[3/16, 4:41 PM] manjunathakmchiru: ಉನ್ನತ ಶಿಕ್ಷಣದ ನಿರ್ವಹಣೆ
ಭಾರತದಲ್ಲಿ ಇಂದು ಸಾವಿರಾರು ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ಅವೈಜ್ಞಾನಿಕ ನಿರ್ವಹಣೆಯಿಂದ ಅವುಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ. ಸ್ವಾತಂತ್ರ್ಯ ಪೂರ್ವ ನಿರ್ವಹಣ ವ್ಯವಸ್ಥೆಯನ್ನೇ ಅವುಗಳು ನೆಚ್ಚಿಕೊಂಡಿವೆ.
ಸಮಾಜದ ಬೇಡಿಕೆ ಸ್ವರೂಪ ಬದಲಾದಂತೆ ಇವುಗಳು ಸಹ ಬದಲಾಗಬೇಕಾದ ಅವಶ್ಯಕತೆ ಇದೆ. ಡಬ್ಲ್ಯು.ಟಿ.ಓ. ಒಪ್ಪಂದದ ನಂತರ ಭಾರತದ ಪ್ರತಿಭೆಗಳಿಗೆ ವಿಶ್ವದಾದ್ಯಂತ ಅತ್ಯುನ್ನತ ಮನ್ನಣೆ ದೊರಕುತ್ತಿದೆ. ಅಷ್ಟೇ ಮಟ್ಟದಲ್ಲಿ ಉನ್ನತ ಶಿಕ್ಷಣದಲ್ಲಿ ವಿಶ್ವದಾದ್ಯಂತ ಸ್ಪರ್ಧಾತ್ಮಕತೆ ಸಹ ಹೆಚ್ಚಾಗುತ್ತಿದೆ.
ಆದುದರಿಂದ ಭಾರತ ಸಹ ತನ್ನ ಮಾನವ ಸಂಪನ್ಮೂಲವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪುನರ್ರೂಪಿಸಬೇಕಾಗಿದೆ. ಭಾರತ ಮಾದರಿಯ ಉನ್ನತ ಶಿಕ್ಷಣವನ್ನು ವಿದೇಶಗಳಿಗೆ ರಫ್ತು ಮಾಡಬೇಕಾಗಿದೆ. ದೇಶದಲ್ಲಿ ಲಭ್ಯವಿರುವ ವಿ.ವಿಗಳು ಸಂಶೋಧನಾ ವ್ಯವಸ್ಥೆಯನ್ನು ಪುನರ್ರೂಪಿಸಬೇಕಾಗಿದೆ.
ಸಾರ್ವಜನಿಕ - ಖಾಸಗಿ ತತ್ವವನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಇದರಿಂದ ವಿಶೇಷ ವಿವಿಗಳು, ಖಾಸಗಿ ವಿವಿಗಳು, ಸ್ವಾಯತ್ತ ವಿವಿಗಳಿಂದ ಸಹ ಉನ್ನತ ಶಿಕ್ಷಣ ಕ್ಷೇತ್ರ ವಿಸ್ತಾರಗೊಳ್ಳುವ ಸಾಧ್ಯತೆ ಇರುತ್ತದೆ.
ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಿ ನಿಧಿಯ ಶೇಕಡಾ 2ರಷ್ಟನ್ನು ಇದಕ್ಕೆ ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸರ್ಕಾರದ ತೀರ್ಮಾನ ಈ ನಿಟ್ಟಿನಲ್ಲಿ ತುಂಬಾ ಸಹಕಾರಿಯಾಗಿದೆ. ಇದರ ಮೂಲಕ ದೇಶದ ಅಸಂಖ್ಯಾತ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ದೊರಕಲು ನೆರವಾಗುತ್ತದೆ.
ದೇಶದ ಸಂಪನ್ಮೂಲ ಬಳಸಿ ಉನ್ನತ ಸ್ಥಾನ ಪಡೆದ ಪ್ರತಿಭೆಗಳಿಂದ ವಿಶೇಷ ತೆರಿಗೆ ಸಂಗ್ರಹಿಸುವ ಯೋಜನೆಯ ಸಾಧಕ - ಬಾಧಕಗಳ ಬಗ್ಗೆ ಚಿಂತಿಸಬೇಕಾಗಿದೆ. ದೇಶದ ಕೈಗಾರಿಕಾ ರಂಗ ಸಹ ಉನ್ನತ ಶಿಕ್ಷಣದ ಗುಣಾತ್ಮಕತೆಗೆ ಕೈಜೋಡಿಸುವ ಅಗತ್ಯ ಇದೆ.
ನಿರ್ದಿಷ್ಟ ವಿಶೇಷತೆ ಹೊಂದಿರುವ ಉನ್ನತ ಸಂಶೋಧನೆ ಸಂಸ್ಥೆಗಳನ್ನು ಸಾಧಿಸುವತ್ತ ಕೈಗಾರಿಕಾ ರಂಗಕ್ಕೆ ಉತ್ತೇಜನ ನೀಡಬೇಕಾಗಿದೆ. ಖಾಸಗಿ ರಂಗಕ್ಕೆ ಆಸಕ್ತಿ ಇಲ್ಲದಿರುವ ಕ್ಷೇತ್ರಗಳಲ್ಲಿ ಸರ್ಕಾರ ಬಂಡವಾಳ ಹೂಡಲೇಬೇಕು. ಸಮತೋಲಿತ ಪ್ರತಿಭಾ ಬೆಳವಣಿಗೆಗೆ ಇದು ತೀರಾ ಅವಶ್ಯ.
ಹೊಸ ವಿವಿಗಳ ಆರಂಭಕ್ಕಿಂತ ಈಗಾಗಲೇ ಇರುವ ವಿವಿಗಳಿಗೆ ಸಾಕಷ್ಟು ಧನ ಸಹಾಯದ ಅಗತ್ಯ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರುವ ಪಿಎಚ್.ಡಿ. ಪದವಿಗಳು ಗುಣಾತ್ಮಕತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
[3/16, 4:42 PM] manjunathakmchiru: ಸಾರ್ವಜನಿಕ- ಖಾಸಗಿ ಸಹಭಾಗಿತ್ವ, ಉನ್ನತ ಶಿಕ್ಷಣದ ವೈಜ್ಞಾನಿಕ ನಿರ್ವಹಣೆ, ಉನ್ನತ ಶಿಕ್ಷಣದ ಲಭ್ಯತೆ ಮತ್ತು ಸಮಾನತೆ, ಉನ್ನತ ಶಿಕ್ಷಣದ ರಫ್ತು ಮತ್ತು ಸುಸ್ಥಿರ ಉನ್ನತ ಶಿಕ್ಷಣ ಗುಣಾತ್ಮಕತೆಗೆ ನೀತಿ ನಿಯಮಗಳ ನಿರೂಪಣೆ - ಈ ಎಲ್ಲಾ ವಿಷಯಗಳಿಗೂ ಸರ್ಕಾರ ತ್ವರಿತ ಗಮನ ಮತ್ತು ಆದ್ಯತೆ ನೀಡಬೇಕಾಗುತ್ತದೆ.
ನಿರ್ಣಾಯಕ ಯೋಜನೆ ಮತ್ತು ನೀತಿ ನಿರೂಪಣೆಯನ್ನು ನಿರ್ಧರಿಸಲು ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿರಬೇಕು. ಐ.ಎ.ಎಸ್. ಮಾದರಿಯಲ್ಲಿ ಭಾರತ ಉನ್ನತ ಶಿಕ್ಷಣ ಸೇವೆಯನ್ನು ಆರಂಭಿಸಲು ಚಿಂತಿಸಬೇಕು.
ಅಭಿವೃದ್ಧಿಯ ವೇಗಕ್ಕೆ ಹೊಂದುವಂತೆ ಹೊಸ ಮಾನವ ಸಂಪನ್ಮೂಲ ಅಭಿವೃದ್ಧಿ ನೀತಿಯ ಅವಶ್ಯಕತೆ ಇದೆ. ಇದರಿಂದ ನಿರಂತರವಾಗಿ ಹೊಸ ಪ್ರತಿಭೆಗಳು ಐಚ್ಛಿಕ ವೃತ್ತಿಯನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಉತ್ತಮ ಸಾಧನೆ ತೋರುವ ಶೈಕ್ಷಣಿಕ ಸಂಸ್ಥೆಗಳಿಗೆ ತ್ವರಿತವಾಗಿ ಸ್ವಾಯತ್ತತೆ ನೀಡಬೇಕಾಗುತ್ತದೆ.
ವಿ.ವಿಗಳಿಗೆ ಹೊಸ ರೀತಿಯ ಹಣಕಾಸಿನ ನಿರ್ವಹಣಾ ಯೋಜನೆಯನ್ನು ರೂಪಿಸಬೇಕಿದೆ. ವಿ.ವಿಗಳಲ್ಲಿನ ವಿವಿಧ ಶೈಕ್ಷಣಿಕ, ಆಡಳಿತ, ಹಣಕಾಸು ಮಂಡಳಿಗಳಲ್ಲಿ ಅತ್ಯುನ್ನತ ಪಾರದರ್ಶಕತೆಯ ಅವಶ್ಯಕತೆ ಇದೆ.
ವಿಶ್ವವಿದ್ಯಾಲಯಗಳಿಗೆ ರಾಜಕೀಯ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗ್ರಾಮೀಣ, ನಗರ ಮತ್ತು ಲಿಂಗ ಭೇದದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉನ್ನತ ಶಿಕ್ಷಣದ ನೀತಿ ನಿಯಮಾವಳಿಗಳನ್ನು ರೂಪಿಸಬೇಕು.
ಬೇರೆ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ಕುಲಪತಿ ಅಥವಾ ಕುಲಸಚಿವರನ್ನಾಗಿ ನೇಮಿಸುವುದು ತೀರಾ ಅವೈಜ್ಞಾನಿಕ. ದೇಶಿ ಮಾದರಿಯ ಸಂಶೋಧನೆ ಮತ್ತು ಬೋಧನೆಗಳಿಗೆ ಒತ್ತು ನೀಡಬೇಕು. ರಾಜ್ಯ ಸರ್ಕಾರಗಳು ತನ್ನ ವಿ.ವಿಗಳಿಗೆ ಸಾಕಷ್ಟು ಹಣಕಾಸು ನೆರವು ನೀಡಬೇಕು.
ಜೊತೆಗೆ ವಿ.ವಿಗಳು ಸಾಧ್ಯವಾದಷ್ಟು ತಮ್ಮ ಆದಾಯದ ಮೂಲವನ್ನು ತಾವೇ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆಡಳಿತಾತ್ಮಕ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸಬೇಕು. ರಾಷ್ಟ್ರದಾದ್ಯಂತ ಒಂದೇ ರೀತಿಯ ಪಠ್ಯಕ್ರಮ, ಶೈಕ್ಷಣಿಕ ವೇಳಾಪಟ್ಟಿ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಅನುಸರಿಸಬೇಕು.
ಶಿಕ್ಷಕರು ಸಹ ಸಾಧ್ಯವಾದಷ್ಟು ತಮ್ಮ ಜ್ಞಾನವನ್ನು ಉತ್ತಮೀಕರಿಸಿಕೊಳ್ಳಬೇಕು. ಹೆಸರುವಾಸಿ ವಿದೇಶಿ ವಿ.ವಿಗಳೊಂದಿಗೆ ಶೈಕ್ಷಣಿಕ ಒಪ್ಪಂದಗಳು ತೀರಾ ಅವಶ್ಯಕ. ಆನ್ಲೈನ್ ಶಿಕ್ಷಣ ನೀಡುವುದರ ಬಗ್ಗೆ ವಿ.ವಿಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು ಯೋಚಿಸಬೇಕು. ಒಂದು ವಿವಿ ಅಥವಾ ಸಂಸ್ಥೆಯಿಂದ ಮತ್ತೊಂದು ವಿ.ವಿ. ಅಥವಾ ಸಂಸ್ಥೆ ಶಿಕ್ಷಕರನ್ನು ನಿಯೋಜನೆ ಮೇಲೆ ಕಳಿಸುವ ವ್ಯವಸ್ಥೆಯನ್ನು ತರಬೇಕಿದೆ. ತಮ್ಮ ಸಂಶೋಧನೆ ಮತ್ತು ಇತರೆ ಚಟುವಟಿಕೆಗಳನ್ನು ಸಮಾಜಕ್ಕೆ ತಿಳಿಸಲು ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯು ಪ್ರಸಾರಾಂಗ ವ್ಯವಸ್ಥೆಯನ್ನು ಹೊಂದಿರಬೇಕು.
ಸಾಧ್ಯವಾದಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಾಯೋಜಿತ ಯೋಜನೆಗಳು ಮತ್ತು ಪೇಟೆಂಟ್ಗಳನ್ನು ಪಡೆಯಲು ಯತ್ನಿಸಬೇಕು. ಪ್ರತಿ ಸಂಸ್ಥೆಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಬೇಕು. ದೂರಶಿಕ್ಷಣ ವ್ಯವಸ್ಥೆಗೆ ಪ್ರತ್ಯೇಕ ಕಾಯಕಲ್ಪದ ಅಗತ್ಯವಿದೆ.
ಅತಿಥಿ, ಗುತ್ತಿಗೆ ಮತ್ತು ಖಾಸಗಿ ವಿ.ವಿಗಳಲ್ಲಿನ ಶಿಕ್ಷಕರ ವೇತನ ಮತ್ತು ಇತರೆ ಸೌಲಭ್ಯಗಳ ಬಗ್ಗೆ ತೀವ್ರ ಮತ್ತು ತ್ವರಿತ ಸುಧಾರಣೆಯ ಅಗತ್ಯವಿದೆ. ಸಾಧ್ಯವಾದಷ್ಟು ಸ್ಥಳೀಯ ಅವಶ್ಯಕತೆ ಮತ್ತು ಮಾರುಕಟ್ಟೆ ಬೇಡಿಕೆ ಆಧಾರಿತ ಕೋರ್ಸ್ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಹಮ್ಮಿಕೊಳ್ಳಬೇಕು.
ಗುಣಾತ್ಮಕತೆಯ ಭರವಸೆ
ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಸೆಣಸಬೇಕಾದರೆ ನಾವು ಅತ್ಯುನ್ನತ ಮಟ್ಟದ ಗುಣಾತ್ಮಕತೆಗೆ ಗಮನ ನೀಡಬೇಕಿದೆ. ಸಮಂಜಸವಾದ ಮೌಲ್ಯಮಾಪನ ಮತ್ತು ಅಕ್ರಿಡೇಷನ್ ವ್ಯವಸ್ಥೆಯನ್ನು ಪುನರ್ರೂಪಿಸಬೇಕಿದೆ.
ಇಂದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಜ್ಞಾನದ ನಿರ್ವಹಣೆ ಎಂದು ಪರಿಗಣಿಸಬೇಕಿದೆ. ಕ್ರೋಢೀಕೃತ ವಿಧಾನ, ಬಹುಶಾಸ್ತ್ರೀಯ ಪಠ್ಯಕ್ರಮ ಮತ್ತು ಖಾಸಗಿ ಕ್ಷೇತ್ರಗಳೊಂದಿಗೆ ಸಂಪರ್ಕ ಜಾಲವನ್ನು ಬೆಳೆಸುವುದರ ಬಗ್ಗೆ ಉನ್ನತ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕಾಗಿದೆ.
ವಿಶ್ವವಿದ್ಯಾಲಯಗಳು ಜ್ಞಾನಾಧಾರಿತ ಕೇಂದ್ರಗಳಾಗಬೇಕಿದೆ. ದೇಶಿ ತಂತ್ರಜ್ಞಾನಕ್ಕೆ ಮಹತ್ವ ನೀಡಬೇಕಾಗಿದೆ. ಜ್ಞಾನ ಮತ್ತು ಕೌಶಲ ಎರಡನ್ನೂ ಒಟ್ಟಿಗೆ ನೀಡುವ ಅರ್ಥಪೂರ್ಣ ಪಠ್ಯಕ್ರಮದ ಅಗತ್ಯತೆ ಇದೆ.
` ನ್ಯಾಕ್~ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಉನ್ನತ ಶಿಕ್ಷಣ ವ್ಯವಸ್ಥೆ ಕ್ರಮೇಣ ಸುಧಾರಣೆ ಕಾಣುವ ಸಾಧ್ಯತೆ ಹೆಚ್ಚು. ಬಹುಶಾಸ್ತ್ರೀಯ, ಅಂತರ್ಶಿಸ್ತಿನ ವಿಷಯಗಳಲ್ಲಿನ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ಬೇಕಿದೆ.
ಮುಖ್ಯವಾಗಿ ಸಮಾಜವಿಜ್ಞಾನ ಕಲಿಕೆ, ಬೋಧನೆ ಮತ್ತು ಸಂಶೋಧನೆಯ ವಿಧಾನವನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಕೇವಲ ಸಾಮರ್ಥ್ಯ ಮತ್ತು ಸಾಧನೆಯ ಆಧಾರದ ಮೇಲೆ ಬಡ್ತಿ ನೀಡಬೇಕಾಗಿದೆ. ಬಡ್ತಿ ನೀಡುವಿಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ