ಕರ್ನಾಟಕ ಸರ್ಕಾರ ತಂದ ವಿವಿಧ ಕಾಯಿದೆ ತಿದ್ದುಪಡಿ
ಸಂಪಾದಿಸಿ
ಕ್ರಮೇಣ ಸರ್ಕಾರ ತಂದ ವಿವಿಧ ಕಾಯಿದೆ ತಿದ್ದುಪಡಿಗಳಿಂದಾಗಿ ವಿಶ್ವವಿದ್ಯಾಲಯದ ಆಡಳಿತ ವ್ಯವಹಾರಗಳ ಬಗ್ಗೆ ಸರ್ಕಾರದ ನಿಯಂತ್ರಣ ಹೆಚ್ಚಿದೆ. ವಿಶ್ವವಿದ್ಯಾಲಯದ ಪ್ರಮುಖ ಅಂಗವಾಗಿದ್ದ ಸೆನೆಟ್ ರದ್ದಾಗಿದ್ದು ಶಿಕ್ಷಣ ಮಂಡಳಿಯ ಸ್ವರೂಪವೂ ತೀವ್ರವಾಗಿ ಬದಲಾಗಿದೆ. ಕುಲಪತಿಗಳ ನೇಮಕದಲ್ಲೂ ಸರ್ಕಾರ ಹೆಚ್ಚಿನ ಅಧಿಕಾರ ಹೊಂದಿದೆ. ಮುಂದೆ ವಿಶ್ವವಿದ್ಯಾಲಯ ಗಳು ಹೆಚ್ಚಿನ ಸಂಖ್ಯೆಯಲ್ಲಿ ಪ್ರಾರಂಭವಾದವು. ಮಂಗಳೂರು ವಿಶ್ವವಿದ್ಯಾಲಯ (1980), ಗುಲ್ಬರ್ಗಾ ವಿಶ್ವವಿದ್ಯಾಲಯ (1980), ಕುವೆಂಪು ವಿಶ್ವವಿದ್ಯಾಲಯ (1987), ಕನ್ನಡ ವಿಶ್ವವಿದ್ಯಾಲಯ (1991)-ಇವು ಪ್ರಾರಂಭವಾಗಿ ಸ್ನಾತಕೋತ್ತರ ಶಿಕ್ಷಣವು ವಿವಿಧ ಕೇಂದ್ರಗಳಲ್ಲಿ ಪ್ರಾರಂಭವಾಗಲು ಅವಕಾಶ ಕಲ್ಪಿತವಾಯಿತು. ತುಮಕೂರು (ಈಗ ವಿಶ್ವವಿದ್ಯಾಲಯ) ಹಾಸನ, ಮಂಡ್ಯ, ದಾವಣಗೆರೆ, ಬಳ್ಳಾರಿ, ಬೆಳಗಾಂವಿ ಮೊದಲಾದವು ಸ್ನಾತಕೋತ್ತರ ಶಿಕ್ಷಣಗಳ ಕೇಂದ್ರಗಳನ್ನು ಪಡೆದಿವೆ. ಮೈಸೂರಿನ ಜೆ.ಎಸ್.ಎಸ್.ನಂತಹ ಶಿಕ್ಷಣ ಸಂಸ್ಥೆಗಳು ಕೆಲವು ವಿಷಯಗಳಲ್ಲಿ ಸ್ನಾತಕೋತ್ತರ ಶಿಕ್ಷಣವನ್ನು ನೀಡುತ್ತಿವೆ. ಚಾಮರಾಜನಗರದಲ್ಲಿ ಈ ಸಂಸ್ಥೆಯ ಸ್ನಾತಕೋತ್ತರ ಕೇಂದ್ರವಿದೆ. ಮಣಿಪಾಲ ಶಿಕ್ಷಣ ಸಂಸ್ಥೆ ಸಂಭಾವ್ಯ (ಡೀಮ್ಡ್) ವಿಶ್ವವಿದ್ಯಾಲಯದ ಸ್ಥಾನಮಾನ ಪಡೆದಿದೆ. ರಾಜ್ಯಾದ್ಯಂತ ಕಾನೂನು ಶಿಕ್ಷಣ ಕಾಲೇಜುಗಳು ಪ್ರಾರಂಭಗೊಂಡಿವೆ.ವೈದ್ಯಕೀಯ, ದಂತವೈದ್ಯ ವಿಜ್ಞಾನ, ಆಯುರ್ವೇದ ಯುನಾನಿ, ಹೋಮಿಯೋಪತಿ, ದಾದಿವೃತ್ತಿ ಶಿಕ್ಷಣ, ಪ್ರಕೃತಿ ಚಿಕಿತ್ಸೆ ಮತ್ತು ಯೋಗ ಶಿಕ್ಷಣ, ಅರಿವಳಿಕೆ ಹಾಗೂ ಔಷಧ ವಿಜ್ಞಾನಶಾಸ್ತ್ರದಲ್ಲಿ ಅನೇಕ ಪದವಿ ಮತ್ತು ಸ್ನಾತಕೋತ್ತರ ಕೇಂದ್ರಗಳು ಸ್ಥಾಪನೆಗೊಂಡಿವೆ. ರಾಜ್ಯದಲ್ಲಿ ಸು.258 ಸಂಸ್ಥೆಗಳು ವಿವಿಧ ಆರೋಗ್ಯ ವಿಜ್ಞಾನ ವಿಷಯಗಳಲ್ಲಿ ಶಿಕ್ಷಣ ನೀಡುತ್ತಿವೆ (2000). ಈ ಸಂಸ್ಥೆಗಳ ಪರೀಕ್ಷೆಗಳ ನಿರ್ವಹಣೆ ಮತ್ತು ಉಸ್ತುವಾರಿಗಾಗಿ ರಾಜೀವಗಾಂಧಿ ವೈದ್ಯಕೀಯ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ (1996). ಹಾಗೆಯೇ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಮುನ್ನೂರಕ್ಕೂ ಹೆಚ್ಚು ಎಂಜಿನಿಯರಿಂಗ್, ತಾಂತ್ರಿಕ ಕಾಲೇಜುಗಳು ಹಾಗೂ ಪಾಲಿಟೆಕ್ನಿಕ್ಗಳನ್ನು ನಿರ್ವಹಿಸಲು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಸ್ಥಾಪಿಸಲಾಗಿದೆ (1999). ಪಶುವೈದ್ಯ ವಿಶ್ವವಿದ್ಯಾಲಯವೂ ಸ್ಥಾಪನೆಗೊಂಡಿದೆ (2004).
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ
ಸಂಪಾದಿಸಿ
ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮೈಸೂರಿನಲ್ಲಿದ್ದು ಇದು ಹಿಂದೆ ಮೈಸೂರು ವಿಶ್ವವಿದ್ಯಾನಿಲಯ ನಡೆಸುತ್ತಿದ್ದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯ ಕಾರ್ಯಭಾರವನ್ನು ವಹಿಸಿಕೊಂಡಿರುವುದಲ್ಲದೆ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸಿಕೊಂಡಿದೆ. ಇತ್ತೀಚೆಗೆ ಬಿಜಾಪುರದಲ್ಲಿ ಮಹಿಳಾ ವಿಶ್ವವಿದ್ಯಾಲಯ ಅಸ್ತಿತ್ವಕ್ಕೆ ಬಂದಿದೆ (2004). ಮೈಸೂರಿನಲ್ಲಿರುವ ಅಖಿಲ ಭಾರತ ವಾಕ್ಶ್ರವಣ ಸಂಸ್ಥೆ, ಮೈಸೂರಿನ ಪ್ರಾದೇಶಿಕ ಕಾಲೇಜು, ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್, ಇನ್ಸ್ಟಿಟ್ಯೂಟ್ ಆಫ್ ಬ್ಯುಸಿನೆಸ್ ಮ್ಯಾನೇಜ್ಮೆಂಟ್, ಇನ್ಸ್ಟಿಟ್ಯೂಟ್ ಫಾರ್ ಸೋಷಿಯಲ್ ಅಂಡ್ ಎಕಾನಾಮಿಕ್ ಚೇಂಜ್ ಮೊದಲಾದವು ವಿಶಿಷ್ಟ ವಿಷಯಗಳಲ್ಲಿ ಸ್ನಾತಕ ಮತ್ತು ಸ್ನಾತಕೋತ್ತರ ಶಿಕ್ಷಣ ನೀಡುತ್ತಿವೆ. ಸಾಫ್ಟ್ವೇರ್ ಮತ್ತು ಮಾಹಿತಿ ತಂತ್ರಜ್ಞಾನದಲ್ಲಿ ಕ್ರಾಂತಿಕಾರಕ ಪ್ರಗತಿಯಾಗಿದ್ದು ಅವುಗಳಲ್ಲಿ ಶಿಕ್ಷಣ ನೀಡಲು ಹಲವಾರು ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳು ಮುಂದಾಗಿವೆ.ರಾಜ್ಯದ ಎಲ್ಲ ವಿಶ್ವವಿದ್ಯಾಲಯಗಳೂ ಜನಸಾಮಾನ್ಯರಲ್ಲಿ ಉನ್ನತ ಶಿಕ್ಷಣದ ಪ್ರಸಾರಕಾರ್ಯ ವನ್ನು ನಿರ್ವಹಿಸುತ್ತಿವೆ. ಪ್ರಚಾರೋಪನ್ಯಾಸ ಮತ್ತು ಪ್ರಕಟಣೆಗಳ ಮೂಲಕ ವಿಶ್ವವಿದ್ಯಾಲಯದ ನಿಯತ ವಿದ್ಯಾರ್ಥಿಗಳು ಪಡೆಯುತ್ತಿರುವ ಜ್ಞಾನಾರ್ಜನೆಯ ಸೌಲಭ್ಯವನ್ನು ರಾಜ್ಯದ ವಿವಿಧ ಭಾಗಗಳಲ್ಲಿರುವ ಜನಸಾಮಾನ್ಯರಿಗೂ ಒದಗುವಂತೆ ಅವಕಾಶ ಕಲ್ಪಿಸಿದೆ. ಅದಕ್ಕಾಗಿ ಒಂದು ಪ್ರತ್ಯೇಕ ವಿಭಾಗವನ್ನೇ ವ್ಯವಸ್ಥೆಗೊಳಿಸಿಕೊಂಡಿವೆ.
ಸಂಶೋಧನೆ
ಸಂಪಾದಿಸಿ
ಎಲ್ಲ ಉನ್ನತ ಶಿಕ್ಷಣ ಸಂಸ್ಥೆಗಳಲ್ಲೂ ಸಂಶೋಧನೆಗೆ ಅವಕಾಶವಿದ್ದರೂ ಅದು ಮುಖ್ಯವಾಗಿ ವಿಶ್ವವಿದ್ಯಾಲಯಗಳ ಸ್ನಾತಕೋತ್ತರ ವಿಭಾಗಗಳಲ್ಲೂ ಸ್ನಾತಕೋತ್ತರ ಕೇಂದ್ರಗಳಲ್ಲೂ ನಡೆಯುತ್ತಿವೆ. ಇವುಗಳ ಜೊತೆಗೆ ಸಂಶೋಧನೆಗೆಂದೇ ಮೀಸಲಾಗಿರುವ ಸಂಸ್ಥೆಗಳೂ ವಿಶಿಷ್ಟ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿವೆ. ಬೆಂಗಳೂರಿನ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ವಿಶಿಷ್ಟ ಕ್ಷೇತ್ರಗಳಲ್ಲಿ ಶಿಕ್ಷಣವೀಯುವುದರ ಜೊತೆಗೆ ಉದ್ಯೋಗ ಮತ್ತು ರಕ್ಷಣೆಯ ಕಾರ್ಯಗಳಿಗೆ ಸಂಬಂಧಿಸಿದ ವಿವಿಧ ಸಮಸ್ಯೆಗಳನ್ನು ಕುರಿತು ಫಲದಾಯಕವಾದ ಸಂಶೋಧನೆ ನಡೆಸುತ್ತಿದೆ. ವಿವಿಧ ಉದ್ಯೋಗಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಡಿಸಿಕೊಡುವುದರಲ್ಲೂ ಇದು ಗಣನೀಯ ಪಾತ್ರ ನಿರ್ವಹಿಸುತ್ತಿದೆ. ಭಾರತೀಯ ಉದ್ಯಮಗಳೂ ರಕ್ಷಣಾಪಡೆಗಳೂ ಈ ಸಂಸ್ಥೆಯಿಂದ ಅನೇಕ ನೂತನ ವಿಧಾನಗಳನ್ನು ಪಡೆದುಕೊಂಡು ಕಾರ್ಯಕ್ಷೇತ್ರದಲ್ಲಿ ಬಳಸಿಕೊಳ್ಳುತ್ತಿವೆ. ಇದರಂತೆ ದಿವಂಗತ ಸರ್.ಸಿ.ವಿ. ರಾಮನ್ ಬೆಂಗಳೂರಿನಲ್ಲಿ ಸ್ಥಾಪಿಸಿರುವ ರಾಮನ್ ಸಂಶೋಧನಾ ಸಂಸ್ಥೆಯೂ ಭೌತಶಾಸ್ತ್ರದ ಸಂಶೋಧನೆಗಳಲ್ಲಿ ನಿರತವಾಗಿದೆ. ಔದ್ಯೋಗಿಕ ಮತ್ತು ವೈಜ್ಞಾನಿಕ ಸಂಶೋಧನ ಮಂಡಳಿಯ ನೇತೃತ್ವದಲ್ಲಿ ಏರ್ಪಟ್ಟಿರುವ ಎರಡು ಸಂಶೋಧನ ಸಂಸ್ಥೆಗಳು ಕರ್ನಾಟಕದಲ್ಲಿವೆ. ಮೈಸೂರಿನ ಕೇಂದ್ರ ಆಹಾರ ಸಂಶೋಧನ ಸಂಸ್ಥೆ ಜನತೆಯ ಹಾಗೂ ಸೈನ್ಯದ ಆಹಾರ ಸಮಸ್ಯೆಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆ ನಡೆಸುತ್ತದೆ. ಇದು ಭಾರತದ ಅನೇಕ ಕಡೆ ತನ್ನ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಸ್ಥಾಪಿಸಿಕೊಂಡಿದೆ. ಆಹಾರ ತಯಾರಿಕೆಗೆ ಸಂಬಂಧಿಸಿದಂತೆ ಇದು ರೂಪಿಸಿದ ಅನೇಕ ವಿಧಾನಗಳು ಆಗಲೇ ವಾಣಿಜ್ಯ ಕ್ಷೇತ್ರದಲ್ಲಿ ಪ್ರಚಾರಕ್ಕೆ ಬಂದಿವೆ. ಬೆಂಗಳೂರಿನ ರಾಷ್ಟ್ರೀಯ ವಾಯುಯಾನ ಸಂಶೋಧನ ಸಂಸ್ಥೆಯೂ ವಿಮಾನಗಳ ವಿನ್ಯಾಸ ಮತ್ತು ಚಲನೆಗೆ ಸಂಬಂಧಿಸಿದಂಥ ಹಲವು ಪ್ರಧಾನ ಸಂಶೋಧನೆಗಳನ್ನು ನಡೆಸಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ