ಶನಿವಾರ, ಮಾರ್ಚ್ 16, 2019

ಉನ್ನತ ಶಿಕ್ಷಣ 3

ಬೆಂಗಳೂರು ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳು
ಸಂಪಾದಿಸಿ

ಬೆಂಗಳೂರು ಮತ್ತು ಧಾರವಾಡದ ಕೃಷಿ ವಿಶ್ವವಿದ್ಯಾಲಯಗಳು ವ್ಯವಸಾಯ ಮತ್ತು ವ್ಯವಸಾಯೋದ್ಯಮಗಳಿಗೆ ಸಂಬಂಧಿಸಿದಂತೆ ಸಂಶೋಧನೆ ನಡೆಸುತ್ತಿವೆ. ಬತ್ತ, ಜೋಳ, ರಾಗಿ, ಹತ್ತಿ ಮುಂತಾದವುಗಳ ನೂತನ ತಳಿಗಳ ನಿರ್ಮಾಣದ ಮೂಲಕ ರಾಜ್ಯದ ವ್ಯವಸಾಯದ ಪ್ರಗತಿಗೆ ಸಹಾಯ ಮಾಡಿವೆ. ಇವು ಹೆಬ್ಬಾಳ, ಮಂಡ್ಯ, ಮೂಡಿಗೆರೆ, ಧಾರವಾಡ, ರಾಯಚೂರು- ಈ ಸ್ಥಳಗಳಲ್ಲಿ ಪ್ರಾದೇಶಿಕ ಸಂಶೋಧನ ಕೇಂದ್ರಗಳನ್ನು ಹೊಂದಿವೆ. ಬೆಂಗಳೂರಿನ ಆಗ್ನೇಯದಲ್ಲಿ ಹೊಸೂರು ರಸ್ತೆಯ ಬಳಿ ಇರುವ ರಾಷ್ಟ್ರೀಯ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸ್ನಾತಕ ಮತ್ತು ಸ್ನಾತಕೋತ್ತರ ತರಗತಿಗಳನ್ನು ನಡೆಸುವುದರ ಜೊತೆಗೆ ಕ್ಷೀರೋದ್ಯಮಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಕುರಿತು ಸಂಶೋಧನೆಗಳನ್ನು ನಡೆಸಲಾಗುತ್ತಿದೆ. ಅದು ಹರಿಯಾಣದ ಕರ್ನಾಲ್ನಲ್ಲಿರುವ ಕ್ಷೀರೋದ್ಯಮ ಸಂಶೋಧನ ಸಂಸ್ಥೆಯ ಅಂಗವಾಗಿ ನಡೆದುಕೊಂಡುಬರುತ್ತಿದೆ.

ಇತಿಹಾಸ
ಸಂಪಾದಿಸಿ

ಪ್ರಾಚೀನ ಕರ್ನಾಟಕದಲ್ಲಿ ಉನ್ನತ ಶಿಕ್ಷಣಕ್ಕೆ ವ್ಯಾಪಕವಾದ ವ್ಯವಸ್ಥೆಯಿತ್ತು. ಪ್ರ.ಶ.ಪು.4ನೆಯ ಶತಮಾನದ ಕೊನೆಯಲ್ಲಿ ಇಲ್ಲಿಗೆ ಆಗಮಿಸಿದ ಚಂದ್ರಗುಪ್ತ ಮೌರ್ಯ ಮತ್ತು ಅವನ ಗುರು ಭದ್ರಬಾಹುವಿನೊಡನೆ ಜೈನಧರ್ಮವೂ ಜೈನಸಂಸ್ಥೆಗಳೂ ಆಗಮಿಸಿದುವು. ನಾಡಿನ ಬೇರೆ ಬೇರೆ ಭಾಗಗಳಲ್ಲಿ ಜೈನಬಸದಿಗಳು ಆರಂಭವಾಗಿ ಮೋಕ್ಷಸಾಧನೆಗೆ ನಂಬಿಕೆ, ಭಕ್ತಿ, ಪೂಜೆ ಪುನಸ್ಕಾರಗಳಂತೆ ಸುಜ್ಞಾನವೂ ಅಗತ್ಯವೆಂದು ಸಾರಿ ಉನ್ನತ ಶಿಕ್ಷಣಕ್ಕೆ ಧಾರ್ಮಿಕ ಮನ್ನಣೆಯನ್ನೂ ಪ್ರೋತ್ಸಾಹವನ್ನೂ ನೀಡಿದುವು. ಅಶೋಕನ ಕಾಲದಲ್ಲಿ ಕರ್ನಾಟಕಕ್ಕೆ ಬೌದ್ಧ ಧರ್ಮದೊಡನೆ ಸಂಘಾರಾಮಗಳೂ ವಿಹಾರಗಳೂ ಆಗಮಿಸಿ ವ್ಯವಸ್ಥಿತ ರೀತಿಯ ಉನ್ನತ ಶಿಕ್ಷಣಕ್ಕೆ ಅವಕಾಶ ಕಲ್ಪಿಸಿದುವು. ಕ್ರಿಸ್ತಶಕದ ಆರಂಭದ ವೇಳೆಗೆ ದೇಶದ ಅನೇಕ ಕಡೆ ಬೌದ್ಧ ಮಠಗಳೂ ವಿಹಾರಗಳೂ ಏರ್ಪಟ್ಟವು. ಪ್ರಪಕ್ತಶಕ ಮೂರನೆಯ ಶತಮಾನದಲ್ಲಿ ಚುಟುಕುಲದ ಶಿವಸ್ಕಂದ ನಾಗಶ್ರೀ ಬನವಾಸಿಯಲ್ಲಿ ಒಂದು ಬೌದ್ಧವಿಹಾರವನ್ನು ಸ್ಥಾಪಿಸಿದ ವಿಷಯ ಅಲ್ಲಿನ ಮಧುಕೇಶ್ವರ ದೇವಾಲಯದ ನಾಗಶಿಲೆಯ ಶಾಸನವೊಂದರಿಂದ ತಿಳಿದುಬರುತ್ತದೆ. ನಮಗೆ ದೊರೆತಿರುವ ಸಾಕ್ಷ್ಯಾಧಾರಗಳ ಪ್ರಕಾರ ಇದು ಕರ್ನಾಟಕದಲ್ಲಿ ಮೊಟ್ಟ ಮೊದಲು ಆರಂಭವಾದ ಉನ್ನತ ಶಿಕ್ಷಣ ಸಂಸ್ಥೆ. ಜೈನ ಬೌದ್ಧ ಧರ್ಮಗಳು ಆರಂಭಿಸಿದ ಧಾರ್ಮಿಕ ಹಾಗೂ ಶೈಕ್ಷಣಿಕ ಸಂಸ್ಥೆಗಳು ಇಲ್ಲಿ ಪೌರಾಣಿಕ ಕಾಲದಿಂದಲೂ ಅಸ್ತಿತ್ವದಲ್ಲಿದ್ದ ಗುರುಕುಲ ಮತ್ತು ಆಶ್ರಮ ಶಿಕ್ಷಣ ಪದ್ಧತಿಗಳ ಮೇಲೆ ಪರಿಣಾಮ ಬೀರಿ ಶಿಕ್ಷಣಕ್ಕೆ ಸಂಘ ಸಂಸ್ಥೆಗಳ ನಿಯಂತ್ರಣ ಆರಂಭವಾಯಿತು. ಅವುಗಳಲ್ಲಿ ಘಟಿಕ ಎಂಬುವು ಅತ್ಯಂತ ಪ್ರಾಚೀನತಮ ಸಂಸ್ಥೆಗಳು. ಕದಂಬ ಮಯೂರಶರ್ಮ ಉನ್ನತ ಶಿಕ್ಷಣದ ಪ್ರೇಮಿಯಾಗಿದ್ದು ಅಂದು ಕಾಂಚೀಪುರದಲ್ಲಿದ್ದ ಘಟಿಕಾಲಯದ ಮಾದರಿಯಲ್ಲಿ ತನ್ನ ರಾಜ್ಯದಲ್ಲೂ ಘಟಿಕಗಳನ್ನು ಸ್ಥಾಪಿಸಿದ್ದ ಎಂದು ಕೆಲವರ ಊಹೆ. ನಾಗಾಯಿ, ಹೆಂಜಾರಪುರ, ಕಾಡಿಯೂರು, ಕುಕ್ಕೂರು, ಮೋರಿಗೆರೆ, ರಾಯಬಾಗ್ ಮುಂತಾದೆಡೆ ಖ್ಯಾತಿಪಡೆದ ಘಟಿಕಾಲಯಗಳು ಬೇರೆ ಬೇರೆ ಕಾಲಗಳಲ್ಲಿ ಅಸ್ತಿತ್ವದಲ್ಲಿದ್ದವು. ಅಲ್ಲಿ ಶಿಕ್ಷಣ ಮುಗಿಸಿದವರಿಗೆ, ಸಮಾರಂಭವೊಂದನ್ನು ನಡೆಸಿ ಘಟಿಕಸಾಹಸ ಎಂಬ ಪ್ರಶಸ್ತಿ ನೀಡುತ್ತಿದ್ದರು. ಘಟಿಕಗಳಂತೆ ಅಗ್ರಹಾರಗಳೂ ಬ್ರಹ್ಮಪುರಿಗಳೂ ನಾಡಿನ ಬೇರೆ ಬೇರೆ ಭಾಗಗಳಲ್ಲಿ ಅಸ್ತಿತ್ವದಲ್ಲಿದ್ದವು. ಅವು ಬ್ರಾಹ್ಮಣಪಂಡಿತರ ವಸತಿಗಳಾಗಿದ್ದು ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣವನ್ನು ಒದಗಿಸುತ್ತಿದ್ದವು. ತಾಳಗುಂದ, ಬಾದಾಮಿ, ಉಮ್ಮಚಿಗೆ, ದೇಗಾಂವಿ, ಕಾಡಿಯೂರು, ಸರ್ವಜ್ಞಪುರ ಮುಂತಾದ ಅಗ್ರಹಾರಗಳೂ ಬಳ್ಳಿಗಾವೆ, ತಲಕಾಡು, ವಿಕ್ರಮಪುರ ಮುಂತಾದ ಬ್ರಹ್ಮಪುರಿಗಳೂ ಉನ್ನತ ಶಿಕ್ಷಣದ ಪ್ರಸಿದ್ಧ ಕೇಂದ್ರಗಳಾಗಿದ್ದುವು.

ಬೌದ್ಧವಿಹಾರಗಳ ಮಾದರಿ
ಸಂಪಾದಿಸಿ
10ನೆಯ ಶತಮಾನದ ವೇಳೆಗೆ ಬೌದ್ಧವಿಹಾರಗಳ ಮಾದರಿಯಲ್ಲಿ ವ್ಯವಸ್ಥೆಗೊಂಡ ಹಿಂದು ಮಠಗಳು ವೈವಿಧ್ಯಮಯವೆನ್ನಬಹುದಾದ ರೀತಿಯಲ್ಲಿ ಉನ್ನತ ಶಿಕ್ಷಣ ಕೊಡುತ್ತಿದ್ದುವು. ಕೋಡಿಮಠ, ನಾಗಾಯಿಮಠ, ಊರೂರಿಗೂ ವ್ಯಾಪಿಸಿದ್ದ ವೀರಶೈವ ಮಠಗಳು ಇವೆಲ್ಲ ಉನ್ನತ ಶಿಕ್ಷಣವನ್ನು ಪ್ರಸಾರ ಮಾಡುತ್ತಿದ್ದವು. 10ನೆಯ ಶತಮಾನದ ಸುಮಾರಿಗೆ ಕರ್ನಾಟಕದ ಬೇರೆ ಬೇರೆ ಭಾಗಗಳಲ್ಲಿ ದೇವಾಲಯದ ವಿದ್ಯಾಪೀಠಗಳು ಅನೇಕ ಸ್ಥಳಗಳಲ್ಲಿ ಅಸ್ತಿತ್ವಕ್ಕೆ ಬಂದುವು. ಅದುತನಕ ಸಂಸ್ಕೃತ ಉನ್ನತ ಶಿಕ್ಷಣದಲ್ಲಿ ಬೋಧನ ಮಾಧ್ಯಮವಾಗಿತ್ತು. ಈಗ ಕನ್ನಡವೂ ಆ ಕಾರ್ಯಕ್ಕೆ ಬಳಕೆಯಾಗುವುದು ಆರಂಭವಾಯಿತು. ಆ ಸುಮಾರಿಗೆ ಕನ್ನಡದಲ್ಲಿ ಸಾಹಿತ್ಯಿಕ, ಶಾಸ್ತ್ರೀಯ ಮತ್ತು ಇತರ ಗ್ರಂಥಗಳೂ ರಚನೆಯಾಗಿ ಅವುಗಳ ಅಧ್ಯಯನವೂ ನಡೆಯುತ್ತಿತ್ತು. ಸಾಲೊಟಿಗೆ, ಹರಿಹರದ ಹರಿಹರೇಶ್ವರ ದೇವಾಲಯ, ತಾಳಗುಂದದ ಪ್ರಣವೇಶ್ವರ ದೇವಾಲಯ, ಮನಗೋಳಿಯ ವ್ಯಾಕರಣ ವಿದ್ಯಾಪೀಠ, ಹೆಬ್ಬಾಳಿನ ಬುಜವ್ವೇಶ್ವರ ದೇವಾಲಯ, ಜಟಿಂಗ ರಾಮೇಶ್ವರದ ವಿದ್ಯಾಪೀಠ, ಬಿಜಾಪುರದ ಮೀಮಾಂಸೆ ವಿದ್ಯಾಪೀಠ, ಕೂಡಲ ಸಂಗಮದೇವಾಲಯದ ವಿದ್ಯಾಪೀಠ-ಇವೆಲ್ಲ ಪ್ರಸಿದ್ಧ ಉನ್ನತ ಶಿಕ್ಷಣ ಕೇಂದ್ರಗಳಾಗಿದ್ದವು. ಸಾಮಾನ್ಯವಾಗಿ ಪಠ್ಯಕ್ರಮದಲ್ಲಿ ವ್ಯಾಕರಣ, ಪುರಾಣ, ವೇದ, ಆಗಮ, ಕಾವ್ಯ, ನಾಟಕ ಮುಂತಾದುವು ಸೇರಿದ್ದುವು. ಆದರೆ ಒಂದೊಂದು ಕೇಂದ್ರವೂ ತನ್ನದೇ ಆದ ವಿಶೇಷ ವಿಷಯದಲ್ಲಿ ಶಿಕ್ಷಣವೀಯಲು ಹೆಸರಾಗಿತ್ತು. ಕೋಡಿಮಠದಲ್ಲಿ ಷಡ್ದರ್ಶನಗಳೂ ಕುಪ್ಪತ್ತೂರು ಮಠದಲ್ಲಿ ವಾತ್ಸಾಯನನ ಕಾಮಸೂತ್ರವೂ ವಿಶಿಷ್ಟ ಅಧ್ಯಯನ ವಿಷಯಗಳಾಗಿದ್ದುವು. ಸರ್ವಜ್ಞಪುರ ಭಾಷಾಶಾಸ್ತ್ರದಲ್ಲೂ ಉಮ್ಮಚಿಗೆ ವ್ಯಾಕರಣ, bsÀಂದಸ್ಸು, ಕಾವ್ಯರಚನೆ-ಇವುಗಳಲ್ಲೂ ವಿಶೇಷ ಶಿಕ್ಷಣ ನೀಡುತ್ತಿದ್ದುವು. ನಾಗಾಯಿಮಠ ಮನುಧರ್ಮಶಾಸ್ತ್ರ, ಶುಕ್ರಶಾಸ್ತ್ರ ಮತ್ತು ವ್ಯಾಸಕೃತಿಗಳ ಬೋಧನೆಗೆ ಹೆಸರು ಗಳಿಸಿತ್ತು.

ಮುಸಲ್ಮಾನರ ದಾಳಿ
ಸಂಪಾದಿಸಿ
12-13ನೆಯ ಶತಮಾನಗಳಲ್ಲಿ ಆರಂಭವಾದ ಮುಸಲ್ಮಾನರ ದಾಳಿಯಿಂದ ಭಾರತದ ಇತರೆಡೆಗಳಂತೆ ಕರ್ನಾಟಕದಲ್ಲೂ ಉನ್ನತ ಶಿಕ್ಷಣಕ್ಕೆ ಧಕ್ಕೆಯೊದಗಿತು. ಅವರ ದಾಳಿಗೆ ಸಿಕ್ಕಿದ ದೇವಾಲಯದ ವಿದ್ಯಾಪೀಠಗಳು ಮುಚ್ಚಿಹೋದವು. ಅಗ್ರಹಾರ, ಬ್ರಹ್ಮಪುರಿ ಮುಂತಾದ ಇತರ ಉನ್ನತ ವಿದ್ಯಾವಸತಿಗಳು ಹಿಂದಿನ ಪ್ರೋತ್ಸಾಹವಿಲ್ಲದೆ ಹಿಂಬದಿಗೆ ಬಿದ್ದುವು. ನಾಡಿನ ಎಲ್ಲೊ ಕೆಲವೆಡೆ  ದಾಳಿಗೆ ಸಿಕ್ಕದೆ ಉಳಿದುಕೊಂಡಿದ್ದ ಹಲವು ಮಠಗಳು ತಮ್ಮ ವಿದ್ಯಾಪ್ರಸಾರವನ್ನು ಹಾಗೂ ಹೀಗೂ ಕೆಲಕಾಲ ಮುಂದುವರೆಸಿದುವು. ವಿಜಯನಗರ ಸ್ಥಾಪನೆಯಾದ ಮೇಲೆ ಮುಖ್ಯನಗರಗಳಲ್ಲಿ ಮತ್ತೆ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹವೇನೋ ದೊರೆಯಿತು. ಆದರೆ ಅದರ ಪತನಾನಂತರ ಸಣ್ಣಪುಟ್ಟ ಪಾಳೆಯಪಟ್ಟುಗಳು ಏರ್ಪಟ್ಟು ನಾಡು ನಿತ್ಯಕದನಗಳ ಬೀಡಾಗಿ ವ್ಯವಸ್ಥಿತ ರೀತಿಯಲ್ಲಿ ಶಿಕ್ಷಣ ಪ್ರಸಾರ ಇಲ್ಲವಾಯಿತು. ಮುಸಲ್ಮಾನರು ಆಕ್ರಮಿಸಿದ ಪ್ರದೇಶಗಳಲ್ಲಿ ತಮ್ಮವರಿಗಾಗಿ ಮದ್ರಾಸಗಳೆಂಬ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಆರಂಭಿಸಿದರು. ಹದಿನಾಲ್ಕನೆಯ ಶತಮಾನದ ಮಧ್ಯಭಾಗದ ವೇಳೆಗೆ ಉತ್ತರ ಕರ್ನಾಟಕದಲ್ಲಿ ಅವು ಅಸ್ತಿತ್ವಕ್ಕೆ ಬಂದುವು. ಮಸೀದಿಗಳ ಅಂಗವಾಗಿ ಏರ್ಪಟ್ಟಿದ್ದ ಆ ಸಂಸ್ಥೆಗಳಲ್ಲಿ ಮುಸ್ಲಿಂ ಧರ್ಮಗ್ರಂಥಗಳನ್ನು ಬೋಧಿಸುತ್ತಿದ್ದರು. ಹೊನ್ನಾವರ ಪ್ರದೇಶದಲ್ಲಿದ್ದ ಕೆಲವು ಸಂಸ್ಥೆಗಳನ್ನು ಅಲ್ಲಿ ಸಂಚರಿಸುತ್ತಿದ್ದ ಇಬ್ನ ಬತೂತ ಕೊಂಡಾಡಿರುವನು. ಬಹಮನೀ ಅರಸರು ಉನ್ನತ ಶಿಕ್ಷಣದ ಪ್ರಚಾರದಲ್ಲಿ ತುಂಬ ಆಸಕ್ತಿ ವಹಿಸಿದ್ದರು. ಗುಲ್ಬರ್ಗಾ, ಬಿದರ್ ಮುಂತಾದೆಡೆ ಸ್ಥಾಪಿಸಿದ್ದ ಸಂಸ್ಥೆಗಳು ಪ್ರಸಿದ್ಧಿ ಪಡೆದಿದ್ದುವು. 15ನೆಯ ಶತಮಾನದ ಕೊನೆಯಲ್ಲಿ ಆ ರಾಜ್ಯದ ಮಂತ್ರಿಯಾಗಿದ್ದ ಮಹಮ್ಮದ್ ಗವಾನ್ ಬಿದರೆಯಲ್ಲಿ ವಿದ್ಯಾಲಯ ವೊಂದನ್ನು ಕಟ್ಟಿಸಿ ಧರ್ಮಶಾಸ್ತ್ರಗಳ ಜೊತೆಗೆ ಲೌಕಿಕ ವಿದ್ಯೆಗಳ ಬೋಧನೆಗೂ ವ್ಯವಸ್ಥೆಗೊಳಿಸಿದ. ಅಲ್ಲಿನ ಗ್ರಂಥಾಲಯಕ್ಕೆ ದೇಶವಿದೇಶಗಳಿಂದ ಅಮೂಲ್ಯ ಕೃತಿಗಳನ್ನು ತರಿಸಿ ಒದಗಿಸಿದ್ದ. ಅನಂತರ ಅಧಿಕಾರಕ್ಕೆ ಬಂದ ಆದಿಲ್ ಷಾಹೀ ಅರಸರು ಬಿಜಾಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಪ್ರಾಥಮಿಕ ಸಾರ್ವತ್ರಿಕ ಶಿಕ್ಷಣಕ್ಕಾಗಿ ಮಕ್ತಾಬ್ಗಳೆಂದು ಶಾಲೆಗಳನ್ನು ಆರಂಭಿಸಿ ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ಬರುವ ಅವಕಾಶ ಕಲ್ಪಿಸಿದರು. ಅರಬ್ಬೀ ಮತ್ತು ಪಾರಸೀ ಭಾಷೆಗಳ ವ್ಯಾಸಂಗಕ್ಕೂ ಶಿಲ್ಪ, ವೈದ್ಯ ಮುಂತಾದ ವೃತ್ತಿಶಿಕ್ಷಣಕ್ಕೂ ಪ್ರೋತ್ಸಾಹವಿತ್ತರು. ಕರ್ನಾಟಕದಲ್ಲಿ ಮುಸಲ್ಮಾನ ಆಳರಸರು ತಮ್ಮ ಮತದವರ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದರೂ ದೇಶೀಯ ಶಿಕ್ಷಣದ ಪುನರುಜ್ಜೀವನದ ಕಡೆಗೆ ಆಸಕ್ತಿ ತೋರಲಿಲ್ಲ. ಅಲ್ಲದೆ, ರಾಜಾಸ್ಥಾನದಲ್ಲಿ ಪುರಸ್ಕಾರವಿಲ್ಲದೆ ಜನತೆಗೂ ಅದರಲ್ಲಿ ಆಸಕ್ತಿ ತಪ್ಪಿತ್ತು. ಮೈಸೂರಿನ ಒಡೆಯರ ಕಾಲದಲ್ಲಿ ಅವರ ಆಡಳಿತ ಕ್ಷೇತ್ರದಲ್ಲೂ ರಾಜಧಾನಿಯಲ್ಲೂ ಸಂಗೀತ, ಶಾಸ್ತ್ರ, ಸಾಹಿತ್ಯ ಮುಂತಾದವಕ್ಕೆ ಪ್ರೋತ್ಸಾಹವನ್ನು ನೀಡಿದ್ದರು. 18ನೆಯ ಶತಮಾನದ ಆಡಳಿತ ಹೈದರ್ ಮತ್ತು ಅನಂತರ ಅವನ ಮಗ ಟಿಪ್ಪುವಿನ ಕೈಸೇರಿದಾಗ ಆ ಪ್ರೋತ್ಸಾಹ ಇಲ್ಲವಾಯಿತು. ಒಟ್ಟಿನಲ್ಲಿ ಸುಮಾರು ಎರಡು ಸಹಸ್ರ ವರ್ಷಗಳಿಂದ ಬೆಳೆದು ಬಂದಿದ್ದ ಉನ್ನತ ಶಿಕ್ಷಣದ ದೇಶೀಯ ಸಂಪ್ರದಾಯ ಕ್ರಮಕ್ರಮವಾಗಿ ಕುಂದುತ್ತ ಬಂದು ಮುಂದೆ ತಲೆಯೆತ್ತಲು ಅವಕಾಶವಿಲ್ಲವಾಯಿತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ