ರೆಯ ಶೃಂಗಾರವಾದರೆ ಮಲ್ಲಿಗೆ ಮಾವಿನ ಹಾಗೆ, ಮಧುರ ರುಚಿ, ಮಧುರ ಸುವಾಸನೆ.

ರಾಮಧಾನ್ಯಚರಿತೆಸಂಪಾದಿಸಿ

ರಾಮಧಾನ್ಯಚರಿತ್ರೆ ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿರುವ 156 ಪದ್ಯಗಳನ್ನು ಒಳಗೊಂಡಿದೆ. ಈ ಕೃತಿಯಲ್ಲಿ ಧನಿಕರ ಆಹಾರಧಾನ್ಯ ಅಕ್ಕಿ ಹಾಗೂ ಕೆಳವರ್ಗದವರ ಆಹಾರಧಾನ್ಯವೆಂದು ಪರಿಭಾವಿಸಲಾಗಿರುವ ರಾಗಿಯ ನಡುವಿನ ಸಂಭಾಷಣೆಯ ಮೂಲಕ ರಾಗಿ ಹೇಗೆ ತನ್ನ ಔನ್ನತ್ಯವನ್ನು ಸಾಬೀತು ಪಡಿಸುತ್ತದೆ ಹಾಗೂ ರಾಮಧಾನ್ಯವೆಂಬ ಹೆಸರು ಪಡೆಯುತ್ತದೆ ಎಂಬುದನ್ನು ನಿರೂಪಿಸಲಾಗಿದೆ. ಇದರಲ್ಲಿ ಯುದ್ಧದ ಸನ್ನಿವೇಶ ಇಲ್ಲವಾದರೂ ವೀರರಸದ ಮಾತುಗಳಿಗೇನೂ ಕೊರತೆಯಿಲ್ಲ. ನುಡಿಗೆ ಹೇಸದ ಭಂಡ ನಿನ್ನೊಳು ಕೊಡುವರೇ ಮಾರುತ್ತರವ ಕಡುಜಡವಲಾ, ನಿನ್ನೊಡನೆ ಮಾತೇಕೆ? ಹೆಣದ ಬಾಯಿಗೆ ತುತ್ತು ನೀನಹೆ ನಿನ್ನ ಜನ್ಮ ನಿರರ್ಥಕವಲಾ ಎಲವೂ ನೀನೆಲ್ಲಿಹೆಯೋ ನಿನ್ನಯ ಬಳಗವದು.. ಮುಂತಾದ ಮಾತುಗಳಲ್ಲಿ ಕನಕದಾಸರು ರಾಗಿಯ ನೆಪ ಹಿಡಿದು ತಮ್ಮದೇ ಆತ್ಮಕಥೆಯನ್ನು ಹೇಳುತ್ತಿರುವಂತೆ ತೋರುತ್ತದೆ. ಸಮಾಜದ ಮೇಲ್ವರ್ಗದವರ ಆಹಾರ ಧಾನ್ಯ ಭತ್ತ ಹಾಗೂ ಕೆಳವರ್ಗದವರ ಆಹಾರ ಧಾನ್ಯ ರಾಗಿಯ ನಡುವಿನ ಸಂಭಾಷಣೆಯನ್ನು ನಿರೂಪಿಸುವ ಕನಕದಾಸರ ಸೃಜನಶೀಲತೆ ಅತಿಶಯ. ಒಂದು ರೀತಿಯಲ್ಲಿ ರಾಮಧಾನ್ಯಚರಿತ್ರೆ ಇಂದಿನ ಬಂಡಾಯ ಸಾಹಿತ್ಯದ ಬೇರು, ನವ್ಯೋತ್ತರದ ಸೂರು ಎಂದರೆ ಬಹುಶ: ತಪ್ಪಾಗಲಾರದು.

ಹರಿಭಕ್ತಿಸಾರಸಂಪಾದಿಸಿ

ಹರಿಭಕ್ತಿಸಾರ ೧೧೦ ಭಕ್ತಿಪದ್ಯಗಳಿರುವ ಗ್ರಂಥ. ಭಾಮಿನೀ ಷಟ್ಪದಿಯಲ್ಲಿ ಸರಳಗನ್ನಡದಲ್ಲಿ ರಚಿತವಾಗಿರುವ ಈ ಗ್ರಂಥ ಕನ್ನಡದ ಭಗವದ್ಗೀತೆಯಂತಿದೆ. ಒಟ್ಟಿನಲ್ಲಿ ಕನಕದಾಸರ ಎಲ್ಲ ಕಾವ್ಯಗಳೂ ಕವಿ ಸಹಜವಾದ ವರ್ಣನೆಗಳಿಂದಲೂ ಉಪಮೆಗಳಿಂದಲೂ ಶ್ರೀಮಂತವಾಗಿದ್ದು ಅವರ ಕಾವ್ಯ ಕೌಶಲಕ್ಕೆ ಎಲ್ಲರೂ ಬೆರಗಾಗುವಂತೆ ಮಾಡಿದೆಯೆಂದರೆ ಉತ್ಪ್ರೇಕ್ಷೆಯಲ್ಲ.

ಕೀರ್ತನೆಗಳುಸಂಪಾದಿಸಿ

ಕನಕದಾಸರು 316 ಕೀರ್ತನೆಗಳನ್ನು ರಚಿಸಿದ್ದಾರೆ. ಕನಕದಾಸರ ಭಕ್ತಿ ಪಾರಮ್ಯವನ್ನು ಅವರ ಕೀರ್ತನೆಗಳಲ್ಲಿ ಕಾಣಬಹುದು. ಶ್ರೀಹರಿಯನ್ನು ತಮ್ಮ ಧಣಿಯಾಗಿ, ಇನಿಯನಾಗಿ, ಅಣೋರಣೀಯನಾಗಿ, ಮಹತೋಮಹೀಮನಾಗಿ ಅವರು ಕಂಡಿದ್ದಾರೆ. 'ಬಾ ರಂಗ ಎನ್ನ ಮನಕೆ ಎಂದು ಹೃದಯ ಸದನಕ್ಕೆ 'ಎಂದು ಕರೆದು ನೆಲೆ ನಿಲ್ಲಿಸಿಕೊಂಡ ಅನುಭಾವ ಅವರದು. ಒಳಗಣ್ಣಿನಿಂದ ಅವನ ಕಂಡು- 'ಕಂಡೆ ನಾ ತಂಡ ತಂಡ ಹಿಂಡು ದೈವ ಪ್ರಚಂಡ ರಿಪು ಗಂಡ ಉದ್ಧಂಡ ನರಸಿಂಹನ' ಎಂದು ಸಂತೋಷಪಟ್ಟಿದ್ದಾರೆ. 'ಎಲ್ಲಿ ನೋಡಿದರಲ್ಲಿ ರಾಮ' ಎಂಬ ಅನುಭೂತಿಯಲ್ಲಿ ಹರಿಯನ್ನು ಕಂಡ ಬಳಿಕ 'ಬದುಕಿದೆನು ಬದುಕಿದೆನು ಭವ ಎನಗೆ ಹಿಂಗಿತು' ಎಂಬ ಧನ್ಯತಾಭಾವ. 'ದಾಸದಾಸರ ಮನೆಯ ದಾಸಿಯರ ಮಗ ಮಂಕುದಾಸ ಮರುಳುದಾಸ ನರಜನ್ಮಹುಳು ಪರಮಪಾಪಿ' ಎಂದು ಕರೆದುಕೊಂಡಿದ್ದ ಅವರು ಜೀವ ಮಾಗಿ ಹಣ್ಣಾದಂತೆ ಪರಮಾತ್ಮನ ಸಾಕ್ಷಾತ್ಕಾರವಾದಂತೆ 'ಆತನೊಲಿದ ಮೇಲೆ ಇನ್ಯಾತರ ಕುಲವಯ್ಯಾ' ಎಂದುಕೊಳ್ಳುತ್ತಾರೆ.

ಜೈನವೀರಶೈವರ ಕಿತ್ತಾಟ, ಮುಸಲ್ಮಾನ ಪ್ರಾಬಲ್ಯ ಇವುಗಳಿಂದ ಸೊರಗಿ ಹೋಗಿದ್ದ ವೈದಿಕ ಧರ್ಮಕ್ಕೆ ಪುನಶ್ಚೇತನ ನೀಡಲು ವ್ಯಾಸರಾಯರಂಥವರು ಶ್ರಮಿಸುತ್ತಿದ್ದ ಕಾಲವದು. ವೈದಿಕ ಸಂಸ್ಕೃತಿಯ ಉತ್ಥಾನಕ್ಕೆಂದು ಹುಟ್ಟು ಹಾಕಲಾದ ವಿಜಯನಗರ ಸಾಮ್ರಾಜ್ಯ ಕೃಷ್ಣದೇವರಾಯನ ಅಳಿವಿನ ನಂತರ ಪತನದ ಹಾದಿ ಹಿಡಿದಿತ್ತು. ಇಂಥಲ್ಲಿ ಕನಕದಾಸರಂಥವರ ಕಾವ್ಯಕೃಷಿ ಹಾಗೂ ಸಾರ್ವಜನಿಕ ಜೀವನ ವ್ಯಾಸರಾಯರಿಗೆ ಬೆಂಬಲದ ಶ್ರೀರಕ್ಷೆಯಾಗಿದ್ದವು.

'ನಾವು ಕುರುಬರು ನಮ್ಮ ದೇವರು ಬೀರಯ್ಯ ಕಾವ ನಮ್ಮಜ್ಜ ನರಕುರಿ ಹಿಂಡುಗಳ' ಎಂದು ವಿನೀತ ಜಾತಿ ಭಾವನೆ ತೋರಿದ್ದ ಕನಕದಾಸರು ವ್ಯಾಸರಾಯರ ಸಂಪರ್ಕದ ನಂತರ 'ಕುಲಕುಲಕುಲವೆಂದು ಹೊಡೆದಾಡದಿರಿ' ಎಂದು ಜಂಕಿಸಿ ಕೇಳುವ ಹಾಗಾದರು.

ಇಂಥ ನಡವಳಿಕೆಗಳಿಂದ ವೈದಿಕ ಧರ್ಮದ ಗುತ್ತಿಗೆ ತಮ್ಮದು ಎಂದು ಭಾವಿಸಿದ್ದ ಬ್ರಾಹ್ಮಣರಿಗೆ ಕನಕದಾಸರು ಬಿಸಿ ತುಪ್ಪವಾದರು. ಹಿಂದೂ ಸಮಾಜದಲ್ಲಿ ಈ ಬ್ರಾಹ್ಮಣಬ್ರಾಹ್ಮಣೇತರ ಕಂದರ/ಕ ದೊಡ್ಡದಾಗುತ್ತಾ ಹೋದಂತೆ ವ್ಯಾಸಪೀಠದ ಜೊತೆಗೆ ದಾಸಕೂಟದ ರಚನೆಯೂ ಆಗಬೇಕಾದಂತಹ ಅನಿವಾರ್ಯತೆ ಮೂಡಿತು. ಉಚ್ಚಕುಲದ ಮಾಧ್ವ ಬ್ರಾಹ್ಮಣರು ಶಾಸ್ತ್ರಾಧ್ಯಯನ-ತರ್ಕ-ವ್ಯಾಕರಣಾದಿ ವಿಶಿಷ್ಟ ಜ್ಞಾನಸಂಪನ್ನರಾಗಿ ಶಬ್ದ ಶಬ್ದಗಳನ್ನು ತಿಕ್ಕಿ ತೀಡಿ ನಿಷ್ಪತ್ತಿ ಹಿಡಿದು ಸಿದ್ಧಾಂತ ಪ್ರಮೇಯಗಳನ್ನು ಮಂಡಿಸುವುದೇ ಮುಂತಾದ ಪ್ರಕ್ರಿಯೆಗಳನ್ನು ವ್ಯಾಸಪೀಠದಲ್ಲಿ ನಡೆಯಿಸುತ್ತಿದ್ದರು. ಪುರಂದರದಾಸ, ಕನಕದಾಸ, ಜಗನ್ನಾಥದಾಸ ಮೊದಲಾದವರ ಪ್ರಾತಿನಿಧಿಕ ಸಂಘಟನೆಯೇ ದಾಸಕೂಟ. ಇವರೂ ಮಾಧ್ವ ಮತ ಪ್ರಮೇಯಗಳನ್ನೇ ಪಸರಿಸುತ್ತಾ ಆಚರಿಸುತ್ತಿದ್ದರಾದರೂ ಅವುಗಳನ್ನು ಅರಿಯಲು ಸಂಸ್ಕೃತ ಜ್ಞಾನದ ಅನಿವಾರ್ಯತೆಯನ್ನು ನಿರಾಕರಿಸಿ, ಜಾತಿ ಮತಗಳ ಕಟ್ಟು ಪಾಡಿಲ್ಲದ ಇವರು ಶಾಸ್ತ್ರಾಧ್ಯಯನದ ಅನಿವಾರ್ಯತೆ ಇಲ್ಲದೆ ತಮ್ಮ ಅನುಭಾವದಿಂದ ಹೊರಹೊಮ್ಮುವ ಭಕ್ತಿಭಾವನೆಗಳನ್ನು ತಮ್ಮ ತಾಯ್ನುಡಿಯಲ್ಲಿ ಹಾಡಿ ಲೋಕಪಾವನವನ್ನೂ ಆತ್ಮೋದ್ಧಾರವನ್ನೂ ಮಾಡ ಬೇಕೆನ್ನುವವರು. ಇಂಥಾ ದಾಸಕೂಟವನ್ನು ಹುಟ್ಟುಹಾಕಿ ಪೋಷಿಸಿ ಬೆಳೆಸಿದವರು ವ್ಯಾಸರಾಯರು ಹಾಗೂವಾದಿರಾಜರು. ಇಷ್ಟಿದ್ದರೂ ದಾಸಕೂಟ ವ್ಯಾಸಪೀಠಗಳ ನಡುವೆ ಆಗಿಂದಾಗ್ಗೆ ಘರ್ಷಣೆಗಳು ನಡೆದೇ ಇದ್ದವು. ಈ ಕುರಿತು ಕನಕ ಪುರಂದರರ ಕೀರ್ತನೆಗಳೇ ನಮಗೆ ಸೂಚ್ಯವಾಗಿ ಹೇಳುತ್ತವೆ. ಕುಲಕುಲವೆನ್ನುತಿಹರು ಕುಲವಾವುದು ಸತ್ಯ ಸುಖವುಳ್ಳ ಜನರಿಗೆ . ತೀರ್ಥವನು ಪಿಡಿದವರು ತಿರುನಾಮಧಾರಿಗಳೇ ಜನ್ಮ ಸಾರ್ಥಕವಿರದವರು ಭಾಗವತರಹುದೇ ಆವ ಕುಲವಾದರೇನು ಆವನಾದರೇನು ಆತ್ಮಭಾವವರಿತ ಮೇಲೆ . ಅವರ ಕೀರ್ತನೆಗಳಲ್ಲಿ ಅವರ ಸಂದೇಶ ನೇರ ಮತ್ತು ಖಚಿತ. ಹಾಗೆಯೇ ಅಮೂರ್ತವಾದ ಪ್ರತಿಮಾ ನಿರೂಪಣೆಯಲ್ಲಿ ಪರಿಣತಿ, ಹಾಗೂ ಕನ್ನಡ ಸಾಹಿತ್ಯ ಮತ್ತು ಸಂಸ್ಕೃತ ಸಾಹಿತ್ಯಗಳ ಪರಿಚಯವನ್ನು ಅವರ ಸಾಹಿತ್ಯದಲ್ಲಿ ಕಾಣಬಹುದು.

ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋಸಂಪಾದಿಸಿ

ನೀ ಮಾಯೆಯೊಳಗೊ, ನಿನ್ನೊಳು ಮಾಯೆಯೊ
ನೀ ದೇಹದೊಳಗೊ, ನಿನ್ನೊಳು ದೇಹವೂ
ಬಯಲು ಆಲಯದೊಳಗೊ, ಆಲಯವು ಬಯಲೊಳಗೊ
ಬಯಲು ಆಲಯವೆರಡು ನಯನದೊಳಗೊ
ನಯನ ಬುದ್ಧಿಯೊಳಗೊ, ಬುದ್ಧಿ ನಯನದೊಳಗೊ
ನಯನ ಬುದ್ಧಿಗಳೆರಡು ನಿನ್ನೊಳಗೊ ಹರಿಯೆ
ಸವಿಯು ಸಕ್ಕರೆಯೊಳಗೊ, ಸಕ್ಕರೆಯು ಸವಿಯೊಳಗೊ
ಸವಿಯು ಸಕ್ಕರೆಯೆರಡು ಜಿಹ್ವೆಯೊಳಗೊ
ಜಿಹ್ವೆ ಮನಸಿನೊಳಗೊ, ಮನಸು ಜಿಹ್ವೆಯೊಳಗೊ
ಜಿಹ್ವೆ ಮನಸುಗಳೆರಡು ನಿನ್ನೊಳಗೊ ಹರಿಯೆ
ಕುಸುಮದೊಳು ಗಂಧವೊ, ಗಂಧದೊಳು ಕುಸುಮವೊ
ಕುಸುಮ ಗಂಧಗಳೆರಡು ಘ್ರಾಣದೊಳಗೊ
ಅಸಮಭವ ಕಾಗಿನೆಲೆಯಾದಿಕೇಶವರಾಯ
ಉಸುರಲೆನ್ನಳವಲ್ಲ ಎಲ್ಲ ನಿನ್ನೊಳಗೆ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳಸಂಪಾದಿಸಿ

ತೊರೆದು ಜೀವಿಸಬಹುದೆ ಹರಿ ನಿನ್ನ ಚರಣಗಳ
ಬರಿದೆ ಮಾತೇಕಿನ್ನು ಅರಿತು ಪೇಳುವೆನಯ್ಯ
ಒಡಲು ಹಸಿಯಲು ಅನ್ನವಿಲ್ಲದಲೇ ಇರಬಹುದು
ಪಡೆದ ಕ್ಷೇತ್ರವ ಬಿಟ್ಟು ಹೊರಡಬಹುದು
ಮಡದಿ ಮಕ್ಕಳನೆಲ್ಲಾ ತೊಲಗಿಸಿ ಬಿಡಬಹುದು
ಕಡಲೊಡೆಯ ನಿನ್ನ ಅರೆಘಳಿಗೆ ಬಿಡಲಾಗದು /೧/

ತಾಯಿ ತಂದೆಯ ಬಿಟ್ಟು ತಪವ ಮಾಡಲೂ ಬಹುದು
ದಾಯಾದಿ ಬಂಧುಗಳ ಬಿಡಲೂ ಬಹುದು
ರಾಯ ತಾ ಮುನಿದರೆ ರಾಜ್ಯವನೇ ಬಿಡಬಹುದು
ಕಾಯಜ ಪಿತ ನಿನ್ನ ಅರೆಘಳಿಗೆ ಬಿಡಲಾಗದು /೨/

ಪ್ರಾಣವ ಪರರು ಬೇಡಿದರೆತ್ತಿ ಕೊಡಬಹುದು
ಮಾನದಲಿ ಮನವ ತಗ್ಗಿಸಬಹುದು
ಜಾಣ ನಾಯಕನಾದ ಆದಿಕೇಶವರಾಯ
ಜಾಣ ಶ್ರೀಕೃಷ್ಣಾ ನಿನ್ನ ಅರೆಘಳಿಗೆ ಬಿಡಲಾಗದು /೩/

ಕನಕದಾಸರನ್ನು ಕುರಿತ ಕೃತಿಗಳುಸಂಪಾದಿಸಿ

ಇಂಗ್ಲಿಷಿಗೆ ಅನುವಾದ ವಾಗಿದೆ.ಸಂಪಾದಿಸಿ

J.Aravinda Raman ಕುಲ ಕುಲ

ಸಂಸ್ಕೃತಕ್ಕೆಸಂಪಾದಿಸಿ

೧ ಹರಿಭಕ್ತಿಸಾರ, ಆರ್. ಗಣೇಶ್, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

ಕನ್ನಡದಲ್ಲಿಸಂಪಾದಿಸಿ

೧ ಕನಕವಾಣಿ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ:ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೨ ಸಂತ ಶ್ರೀ ಕನಕದಾಸರ ಜೀವನ ಸಂದೇಶ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೩ ಸಂತ ಶ್ರೀ ಕನಕದಾಸರ ಸಾಹಿತ್ಯ ದರ್ಶನ, ಸಂ: ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೪ ಸಂತ ಶ್ರೀ ಕನಕದಾಸರ ಪಾರಂಪರಿಕ ಸ್ಥಳಗಳು, ಜಗನ್ನಾಥ ಆರ್. ಗೇನಣ್ಣವರ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೫ ಕನಕದಾಸ, ಕಾ.ತ. ಚಿಕ್ಕಣ್ಣ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೬ ರಾಮಧಾನ್ಯ (ನಾಟಕ), ರಾಮಕೃಷ್ಣ ಮರಾಠೆ, ಪ್ರ:ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೭ ಕನಕ ಶತಕ (ಕಾವ್ಯ), ಮಂಜುನಾಥ ಬೆಳವಾಡಿ, ಪ್ರ:ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೮ ಕನಕದಾಸರ ಕೃತಿಗಳಲ್ಲಿ ಸಮಾನತಾ ಸಮಾಜ, ನರಸಿಂಹಮೂರ್ತಿ ಹೂವಿನಹಳ್ಳಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೯ ನಳಚರಿತ್ರೆ: ಒಂದು ಹೊಸನೋಟ, ಬಿರಾದಾರ ಬಿ.ಬಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ

೧೦ ಕನಕದಾಸರು ಮತ್ತು ಆಧುನಿಕ ಚಿಂತನೆಗಳು: ಮುಖಾಮುಖಿ, ಶಿರೂರ ಬಿ.ವಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೧ ಭಕ್ತಿ ಪರಂಪರೆ ಮತ್ತು ಕನಕದಾಸರು, ಸಂ: ಯಕ್ಕುಂಡಿಮಠ ಬಿ.ವಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೨ ಕನಕ ಸಾಹಿತ್ಯ ಸೂಚಿ, ಸಂ: ಕೆ. ಮಲ್ಲಿಕಾರ್ಜುನ ಮತ್ತು ದೊಡ್ಡಮನಿ ಸಿ.ಡಿ., ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೩ ಕನಕದಾಸರ ಸಾಹಿತ್ಯ ಅಧ್ಯಯನ, ಹರಿಲಾಲ ಪವಾರ ಮತ್ತು ಚಂದ್ರಶೇಖರ ರೊಟ್ಟಿಗವಾಡ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೪ ಮೋಹನ ತರಂಗಿಣಿ: ಸಾಂಸ್ಕೃತಿಕ ಸಂವಾದ, ರವಿರಾಜ ಶೆಟ್ಟಿ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೫ ರಾಮಧಾನ್ಯ ಚರಿತೆ: ಸಂಘರ್ಷದ ನೆಲೆ, ಸರೋಜಿನಿ ಸಿ. ಹಿರೇಮಠ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೬ ಆತ್ಮ ಆವ ಕುಲ (ಕವನ ಸಂಕಲನ), ಸಂ: ಬಾಳಣ್ಣ ಶೀಗೀಹಳ್ಳಿ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೭ ಎಲ್ಲಿರುವನೋ ರಂಗ (ನಾಟಕ), ಶಶಿಧರ ನರೇಂದ್ರ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ

೧೮ ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-1: ರಾಮಧಾನ್ಯ ಚರಿತೆ, ರವಿ ಬಿ.ಕೆ. ಮತ್ತು ಸರೋಜಿನಿ ಸಿ. ಹಿರೇಮಠ, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೧೯ ಕನಕದಾಸರ ಸಮಗ್ರ ಕಾವ್ಯಾಧ್ಯಯನ, ಭಾಗ-2: ನಳಚರಿತ್ರೆ, ರವಿ ಬಿ.ಕೆ. ಮತ್ತು ಡಾ. ಎಚ್.ಎಚ್. ನದಾಫ್, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ

೨೦ ಕನಕ ವಿಜಯ (ಕಾವ್ಯ), ಶ್ರೀ ನಿರುಪಾದೀಶ್ವರ ಮಹಾಸ್ವಾಮಿಗಳು, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

೨೧ ಹರಿಭಕ್ತಿಸಾರ, ಎನ್. ರಂಗನಾಥ ಶರ್ಮ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

೨೨ ಕನಕೋಪನಿಷತ್ತು, ಬನ್ನಂಜೆ ಗೋವಿಂದಾಚಾರ್ಯ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

೨೩ ಕನಕ ಕಾವ್ಯ ಸಂಪುಟ, ಎ.ವಿ. ನಾವಡ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

೨೪ ರಾಮಧಾನ್ಯ ಚರಿತೆ (ನಾಟಕ), ಅಂಬಾತನಯ ಮುದ್ರಾಡಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

೨೫ ದಾಸ-ಕನಕ ಪ್ರಭೆ, ಹೇರಂಜೆ ಕೃಷ್ಣಭಟ್ಟ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

೨೬ ಕನಕ ಮುಂಡಿಗೆ: ಅರ್ಥಾನುಸಂಧಾನ, ಮಾಧವಿ ಭಂಡಾರಿ, ಪ್ರ: ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿ

೨೭ ಕನಕ ಚಿಂತನ 2007-08 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೨೮ಕನಕ ಚಿಂತನ 2009-10 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೨೯ ಕನಕ ಚಿಂತನ 2011-12 (ಪ್ರಚಾರೋಪನ್ಯಾಸಗಳ ಸಂಕಲನ), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೩೦ ಕನಕದಾಸರ ಕೀರ್ತನೆಗಳ ಶಬ್ದ ಪ್ರಯೋಗ ಕೋಶ, ಸಂ: ಶ್ರೀನಿವಾಸ ಹಾವನೂರ ಮತ್ತು ವಿ. ಕೃಷ್ಣ, ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೩೧ ಕನಕದಾಸರ ಕೀರ್ತನೆಗಳು, ಸಂ: ಪಾವಂಜೆ ಗುರುರಾವ್, ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೩೨  ಕನಕನ ಸುತ್ತಮುತ್ತ: ಸಂಕಥನಗಳ ಜಿಜ್ಞಾಸೆ, ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೩೩ ನೀ ಮಾಯೆಯೊಳಗೋ ನಿನ್ನೊಳು ಮಾಯೆಯೋ (ಕನಕದಾಸ ಅಧ್ಯಯನ ಸಮಗ್ರ ಸಂಪುಟ ಭಾಗ: 1), ಸಂ: ಶಿವರಾಮ ಶೆಟ್ಟಿ ಬಿ., ಪ್ರ: ಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

೩೪ ಸಂತಕವಿ ಕನಕದಾಸರು, ಡಾ. ಚಿಕ್ಕಮಗಳೂರು ಗಣೇಶ, ಪ್ರ: ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು

೩೫ ಕಾಲಜ್ಞಾನಿ ಕನಕ (ನಾಟಕ), ಕಿ.ರಂ. ನಾಗರಾಜ

ಇಂಗ್ಲಿಷಿನಲ್ಲಿಸಂಪಾದಿಸಿ

೧ Kanakadas Ramadhanya Charite, Shashidhara G. Vaidya, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೨ Heritage Sites Associated with the Saint-Poet Kanakadas, Jagannath R. Genannavar, Tr: Shankar D.A., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ ,ಕಾಗಿನೆಲೆ

೩ Kanakadasaru, Chikkanna K.T., Tr: Prakash H.S.M., ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೪ Kanakadas: An Ardent Devotee of Lord Adikeshava, Basavaraj Naikar, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೫ Kanakadasa's Revolution: A Radical Reading, K. Raghavendra Rao, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ

೬ Kanakadasa and the Tradition of Religious Humanism in Karnataka, K. Raghavendra Rao, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ಹಿಂದಿಯಲ್ಲಿಸಂಪಾದಿಸಿ

೧ ಕನಕದಾಸ, ಕಾ.ತ. ಚಿಕ್ಕಣ್ಣ, ಅನು: ಶ್ರೀನಿವಾಸ ಮೂರ್ತಿ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೨ ಕನ್ನಡ ಸಂತ ಕವಿ ಕನಕದಾಸ, ಸಂ: ಜಗನ್ನಾಥ ಆರ್. ಗೇನಣ್ಣವರ, ಅನು: ಶೋಭಾ ನಾಯಕ, ಚಂದ್ರಕಾಂತ ಪೋಕಾಣೆ, ಪ್ರ: ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೩ ಸಂತ ಕವಿ ಕನಕದಾಸ, ಶಶಿ ಶ್ಯಾಮ್‍ಸಿಂಗ್, ಪ್ರ:ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೪ ಕನಕದಾಸ್: ಏಕ್ ಅನುಶೀಲನ್, ನಂದಿನಿ ಗುಂಡೂರಾವ್, ಪ್ರ: ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

ತೆಲುಗಿನಲ್ಲಿಸಂಪಾದಿಸಿ

೧' ಭಕ್ತ ಶ್ರೀ ಕನಕದಾಸರು ಸಂದರ್ವಿನ ಪವಿತ್ರ ಸ್ಥಳಂ, ಜಗನ್ನಾಥ ಆರ್. ಗೇನಣ್ಣವರ, ಅನು:ಪದ್ಮಾಸಿ.,ಪ್ರ:  ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

೨ ರಾಮಧಾನ್ಯ (ನಾಟಕ), ರಾಮಕೃಷ್ಣ ಮರಾಠೆ, ಅನು: ಲಕ್ಷ್ಮೀದೇವಿ,ಪ್ರ: ಕಾಗಿನೆಲೆಅಭಿವೃದ್ಧಿಪ್ರಾಧಿಕಾರ  ,ಕಾಗಿನೆಲೆ 

೩ ಕನಕದಾಸ, ಕಾ.ತ. ಚಿಕ್ಕಣ್ಣ, ಅನು: ಪುಟ್ಟಮರಾಜ, ಪ್ರ:ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

ಚಲನಚಿತ್ರಸಂಪಾದಿಸಿ

ಡಾ. ರಾಜ್‍ಕುಮಾರ್ ಅವರು ಮುಖ್ಯ ಭೂಮಿಕೆಯಲ್ಲಿರುವ 'ಭಕ್ತ ಕನಕದಾಸ' ಚಲನಚಿತ್ರವು 1960ರಲ್ಲಿ ತೆರೆಕಂಡಿದೆ. ನಿರ್ದೇಶಕರು ವೈ.ಆರ್.ಸ್ವಾಮಿ. ಈ ಚಿತ್ರದಲ್ಲಿ ಅಳವಡಿಸಲಾಗಿರುವ ಕನಕದಾಸರ ಕೀರ್ತನೆಗಳನ್ನು ಪಿ.ಬಿ. ಶ್ರೀನಿವಾಸ್ ಅವರು ಹಾಡಿದ್ದಾರೆ. 'ಕುಲಕುಲಕುಲವೆಂದು ಹೊಡೆದಾಡದಿರಿ', 'ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ', 'ದೀನ ನಾನು ಸಮಸ್ತ ಲೋಕಕೆ ದಾನಿ ನೀನು' ಹಾಡುಗಳು ಜನಪ್ರಿಯವಾಗಿವೆ.

ಕನಕದಾಸ ಅಧ್ಯಯನ ಪೀಠ ಹಾಗೂ ಸಂಶೋಧನಾ ಕೇಂದ್ರಗಳುಸಂಪಾದಿಸಿ

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:

ಕನಕದಾಸರ ಸಾಹಿತ್ಯ

ಕಾಗಿನೆಲೆ ಅಭಿವೃದ್ಧಿ ಪ್ರಾಧಿಕಾರ , ಕಾಗಿನೆಲೆ

ಕನಕ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ,ಧಾರವಾಡ

ಕನಕದಾಸ ಅಧ್ಯಯನ ಸಂಶೋಧನಾ ಪೀಠ, ಉಡುಪಿಕನಕದಾಸ ಅಧ್ಯಯನ ಪೀಠ / ಸಂಶೋಧನಾ ಕೇಂದ್ರ, ಮಂಗಳಗಂಗೋತ್ರಿ, ಮಂಗಳೂರು ವಿಶ್ವವಿದ್ಯಾನಿಲಯ

ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಬೆಂಗಳೂರು

ಕನಕದಾಸ ಜಯಂತಿಸಂಪಾದಿಸಿ

ಕರ್ನಾಟಕ ಸರ್ಕಾರವು 2008ರಿಂದ ಕನಕದಾಸ ಜಯಂತಿಯನ್ನು ಆಚರಿಸುತ್ತಿದೆ. ಆ ದಿನ ಸರ್ಕಾರಿ ರಜೆ ಇರುತ್ತದೆ.

ಸರ್ಕಾರದ ಉಚಿತ ಈ-ಪುಸ್ತಕಗಳುಸಂಪಾದಿಸಿ

ಕರ್ನಾಟಕ ಸರ್ಕಾರವು ಕನಕದಾಸರು ರಚಿಸಿರುವ ಮತ್ತು ಹೆಸರಾಂತ ಸಾಹಿತಿಗಳು ಸಂಪಾದಿಸಿರುವ ಕೃತಿಗಳನ್ನು ಕಣಜ.ಇನ್/ಇಬುಕ್(www.kanaja.in/ebook) ನಲ್ಲಿ ಉಚಿತವಾಗಿ ಲಭ್ಯವಾಗುವಂತೆ ಅವಕಾಶ ಕಲ್ಪಿಸಿದ್ದಾರೆ. ಅವುಗಳಲ್ಲಿ ಕೆಲವುಗಳು ಈ ಕೆಳಗಿನಂತಿವೆ...

ಕನಕದಾಸರ ಕೀರ್ತನೆಗಳು ಮತ್ತು ಮುಂಡಿಗೆಗಳು(ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿhttp://kanaja.in/ebook/index.php/e-book/2017-07-07-09-51-

48)ಕನಕಾವಲೋಕನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-07-07-09-53-

11)ಕನಕದಾಸ ನಾಟಕ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-40-03)

ಕನಕ-ಮರುದರ್ಶನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-55-27)

ಕನಕ ಓದು (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-12-22-05-59-36)

ಕನಕ ತರಂಗಿಣಿ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-54-15)

ಕನಕದಾಸರ ಕಾವ್ಯ ಮತ್ತು ಸಂಗೀತ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-52-32)

ಕನಕ ಸಾಹಿತ್ಯ ಅಧ್ಯಯನ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-50-41)

ಬಯಲು ಆಲಯದೊಳಗೊ (ಡೌನ್ಲೋಡ್ ಮಾಡಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ http://kanaja.in/ebook/index.php/e-book/2017-11-24-04-49-34)

Last edited ೫ days ago by an anonymous user

RELATED PAGES

ಅರವಿಂದ ಮಾಲಗತ್ತಿ

ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾನಿಲಯ (ಮಂಗಳ ಗಂಗೋತ್ರಿ)

ಕಾ. ತ. ಚಿಕ್ಕಣ್ಣ

ಪುರಂದರದಾಸರು

ಪುರಂದರದಾಸರು
ಈ ಪುಟ ಕರ್ನಾಟಕ ಸಂಗೀತದ ಪ್ರಮುಖರಾದ ಪುರಂದರದಾಸರ ಬಗ್ಗೆ "ಪುರಂದರದಾಸ" ಹೆಸರಿನ ಕನ್ನಡ ಚಲನಚಿತ್ರಕ್ಕೆ ಈ ಪುಟವನ್ನು ನೋಡಿ
ಶ್ರೀ ಪುರಂದರದಾಸರು (೧೪೮೦ – ೧೫೬೪)[೧] ಕರ್ನಾಟಕ ಸಂಗೀತ ಪದ್ಧತಿಯ ಪಿತಾಮಹ ಎಂದು ಹೆಸರಾದವರು. ದಾಸ ಪದ್ಧತಿಯ ಅನೇಕ ಪ್ರಮುಖರಲ್ಲಿ ಮುಖ್ಯವಾಗಿ ಪುರಂದರದಾಸ, ಶ್ರೀಪಾದರಾಯ, ಕನಕದಾಸ, ಜಗನ್ನಾಥದಾಸ, ವಿಜಯದಾಸ ಮತ್ತು ಕಮಲೇಶ ವಿಠ್ಠಲ ಮೊದಲಾದವರು ಸಂಗೀತದ ಮೂಲಕ ಭಕ್ತಿಮಾರ್ಗವನ್ನು ಬೋಧಿಸಿದವರು. ಪುರಂದರದಾಸರ ಎಲ್ಲ ಕೀರ್ತನೆಗಳು ಪುರಂದರ ವಿಠ್ಠಲನನ್ನು (ವಿಷ್ಣು) ನಮಿಸುತ್ತಾ ಕೊನೆಗೊಳ್ಳುತ್ತವೆ. ಸಾವಿರಾರು ಕೀರ್ತನೆಗಳನ್ನು ರಚಿಸಿದ ಪುರಂದರದಾಸರ ಸುಮಾರು ೧೦೦೦ ಕೀರ್ತನೆಗಳು ಇಂದಿಗೂ ಉಳಿದಿವೆ.

            ಪುರಂದರದಾಸರ

ಪುರಂದರದಾಸರು
ಜನನ
ಶ್ರೀನಿವಾಸ ನಾಯಕ
1480
ಪುರಂದರಗಡ, ಭಾರತ
ಮರಣ
1564
ವೃತ್ತಿ
ಹರಿದಾಸರು, ಕೀರ್ತನಕಾರರು,
ಪ್ರಕಾರ/ಶೈಲಿ
ಕೀರ್ತನೆ, ಉಗಾಭೋಗ, ಪಿಳ್ಳಾರಿ ಗೀತೆಗಳು
ಜೀವನಸಂಪಾದಿಸಿ

ಜನನಸಂಪಾದಿಸಿ
ಇವರ ಮೊದಲ ಹೆಸರು ಶ್ರೀನಿವಾಸ ನಾಯಕ, ಜನ್ಮ ಸ್ಥಳ ಪುರಂದರಗಡ, ತಂದೆ ವರದಪ್ಪನಾಯಕ, ತಾಯಿ ಲಕ್ಷ್ಮಿದೇವಿ. ಪುರಂದರದಾಸರ ತಂದೆ ವರದಪ್ಪ ನಾಯಕ ಲೇವಾದೇವಿ ವೃತ್ತಿಯಲ್ಲಿದ್ದವರು. ಅನೇಕ ವರ್ಷಗಳ ಕಾಲ ಮಕ್ಕಳಾಗದ ಕಾರಣ ತಿರುಪತಿ ಶ್ರೀನಿವಾಸನಿಗೆ ಪ್ರಾರ್ಥನೆ ಸಲ್ಲಿಸಿದ ಮೇಲೆ ಮಗುವಾಯಿತು ಎಂಬ ನಂಬಿಕೆಯಿದೆ. ಇದರಿಂದಲೇ ಅವರು ಮಗನಿಗೆ ಶ್ರೀನಿವಾಸ ಎಂದು ಹೆಸರಿಟ್ಟರಂತೆ.

ವೈರಾಗ್ಯಸಂಪಾದಿಸಿ
ಶ್ರೀನಿವಾಸ ನಾಯಕ ಬೆಳೆದ ನಂತರ ತಂದೆಯ ವೃತ್ತಿಯನ್ನೇ ಮುಂದುವರಿಸಿದ. ಆದರೆ ಅತ್ಯಂತ ಜಿಪುಣನೆಂದು ಹೆಸರಾದ ಶ್ರೀನಿವಾಸ, ತಂದೆ ಅಸ್ವಸ್ಥರಾದಾಗಲೂ ಹಣ ಖರ್ಚು ಮಾಡಲು ತಡೆದನಂತೆ. ಶ್ರೀನಿವಾಸನ ಪತ್ನಿ ಸರಸ್ವತಿ ದಾನಶೀಲೆಯಾಗಿ, ಪತಿಯ ಕೋಪ ಅವಳ ಮೇಲೆ ಬೀಳುತ್ತಿತ್ತು ಎಂದು ಹೇಳುತ್ತಾರೆ. ಅವರ ಸಂಸಾರ ಮೂಲತಃ ಪಂಡರಾಪುರ/ ಪಂಡರಾಪುರದಲ್ಲಿದ್ದರೂ ಶ್ರೀನಿವಾಸ ನಂತರದ ವರ್ಷಗಳಲ್ಲಿ ಹಂಪೆಯಲ್ಲಿದ್ದನೆಂದು  ತೋರುತ್ತದೆ.

ಐತಿಹ್ಯಸಂಪಾದಿಸಿ
ವಿಠ್ಠಲ (ವಿಷ್ಣು) ಬಡ ಬ್ರಾಹ್ಮಣನ ವೇಷದಲ್ಲಿ ಒಮ್ಮೆ ಶ್ರೀನಿವಾಸನ ಅಂಗಡಿಗೆ ಬಂದು ಮಗನ ಉಪನಯನಕ್ಕೆ ಹಣ ಬೇಡಿದನಂತೆ. ಜಿಪುಣ ಶ್ರೀನಿವಾಸ ಪ್ರತಿ ದಿನವೂ ಮಾರನೆಯ ದಿನ ಬರಹೇಳುತ್ತ, ಆರು ತಿಂಗಳುಗಳ ಕಾಲ ಮುಂದೆ ಹಾಕಿದನಂತೆ. ಕೊನೆಗೆ ಬ್ರಾಹ್ಮಣನ ಕಾಟ ತಡೆಯಲಾರದೆ ಒಂದು ಸವಕಲು ನಾಣ್ಯವನ್ನು ಕೊಟ್ಟನಂತೆ. ವಿಠ್ಠಲ ಈಗ ಶ್ರೀನಿವಾಸನ ಮನೆಗೆ ತೆರಳಿ ಆರು ತಿಂಗಳುಗಳ ಕಾಲ ಒಬ್ಬ ವರ್ತಕ ತನ್ನನ್ನು ಸತಾಯಿಸಿ ಕೊನೆಗೆ ಸವಕಲು ನಾಣ್ಯ ಕೊಟ್ಟ ಕಥೆ ಹೇಳಿದನಂತೆ. ಮಾರನೇ ದಿನ ಅದೇ ಬ್ರಾಹ್ಮಣ ಮನೆಗೆ ಬಂದು ಸರಸ್ವತಿಯ ಬಳಿ ತನ್ನ ಮಗನ ಉಪನಯನದ ಬಗ್ಗೆ ಹೇಳಿ ಅವಳಿಂದ ಸಹಾಯ ಯಾಚಿಸುತ್ತಾನೆ. ಸರಸ್ವತಿ ಮರುಕದಿಂದ ತನ್ನ ಬಳಿ ಯವುದೇ ಧನ ಆಭರಣಗಳಿಲ್ಲ ಎಲ್ಲವೂ ತನ್ನ ಗಂಡನ ಬಳಿ ಇದೆ. ಅವರ ಅನುಮತಿ ಇಲ್ಲದೇ ಏನನ್ನೂ ಕೊಡುವ ಪರಿಸ್ಥಿತಿಯಲ್ಲಿಲ್ಲ ಎಂದು ಬೇಸರ ಪಡುತ್ತಾಳೆ. ಆಗ ಆ ಬ್ರಾಹ್ಮಣ ನಿನ್ನ ತವರಿನಲ್ಲಿ ನಿನಗೆ ಕೊಟ್ಟ ಮೂಗುತಿಯ ಮೇಲೆ ನಿನ್ನ ಅಧಿಕಾರವಿದೆ. ಅದನ್ನೇ ಕೊಡು ಎಂದಾಗ, ಅವನಿಗೆ ತನ್ನ ಮೂಗುತಿಯನ್ನು ತೆಗೆದು ಕೊಟ್ಟಳಂತೆ. ಬ್ರಾಹ್ಮಣ ತಕ್ಷಣ ಮೂಗುತಿಯನ್ನು ಶ್ರೀನಿವಾಸನ ಅಂಗಡಿಗೆ ಒಯ್ದು ಅದನ್ನು ಅಡವಿಡಲು ಪ್ರಯತ್ನಿಸಿದನಂತೆ. ಶ್ರೀನಿವಾಸ ಆ ಮೂಗುತಿಯನ್ನು ಗುರುತಿಸಿ, ಹಣಕ್ಕೆ ನಾಳೆ ಬರುವಂತೆ ಬ್ರಾಹ್ಮಣನಿಗೆ ಹೇಳಿ, ಅದನ್ನು ಡಬ್ಬಿಯಲ್ಲಿಟ್ಟು ತಕ್ಷಣ ಮನೆಗೆ ಬಂದು ಪತ್ನಿಯ ಬಳಿ ಮೂಗುತಿಯನ್ನು ತೋರಿಸಲು ಹೇಳಿದನಂತೆ. ಹೆದರಿದ ಹೆಂಡತಿ ಸ್ನಾನ ಮಾಡುವಾಗ ತೆಗೆದಿಟ್ಟಿದ್ದೆ, ತರುತ್ತೇನೆಂದು ಒಳಗೆ ಹೋಗಿ, ಸ್ನಾನ ಕೊಠಡಿಯಲ್ಲಿ ವಿಷ ಕುಡಿಯುವ ಪ್ರಯತ್ನ ನಡೆಸಿದಾಗ ಅವಳ ವಿಷದ ಬಟ್ಟಲಿನೊಳಕ್ಕೆ ಮೇಲಿನಿಂದ ಮೂಗುತಿ ಬಿದ್ದಿತಂತೆ. ಅದನ್ನು ತಂದು ಶ್ರೀನಿವಾಸನಿಗೆ ಕೊಡುತ್ತಾಳೆ. ಅಂಗಡಿಗೆ ಹಿಂದಿರುಗಿ ಬಂದ ಶ್ರೀನಿವಾಸ ಡಬ್ಬಿಯನ್ನು ತೆಗೆದು ನೋಡಿದರೆ ಅಲ್ಲಿ ಇಟ್ಟಿದ್ದ ಮೂಗುತಿ ಮಾಯವಾಗಿತ್ತಂತೆ. ಆಗ ಅವನಿಗೆ ಬಂದ ಬ್ರಾಹ್ಮಣ ಬೇರೆ ಯಾರೂ ಅಲ್ಲ, ತನ್ನನ್ನು ಪರೀಕ್ಷಿಸಲು ಸ್ವತಃ ನಾರಾಯಣನೇ ಬ್ರಾಹ್ಮಣ ವೇಷದಲ್ಲಿ ಬಂದಿದ್ದನೆಂದು ಅರಿತು, ತನ್ನ ಬಗ್ಗೆ ತಾನೇ ನಾಚಿಕೆ ಪಟ್ಟುಕೊಂಡ ಶ್ರೀನಿವಾಸ, ತನ್ನ ಶ್ರೀಮಂತಿಕೆಯನ್ನು ತೊರೆದು ಹರಿದಾಸನಾಗುವ ನಿರ್ಧಾರ ತೆಗೆದುಕೊಂಡನಂತೆ. ದೇವರು ದಾರಿ ತೋರಿಸಿದ್ದರ ಬಗ್ಗೆ ಕೃತಜ್ಞತೆಗಾಗಿ ತಮ್ಮ ಹೆಂಡತಿಯ ಜ್ಞಾಪಕಾರ್ಥ ಒಂದು ಕೀರ್ತನೆಯನ್ನೂ ಪುರಂದರದಾಸರು ರಚಿಸಿದ್ದಾರೆ. ನಂತರ ಶ್ರೀನಿವಾಸ ನಾಯಕ 'ಪುರಂದರದಾಸ' ಎಂಬ ಹೆಸರನ್ನು ಪಡೆದರು.

ತಮ್ಮ ಹೆಂಡತಿಯ ಜ್ಞಾಪಕಾರ್ಥ ರಚಿಸಿದ ಕೀರ್ತನೆಸಂಪಾದಿಸಿ
ಆದದ್ದೆಲ್ಲ ಒಳಿತೆ ಆಯಿತು
ರಚನೆ: ಶ್ರೀ ಪುರಂದರದಾಸರು
ರಾಗ : ಪಂತುರಾವಳಿ ; ತಾಳ : ಆದಿತಾಳ
ಆದದ್ದೆಲ್ಲ ಒಳಿತೆ ಆಯಿತು ನಮ್ಮ
ಶ್ರೀಧರ ಸೇವೆ ಮಾಡಲು ಸಾಧನ ಸಂಪತ್ತಾಯಿತು;

ದಂಡಿಗೆ ಬೆತ್ತ ಹಿಡಿಯೊದಕ್ಕೆ
ಮಂಡೆ ಮಾಚಿ ನಾಚುತಲಿದ್ದೆ
ಹೆಂಡತಿ ಸಂತತಿ ಸಾವಿರವಾಗಲಿ
ದಂಡಿಗೆ ಬೆತ್ತ ಹಿಡಿಸಿದಳಯ್ಯ

ಗೋಪಾಳ ಬುಟ್ಟಿ ಹಿಡಿಯೊದಕ್ಕೆ
ಭೂಪತಿಯಂತೆ ಗರ್ವಿಸುತಿದ್ದೆ
ಆ ಪತ್ನೀ ಕುಲ ಸಾವಿರವಾಗಲಿ
ಗೋಪಾಳ ಬುಟ್ಟಿ ಹಿಡಿಸಿದಳಯ್ಯ

ತುಳಸಿ ಮಾಲೆ ಹಾಕುವುದಕ್ಕೆ
ಅರಸನಂತೆ ನಾಚುತಲಿದ್ದೆ
ಸರಸಿಜಾಕ್ಷ ಪುರಂದರ ವಿಠ್ಠಲ
ತುಳಸಿ ಮಾಲೆ ಹಾಕಿಸಿದನಯ್ಯ

ಕವಿ ಮತ್ತು ಸಂಗೀತಗಾರಸಂಪಾದಿಸಿ

ಪುರಂದರದಾಸರ ಪದಗಳು ಪ್ರಾಸ ಮತ್ತು ಅರ್ಥದಲ್ಲಿ ಶ್ರೀಮಂತವಾಗಿವೆ. ಉದಾಹರಣೆಗೆ:

"ಕುದುರೆ ಅಂದಣ ಆನೆ ಬಯಸೋದು ನರಚಿತ್ತ
ಪಾದಚಾರಿ ಆಗೋದು ಹರಿ ಚಿತ್ತವಯ್ಯ"

ಪುರಂದರದಾಸರ ಪದಗಳು ಮುಂದೆ ಕರ್ನಾಟಕ ಸಂಗೀತ ಪದ್ಧತಿಯ ಬುನಾದಿಯಾದವು. ಶಾಸ್ತ್ರೀಯ ಸಂಗೀತವನ್ನು ಶ್ರೀ ಸಾಮಾನ್ಯನಿಗೆ ಪರಿಚಯ ಮಾಡಿಕೊಡಲು ಯತ್ನಿಸಿದ ಪುರಂದರದಾಸರು ಮಾಯಾಮಾಳವಗೌಳ ರಾಗದಿಂದ ಹಿಡಿದು ಹೊಸಬರಿಗೆ ಶಾಸ್ತ್ರೀಯ ಸಂಗೀತವನ್ನು ಕಲಿಸಿ ಕೊಡುವ ದಾರಿಯ ಬಗೆಗೆ ಯೋಚಿಸಿದರು. ಈಗಲೂ ದಕ್ಷಿಣ ಭಾರತದ ಶಾಸ್ತ್ರೀಯ ಸಂಗೀತದ ಪಾಠಗಳು ಪುರಂದರದಾಸರ ಸರಳೆ, ಜಂಟಿ ವರಸೆಗಳೊಂದಿಗೇ ಆರಂಭಿಸಲ್ಪಡುತ್ತವೆ. ಪುರಂದರದಾಸರ 'ಪಿಳ್ಳಾರಿ ಗೀತೆಗಳು' (ಉದಾ: ಲಂಬೋದ ರ ಲಕುಮಿಕರ...., ಕೆರೆಯ ನೀರನು ಕೆರೆಗೆ ಚೆಲ್ಲಿ.....ಇತ್ಯಾದಿ) ಸಂಗೀತದ ಸ್ವರ- ಸಾಹಿತ್ಯ- ತಾಳಗಳ ಸಂಯೋಜನೆಯನ್ನು ಅಭ್ಯಸಿಸಲು ಮೊದಲ ಮೆಟ್ಟಿಲು. ಕರ್ನಾಟಕ ಶಾಸ್ತ್ರೀಯ ಸಂಗೀತದ ತ್ರಿಮೂರ್ತಿಗಳಲ್ಲೊಬ್ಬರಾದ ಶ್ರೀ ತ್ಯಾಗರಾಜರು ತಮ್ಮ "ಪ್ರಹ್ಲಾದ ಭಕ್ತಿ ವಿಜಯಮ್" ಎಂಬ ಲೇಖನದಲ್ಲಿ ಶ್ರೀ ಪುರಂದರ ದಾಸರನ್ನು ತಮ್ಮ ಸಂಗೀತ ಗುರುಗಳೆಂದು ಹೇಳಿಕೊಂಡಿದ್ದಾರೆ. ಹರಿನಾಮಸ್ಮರಣೆಯ ರೂಪದಲ್ಲಿ ರಚಿಸಿದ ಅವರ ಕೃತಿಗಳು ದೇವರನಾಮಗಳಾಗಿ ಪ್ರಸಿದ್ಧವಾಗಿವೆ. ಅವರ ಹರಿಭಕ್ತಿ ಹಾಗೂ ಸಂಗೀತದಲ್ಲಿನ ಪಾಂಡಿತ್ಯ ಕನ್ನಡ ಸಾಹಿತ್ಯದಲ್ಲೇ ವಿಶಿಷ್ಟವಾದ ಸ್ಥಾನವನ್ನು ಪಡೆದು ದಾಸ ಸಾಹಿತ್ಯವನ್ನು ಶ್ರೀಮಂತವಾಗಿಸಿವೆ. ಕರ್ನಾಟಕ ಶಾಸ್ತ್ರೀಯ ಸಂಗೀತದ ಪಿತಾಮಹರಾದ ಪುರಂದರದಾಸರ ಸಾಧನೆಯನ್ನು ಕಂಡ ಸರ್ವರೂ 'ದಾಸರೆಂದರೆ ಪುರಂದರದಾಸರಯ್ಯಾ..!' ಎಂದು ಕೊಂಡಾಡಿದ್ದಾರೆ. ಇವರ ಎಲ್ಲ ಕೀರ್ತನೆಗಳೂ ಕನ್ನಡ  ಭಾಷೆಯಲ್ಲಿದ್ದು, ಭಕ್ತಿ ಮಾರ್ಗವನ್ನು ಜನಸಾಮಾನ್ಯರಿಗೆ ಪರಿಚಯ ಮಾಡಿಕೊಡುವ ಉದ್ದೇಶವನ್ನು ಹೊಂದಿವೆ. ಕರ್ನಾಟಕ ಸಂಗೀತಗಾರರಲ್ಲಿ ಪುರಂದರದಾಸರ ಕೀರ್ತನೆಗಳ ಪರಿಚಯ ಇಲ್ಲದವರು ಇಲ್ಲವೇ ಇಲ್ಲವೆನ್ನಬಹುದು. ಶ್ರೀ ಪುರಂದರದಾಸರು ೫ ಲಕ್ಷ ಹಾಡುಗಳನ್ನು ರಚನೆ ಮಾಡಬೇಕೆಂಬ ಉದ್ದೇಶವಿಟ್ಟುಕೊಂಡಿದ್ದರು; ಅವರು ೪,೭೫,೦೦೦ ಹಾಡುಗಳನ್ನು ರಚನೆ ಮಾಡಿ ಅವತಾರ ಮುಗಿಸಿದರು; ಅವರ ಮಗ ಮಧ್ವಪತಿದಾಸರು ಉಳಿದ ೨೫,೦೦೦ ಹಾಡುಗಳನ್ನು ರಚನೆ ಮಾಡಿದರು ಎಂದು ಹೇಳಲಾಗುತ್ತಿದೆ....

ಬಾಹ್ಯ ಸಂಪರ್ಕಗಳುಸಂಪಾದಿಸಿ

ವಿಕಿಮೀಡಿಯ ಕಣಜದಲ್ಲಿ Purandara Dasa  ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ .
ಪುರಂದರ ದಾಸರು
ಪುರಂದರ ದಾಸರ ಬಗ್ಗೆ ಪು.ತಿ.ನ. ಅವರ ಲೇಖನ
ರಸಿಕ ಫೋರಮ್ ವಿಕಿಯಲ್ಲಿ ಪುರಂದರ ದಾಸರ ಬಗ್ಗೆಯ ಲೇಖನ
ವಿಕಿಸೋರ್ಸ್ನಲ್ಲಿ:[[೧]]
ವಿಕಿಸೋರ್ಸ್ನಲ್ಲಿ ದಾಸ ಸಾಹಿತ್ಯ:[[೨]]

ವಿಕಿಸೋರ್ಸ್ ತಾಣದಲ್ಲಿ ಈ ವಿಷಯಕ್ಕೆ ಸಂಬಂಧಪಟ್ಟ ಮೂಲಕೃತಿಗಳು ಇವೆ:
ಪುರಂದರದಾಸ

RELATED PAGES

ಕರ್ನಾಟಕ ಸಂಗೀತ

ಹರಿದಾಸ

ಭಾರತೀಯ ಸಂಗೀತ ದರ್ಶನ

                         ಇಂತಿ
               ಮಂಜುನಾಥ ಕೆ ಎಂ
  ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
            ಬಸವಪಟ್ಟಣ {ಚಿರಡೋಣಿ}

ಶ್ರೀಪಾದರಾಯರು

ಶ್ರೀಪಾದರಾಜ (ಶ್ರೀಪಾದರಾಯ)
ಶ್ರೀಪಾದರಾಜರು
ಇವರ ಕಾಲ: ೧೩೮೯ - ೧೪೮೭
ಹರಿದಾಸ ಪಂಥದ ಪ್ರಮುಖರಲ್ಲೊಬ್ಬರು ಹಾಗು ದ್ವೈತ ತತ್ವಶಾಸ್ತ್ರದ ಪ್ರತಿಪಾದಕರು.
ಇವರ ಕೀರ್ತನೆಗಳ ಅಂಕಿತ: ರಂಗವಿಠಲ

ಜೀವನ
ಶ್ರೀಪಾದರಾಜರ ಜನ್ಮ ಸ್ಥಳ ಚನ್ನಪಟ್ಟಣ ತಾಲೂಕಿನಲ್ಲಿ ಅಬ್ಬೂರು. ಮೂಲ ಹೆಸರು ಲಕ್ಷ್ಮೀನಾರಾಯಣ. ತಂದೆಯ ಹೆಸರು ಶೇಷಗಿರಿಯಪ್ಪ. ತಾಯಿ ಗಿರಿಯಮ್ಮ.
ಇವರು ಧ್ರುವರಾಜರ ಅವತಾರವಂತೆ ಮಾಧ್ವರ ವಿಶ್ವಾಸ. ಇವರ ಪ್ರಮುಖ ಶಿಷ್ಯರಾದ ವ್ಯಾಸತೀರ್ಥರು ಪ್ರಖ್ಯಾತ ಹರಿದಾರಸರಾದ ಪುರಂದರದಾಸರ ಮತ್ತು ಕನಕದಾಸರ ಗುರುಗಳು.
ರಂಗವಿಠಲ ಎಂಬ ಅಂಕಿತದಲ್ಲಿ ಅನೇಕ ದೇವರನಾಮಗಳನ್ನು ರಚಿಸಿದ್ದಾರೆ. ಇವರ ಜನಪ್ರಿಯವಾಗಿರುವ ದೇವರನಾಮಗಳು:
ಕಂಗಳಿದ್ಯಾತಕೋ ಕಾವೇರಿ ರಂಗನ ನೋಡದ
ಭೂಷಣಕೆ ಭೂಷಣ
ಇಟ್ಟಾಂಗೆ ಇರುವೆನೋ ಹರಿಯೇ ನನ್ನ ದೊರೆಯೇ
ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಶ್ರೀಪಾದರಾಜರ ಬೃಂದಾವನವಿದೆ.

ಶ್ರೀಪಾದರಾಯರ ಬಗ್ಗೆ ಮತಷ್ಟು : ‘ಕಣಜ’ದಿಂದ
ಭೌಂ…. ಭೌಂ…. ಭೌಂ…. ಭೌಂ….’
ಶಬ್ದ ಕೇಳಿ ಬಂತು. ಇದೇನು, ಈ ತರಹದ ಶಬ್ದ ಕೇಳಿ ಬರುತ್ತಿದೆ? ದನ ಕಾಯುತ್ತಿದ್ದ ಹುಡುಗರೆಲ್ಲರೂ ಅತ್ತಕಡೆಗೆ ತಿರುಗಿ ನೋಡಿದರು. ಮೇನೆಯೊಂದು ಬರುತ್ತಿತ್ತು. ಮೇನೆ ಹೊತ್ತಿದ್ದವರು ಭೌಂ…. ಭೌಂ….  ಶಬ್ದ ಮಾಡುತ್ತಿದ್ದರು. ಹಾಗೆ ಬರುತ್ತಿದ್ದ ಮೇನೆ ಇವರ ಕಡೆಗೇ ಬಂದಿತು. ಮತ್ತು ಇವರ ಮುಂದೆಯೇ ನಿಂತಿತು. ಒಳಗೆ ಕುಳಿತಿದ್ದವರು ಒಬ್ಬರು ಯತಿಗಳು. ಅವರ ದೇಹವಾದರೋ ಬಂಗಾರದಂತೆ ಮಿನುಗು ತ್ತಿತ್ತು. ಮುಖವಾದರೋ ಸೌಮ್ಯವಾಗಿ, ತೇಜಪುಂಜವಾಗಿ ಬೆಳಗುತ್ತಿತ್ತು. ಹುಡುಗರು ನೋಡುತ್ತಿದ್ದಂತೆ ಆ ಯತಿ ಗಳು ಮಾತನಾಡಿದರು :
“ಮಕ್ಕಳೇ, ಊರು ಇಲ್ಲಿಂದ ಇನ್ನೆಷ್ಟು ದೂರವಿದೆ?”
ಬಾಲಕನೊಬ್ಬ ಮುಂದೆ ಬಂದ :
“ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ನಾವು ಮೇಯಿಸುತ್ತಿರುವ ದನಗಳನ್ನು ನೋಡಿ” ಎಂದು ಉತ್ತರ ಕೊಟ್ಟ.

ಯತಿಗಳಿಗೆ ಮೆಚ್ಚುಗೆ
ಯತಿಗಳಿಗೆ ಆಶ್ಚರ್ಯವಾಯಿತು. ತಮ್ಮ ಪ್ರಶ್ನೆಗೆ ಈ ಬಾಲಕ ಕೊಟ್ಟ ಉತ್ತರವಾದರೋ ಸಾಮಾನ್ಯ ರೀತಿ ಯಲ್ಲಿರಲಿಲ್ಲ. ಹೊತ್ತನ್ನು ನೋಡಿದರು; ಆ ವೇಳೆ ಗಾಗಲೇ ಸೂರ್ಯ ಮುಳುಗುತ್ತಿದ್ದ. ಬಾಲಕರಾದರೋ ವಯಸ್ಸಿನಲ್ಲಿ ತೀರ ಚಿಕ್ಕವರು; ಅವರು ಮೇಯಿಸುತ್ತಿದ್ದ ಪ್ರಾಣಿಗಳಾದರೋ ಮಂದಗಾಮಿಗಳಾದ ದನಕರು ಗಳು. ಸೂರ್ಯ ಮುಳುಗುವ ಹೊತ್ತಿನಲ್ಲಿ ಈ ಚಿಕ್ಕ ಬಾಲಕರು, ಮಂದಗಾಮಿಗಳಾದ ದನಕರುಗಳನ್ನು ಮೇಯಿಸುತ್ತಿರಬೇಕಾದರೆ, ಊರು ತೀರ ಹತ್ತಿರ ದಲ್ಲಿಯೇ ಇರಬೇಕು;
ಈ ಉತ್ತರವನ್ನು ನೆನೆಸಿಕೊಳ್ಳುತ್ತಿ ದ್ದಂತೆ ಯತಿಗಳಿಗೆ ಹೆಚ್ಚು ಹೆಚ್ಚು ಆಶ್ಚರ್ಯವಾಗುತ್ತಿತ್ತು; ಮೆಚ್ಚುಗೆಯಾಗುತ್ತಿತ್ತು. ಎಂತಹ ಕುಶಾಗ್ರ ಬುದ್ಧಿ ಈ ಬಾಲಕನದು!
ಇದು ನಡೆದುದು ಶ್ರೀರಂಗಕ್ಷೇತ್ರದಲ್ಲಿ. ಮೇನೆ ಯಲ್ಲಿ ಕುಳಿತ ಯತಿಗಳು ಸ್ವರ್ಣವರ್ಣತೀರ್ಥರು. ಶ್ರೀರಂಗದ ಯಾತ್ರೆಗೆಂದು ಅವರು ಹೊರಟಿದ್ದರು. ‘ಸ್ವರ್ಣವರ್ಣ’ ಎಂದರೆ ಬಂಗಾರದ ಬಣ್ಣ ಎಂದು ಅರ್ಥ. ಯತಿಗಳ ಶರೀರ ಬಂಗಾರದಂತೆ ಹೊಳೆಯುತ್ತಿ ದ್ದುದರಿಂದ ಅವರಿಗೆ ‘ಸ್ವರ್ಣವರ್ಣತೀರ್ಥ’ರೆಂದೇ ಹೆಸರು ಬಂದಿತು.
‘ಯಾರೀ ಹುಡುಗ?’
ಕರ್ನಾಟಕದ ಕೊಡಗು ಸೀಮೆಯ ಬ್ರಹ್ಮಗಿರಿಯಲ್ಲಿ ಹುಟ್ಟಿ, ‘ದಕ್ಷಿಣಗಂಗೆ’ ಎಂದೇ ಹೆಸರು ಪಡೆದ ಕಾವೇರಿ ತಾಯಿ ಮೂರು ಕಡೆಗಳಲ್ಲಿ ಕವಲಾಗಿ ಒಡೆದು, ಆದಿರಂಗ, ಮಧ್ಯರಂಗ ಮತ್ತು ಅಂತ್ಯರಂಗಗಳನ್ನು ಸೃಷ್ಟಿಮಾಡಿದ್ದಾಳೆ. ಮೈಸೂರಿನ ಬಳಿಯ ಶ್ರೀರಂಗಪಟ್ಟಣವೇ ಕಾವೇರಿಯ ಆದಿರಂಗ; ಶಿವನಸಮುದ್ರವೇ ಮಧ್ಯರಂಗ; ತಮಿಳುನಾಡಿನ ತಿರುಚಿರಪಳ್ಳಿಯ ಸಮೀಪದಲ್ಲಿರುವ ಶ್ರೀರಂಗವೇ ಅಂತ್ಯರಂಗ.
ಮಕ್ಕಳನ್ನು ಮಾತನಾಡಿಸಿದ ಸ್ವರ್ಣವರ್ಣತೀರ್ಥರು ಊರನ್ನು ಪ್ರವೇಶಿಸಿದ ತಕ್ಷಣವೇ ‘ಆ ಬಾಲಕ ಯಾರಿರಬಹುದು?’ ಎಂದು ವಿಚಾರ ಮಾಡಿದರು. ಅವನ ತಂದೆ-ತಾಯಿಗಳಿಗೆ ಹೇಳಿ ಕಳುಹಿಸಿದರು.
ಹುಡುಗನ ತಂದೆ ಶೇಷಗಿರಿಯಪ್ಪ, ತಾಯಿ ಗಿರಿಯಮ್ಮ. ತುಂಬ ಬಡತನದಲ್ಲಿ ಅವರು ಜೀವನ ನಡೆಸುತ್ತಿದ್ದರು. ‘ತೋಟಂತಿಲ್ಲಾಯ’ ಮನೆತನದವರೆಂದು ಅವರಿಗೆ ಹೆಸರು, ಅಂದರೆ ತೋಟದ ಮನೆಯವರು ಎಂದರ್ಥ. ತೋಟದ ಕೆಲಸಗಳನ್ನು ಮಾಡುತ್ತಾ ಬಂದದ್ದರಲ್ಲಿ ಹೊಟ್ಟೆ ಹೊರೆದುಕೊಳ್ಳುತ್ತಿದ್ದರು.
ಈ ದಂಪತಿಗಳಿಗೆ ಒಬ್ಬನೇ ಮಗ. ಅವನು ಹುಟ್ಟಿದ್ದು ೧೪೦೬ರಲ್ಲಿ. ಹುಟ್ಟಿದ ಹನ್ನೆರಡನೆಯ ದಿನ ಮಗನಿಗೆ ಲಕ್ಷ್ಮೀನಾರಾಯಣ ಎಂದು ನಾಮಕರಣ ಮಾಡಿದರು. ಹುಡುಗನಿಗೆ ಯೋಗ್ಯ ಶಿಕ್ಷಣ ಕೊಡಿಸಲು ತಂದೆ ತಾಯಿಗಳಿಗೆ ಅನುಕೂಲವಿಲ್ಲದಿದ್ದುದರಿಂದ ಅವನನ್ನು ದನಕಾಯಲು ಬಿಟ್ಟಿದ್ದರು.
‘ಸ್ವಾಮಿಗಳು ಕೂಡಲೇ ಬರಬೇಕೆಂದು ಕರೆ ಕಳುಹಿಸಿದ್ದಾರೆ’ ಎಂದು ಸ್ವಾಮಿಗಳ ಕಡೆಯವರು ಬಂದು ಹೇಳುತ್ತಲೇ ಹುಡುಗನ ತಂದೆತಾಯಿಗಳಿಗೆ ಹೆದರಿಕೆ ಯಾಯಿತು. ‘ಏನು ಅಚಾತುರ್ಯವಾಯಿತೋ, ಹುಡುಗ ಏನು ತಪ್ಪು ಮಾಡಿದನೋ!’ ಎಂದು ಯೋಚಿಸುತ್ತ ಸ್ವಾಮಿಗಳಿದ್ದ ಕಡೆಗೆ ಬಂದರು. ಅವರಿಗೆ ನಮಸ್ಕಾರ ಮಾಡಿದರು.
ಮಗು ನಿಮ್ಮದೇ?
“ಲಕ್ಷ್ಮೀನಾರಾಯಣ ಎನ್ನುವ ಬಾಲಕ ನಿಮ್ಮ ಮಗ ತಾನೆ?” ಎಂದು ಪ್ರಶ್ನಿಸಿದರು ಸ್ವರ್ಣವರ್ಣ ಯತಿಗಳು.
“ಹೌದು, ನಮ್ಮ ಮಗನೇ” ತಾಯ್ತಂದೆಯರು ಅಂಜುತ್ತಾ ಹೇಳಿದರು!
“ಅವನನ್ನು ನಮ್ಮ ವಶಕ್ಕೆ ಒಪ್ಪಿಸಿಕೊಡಿ. ಬಾಲಕನ ಸಮಸ್ತ ಜವಾಬ್ದಾರಿಯೂ ನಮ್ಮದಾಗಿರಲಿ” ಎಂದರು ಸ್ವರ್ಣವರ್ಣತೀರ್ಥರು.
ಶೇಷಗಿರಿಯಪ್ಪ ಮತ್ತು ಗಿರಿಯಮ್ಮನವರಿಗೆ ಇದು ಅನಿರೀಕ್ಷಿತ ಪ್ರಸಂಗವಾಗಿತ್ತು. ಅವರಿಗೆ ಒಬ್ಬನೇ ಮಗ. ಅವನನ್ನು ಸ್ವಾಮಿಗಳ ವಶಕ್ಕೆ ಒಪ್ಪಿಸಿ ದೂರ ಕಳುಹಿಸಿ ಅವನನ್ನು ಬಿಟ್ಟಿರುವುದು ಹೇಗೆ ಎಂದು ದುಃಖ. ಜತೆಗೆ ಮುಂದೆ ತಮ್ಮ ಗತಿ ಏನು ಎಂಬ ಯೋಚನೆ. ಯೋಚಿಸುತ್ತ ನಿಂತ ಆ ದಂಪತಿಗಳನ್ನು ಕುರಿತು ಸ್ವರ್ಣವರ್ಣ ಯತಿಗಳು ಹೇಳಿದರು.
“ನಿಮ್ಮ ಮಗ ಶುಭ ಲಕ್ಷಣಗಳಿಂದ ಕೂಡಿದ್ದಾನೆ. ನಮ್ಮ ದೇಶದ ಕುಲದೀಪಕನಾಗುವ ಅವನನ್ನು ದನಕಾಯಲು ಬಿಟ್ಟಿರುವಿರಲ್ಲ! ಅವನ ಬಗೆಗೆ ನೀವು ಕಳವಳವನ್ನು ಬಿಡಿ. ನಿಶ್ಚಿಂತೆಯಿಂದ ಬಾಲಕನನ್ನು ನಮ್ಮ ವಶಕ್ಕೆ ಒಪ್ಪಿಸಿ” ಎಂದ ಅವರು ನಡೆದ ಸಂಗತಿಯನ್ನು ವಿವರಿಸಿದರು.
ಶೇಷಗಿರಿಯಪ್ಪ-ಗಿರಿಯಮ್ಮ ಸ್ವಾಮಿಗಳಿಗೆ ನಮಸ್ಕರಿಸಿ ದರು.
“ಮಗು ನಿಮ್ಮದೇ, ನಮ್ಮದಲ್ಲ. ಅನುಗ್ರಹಿಸಬೇಕು” ಎಂದರು.
ಅಂದಿನಿಂದ ಆ ಬಾಲಕ ಸ್ವರ್ಣವರ್ಣತೀರ್ಥರ ಸಾಕುಮಗನೆನಿಸಿಕೊಂಡ. ಆಗ ಅವನ ವಯಸ್ಸು ಇನ್ನೂ ಐದು ವರ್ಷ.

ಶಿಕ್ಷಣ
ಲಕ್ಷ್ಮೀನಾರಾಯಣನನ್ನು ಜತೆಯಲ್ಲಿ ಕರೆದು ಕೊಂಡು ಗುರುಗಳು ಸಂಚಾರ ಹೊರಟರು. ಅವನಿಗೆ ಏಳನೆಯ ವರ್ಷದಲ್ಲಿ ಉಪನಯನವನ್ನು ಮಾಡಿದರು. ಮುಂದೆ ವಿದ್ಯಾಭ್ಯಾಸವನ್ನು ಕೊಡಿಸಿದರು. ಲಕ್ಷ್ಮೀನಾರಾಯಣ ವೇದಶಾಸ್ತ್ರಗಳನ್ನು ಅಧ್ಯಯನ ಮಾಡಿದ. ಆ ಎಳೆಯ ವಯಸ್ಸಿಗೇ ಅವನ ಜ್ಞಾನ ಅಪಾರವಾಗಿತ್ತು. ಜೊತೆಗೆ ವೈರಾಗ್ಯವೂ ಅವನಲ್ಲಿ ನೆಲಸಿತ್ತು. ಗುರುಗಳಾದ ಸ್ವರ್ಣವರ್ಣತೀರ್ಥರು ತಾವೇ ಲಕ್ಷ್ಮೀ ನಾರಾಯಣನಿಗೆ ಸಂನ್ಯಾಸ ದೀಕ್ಷೆಯನ್ನು ಕೊಟ್ಟರು. ಅಲ್ಲಿಂದ ಮುಂದೆ ಲಕ್ಷ್ಮೀನಾರಾಯಣ ‘ಲಕ್ಷ್ಮೀನಾರಾಯಣ ಮುನಿ’ ಎನ್ನಿಸಿಕೊಂಡ. ಈ ತೇಜೋವಂತ ಬಾಲಮುನಿಗೆ ಇನ್ನೂ ಹೆಚ್ಚಿನ ಶಿಕ್ಷಣದ ಅಗತ್ಯವಿತ್ತು. ಆಗಿನ ಕಾಲದಲ್ಲಿ ಮಹಾ ಪಂಡಿತ ರೆನ್ನಿಸಿಕೊಂಡಿದ್ದವರು ಮಂತ್ರಾಲಯದ ಯತಿಗಳಾಗಿದ್ದ ಶ್ರೀ ವಿಭುದೇಂದ್ರತೀರ್ಥರು. ಬಾಲಮುನಿಯನ್ನು ಕರೆದು ಕೊಂಡುಬಂದು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಇವರಲ್ಲಿ ಬಿಡಲಾಯಿತು. ಸಕಲ ವೇದ ಶಾಸ್ತ್ರಗಳನ್ನೂ ಲಕ್ಷ್ಮೀ ನಾರಾಯಣ ಮುನಿ ಅಧ್ಯಯನ ಮಾಡಿ ಸಂಪೂರ್ಣ ವಾಗಿ ತಿಳಿದುಕೊಂಡ. ತರ್ಕ, ನ್ಯಾಯಗಳಲ್ಲಿ ಗಟ್ಟಿಗನಾದ.
ಶ್ರೀಪಾದರಾಜರು
ಒಮ್ಮೆ ವಿಭುದೇಂದ್ರತೀರ್ಥರು ತಮ್ಮ ಶಿಷ್ಯರೊಡನೆ ಸಂಚಾರಮಾಡುತ್ತಾ ಕೊಪ್ರ ಎಂಬ ಗ್ರಾಮಕ್ಕೆ ಬಂದರು. ಕೊಪ್ರ ಎನ್ನುವುದು ಈಗಿನ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನಲ್ಲಿದೆ. ಇದೇ ಹೊತ್ತಿಗೆ ಸರಿಯಾಗಿ ಉತ್ತರಾದಿ ಮಠದ ಶ್ರೀಗಳಾದ ಶ್ರೀ ರಘುನಾಥ ತೀರ್ಥರು ತಾವೂ ಸಂಚಾರ ಮಾಡುತ್ತಾ ಅದೇ ಕೊಪ್ರ ಗ್ರಾಮಕ್ಕೆ ಬಂದರು. ಇಬ್ಬರು ಯತಿಗಳ ಸಮಾಗಮವಾಯಿತು. ಉಭಯ ಕುಶಲೋಪರಿಗಳು ಜರುಗಿದವು. ಶ್ರೀ ರಘುನಾಥತೀರ್ಥರ ಕಣ್ಣುಗಳು ಅಲ್ಲಿಯೇ ತೇಜಃಪುಂಜನಾಗಿ ಕಾಣಿಸುತ್ತಿದ್ದ ಬಾಲಮುನಿಯ ಮೇಲೆ ಹರಿದವು.

‘ಹೊತ್ತನ್ನು ನೋಡಿ, ನಮ್ಮನ್ನು ನೋಡಿ, ದನಗಳನ್ನು ನೋಡಿ.’
“ಏನೇನು ಓದಿದ್ದೀರಿ?” ಎಂದು ಕುತೂಹಲಕ್ಕಾಗಿ ಪ್ರಶ್ನೆ ಹಾಕಿದರು. ಪ್ರಶ್ನೆ ಕೇಳಿದ್ದೆ ತಡ ಬಾಲಮುನಿ, ಮಧ್ವಾಚಾರ್ಯರ ಗ್ರಂಥಗಳನ್ನೂ ಸುಧಾ ವ್ಯಾಖ್ಯಾನ ವನ್ನೂ ನಿರರ್ಗಳವಾಗಿ ಒಪ್ಪಿಸಿದನಲ್ಲದೆ, ತನ್ನ ಶಾಸ್ತ್ರ ಪಾಂಡಿತ್ಯವನ್ನೂ ನಿವೇದನೆ ಮಾಡಿದ. ಬಾಲಕನ ಮೇಧಾಶಕ್ತಿಯನ್ನೂ ವಿದ್ಯಾಪ್ರೌಢಿಮೆಯನ್ನೂ ಕಂಡು ರಘುನಾಥತೀರ್ಥರು ತಲೆದೂಗುತ್ತಾ ಮತ್ತೆಮತ್ತೆ ಪ್ರಶಂಸೆಗಳನ್ನು ಮಾಡಲು ಆರಂಭಿಸಿದರು.
ತನಗಿಂತ ಹಿರಿಯರೂ ಜ್ಞಾನಸಂಪನ್ನರೂ ಆದ ಯತಿಗಳು ತನ್ನನ್ನು ಈ ರೀತಿ ಹೊಗಳುತ್ತಿರುವುದನ್ನು ಕಂಡು ಬಾಲಮುನಿಗೆ ತೀರಾ ಸಂಕೋಚವೆನಿಸಿತು. ವಿನಯದಿಂದ ಕೈಜೋಡಿಸಿ, “ತಾವು ಮಹಾ ಜ್ಞಾನಿಗಳು. ಮಹಾ ಸಂಸ್ಥಾನವೊಂದರ ಅಪತಿಗಳು. ನಾನೋ ಕೇವಲ ಬಾಲಸಂನ್ಯಾಸಿ. ತಾವು ಶ್ರೀಪಾದಂಗಳವರು, ನನ್ನಂಥವನ ಗುಣಕಥನ ಮಾಡಬಾರದು” ಎಂದರು.
ಶ್ರೀರಘುತೀರ್ಥರಿಗೆ ಬಾಲಸಂನ್ಯಾಸಿಯ ವಿನಯ ಸೌಜನ್ಯಗಳು ತುಂಬ ಮೆಚ್ಚುಗೆಯಾದವು. ಬಹು ಸಂತೋಷದಿಂದ,
“ನಾವು ಶ್ರೀಪಾದಂಗಳವರಾದರೆ, ನೀವು ಶ್ರೀಪಾದ ರಾಜರು” ಎಂದು ಹೇಳಿದರು.
ಅಂದಿನಿಂದ ಲಕ್ಷ್ಮೀನಾರಾಯಣ ಮುನಿ ‘ಶ್ರೀಪಾದರಾಜರು’ ಎಂದೇ ಪ್ರಖ್ಯಾತರಾದರು.
ಶ್ರೀ ವಿಭುದೇಂದ್ರತೀರ್ಥರಲ್ಲಿ ಶ್ರೀಪಾದರಾಜರ ವಿದ್ಯಾಭ್ಯಾಸ ಮುಗಿದಿತ್ತು. ಗುರುಕಾಣಿಕೆಯನ್ನು ಸಲ್ಲಿಸಿ ಶ್ರೀರಂಗದಲ್ಲಿದ್ದ ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರ ಬಳಿಗೆ ಹಿಂದಿರುಗಿದರು.

ಪೀಠ ಬೆಳಗಲು
ಸ್ವರ್ಣವರ್ಣರ ಆನಂದಕ್ಕಂತೂ ಪಾರವೇ ಇಲ್ಲ. ತಾವು ಕರೆದುಕೊಂಡು ಹೋಗಿ ಬಿಟ್ಟ ಲಕ್ಷ್ಮೀನಾರಾಯಣ ಬಾಲಮುನಿ ಇದೀಗ ‘ಶ್ರೀಪಾದರಾಜರು’ ಎಂಬ ಬಿರುದನ್ನು ಪಡೆದು ಬಂದಿದ್ದಾನೆ. ವಿದ್ಯೆ, ವಿನಯ, ವೈರಾಗ್ಯ, ಗಾಂಭೀರ್ಯಗಳ ತೇಜಸ್ಸಿನಿಂದ ಬೆಳಗುತ್ತಿದ್ದಾನೆ. ಸ್ವರ್ಣವರ್ಣರು ಶ್ರೀಪಾದರಾಜನನ್ನು ಕಂಡು ಉಬ್ಬಿ ಹೋದರು.
ಈ ಹೊತ್ತಿಗೆ ಅವರಿಗೂ ತುಂಬ ವಯಸ್ಸಾಗಿತ್ತು. ತಮ್ಮ ಅನಂತರ ಪೀಠಕ್ಕೆ ಬರಲು ಇಂಥ ಶಿಷ್ಯನಿಗಿಂತ ಬೇರೊಬ್ಬರುಂಟೆ! ಶ್ರೀಪಾದರಾಜರಿಗೇ ತಮ್ಮ ಸಂಸ್ಥಾನ ಸಲ್ಲತಕ್ಕದ್ದೆಂದು ಸ್ವರ್ಣವರ್ಣರು ನಿಶ್ಚಯಿಸಿಕೊಂಡರು. ಶ್ರೀಪಾದರಾಜರಿಗೇ ತಮ್ಮ ಪೀಠವನ್ನು ಅರ್ಪಿಸ ಬೇಕೆಂದು ಅವರಿಗೆ ಕನಸು ಬೇರೆ ಬಿದ್ದಿತ್ತಂತೆ.
ಸ್ವರ್ಣವರ್ಣರು ಶ್ರೀಪಾದರಾಜರ ತಂದೆತಾಯಿಗಳಿಗೆ ಹೇಳಿಕಳುಹಿಸಿದರು, ಬರಮಾಡಿಕೊಂಡರು. ತಮ್ಮ ಮನಸ್ಸಿ ನಲ್ಲಿರುವ ನಿರ್ಧಾರವನ್ನು ತಿಳಿಯಪಡಿಸಿದರು. ಎಲ್ಲರ ಒಪ್ಪಿಗೆ ಪಡೆದು ಸಂತೋಷದಿಂದ ತಮ್ಮ ಪೀಠದ ಮೇಲೆ ಶ್ರೀಪಾದರಾಜರನ್ನು ಕೂಡಿಸಿ ಪಟ್ಟಾಭಿಷೇಕ ನಡೆಸಿದರು.
ಪೀಠಕ್ಕೆ ಬಂದಾಗ ಶ್ರೀಪಾದರಾಜರಿಗೆ ವಯಸ್ಸು ಇನ್ನೂ ಹದಿನಾಲ್ಕು ವರ್ಷ. ಮುಂದೆ ಸ್ವಲ್ಪಕಾಲದಲ್ಲಿ ಸ್ವರ್ಣವರ್ಣತೀರ್ಥರು ಕಾಲವಾದರು. ಶ್ರೀರಂಗಕ್ಷೇತ್ರಕ್ಕೆ ಹೋದವರು ಇಂದಿಗೂ ಸ್ವರ್ಣವರ್ಣರ ವೃಂದಾವನ ವನ್ನು ಅಲ್ಲಿ ಕಾಣಬಹುದು.
ಎಳೆಯ ಬಾಲಕನೊಬ್ಬನಲ್ಲಿದ್ದ ವಿಶೇಷ ಪ್ರತಿಭೆಯನ್ನು ಗುರುತಿಸಿ, ಅವನನ್ನು ಸಕಲಶಾಸ್ತ್ರ ಪಾರಂಗತನನ್ನಾಗಿ ಮಾಡಿ ಕನ್ನಡದೇಶ ಮತ್ತು ಭಾಷೆಗೆ ಶ್ರೀಪಾದರಾಜನೆಂಬ ಮಹಿಮಾನ್ವಿತನನ್ನು ಕೊಟ್ಟ ಶ್ರೇಯಸ್ಸು ಸ್ವರ್ಣವರ್ಣ ತೀರ್ಥರಿಗೆ ಸಲ್ಲುತ್ತದೆ.

ದಾಸಸಾಹಿತ್ಯದ ಅರುಣೋದಯ
ಶ್ರೀಪಾದರಾಜರು ತಮ್ಮ ಅಪಾರ ಮಹಿಮೆ, ವಿದ್ವತ್ತುಗಳಿಂದ ಶೋಭಿಸುತ್ತಾ ತಮ್ಮ ತಾಯ್ನುಡಿಯಾದ ಕನ್ನಡದಲ್ಲಿ ನೂರಾರು ಕೀರ್ತನೆಗಳನ್ನು ರಚನೆ ಮಾಡಿದರು. ಕರ್ನಾಟಕದ ನೆಲದಲ್ಲಿ ಧರ್ಮಜಾಗೃತಿ ಯನ್ನು ಉಂಟುಮಾಡಿದರು. ತಮ್ಮ ಕೀರ್ತನೆಗಳನ್ನು ಸಂಗೀತಬದ್ಧವಾಗಿ ರಚಿಸಿದರಲ್ಲದೆ, ತಾವೇ ಕಾಲಿಗೆ ಗೆಜ್ಜೆಗಳನ್ನು ಕಟ್ಟಿಕೊಂಡು, ತಾಳಗಳನ್ನು ಹಾಕುತ್ತಾ ನರ್ತನ ಮಾಡಿದರು. ರಾಗ, ತಾಳ, ಲಯಗಳಿಂದ ತುಂಬಿದ ಶ್ರೀಪಾದರಾಜರ ಭಗವನ್ನಾಮ ಸಂಗೀತ ಕೃತಿಗಳು ನಮ್ಮ ಕನ್ನಡ ಭಾಷೆಗೆ ಒಂದು ವಿಶೇಷ ಕೊಡುಗೆ. ‘ಶ್ರೀಪಾದ ರಾಜರಿಂದ ದಾಸಸಾಹಿತ್ಯದ ಅರುಣೋದಯ’ ಎಂದೇ ನಮ್ಮ ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಕರೆಯಲಾಗಿದೆ.
ನಮ್ಮ ಭರತಖಂಡದಲ್ಲಿ ಭಕ್ತಿಮಾರ್ಗವೆನ್ನುವುದು ಬಹು ದೊಡ್ಡ ಸಂಪ್ರದಾಯ. ನಮ್ಮ ಕರ್ನಾಟಕ ಭೂಮಿ ಯಲ್ಲಿಯೇ ಅದು ಜನಿಸಿತ್ತೆನ್ನುವುದು ನಮಗೆಲ್ಲ ಹೆಮ್ಮೆ. ಮಧ್ವಾಚಾರ್ಯರು ಇದರ ಆದಿ ಪ್ರವರ್ತಕರು. ಅವರನ್ನೇ ಗುರುವಾಗಿಟ್ಟುಕೊಂಡು ವೈಷ್ಣವ ದಾಸಪಂಥ ಕರ್ನಾಟಕದಲ್ಲೆಲ್ಲ ಭಕ್ತಿ ಪ್ರಚಾರ ಮಾಡಿತು. ಇದರ ಪ್ರಭಾವ ಉತ್ತರದ ಬಂಗಾಳ ದೇಶದವರೆಗೂ ವ್ಯಾಪಿಸಿತು. ಭಕ್ತಿ ಸಂಪ್ರದಾಯ ಎಂದರೇನು? ಭಗವಂತನಲ್ಲಿ ಗಾಢವಾದ ಪ್ರೇಮವೇ ಭಕ್ತಿ. ಹೃದಯದಲ್ಲಿ ಉಕ್ಕಿ ಬರುವಂತಹ ಭಾವನಾಲಹರಿಗಳನ್ನು ಯಾವ ಮುಚ್ಚು ಮರೆಯಿಲ್ಲದೆಯೇ ಭಗವಂತನಲ್ಲಿ ತೋಡಿಕೊಳ್ಳ ಲಾಗುತ್ತದೆ. ಅತ್ಯುತ್ಕಟ ಭಾವನೆಗಳು, ಸರಳವಾದ ಹೃದಯ, ಪ್ರೇಮ ಪುರಸ್ಸರವಾದ ಮಾತುಗಳು – ಇವು ಭಕ್ತಿಮಾರ್ಗದವರ ಲಕ್ಷಣ. ಈ ಭಕ್ತಿ ಸಂಪ್ರದಾಯ ನಮ್ಮ ಕನ್ನಡ ದೇಶದಲ್ಲಿ ೧೩ರಿಂದ ೧೮ನೆಯ ಶತಮಾನ ಗಳವರೆಗೂ ತುಂಬು ಪ್ರವಾಹದಂತೆ ಹರಿ ಯಿತು. ಲೋಕ ಕಲ್ಯಾಣದೃಷ್ಟಿಯೇ ಇವರದು. ಇವರನ್ನು ‘ದಾಸಕೂಟದವರು’ ಎಂದು ಕರೆಯ ಲಾಯಿತು. ಇವರ ಕೃತಿಗಳನ್ನೆಲ್ಲ ‘ದಾಸಸಾಹಿತ್ಯ’ ಎಂದು ಹೇಳಲಾಯಿತು. ಕನ್ನಡನಾಡಿನ ಪುರಂದರರು ತ್ಯಾಗರಾಜರಿಗಿಂತಲೂ ಬಹಳ ಹಿಂದಿನವರು. ತ್ಯಾಗರಾಜರ ತಾಯಿ ತಮ್ಮ ಮನೆಯಲ್ಲಿ ಪುರಂದರರ ಕೀರ್ತನೆಗಳನ್ನು ಹಾಡುತ್ತಿದ್ದರಂತೆ. ಪುರಂದರದಾಸರಿ ಗಿಂತಲೂ ಹೆಚ್ಚು ಹಿಂದಿನವರು

ಶ್ರೀಪಾದರಾಜರು.
ನಮಸ್ತೇ ಶ್ರೀಪಾದರಾಜಾಯ
ನಮಸ್ತೇ ವ್ಯಾಸಯೋಗಿನೇ |
ನಮಃ ಪುರಂದರಾರ್ಯಾಯ
ವಿಜಯಾರ್ಯಾ ಯತೇ ನಮಃ ||
ಎಂದೇ ಶ್ರೀಪಾದರಾಜರಿಗೆ ಆದ್ಯಪಟ್ಟವನ್ನು ಕಟ್ಟಲಾ ಗಿದೆ. ದಾಸ ಸಾಹಿತ್ಯದಲ್ಲಿ ಪ್ರಸಿದ್ಧವಾದ ವ್ಯಾಸತೀರ್ಥರು, ಪುರಂದರದಾಸರು, ಕನಕದಾಸರು, ವಿಜಯದಾಸರು, ಜಗನ್ನಾಥದಾಸರು – ಹೀಗೆ ಇವರೆಲ್ಲರಿಗೂ ಗುರು ಸಮಾನರಾಗಿ ಇರತಕ್ಕವರು ಶ್ರೀಪಾದರಾಜರು. ದಾಸ ಸಾಹಿತ್ಯದ ಪಿತಾಮಹರೆಂದೇ ಅವರನ್ನು ಕರೆಯಲಾಗಿದೆ.

ತಿಳಿಗನ್ನಡದಲ್ಲಿ ಕೃತಿಗಳು
ತಮ್ಮ ಗುರುಗಳಾದ ಸ್ವರ್ಣವರ್ಣತೀರ್ಥರ ಜತೆಯಲ್ಲಿ ಹಲವು ವರ್ಷಗಳ ಕಾಲವೇ ಶ್ರೀಪಾದರಾಜರು ತಮಿಳು ದೇಶದ ಶ್ರೀರಂಗದಲ್ಲಿ ಇದ್ದರಷ್ಟೆ. ತಮಿಳರು ಶ್ರೀವೈಷ್ಣವ ಪ್ರಬಂಧಗಳನ್ನು ತಮ್ಮ ತಾಯಿನುಡಿಯಾದ ತಮಿಳು ಭಾಷೆಯಲ್ಲಿಯೇ ಅಕ್ಕರೆಯಿಂದ ಸಂಗೀತ ಸಾಹಿತ್ಯಬದ್ಧವಾಗಿ ರಚಿಸುತ್ತಿದ್ದುದನ್ನೂ ಹಾಡುತ್ತಿದ್ದುದನ್ನೂ ಶ್ರೀಪಾದರಾಜರು ಕಂಡಿದ್ದರು. ಸಾಮಾನ್ಯ ಜನರ ಹೃದಯವನ್ನು ನೇರವಾಗಿ ಮುಟ್ಟಲು ಮಾತೃಭಾಷೆಗಿಂತ ಬೇರೆ ಸಾಧನವೇ ಇಲ್ಲವೆಂಬುದನ್ನು ಅವರು ಅರಿತಿ ದ್ದರು. ಶ್ರೀವೈಷ್ಣವ ಪ್ರಬಂಧಗಳಂತೆಯೇ ತಮ್ಮ ಸ್ವಭಾಷೆ ಕನ್ನಡ ದಲ್ಲಿಯೂ ಕೃತಿರಚನೆಗಳನ್ನು ಮಾಡಬೇಕೆಂದು ಶ್ರೀಪಾದ ರಾಜರು ನಿರ್ಧರಿಸಿದರು. ಅದುವರೆಗೂ ದೊಡ್ಡದೊಡ್ಡ ವಿಷಯಗಳನ್ನು ಹೇಳಬೇಕಾದರೆ ಸಂಸ್ಕೃತ ಭಾಷೆಯೊಂದೇ ಯೋಗ್ಯತೆಯುಳ್ಳದ್ದೆಂದು ಪಂಡಿತರೂ ಸಾಹಿತ್ಯ ರಚನ ಕಾರರೂ ನಂಬಿದ್ದರು. ಆದರೆ ಶ್ರೀಪಾದರಾಜರು ತಾವು ಸಂಸ್ಕೃತದಲ್ಲಿ ಘನ ಪಂಡಿತರಾಗಿದ್ದರೂ ‘ವಾಗ್ವಜ್ರ’ ಎಂಬ ತಮ್ಮ ಕೃತಿಯನ್ನು ಸಂಸ್ಕೃತ ಭಾಷೆಯಲ್ಲೆ ರಚಿಸಿದ್ದರೂ ಚತುಶ್ಶಾಸ್ತ್ರಗಳನ್ನು ಓದಿದವರಾಗಿದ್ದರೂ ತಮ್ಮ ಅಂತರಂಗದ ಭಾವನಾಲಹರಿಗಳಿಗೆ, ಭಗವಂತನ ಭಕ್ತಿಗೆ ತಮ್ಮ ತಾಯ್ನುಡಿಯಾದ ಕನ್ನಡವೇ ಯೋಗ್ಯ, ಸರ್ವಶ್ರೇಷ್ಠ ವೆಂದು ತಿಳಿದರು. ತಮ್ಮ ಮಾತೃಭಾಷೆಗೆ ಶ್ರೀಪಾದರಾಜರು ಸಲ್ಲಿಸಿದಂತಹ ಗೌರವ, ಮಹತ್ವದ ಕಾಣಿಕೆ ಇದು. ಶ್ರೀಪಾದರಾಜ ಯತಿಗಳನ್ನು ನಾವು ಸ್ಮರಿಸಿಕೊಳ್ಳುವುದು ಕನ್ನಡ ಭಾಷೆಗೆ ಅವರು ಸಲ್ಲಿಸಿದಂತಹ ಈ ಪ್ರೀತಿ ಅಭಿಮಾನಗಳಿಂದ.
ಶ್ರೀಪಾದರಾಜರು ತಮ್ಮ ಗುರುಗಳಾದ ಸ್ವರ್ಣವರ್ಣ ತೀರ್ಥರು ಕಾಲವಾದ ಮೇಲೆ ಶ್ರೀರಂಗ ದಿಂದ ನೇರವಾಗಿ ಮುಳಬಾಗಲು ಮಠಕ್ಕೆ ಬಂದರು. ಮುಳಬಾಗಲು ಕೋಲಾರ ಜಿಲ್ಲೆಯಲ್ಲಿದೆ. ಅಂದು ಈ ಮುಳಬಾಗಲು ಸಾಳ್ವ ನರಸಿಂಹನ ರಾಜ್ಯಾಕಾರಕ್ಕೆ ಸೇರಿತ್ತು. ಮಧ್ವಾಚಾರ್ಯರ ನೇರ ಶಿಷ್ಯರಲ್ಲಿ ಒಬ್ಬ ರಾಗಿದ್ದ ಪದ್ಮನಾಭತೀರ್ಥ ಎಂಬವರು ಈ ಮುಳ ಬಾಗಲು ಮಠವನ್ನು ಸ್ಥಾಪಿಸಿದವರು. ಶ್ರೀಪಾದರಾಜರ ಗುರುಗಳಾಗಿದ್ದ ಸ್ವರ್ಣವರ್ಣತೀರ್ಥರು ಈ ಮಠದ ಯತಿಗಳಲ್ಲಿ ಎಂಟನೆಯವರಾಗಿದ್ದರು. ಮುಂದೆ ಮುಳ ಬಾಗಲು ಮಠವೇ ಶ್ರೀಪಾದರಾಜರ ಸಮಸ್ತ ಕಾರ್ಯ ಕ್ಷೇತ್ರವಾಯಿತು. ಉನ್ನತ ವಿದ್ಯಾಪೀಠವೊಂದನ್ನು ಅವರು ಇಲ್ಲಿ ಸ್ಥಾಪನೆ ಮಾಡಿದರು. ತತ್ತ್ವಶಾಸ್ತ್ರ, ಸಂಗೀತ ಶಾಸ್ತ್ರ, ನೃತ್ಯ ಶಾಸ್ತ್ರಗಳನ್ನು ಶ್ರೀಪಾದರಾಜರು ಚೆನ್ನಾಗಿ ಬಲ್ಲವ ರಾಗಿದ್ದರು. ಸಂಸ್ಕೃತ ವಿದ್ಯಾಭ್ಯಾಸಕ್ಕೂ ಸಂಗೀತ ಕಲಾ ಭ್ಯಾಸಕ್ಕೂ ಮುಳಬಾಗಿಲು ಪ್ರಸಿದ್ಧ ಕೇಂದ್ರವಾಯಿತು.

ವ್ಯಾಸಯೋಗಿಗಳು
ಈ ವಿದ್ಯಾಪೀಠದಲ್ಲಿ ಅಧ್ಯಯನಮಾಡಲು ನಾನಾ ಕಡೆಗಳಿಂದ ವಿದ್ಯಾರ್ಥಿಗಳು ಬರತೊಡಗಿದರು. ಹೀಗೆ ಬಂದ ವಿದ್ಯಾರ್ಥಿಗಳಲ್ಲಿ ಅತ್ಯಂತ ಮುಖ್ಯರಾದವರು – ವ್ಯಾಸತೀರ್ಥರು. ಇವರು ವಿದ್ಯಾಭ್ಯಾಸಕ್ಕೆ ಬಂದಾಗ ಶ್ರೀಪಾದರಾಜರಿಗೆ ೫೪ ವರ್ಷ ವಯಸ್ಸು. ಬೆಂಗಳೂರು ಜಿಲ್ಲೆಯ ಚನ್ನಪಟ್ಟಣಕ್ಕೆ ಸಮೀಪದಲ್ಲಿ ಅಬ್ಬೂರು ಎಂಬ ಗ್ರಾಮವಿದೆ. ಇಲ್ಲಿ ಮಹಾತಪಸ್ವಿಗಳಾದ ಬ್ರಹ್ಮಣ್ಯ ತೀರ್ಥರೆಂಬ ಯತಿಗಳಿದ್ದರು. ಈ ಬ್ರಹ್ಮಣ್ಯತೀರ್ಥರು ಶ್ರೀಪಾದರಾಜರ ತಾಯಿಯ ಅಕ್ಕನ, ಅಂದರೆ ದೊಡ್ಡಮ್ಮನ ಮಗ. ಬ್ರಹ್ಮಣ್ಯತೀರ್ಥರ ಸಾಕು ಮಗನೇ ವ್ಯಾಸಯೋಗಿ. ಶ್ರೀಪಾದರಾಜರ ಬಳಿ ವಿದ್ಯಾಭ್ಯಾಸಕ್ಕೆಂದು ಬ್ರಹ್ಮಣ್ಯತೀರ್ಥರು ವ್ಯಾಸಯೋಗಿಯನ್ನು ಕಳುಹಿಸಿ ಕೊಟ್ಟಿದ್ದರು. ಸುಮಾರು ಹನ್ನೆರಡು ವರ್ಷಗಳ ಕಾಲ ವ್ಯಾಸಯೋಗಿಗಳು ಶ್ರೀಪಾದರಾಜರಲ್ಲಿ ವಿದ್ಯಾರ್ಜನೆ ಮಾಡಿದರು.
ವ್ಯಾಸಯೋಗಿಗಳ ವಿದ್ಯಾಭ್ಯಾಸ ನಡೆಯುತ್ತಿದ್ದ ಸಮಯ ದಲ್ಲಿ ಒಮ್ಮೆ ಒಂದು ವಿಚಿತ್ರ ಪ್ರಸಂಗ ನಡೆಯಿತು ಎಂದು ಹೇಳುತ್ತಾರೆ. ಗುರುಗಳು ಹೇಳಿ ಕೊಟ್ಟ ಪಾಠವನ್ನೇ ಗಾಢವಾಗಿ ಮನನಮಾಡುತ್ತಿದ್ದ ವ್ಯಾಸಯೋಗಿಗೆ ನಿದ್ರೆ ಹತ್ತಿತು. ಎಲ್ಲೋ ಹೊಂಚು ಹಾಕುತ್ತಿದ್ದ ಒಂದು ಹೆಬ್ಬಾವು ವ್ಯಾಸಯೋಗಿ ಮಲಗಿದ್ದ ಗುಹೆಗೆ ನುಗ್ಗಿ, ವ್ಯಾಸಯೋಗಿಯನ್ನು ಕಾಲಕಡೆಯಿಂದ ನುಂಗುತ್ತಿತ್ತು. ಇನ್ನಿತರ ಶಿಷ್ಯರು ಇದನ್ನು ಕಂಡು ಹೌಹಾರಿದರು. ಕೂಡಲೆ ಗುರುಗಳಿಗೆ ಸುದ್ದಿ ಮುಟ್ಟಿಸಿದರು. ಶ್ರೀಪಾದರಾಜರು ಬಂದು ನೋಡು ತ್ತಾರೆ, ಮಹಾಸರ್ಪವೊಂದು ವ್ಯಾಸಯೋಗಿಯನ್ನು ಬಾಯ್ತೆರೆದು ನುಂಗುತ್ತಿದೆ. ಕೂಡಲೆ ಸರ್ಪದೊಡನೆ ಅದರ ಭಾಷೆಯಲ್ಲಿಯೇ ಮಾತನಾಡ ತೊಡಗಿದರು. ಸರ್ಪ ಮೆಲ್ಲಗೆ ಹಿಂಜರಿಯುತ್ತಾ ಹಾಗೆಯೇ ಬಿಟ್ಟು ಹೋಯಿತು. ತನ್ನ ಭಾಷೆಯಲ್ಲಿಯೇ ತನ್ನನ್ನು ಮಾತ ನಾಡಿಸಿದ್ದು ಸರ್ಪಕ್ಕೆ ಸಂತೋಷವಾಯಿತಂತೆ. ಈ ಪ್ರಸಂಗವನ್ನು ಶ್ರೀನಿತೀರ್ಥ ಎಂಬವರು ತಾವು ಬರೆದಂತಹ ‘ಶ್ರೀಪಾದರಾಜಾಷ್ಟಕ’ ಎಂಬ ಶ್ಲೋಕದಲ್ಲಿ ವರ್ಣನೆ ಮಾಡಿದ್ದಾರೆ :
‘ಶ್ರೀವ್ಯಾಸರಾಜ ಪಣಿಬಂಧ ನಿವಾರಕಾಯ ತದ್ಭಾಷಯೈವ ಫಣಿರಾಜ ಸಂತೋಷಕಾಯ ಶ್ರೀಮತ್ಸುರತ್ನ ಖಚಿತೋದ್ವಲ ಕುಂಡಲಾಯ ಶ್ರೀಪಾದರಾಜ ಗುರುವೇ ನಮಃ ಶುಭಾಯ’ ಬಹು ಆದರದಿಂದ ಶಿಷ್ಯ ವ್ಯಾಸತೀರ್ಥರಿಗೆ ಶ್ರೀಪಾದರಾಜರು ಸಕಲ ಶಾಸ್ತ್ರಗಳನ್ನು ಬೋಸಿದರು. ಈ ಶಿಷ್ಯನೋ ಮಹಾಮೇಧಾವಿ. ಶಿಕ್ಷಣ ಮುಗಿದ ಮೇಲೆ ಶ್ರೀಪಾದರಾಜರು ಶಿಷ್ಯ ವ್ಯಾಸರಾಜ ರೊಡನೆ ಮೊದಲು ಭೇಟಿ ಕೊಟ್ಟಿದ್ದು ಚನ್ನಪಟ್ಟಣದ ಸಮೀಪದಲ್ಲಿರುವ ಅಬ್ಬೂರಿಗೆ. ವಿದ್ಯಾಪ್ರೌಢಿಮೆಯಿಂದ ತೇಜಃಪುಂಜನಾದ ವ್ಯಾಸಯೋಗಿಯನ್ನು ತಾವೇ ಸ್ವತಃ ಬ್ರಹ್ಮಣತೀರ್ಥರಿಗೆ ಒಪ್ಪಿಸಿಕೊಡುವುದು ಶ್ರೀಪಾದರಾಜರ ಅಪೇಕ್ಷೆಯಾಗಿತ್ತು. ಬ್ರಹ್ಮಣ್ಯತೀರ್ಥರ ಸಾಕುಮಗ ನಲ್ಲವೇ ವ್ಯಾಸರಾಜರು? ಶಿಷ್ಯನ ಮೇಲೆ ಶ್ರೀಪಾದರಾಜ ರಿಗೆ ಅದೆಷ್ಟು ಪ್ರೀತಿಯೆಂದರೆ ‘ಇದಿರದಾವನು ನನಗೀ ಧರೆಯೊಳು ಪದುಮನಾಭನ ದಾಸ ಪರಮೋಲ್ಲಾಸ’ ಎಂದು ತಾವೇ ತಮ್ಮ ಶಿಷ್ಯನನ್ನು ಕುರಿತು ಕೀರ್ತನೆಯೊಂದನ್ನು ರಚಿಸಿದ್ದಾರೆ. ಗುರುವಿನಿಂದಲೇ ಹೊಗಳಿಸಿಕೊಳ್ಳು ವಂತಹ ಪುಣ್ಯ, ಮಹಿಮೆ, ವಿದ್ವತ್ತು, ಸಚ್ಚಾರಿತ್ರ  ವ್ಯಾಸರಾಜರದು.

ಕೀರ್ತನೆಗಳು

ಅವರು ಧರ್ಮಪೀಠವೊಂದರಲ್ಲಿ ಕುಳಿತಿದ್ದರು, ಮಹಾ ಮಹಿಮರಾಗಿದ್ದರು. ಮಾತ್ರವಲ್ಲ, ವಿಶೇಷವಾಗಿ ಕನ್ನಡ ನಾಡಿನಲ್ಲಿ, ಕನ್ನಡ ಭಾಷೆಯಲ್ಲಿ ಒಂದು ಹೊಸ ಬಗೆಯ ಸಾಹಿತ್ಯ ಪರಂಪರೆಯನ್ನೆ ಸೃಷ್ಟಿಸಲು ಅವರು ಆದಿಪುರುಷರಾದರು ಎನ್ನುವುದು ತುಂಬ ಮುಖ್ಯ ಸಂಗತಿ. ಕನ್ನಡದಲ್ಲಿ ಸಂಗೀತಕೃತಿ ರಚನೆಗೆ ಅವರೇ ಸೂರ್ತಿದಾಯಕರಾದರು. ಇವರಿಗೂ ಹಿಂದೆ ನರಹರಿ ತೀರ್ಥ ಎಂಬುವರಿದ್ದರು. ಅವರು ಕೂಡ ಕನ್ನಡದಲ್ಲಿ ಕೀರ್ತನೆಗಳನ್ನು ಮಾಡಿದ್ದಾರೆ. ಆದರೆ ನಮಗೆ ಸಿಕ್ಕಿರುವುದು ಕವಲ ಒಂದೋ ಎರಡೋ ಅಷ್ಟೆ. ಶಾಸ್ತ್ರೀಯ ಸಂಗೀತದಲ್ಲಿ ಪಲ್ಲವಿ, ಅನುಪಲ್ಲವಿಗಳನ್ನು ಇಟ್ಟುಕೊಂಡು ವ್ಯಾಪಕವಾಗಿ ಕನ್ನಡದಲ್ಲಿ ಕೃತಿ ರಚನೆ ಮಾಡಿದ ಮೊದಲ ಕೀರ್ತಿ ಶ್ರೀಪಾದರಾಜರಿಗೇ ಸಲ್ಲ ಬೇಕು. ಅದರಿಂದಲೇ ಶ್ರೀಪಾದ ರಾಜರ ಹಸರು ಅಷ್ಟೊಂದು ಗಮನಾರ್ಹವಾಗಿರುವುದು. ‘ರಂಗವಿಠ್ಠಲ’ ಎಂಬ ಅಂಕಿತವನ್ನಿಟ್ಟುಕೊಂಡು ನೂರಾರು ಕೀರ್ತನೆ ಗಳನ್ನು ಶ್ರೀಪಾದರಾಜರು ಮಾಡಿದ್ದಾರೆ. ಸರಳವಾದ ಶೈಲಿ, ಮೃದುಮೃದುವಾದ ಭಾಷೆ, ಭಕ್ತಿರಸದಿಂದ ತುಂಬಿತುಳು ಕಾಡುತ್ತಿರುವ ಅವರ ಕೀರ್ತನೆಗಳು ಕೇಳಲು ತುಂಬ ಮನೋಹರವಾಗಿರುತ್ತವೆ. ರಾಗದ ಹೆಸರುಗಳನ್ನು ಸೇರಿಸಿಕೊಂಡೇ ಅವರು ರಚಿಸಿರುವ ಕೀರ್ತನೆಯೊಂದು, ಹೇಗೆ ಸಂಗೀತದಲ್ಲಿ ಅವರ ಜ್ಞಾನ ಅಪಾರವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಹಾಡಿ ಕೊಳ್ಳಲು ಈ ಕೀರ್ತನೆ ತುಂಬ ಇಂಪಾಗಿರುವುದರಿಂದ ಅದನ್ನಿಲ್ಲಿ ಕೊಡಲಾಗಿದೆ.

ಲಾಲಿ ಗೋವಿಂದ ಲಾಲಿ, ಕೌಸಲ್ಯ
ಬಾಲ ಶ್ರೀರಾಮ ಲಾಲೀ
ಲಾಲಿ ಮುನಿವಂದ್ಯಲಾಲಿ, ಜಾನಕೀ
ರಮಣ ಶ್ರೀರಾಮ ಲಾಲೀ || ಪ ||
ಪಲ್ಲವಾಧರೆಯರೆಲ್ಲ ಈ ಶಿಶುವ
ತುಲ್ಯ ವರ್ಜಿತವೆನುತಲಿ
ಸಲ್ಲಲಿತ ಗಾನದಿಂದ ತೂಗಿದರು
ಕಲ್ಯಾಣಿ ರಾಗದಿಂದ ||
ಆನಂದ ಸದನದೊಳಗೆ ಗೋಪಿಯರು
ಆ ನಂದಸುತನ ಕಂಡು
ಆನಂದಭರಿತರಾಗಿ ತೂಗಿದರು
ಆನಂದ ಭೈರವಿಂದ ||
ದೇವಾದಿದೇವನೆಂದು ಈ ಶಿಶುವು
ಭಾವನಾತೀತನೆಂದು
ದೇವ ಗಂಧರ್ವರ್ಪಾಡಿ ತೂಗಿದರು
ದೇವಗಾಂಧಾರದಿಂದ ||

ಶ್ರೀಪಾದರಾಜರ ಹಾಡುಗಳು
ಮಹಿಮೆ ಸಾಲದೆ ಇಷ್ಱೆ ಮಹಿಮೆ ಸಾಲದೆ ||ಪ||
ಅಹಿ‌ಶಯನನ ಒಲುಮೆಯಿಂದ ಮಹಿಳೊಮ್ಮೆ ಶ್ರೀಪಾದರಾಯರ ||ಅ.ಪ||
ಮುತ್ತಿನ ಕವಚ ಮೇಲ ತುರಾಯಿ ರತ್ನ ಕೆತ್ತಿದ ಕರ್ಣ ಕುಂಡಲ
ಕಸ್ತೂರಿ ತಿಲಕ ಶ್ರೀಗಂಧ ಲೇಪನ ವಿಸ್ತಾರದಿಂದ ಮೇರದು ಬರಲು ||೧||
ಹರಿಗೆ ಸಮರ್ಪಿಸಿದ ನಾನಾ ಪರಿಯ ಶಾಖಂಗಳನ್ನ ಭುಂಜಿಸಿ
ನರರು ನಗಲು ಶ್ರೀ ಕೃಷ್ಣನ ಪರಮದಿಂದ ಹುಸಿಯಮಾಡಿದ ||೨||
ವಿಪ್ರಗೆ ಬ್ರಹ್ಮತ್ಯೆ ದೋಷ ಬರಲು ಕ್ಷಿಪ್ತ ಶಂಖೊದಕದಿ ಕಳೆದು
ಅಪ್ರ ಬುದ್ಧರು ದೊಷಿಸೆ ಗೇರೆಣ್ಣೆ ಕಪ್ಪು ಹಸನ ಶುಭ್ರ ಮಾಡಿದ ||೩||

++++++++

ಅನಂತ ಕಾಲದಲ್ಲಿ ಯಾವ ಪುಣ್ಯದಲ್ಲಿ
ಎನ್ನಮನ ನಿನ್ನಲ್ಲಿ ಎರಗಿಸೋ
ಎನ್ನ ಮನ ನಿನ್ನ ಚರಣದೊಳೊಮ್ಮೆ ಇಟ್ಟು
ಸಲಹು ರಂಗವಿಠಲ||

+++++++++

ಆಡಲು ಪೋಗೊಣು ಬಾರೊ ರಂಗ
ಕೂಡಿ ಯಮುನಾ ತೀರದಲ್ಲಿ ||ಪ||
ಚಿಣ್ಣಿಕೋಲು ಚೆಂಡು ಬುಗರಿ
ಸಣ್ಣ ಸಣ್ಣ ಆಟಗಳನು
ಕಣ್ಣಮುಚ್ಚಲಿಕೆ ಕುಂಟಲಿಪಿ
ಬಣ್ಣ ಬಣ್ಣದ ಆಟಗಳನು ||೧||
ಜಾಹ್ನವಿಯ ತೀರವಂತೆ
ಜನಕರಾಜನ ಕುವರಿಯಂತೆ
ಜಾನಕಿಯ ವಿವಾಹವಂತೆ
ಜಾಣ ನೀನು ಬರಬೇಕಂತೆ ||೨||
ಪುಂಡರೀಯ ನಗರವಂತೆ
ಭೀಷ್ಮಕರಾಜನ ಕುವರಿಯಂತೆ
ಶಿಶುಪಾಲನ್ನ ಒಲ್ಲಳಂತೆ
ನಿಮಗೆ ಓಲೆ ಬರೆದಳಂತೆ||೩||
ಕೌರವರು ಪಾಂಡವರು
ಲೆತ್ತವಾಡಿ ಸೋತರಂತೆ
ರಾಜ್ಯವನ್ನು ಬಿಟ್ಟರಂತೆ
ರಂಗವಿಠಲ ಬರಬೇಕಂತೆ ||೪||

+++++++

( ನಾಟಿ ರಾಗ ಖಂಡಛಾಪು ತಾಳ)
ಶ್ರೀರಂಗವಿಠಲನ ಶ್ರೀ ಮಕುಟಕೆ ಶರಣು||ಪ||
ಶಿರದಲೊಪ್ಪುವ ನೀಲಕುಂತಳಕೆ ಶರಣು
ಸಿರಿ ಸಹೋದರನರ್ಧದವಳಿಗೆ ಶರಣು||ಅ.ಪ||
ಸೊಂಪು ನೋಟದ ಚೆಲುವ ಸೋಗೆಗಣ್ಣಿಗೆ ಶರಣು
ಸಂಪಿಗೆಯ ಕುಸುಮಸಮ ನಾಸಿಕಕೆ ಶರಣು
ಗುಂಪುರತ್ನದ ಕರ್ಣಕುಂಡಲಗಳಿಗೆ ಶರಣು
ಇಂಪುದರ್ವಣನಿಭ ಕಪೋಲಗಳಿಗೆ ಶರಣು||೧||
ಕುಂದಕುಟ್ಮಲ ಪೋಲ್ವ ದಂತಪಕ್ತಿಗೆ ಶರಣು
ಅಂದವಾಗಿರುವ ಬಿಂಬೋಷ್ಠಕೆ ಶರಣು
ಚಂದ್ರಿಕಾನಿಭ ಮುದ್ದು ಮಂದಹಾಸಕೆ ಶರಣು
ನಂದಗೋಪನ ಮುದ್ದು ಕಂದನಿಗೆ ಶರಣು||೨||
ಅಬ್ಜನಾಭನ ದಿವ್ಯ ಕಂಬು ಕಂಠಕೆ ಶರಣು
ಅಬ್ಜಮುಖಿಯಿರುವ ವಕ್ಷಸ್ಥಳಕೆ ಶರಣು
ಕುಬ್ಜೆಯ ಡೊಂಕ ತಿದ್ದಿದ ಭುಜಗಳಿಗೆ ಶರಣು
ಅಬ್ಜಜಾಸನನ ಪೆತ್ತ ನಾಭಿಗೆ ಶರಣು||೩||
ರನ್ನಗಂಟೆಗಳಿರುವ ನಿನ್ನ ಕಟಿಗೆ ಶರಣು

                  ಇಂತಿ
           ಮಂಜುನಾಥ ಕೆ ಎಂ
ಜನತಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
         ಬಸವಪಟ್ಟಣ [ಚಿರಡೋಣಿ]