ಸೋಮವಾರ, ಜೂನ್ 25, 2018

ಮೋಟ್ನಳ್ಳಿ ಹಸನ್ ಸಾಹೇಬರು

ಮೋಟ್ನಳ್ಳಿ ಹಸನ್ ಸಾಹೇಬರ : ‘ಅಲ್ಲಿಲ್ಲಾ ಶಿವನಿಲ್ಲಿಲ್ಲಾ ಶಿವನೆಲ್ಲಿಲ್ಲಾ?’

ಧಾರ್ಮಿಕ ಸೌಹಾರ್ದತೆ ಮತ್ತು ಹಿಂಸೆಗಳೆರಡನ್ನೂ ಅನುಭವಿಸಿದ ವೈಯಕ್ತಿಕ ಬದುಕು : 

ಬಹುತೇಕ ತತ್ವಪದಕಾರರಂತೆ ಮೋಟ್ನಳ್ಳಿ ಹಸನ್ ಸಾಹೇಬ ಕೂಡ ತೀರ ಕೆಳವರ್ಗದವ ಮತ್ತು ವೈಯಕ್ತಿಕ ಬದುಕಿನಲ್ಲಿ ಆಘಾತಗಳನ್ನನುಭವಿಸಿದವನು. ಮೂರು ವರುಷದ ಕೂಸನ್ನು ಮಠದಲ್ಲಿ ಬಿಟ್ಟು ಕಾಲರಾಕ್ಕೆ ತುತ್ತಾಗಿ ಸತ್ತು ಹೋದ ತಂದೆತಾಯಿಗಳು, ಆರು ತಿಂಗಳದವನಿರುವಾಗಲೇ ತೀರಿಹೋದ ಮಗ ಬಾಲೇಸಾಹೇಬ, ಆ ಚಿಂತೆಯಲ್ಲಿಯೇ ಮಗನ ದಾರಿ ಹಿಡಿದ ಹೆಂಡತಿ ಅಬ್ಬಾಸ….. ಹೀಗೆ ಆಘಾತ ಮತ್ತು ಹಿಂಸೆಗಳಿಂದ ಕೂಡಿದ ವ್ಯಕ್ತಿಗತ ಬದುಕು ತನ್ನ ಕಾಲದ ಜನಸಾಮಾನ್ಯರ ಬದುಕಿನ ಆಘಾತ ಹಿಂಸೆ ನೋವುಗಳಿಗೆ ಸ್ಪಂದಿಸಿ ಅವುಗಳಿಗೆ ಪರಿಹಾರ ಕಂಡುಕೊಳ್ಳುವದಕ್ಕೆ ಪ್ರೇರಣೆ ನೀಡಿದಂತಿದೆ.

dargalaಮೋಟ್ನಳ್ಳಿ ಹಸನ್ ಸಾಹೇಬ ವೈಯಕ್ತಿಕ ಬದುಕಿನಲ್ಲಿ ಧಾರ್ಮಿಕ ಸೌಹಾರ್ದತೆಯ ತಂಗಾಳಿಯನ್ನೂ ಅನುಭವಿಸಿದ್ದಾನೆ, ಧಾರ್ಮಿಕ ಹಿಂಸೆಯ ಬಾಣಲೆಯಲ್ಲಿ ಬೆಂದೂ ಇದ್ದಾನೆ. ಮೂರು ವರುಷದ ಅನಾಥ ಮುಸಲಮಾನರ ಕೂಸನ್ನು ಗುರುಮಿಠಕಲ್‍ದ ಶ್ರೀ ಶಾಂತವೀರ ಸ್ವಾಮಿಗಳು ತಮ್ಮ ಮಠದಲ್ಲಿ ಸಲುಹಿ ಬೆಳೆಸುತ್ತಾರೆ, ವಿದ್ಯಾಭ್ಯಾಸ ನೀಡುತ್ತಾರೆ. ಕ್ವಾಟಗಿರಿಯ ಬ್ರಾಹ್ಮಣ ದೇಶಮುಖ ಇವರನ್ನು ಕನ್ನಡ ಶಿಕ್ಷಕನನ್ನಾಗಿ ನೇಮಿಸಿಕೊಳ್ಳುತ್ತಾನೆ. 19ನೆಯ ಶತಮಾನದಲ್ಲಿ ಸ್ಥಾಪಿತ-ಧರ್ಮಗಳ ಮಧ್ಯ ಕೂಡ ದೈನಂದಿನ ಕೊಡುಕೊಳೆಯ ಬದುಕಿನ ಮೂಲಕ ನಿರ್ಮಾಣವಾಗಿದ್ದ ಸೌಹಾರ್ದತೆಯ ಸ್ವರೂಪವನ್ನು ಇದು ತಿಳಿಸುತ್ತದೆ.

ಕಳೆದೆರಡು ದಶಕಗಳಲ್ಲಿ ಕರ್ನಾಟಕದ ಎಲ್ಲ ಧರ್ಮಜಾತಿಗಳೂ ಕೋಮುವಾದೀಕರಣಕ್ಕೊಳಗಾಗಿರುವ ಹಾಗೂ ವೀರಶೈವ ಸಮುದಾಯ ಕೋಮುವಾದಿ ರಾಜಕಾರಣದ ಜತೆ ಸಖ್ಯವನ್ನು ಬೆಳೆಸಿಕೊಂಡಿರುವ ಪ್ರಸ್ತುತ ಸಂದರ್ಭದಲ್ಲಿ ವಸಾಹತುಶಾಹಿ ಕಾಲಘಟ್ಟದ ಈ ಸೌಹಾರ್ದತೆ ಹೆಚ್ಚು ಆಕರ್ಷಕವಾಗಿ ಕಾಣುತ್ತದೆ.
ಮೋಟ್ನಳ್ಳಿ ಹಸನ್ ಸಾಹೇಬ ವೈದಿಕ, ಮುಸ್ಲಿಂ ಹಾಗೂ ವೀರಶೈವ ಧರ್ಮಗಳ ಮೂಲಭೂತವಾದಿ ಗಳಿಂದ ಹಿಂಸೆಗೆ ಒಳಗಾಗಿದ್ದಾನೆ. ಹಸನ್ ಸಾಹೇಬನನ್ನು ವೀರಶೈವ ಧರ್ಮದ ಪ್ರಚಾರಕನೆಂದು ಭಾವಿಸಿದ ಮುಸ್ಲಿಂ ಮೂಲಭೂತವಾದಿಗಳು, ತಮ್ಮ ಧರ್ಮದ ಪೋಲೀಸ್ ಅಧಿಕಾರಿಯೊಬ್ಬ ಅರಿಕೇರಿಗೆ ಬಂದಾಗ ಅವನಿಂದ ಹಸನ್ ಸಾಹೇಬರಿಗೆ ತಾಕೀತು ಮಾಡಿಸುತ್ತಾರೆ. ಹಸನ್ ‘ಸಾಧೂ ಪಂಥ-ಸೂಫಿ ಪಂಥ’ಗಳ ಅನುಯಾಯಿಯಾಗಿರುವದೂ ಅವರನ್ನು ಕೆರಳಿಸಿದೆ.

ಉರ್ದುವಿನಲ್ಲಿ ಬರೆದ ಹಸನ್ ಸಾಹೇಬನ ತತ್ವಪದಗಳನ್ನು ಮುಸ್ಲಿಂ ಮೂಲಭೂತವಾದಿಗಳು ನಾಶಮಾಡಿದರೆಂಬ ವದಂತಿಯಿದೆ. ಹಸನ್ ಸಾಹೇಬನನ್ನು ಬ್ರಾಹ್ಮಣರೂ ಸುಮ್ಮನೇ ಬಿಟ್ಟಿಲ್ಲ. ದೊಡ್ಡಾಟದ ವಸ್ತಾದೆಪ್ಪನಾದ ಹಸನ್ ಸಾಹೇಬ ದೊಡ್ಡಾಟ ಬರೆದು ಆಡಿಸುವದರ ಮೂಲಕ ಹಿಂದೂ ಪುರಾಣ ಹಾಗೂ ದೇವತೆಗಳ ಲೋಕವನ್ನು ಮಲಿನಗೊಳಿಸಿದ್ದಾನೆಂಬುದು ಅವರ ತಕರಾರಾಗಿತ್ತು. ಹಸನ್‍ನನ್ನು ಲಿಂಗಾಯತರೂ ಕಾಡಿದ್ದಾರೆ. ಗುಗ್ಗಳ ಮದುವೆಯೊಂದರಲ್ಲಿ ಮಾಂಸಾಹಾರಿ ತುರುಕ ಭಾಗವಹಿಸಿದ್ದರಿಂದ ಗುಗ್ಗಳ ಮಲಿನವಾಯಿತೆಂದು ಸಾಂಪ್ರದಾಯಿಕ ಲಿಂಗಾಯತನೊಬ್ಬ ಆಕ್ಷೇಪಿಸುತ್ತಾನೆ. ಹುಟ್ಟಾ ವೀರಶೈವನಲ್ಲದ ಹಸನ್ ಸಾಹೇಬನಿಗೆ ವೀರಶೈವ ಧರ್ಮದ ತಾತ್ವಿಕತೆಯ ಬಗ್ಗೆ ಮಾತನಾಡುವ ಹಕ್ಕಿಲ್ಲವೆಂಬುದು ಶರಣಯ್ಯ ಹಿರೇಮಠ ಎಂಬ ಪಂಚಾಚಾರ್ಯ ಲಿಂಗಾಯತನ ಅಭಿಪ್ರಾಯವಾಗಿತ್ತು. ಈ ಎಲ್ಲ ಮೌಖಿಕ ಕಥನಗಳ ಘಟನೆಯಲ್ಲಿ ಅಲ್ಪಸ್ವಲ್ಪ ವ್ಯತ್ಯಾಸವಿರಬಹುದು. ಆ ಕಾಲದ ಸ್ಥಾಪಿತ ಧರ್ಮಗಳ ಮೂಲಭೂತವಾದಿಗಳು ಧಾರ್ಮಿಕ ನೆಲೆಯಿಂದ ಹಸನ್ ಸಾಹೇಬನಿಗೆ ಹಿಂಸೆ ನೀಡಿರುವದಂತೂ ಸ್ಪಷ್ಟವಾಗಿದೆ. ಈ ಎಲ್ಲ ಹಿಂಸೆಯ ಸಂದರ್ಭಗಳಲ್ಲೂ ಪವಾಡ ಸದೃಶವಾಗಿ ಹಸನ್‍ಸಾಹೇಬ ಗೆಲ್ಲುತ್ತಾನೆ. ಹಿಂಸೆ ನೀಡಿದವರ ಗೌರವಕ್ಕೆ ಪಾತ್ರನಾಗುತ್ತಾನೆ. ಮೂರು ಸ್ಥಾಪಿತ ಧರ್ಮಗಳ ಸರಳ ರೇಖೆಗಳು ಹುಟ್ಟುಹಾಕಿದ ತ್ರಿಕೋನದ ಮಧ್ಯದಲ್ಲಿ ನಿಂತು ಅದಕ್ಕೆ ಬಯಲಿನ ಆಕಾರ ಕೊಡುವ ದೊಡ್ಡ ಪ್ರಯತ್ನ ಆತನದು. ಹಸನ ಸಾಹೇಬನ ಬದುಕು ಸಾಂಸ್ಥಿಕ ಧರ್ಮಗಳ ಮಾನವೀಯ ಎಳೆ ಹಾಗೂ ಮೂಲಭೂತವಾದಿ ಕ್ರೌರ್ಯಗಳೆರಡನ್ನೂ ಒಳಗೊಂಡಿದೆ.

ಹಸನ್ ಸಾಹೇಬರ ತತ್ವಪದಗಳಲ್ಲಿ ನಾಥ ತತ್ವದ ಪ್ರತಿಪಾದನೆ:
ಮೋಟ್ನಳ್ಳಿ ಹಸನ್ ಸಾಹೇಬ ನಿಜವಾದ ಅರ್ಥದಲ್ಲಿ ‘ತತ್ವ’-ಪದಕಾರ. ಅವನ ತತ್ವಪದಗಳು ಆರೂಢ ಪಂಥದ ದಾರ್ಶನಿಕತೆ ಮತ್ತು ವೈಧಾನಿಕತೆಗಳನ್ನು ಶಾಸ್ತ್ರೀಯವಾಗಿ ಕನ್ನಡದಲ್ಲಿ ನಿರೂಪಿಸಲು ಯತ್ನಿಸುತ್ತವೆ. ತನ್ನ ಸಮಕಾಲೀನವಾದ ಎಲ್ಲ ಸಾಂಸ್ಥಿಕ ಧರ್ಮಗಳ ಜಡತೆ ಮತ್ತು ತಾತ್ವಿಕತೆಗಳಿಗೆ ಮುಖಾಮುಖಿಯಾಗಿ ಸಂಘರ್ಷಕ್ಕಿಳಿಯುತ್ತವೆ, ಅವುಗಳನ್ನು ನಿರಾಕರಿಸುತ್ತವೆ. ತನ್ನ ದರ್ಶನ ಮತ್ತು ವಿಧಾನಗಳನ್ನು ಪ್ರಸಾರ ಮಾಡುತ್ತವೆ. ತಾತ್ವಿಕತೆಯ ಪ್ರತಿಪಾದನೆಯ ಸಂದರ್ಭದಲ್ಲಿ ಸ್ಥಾಪಿತ ಧರ್ಮಗಳು ಒಡ್ಡುವ ಭಯವನ್ನು ತಾತ್ವಿಕವಾಗಿಯೂ ಸಾಮಾಜಿಕವಾಗಿಯೂ ಎದುರಿಸುವ ಮತ್ತು ಗೆದ್ದುನಿಲ್ಲುವ ಸಂಪೂರ್ಣ ಸಂಭ್ರಮಗಳನ್ನೊಳಗೊಂಡಿವೆ. ಸೂಫಿಪಂಥವೂ ಇವುಗಳ ಬೆನ್ನಿಗಿದೆ. ಕನ್ನಡ ಕಾವ್ಯದ ಚೌಕಟ್ಟಿನಲ್ಲಿ ಆರೂಢ ಪಂಥದ ದಾರ್ಶನಿಕತೆ ಬಹುತೇಕ ಆಯಾಮಗಳೊಂದಿಗೆ ರೂಪತಾಳಲು ಯತ್ನಿಸಿದ್ದು ಇವನ ತತ್ವಪದಗಳಲ್ಲಿ. ಹೀಗಾಗಿ ಇವನ ರಚನೆಗಳಿಗೆ ಕಾವ್ಯಾತ್ಮಕತೆಗಿಂತ ಶಾಸ್ತ್ರೀಯತೆ ಲಭಿಸಿದೆ. ಅವು ಒಂದು ಅಖಂಡತತ್ವದ ಬಿಡಿಬಿಡಿಭಾಗಗಳಂತೆ ಭಾಸವಾಗುತ್ತವೆ. ಪುನರಾವರ್ತನೆಯೂ ಇದೆ.

dattaಗುರುಪಂಥದ ವಿಚಾರ ಮತ್ತು ಆಚಾರ ಸಂಹಿತೆಯನ್ನು ಕಟ್ಟಿಕೊಡಲು ಯತ್ನಿಸಿದಂತಿದೆ. ‘‘ಕನ್ನಡ ಶಿಷ್ಟ ಪಠ್ಯಗಳಲ್ಲಿ ನಾಥರು ಎದುರಾಳಿಗಳಂತೆ ಚಿತ್ರಣಗೊಂಡಿದ್ದಾರೆ. ಜನಪದ ಪಠ್ಯಗಳಲ್ಲಿ ಸಾಂಸ್ಕøತಿಕ ನಾಯಕರಂತೆ ಬಿಂಬಿತರಾಗಿದ್ದಾರೆ.” 18-19ನೆಯ ಶತಮಾನದಲ್ಲಿ ನಾಥಪಂಥ ಕರ್ನಾಟಕದ ಕೆಳವರ್ಗಗಳ ಒಂದು ಪರ್ಯಾಯ ಮತವಾಗಿಯೂ ತತ್ವಪದಗಳು ಆ ಲೋಕದ ಸಂವೇದನೆಗಳ ಅಭಿವ್ಯಕ್ತಿಗಳೂ ಆಗಿರುವದರ ಚಾರಿತ್ರಿಕ ಕಾರಣಗಳನ್ನು ಶೋಧಿಸಬೇಕಿದೆ. 19ನೆಯ ಶತಮಾನವು ವಸಾಹಾತುಶಾಹಿ ಭಾರತವನ್ನು ಸಂಪೂರ್ಣವಾಗಿ ತನ್ನ ತೆಕ್ಕೆಗೆ ತೆಗೆದುಕೊಂಡ ಕಾಲ. ದೇಶೀ ಪ್ರಭುತ್ವಗಳು ನಾಶವಾಗಿ ವಸಾಹತುಶಾಹಿ ಹಾಗೂ ಗುಲಾಮೀ ಅರಸೊತ್ತಿಗೆಗಳು ಮೇಲ್ವರ್ಗಗಳ ಜಮೀನ್ದಾರರ ಮೂಲಕ ಗ್ರಾಮಭಾರತದ ಆಡಳಿತವನ್ನು ನಿರ್ವಹಿಸತೊಡಗಿದರು. ರಾಜಪ್ರಭುತ್ವದ ಕಾಲದಲ್ಲಿ ಹಿಂದೆ ಪ್ರಚಲಿತವಿದ್ದ ಶೋಷಣಾತ್ಮಕ ವ್ಯವಸ್ಥೆಗೆ ವಸಾಹತುಶಾಹಿಯೆಂಬ ಮತ್ತೊಂದು ದೊಡ್ಡ ಶೋಷಕ ವ್ಯವಸ್ಥೆ ಸೇರಿಕೊಂಡಿತು. ವಸಾಹತುಶಾಹಿಯು ತನ್ನ ಆಡಳಿತನಿರ್ವಹಣೆ ಮತ್ತು ಪಶ್ಚಿಮದ ಬಂಡವಾಳಶಾಹಿಯ ಹಣಕಾಸಿನ ಅಗತ್ಯಗಳ ಅನಿವಾರ್ಯತೆಯಲ್ಲಿ ಜನಸಾಮಾನ್ಯರ ಮೇಲೆ ಅಪಾರ ತೆರಿಗೆಗಳನ್ನು ಹೇರತೊಡಗಿತು. ಈ ಸಂದರ್ಭದಲ್ಲಿ ಸ್ಥಾಪಿತ ಧರ್ಮಗಳು ಬಲಿಷ್ಠ ಜನನಿಯಂತ್ರಕ ಶಕ್ತಿಗಳಾಗಿ ರೂಪತಾಳಿದವು. ಜನರನ್ನು ಆರ್ಥಿಕವಾಗಿ ಸಾಮಾಜಿಕವಾಗಿ ಹಿಂಸಿಸಲು ಧರ್ಮಗಳು ಅಸ್ತ್ರಗಳಾದವು.

ಹೀಗಾಗಿ ಎಲ್ಲ ಸ್ಥಾಪಿತ ಧರ್ಮಗಳ ಬಡಸಮುದಾಯ ಮತ್ತು ಕೆಳವರ್ಗಗಳಿಗೆ ತಮ್ಮ ಸಂಕಟ ತೋಡಿಕೊಳ್ಳಲು ಪರ್ಯಾಯ ಮತದ ಅವಶ್ಯಕತೆ ಕಂಡಿರಬೇಕು. ನಾಥ ಮತ್ತು ಸೂಫಿ ಧಾರೆಗಳು ಸಾಮಾಜಿಕ ಬದುಕಿನಲ್ಲಿ ಅನಿವಾರ್ಯ ಚಿಂತನೆಗಳಾಗಿ ಈ ಸಮುದಾಯಗಳಿಗೆ ಸೌಹಾರ್ದ ವೇದಿಕೆಯನ್ನು ಒದಗಿಸಿರಬೇಕು. ಹೈದ್ರಾಬಾದ್ ಕರ್ನಾಟಕದ ವಸಾಹತುಶಾಹಿ ಆಡಳಿತದಲ್ಲಿ ನಿಜಾಮರ ಮೂಲಕ ದೊಡ್ಡ ಪ್ರಮಾಣದಲ್ಲಿ ಜಮೀನ್ದಾರಿಕೆಯನ್ನು ಪಡೆದವರು ಲಿಂಗಾಯತರು, ಬ್ರಾಹ್ಮಣರು ಮತ್ತು ಮುಸಲ್ಮಾನರು. ಈ ಮೂರೂ ಧರ್ಮಗಳು ಗಣ್ಯ ಮತ್ತು ಭೂಮಾಲಿಕ ವರ್ಗಗಳು. ಹೀಗಾಗಿ ಹಸನ್ ಸಾಹೇಬನ ತತ್ವಪದಗಳಲ್ಲಿ ಆರೂಢಪಂಥದ ಪ್ರತಿಪಾದನೆಯೊಂದಿಗೆ ಮೂರೂ ಧರ್ಮಗಳ ನಿರಾಕರಣೆ ಕಂಡುಬರುತ್ತದೆ. ಈ ಹಿನ್ನೆಲೆಯಲ್ಲಿ ಮೋಟ್ನಳ್ಳಿ ಹಸನ್ ಸಾಹೇಬನ ‘ಅಲ್ಲಲ್ಲಾ ಇಲ್ಲಿಲ್ಲಾ ಶಿವನೆಲ್ಲಿಲ್ಲಾ’ ಎಂಬ ತತ್ವಪದವನ್ನು ವಿಶ್ಲೇಷಿಸಲಾಗಿದೆ. ಹಸನ್ ಸಾಹೇಬ ಮುಸ್ಲಿಂ ಎಂಬ ಕಾರಣಕ್ಕಿಂತಲೂ ಧರ್ಮಾತೀತವಾದ ನಾಥ ತಾತ್ವಿಕತೆಯ ಪ್ರತಿಪಾದನೆಗಾಗಿ ದೊಡ್ಡ ಪ್ರತಿರೋಧವನ್ನೆದುರಿಸಿದ್ದಾನೆ. ‘ಖಡ್ಗವ ಹಿಡಿದು ಖಂಡಿಸುವದು, ಹುಡುಗರೆಲ್ಲ ನೀವೇನ ಬಲ್ಲಿರಿ?’, ‘ಯಾರಂಜಿಕೆನಮಗ’, ‘ಧೈರ್ಯದ ಢಾಲು ವೈರಾಗ್ಯದ ಸುರಗಿ ವೈರಿಗಳೆಲ್ಲ ಓಡಿಸಿ ಒರಗಿಸಿ ಈರಣವ ಗೆದ್ದು’ ಮೊದಲಾದ ಸಾಲುಗಳು ಅವನ ಪ್ರತಿರೋಧ ಮತ್ತು ಸಂಘರ್ಷಗಳು ಯುದ್ಧೋಪಾದಿಯಲ್ಲಿದ್ದುದನ್ನು ತಿಳಿಸುತ್ತದೆ.

ಸ್ಥಾಪಿತ ಧರ್ಮಗಳು ತಮ್ಮ ಧರ್ಮದ ಮೂಲಗ್ರಂಥ, ಮೂಲ ತತ್ವ ಹಾಗೂ ಮೂಲ ಆಚರಣೆಗಳಿಗೆ ಬದ್ಧತೆಯನ್ನು ಕಡ್ಡಾಯಗೊಳಿಸುತ್ತವೆ. ಧಾರ್ಮಿಕ ಶುದ್ಧತೆಯನ್ನು ಪ್ರತಿಪಾದಿಸುತ್ತವೆ. ಶುದ್ಧಾಂಗ ಶರಣರು ಹಾಗೂ ಶುದ್ಧಾಂಗ ದಾಸರ ಹುಡುಕಾಟ ವಚನ ಸಾಹಿತ್ಯ ಮತ್ತು ಕೀರ್ತನೆಗಳಲ್ಲಿ ಕಂಡುಬರುತ್ತದೆ. ವೀರಶೈವ ಹಾಗೂ ವೈದಿಕ ಧರ್ಮಗಳಿಗೆ ಬದ್ಧತೆ ಹೊಂದಿದ ಭಕ್ತಸಮುದಾಯದ ಸೃಷ್ಟಿಯ ಒತ್ತಡವಿತ್ತು. ಹೀಗಾಗಿ ಭವಿಗಳನ್ನು ಕುರಿತಾದ ಅವರ ನಿಲುವುಗಳು ಹಿಂಸಾತ್ಮಕ ರೂಪತಾಳುತ್ತವೆ. ತತ್ವಪದಗಳಲ್ಲಿ ಹಲವು ಚಿಂತನೆಗಳ ಸಂಕರವಿದೆ. ಹಲವು ಭಾಷೆಗಳ ಬೆರಕೆಯೂ ಇದೆ. ಸಮಾಜದ ಅಧಿಕಾರಕೇಂದ್ರಿತ ಶಕ್ತಿಗಳು ಶಿಷ್ಟಧರ್ಮಗಳನ್ನು ಜಡಗೊಳಿಸಿದ್ದವು. ಕೆಳವರ್ಗಗಳು ಎಲ್ಲಾ ಧರ್ಮಗಳ ಜನರೊಂದಿಗೆ ಪರಸ್ಪರ ಕೊಡುಕೊಳೆ ನಡೆಸಿದ್ದವು. ಮೋಟ್ನಳ್ಳಿ ಹಸನ್ ಸಾಹೇಬರ ಮೇಲಿನ ತತ್ವಪದದ ಪಲ್ಲವಿಯ ಸಾಲುಗಳು ಬಹುಧಾರ್ಮಿಕ ಬಹುತಾತ್ವಿಕ ಧಾರೆಗಳ ಸಂಕರವನ್ನು ಒಳಗೊಂಡಿವೆ.

ಅಲ್ಲಲ್ಲಾ ಇಲ್ಲಿಲ್ಲಾ ಶಿವನಿಲ್ಲಿಲ್ಲ ಶಿವನೆಲ್ಲಿಲ್ಲಾ?
ನಿನ್ನ ನೀ ತಿಳಿ ನೀನೇ ಪರಬ್ರಹ್ಮನಲ್ಲಾ?
ರಹಮತ್ ತರೀಕೆರೆಯವರು ಗುರುತಿಸುವಂತೆ “ಅಲ್ಲಲ್ಲ ಇಲ್ಲಿಲ್ಲ ಶಿವನೆಲ್ಲಿಲ್ಲಾ’ ಎಂಬ ರಚನೆಯಲ್ಲಿ ಸಾಂಪ್ರದಾಯಿಕ ಇಸ್ಲಾಮಿನ ‘ಲಾಇಲಾಹಾ ಇಲ್ಲಾಲ್ಲಹ’ ಎಂಬ ಕಲ್ಮಾವನ್ನು ಮುರಿದು ಕಟ್ಟಲಾಗಿದೆ. ‘ನೀನೇ ಪರಬ್ರಹ್ಮನಲ್ಲ’ ಎಂಬುದಕ್ಕೆ ಪ್ರೇರಣೆ ಸೂಫಿಗಳ ‘ಅನಲ್ ಹಕ್’ ಇರಬಹುದು. ವೇದಾಂತದ ‘ಅಹಂಬ್ರಹ್ಮನೇ’ ಇರಬಹುದು. ‘ನಾನೀ ಎಂಬ ಭೇದ ಅಂದೂ ಇಲ್ಲ ಇಂದೂ ಇಲ್ಲ ಗುಹೇಶ್ವರ ಲಿಂಗ ತಾನೆಯಾಗಿ ಎಂದ ಅಲ್ಲಮನಿರಬಹುದು.”14 ವೇದ, ನಾಥ, ಸೂಫಿ, ಚಿಂತನೆಗಳ ಸಂಕರ ಇಲ್ಲಿದೆ. ಅಲ್ಲಾ ಮತ್ತು ಶಿವ ಇಬ್ಬರನ್ನೂ ನಿರಾಕರಿಸಿ ಅರಿವೇ ಗುರು ಮತ್ತು ದೇವರು ಎಂಬ ದರ್ಶನದ ಪ್ರತಿಪಾದನೆ ಇದೆ. ಈ ನಿರಾಕರಣೆಯ ಹಿಂದೆ ಶಿಷ್ಟ ಧರ್ಮಗಳು ಹುಟ್ಟು ಹಾಕಿದ ಹಿಂಸಾ ವಿರೋಧಿ ತಾತ್ವಿಕತೆ ಇದೆ.

ಮೋಟ್ನಳ್ಳಿ ಹಸನ್ ಸಾಹೇಬ ತನ್ನದು ಹೊಸ ‘ಆಟ’, ‘ಬಯಲಾಟ’ ಎಂದು ಕರೆದುಕೊಂಡಿದ್ದಾನೆ. ಈ ಪದ್ಯದ ವಿಶ್ಲೇಷಣೆಗೆ ಹಿನ್ನೆಲೆಯಾಗಿ ಆತನ ಇತರ ಪದ್ಯಗಳ ತಾತ್ವಿಕತೆಯನ್ನು ಸಂಗ್ರಹಿಸುವದಾದರೆ ಆತ ಪ್ರತಿಪಾದಿಸುತ್ತಿರುವದು ‘ಮಠ’ತತ್ವಕ್ಕೆ ಪರ್ಯಾಯವಾದ ‘ಘಟ’ತತ್ವ. ಮಾಯಾವಾದಕ್ಕೆ ಬದಲಾದ ಕಾಯಾವಾದ. ಷಟ್‍ಸ್ಥಲಕ್ಕೆ ಪರ್ಯಾಯವಾದ ಏಕಸ್ಥಲ ಸಿದ್ಧಾಂತ. ದೇಹವೇ ದೇವಾಲಯವೆಂಬುದಕ್ಕೆ ಬದಲಾಗಿ ದೇಹವೇ ದೇವರು ಎಂಬ ತತ್ವ. ಭಕ್ತಿಗೆ ಪರ್ಯಾಯವಾದ ಸಾಧನಾ ಮಾರ್ಗ. ದ್ವೈತವೂ ಅದ್ವೈತವೂ ವಿಶಿಷ್ಟಾದ್ವೈತವೂ ಅಲ್ಲದ ದ್ವಯವಾದ. ವಚನೋತ್ತರ ಕಾಲಘಟ್ಟದಲ್ಲಿ ಮತ್ತೆ ಸ್ಥಾಪನೆಗೊಂಡ ‘ಗುಡಿಸಂಸ್ಕøತಿ’ಯೆಂಬ ‘ಗುಡಿಕೈಗಾರಿಕೆ’ಯಿಂದ ಜನರನ್ನು ಮುಕ್ತಗೊಳಿಸುವ ಬಹುದೊಡ್ಡ ಪ್ರಯತ್ನ ಇದಾಗಿದೆ.

ಹಸನ್ ಸಾಹೇಬ ಈ ತತ್ವಪದದಲ್ಲಿ ಮುಖ್ಯವಾಗಿ ವೈದಿಕ, ವೀರಶೈವ ಹಾಗೂ ಮುಸ್ಲಿಂ ಧರ್ಮಗಳ ಜಡ ಆಚರಣೆಗಳನ್ನು ನಿರಾಕರಿಸುತ್ತಾನೆ. ಈ ಮೂರು ಮಾರ್ಗಗಳ ಭಕ್ತಿಮಾರ್ಗಕ್ಕಿಂತ ಯೋಗಮಾರ್ಗ ಅಥವಾ ಸಾಧನಮಾರ್ಗವೇ ಯೋಗ್ಯವೆಂಬುದು ಇಲ್ಲಿನ ಅಭಿಮತ. ಹಸನ್ ಸಾಹೇಬ ತನ್ನ ಬಹಳಷ್ಟು ತತ್ವಪದಗಳಲ್ಲಿ ವೀರಶೈವ ಧರ್ಮದ ಮೂಲ ತಾತ್ವಿಕ ಚಿಂತನೆಗಳನ್ನೇ ನಿರಾಕರಿಸುತ್ತಾನೆ. ಷಟಸ್ಥಲವನ್ನು ನಿರಾಕರಿಸುವದನ್ನು ಗಮನಿಸಬೇಕು. ಅವನ ರಚನೆಯಲ್ಲಿ ಬ್ರಾಹ್ಮಣ ಮೂಲಭೂತವಾದ ಅಥವಾ ವರ್ಣಾಶ್ರಮ ಧರ್ಮವನ್ನು ಪ್ರತಿಪಾದಿಸುವ ಶಾಸ್ತ್ರ, ಪುರಾಣಗಳನ್ನು ನಿರಾಕರಿಸಲಾಗಿದೆ. ಹಾಗೆಯೇ ವ್ಯಕ್ತಿಗತ ಮೋಕ್ಷದಲ್ಲೋ ಪರ್ಯಾವಸಾನವಾಗುವ ವೈದಿಕ ‘ಸನ್ಯಾಸ’ತ್ವವನ್ನೂ ವಿಡಂಬಿಸಲಾಗಿದೆ. ಎರಡನೆಯ ಭಾಗದಲ್ಲಿ ‘ಶರಣ’ ಸಂಸ್ಕøತಿಯು ಆ ಕಾಲದಲ್ಲಿ ತಲುಪಿರುವ ದುಸ್ಥಿತಿಯ ವಿವರಣೆ ಇದೆ. ‘ಗಡ್ಡ, ಜಡೆಬಿಟ್ಟ ಗೊಡ್ಡಾಕಳಿನಂತೆ ಚರಿಸ್ಯಾಡಿದರಿಲ್ಲ’ ಎಂಬಲ್ಲಿ ‘ಜಂಗಮ’ ವರ್ಗಕ್ಕೆ ಮುಖಾಮುಖಿಯಾಗುತ್ತಾನೆ. ವೀರಶೈವ ಧರ್ಮ ಆರೇಳುನೂರು ವರುಷಗಳ ನಂತರ ತಲುಪಿದ ಅಧೋಗತಿಯನ್ನು ವಿವರಿಸುತ್ತ ಅದನ್ನು ನಿರಾಕರಿಸುತ್ತಾನೆ. ಕಿವಿಗೆ ಬೆರಳಿಟ್ಟು ಕೂಗುವ, ಧರ್ಮಶಾಸ್ತ್ರ ಪಠಿಸುವ, ಸ್ಥಾಪಿತ ಇಸ್ಲಾಂ ಧರ್ಮವನ್ನು ಮೂರನೆಯ ಹಂತದಲ್ಲಿ ವಿರೋಧಿಸುತ್ತಾನೆ. ಇವುಗಳಿಗೆ ಪರ್ಯಾಯವಾಗಿ ‘ಇಟಪುರುಷನ’ ಅರಿಯುವ ಮಾರ್ಗವನ್ನು ಸೂಚಿಸಿದ್ದಾನೆ.

ಇಲ್ಲಿ ಮುಖ್ಯ ಸಂಗತಿ ಎಂದರೆ ಸ್ಥಾಪಿತವೆನ್ನುವ ಕಾರಣಕ್ಕೆ ಇಸ್ಲಾಂ, ವೈದಿಕ, ಮತ್ತು ವೀರಶೈವ ಧರ್ಮಗಳನ್ನು ಸಮಾನವಾಗಿ ಒಂದೇ ರೂಪದಲ್ಲಿ ಗುರುತಿಸಿರುವದು. ಸ್ಥಾಪಿತ ಧರ್ಮಗಳು ಆ ಕಾಲದ ಎಲ್ಲ ಧರ್ಮಗಳ ಕೆಳವರ್ಗದ ಜನಸಮುದಾಯಗಳನ್ನು ಆರ್ಥಿಕವಾಗಿ ಸಾಮಾಜಿಕವಾಗಿ, ರಾಜಕೀಯವಾಗಿ ಶೋಷಿಸಲು ಮೇಲ್ವರ್ಗಗಳಿಗೆ ಸಾಧನಗಳಾಗಿವೆ. ಧರ್ಮಮುಖೇನ ಹಿಂಸೆಯನ್ನು ಸ್ಥಾಪಿಸುವ ಯತ್ನ ನಡೆದಿದೆ. ಈ ಧರ್ಮಗಳ ನಿರಾಕರಣೆ ಕೇವಲ ಧರ್ಮಗಳ ನಿರಾಕರಣೆಯಾಗಿರದೇ ಶೋಷಕ ವ್ಯವಸ್ಥೆಯ ನಿರಾಕರಣೆಯಾಗಿದೆ. ಅಸಮಾನತೆ, ಶೋಷಣೆ ಮತ್ತು ಹಿಂಸೆಗಳ ಧಾರ್ಮಿಕೀಕರಣವನ್ನು ವಿರೋಧಿಸುವ ತಾತ್ವಿಕತೆ ಇದಾಗಿದೆ. ಕೆಳವರ್ಗಗಳಲ್ಲಿ ಕಂಡು ಬಂದ ಕೊಡುಕೊಳೆ, ಸಾಮರಸ್ಯಗಳು ವರ್ಗೀಯ ನೆಲೆಯಿಂದ ಮೇಲ್ವರ್ಗಗಳ ಹಿಂಸೆಗೆ ಪರ್ಯಾಯವಾಗಿ ಹುಟ್ಟಿಕೊಂಡ ಸೌಹಾರ್ದತೆಯ ತಾಣವಾಗಿದೆ. ಸ್ಥಾಪಿತ ಧರ್ಮಗಳು ಹುಟ್ಟುಹಾಕುವ ಹಿಂಸೆ ಹಾಗೂ ಆ ಹಿಂಸೆಯನ್ನು ಪ್ರತಿರೋಧಿಸಲು ಹುಟ್ಟುವ ಕೆಳವರ್ಗಗಳ ಏಕತೆ ಸೌಹಾರ್ದತೆಗಳ ನಡುವಿನ ಸಂಘರ್ಷದಲ್ಲಿ ಈ ತತ್ವಪದಹುಟ್ಟಿದಂತಿದೆ


                              ಇಂತಿ                                                               ಮಂಜುನಾಥ ಕೆ ಎಂ                                          ಜನತಾ ಸರ್ಕಾರಿ ಪ್ರಥಮದರ್ಜೆ ಕಾಲೇಜು                            ಬಸವಪಟ್ಟಣ {ಚಿರಡೋಣಿ}

1 ಕಾಮೆಂಟ್‌: