ಭಾನುವಾರ, ಮಾರ್ಚ್ 17, 2019

ಉನ್ನತ ಶಿಕ್ಷಣದ ನಿರ್ವಹಣೆ

[3/16, 4:41 PM] manjunathakmchiru: ಉನ್ನತ ಶಿಕ್ಷಣದ ನಿರ್ವಹಣೆ 

ಭಾರತದಲ್ಲಿ ಇಂದು ಸಾವಿರಾರು ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ಅವೈಜ್ಞಾನಿಕ ನಿರ್ವಹಣೆಯಿಂದ ಅವುಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ. ಸ್ವಾತಂತ್ರ್ಯ ಪೂರ್ವ ನಿರ್ವಹಣ ವ್ಯವಸ್ಥೆಯನ್ನೇ ಅವುಗಳು ನೆಚ್ಚಿಕೊಂಡಿವೆ.

ಸಮಾಜದ ಬೇಡಿಕೆ ಸ್ವರೂಪ ಬದಲಾದಂತೆ ಇವುಗಳು ಸಹ ಬದಲಾಗಬೇಕಾದ ಅವಶ್ಯಕತೆ ಇದೆ. ಡಬ್ಲ್ಯು.ಟಿ.ಓ. ಒಪ್ಪಂದದ ನಂತರ ಭಾರತದ ಪ್ರತಿಭೆಗಳಿಗೆ ವಿಶ್ವದಾದ್ಯಂತ ಅತ್ಯುನ್ನತ ಮನ್ನಣೆ ದೊರಕುತ್ತಿದೆ. ಅಷ್ಟೇ ಮಟ್ಟದಲ್ಲಿ ಉನ್ನತ ಶಿಕ್ಷಣದಲ್ಲಿ ವಿಶ್ವದಾದ್ಯಂತ ಸ್ಪರ್ಧಾತ್ಮಕತೆ ಸಹ ಹೆಚ್ಚಾಗುತ್ತಿದೆ.

ಆದುದರಿಂದ ಭಾರತ ಸಹ ತನ್ನ ಮಾನವ ಸಂಪನ್ಮೂಲವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪುನರ್‌ರೂಪಿಸಬೇಕಾಗಿದೆ. ಭಾರತ ಮಾದರಿಯ ಉನ್ನತ ಶಿಕ್ಷಣವನ್ನು ವಿದೇಶಗಳಿಗೆ ರಫ್ತು ಮಾಡಬೇಕಾಗಿದೆ. ದೇಶದಲ್ಲಿ ಲಭ್ಯವಿರುವ ವಿ.ವಿಗಳು ಸಂಶೋಧನಾ ವ್ಯವಸ್ಥೆಯನ್ನು ಪುನರ್‌ರೂಪಿಸಬೇಕಾಗಿದೆ.

ಸಾರ್ವಜನಿಕ - ಖಾಸಗಿ ತತ್ವವನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಇದರಿಂದ ವಿಶೇಷ ವಿವಿಗಳು, ಖಾಸಗಿ ವಿವಿಗಳು, ಸ್ವಾಯತ್ತ ವಿವಿಗಳಿಂದ ಸಹ ಉನ್ನತ ಶಿಕ್ಷಣ ಕ್ಷೇತ್ರ ವಿಸ್ತಾರಗೊಳ್ಳುವ ಸಾಧ್ಯತೆ ಇರುತ್ತದೆ.

ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಿ ನಿಧಿಯ ಶೇಕಡಾ 2ರಷ್ಟನ್ನು ಇದಕ್ಕೆ ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸರ್ಕಾರದ ತೀರ್ಮಾನ ಈ ನಿಟ್ಟಿನಲ್ಲಿ ತುಂಬಾ ಸಹಕಾರಿಯಾಗಿದೆ. ಇದರ ಮೂಲಕ ದೇಶದ ಅಸಂಖ್ಯಾತ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ದೊರಕಲು ನೆರವಾಗುತ್ತದೆ.

ದೇಶದ ಸಂಪನ್ಮೂಲ ಬಳಸಿ ಉನ್ನತ ಸ್ಥಾನ ಪಡೆದ  ಪ್ರತಿಭೆಗಳಿಂದ ವಿಶೇಷ ತೆರಿಗೆ ಸಂಗ್ರಹಿಸುವ ಯೋಜನೆಯ ಸಾಧಕ - ಬಾಧಕಗಳ ಬಗ್ಗೆ ಚಿಂತಿಸಬೇಕಾಗಿದೆ. ದೇಶದ ಕೈಗಾರಿಕಾ ರಂಗ ಸಹ ಉನ್ನತ ಶಿಕ್ಷಣದ ಗುಣಾತ್ಮಕತೆಗೆ ಕೈಜೋಡಿಸುವ ಅಗತ್ಯ ಇದೆ.

ನಿರ್ದಿಷ್ಟ ವಿಶೇಷತೆ ಹೊಂದಿರುವ ಉನ್ನತ ಸಂಶೋಧನೆ ಸಂಸ್ಥೆಗಳನ್ನು  ಸಾಧಿಸುವತ್ತ ಕೈಗಾರಿಕಾ ರಂಗಕ್ಕೆ ಉತ್ತೇಜನ ನೀಡಬೇಕಾಗಿದೆ. ಖಾಸಗಿ ರಂಗಕ್ಕೆ ಆಸಕ್ತಿ ಇಲ್ಲದಿರುವ ಕ್ಷೇತ್ರಗಳಲ್ಲಿ ಸರ್ಕಾರ ಬಂಡವಾಳ ಹೂಡಲೇಬೇಕು. ಸಮತೋಲಿತ ಪ್ರತಿಭಾ ಬೆಳವಣಿಗೆಗೆ ಇದು ತೀರಾ ಅವಶ್ಯ.

ಹೊಸ ವಿವಿಗಳ ಆರಂಭಕ್ಕಿಂತ ಈಗಾಗಲೇ ಇರುವ ವಿವಿಗಳಿಗೆ ಸಾಕಷ್ಟು ಧನ ಸಹಾಯದ ಅಗತ್ಯ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರುವ ಪಿಎಚ್.ಡಿ. ಪದವಿಗಳು ಗುಣಾತ್ಮಕತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
[3/16, 4:42 PM] manjunathakmchiru: ಸಾರ್ವಜನಿಕ- ಖಾಸಗಿ ಸಹಭಾಗಿತ್ವ, ಉನ್ನತ ಶಿಕ್ಷಣದ ವೈಜ್ಞಾನಿಕ ನಿರ್ವಹಣೆ, ಉನ್ನತ ಶಿಕ್ಷಣದ ಲಭ್ಯತೆ ಮತ್ತು ಸಮಾನತೆ, ಉನ್ನತ ಶಿಕ್ಷಣದ ರಫ್ತು ಮತ್ತು ಸುಸ್ಥಿರ ಉನ್ನತ ಶಿಕ್ಷಣ ಗುಣಾತ್ಮಕತೆಗೆ ನೀತಿ ನಿಯಮಗಳ ನಿರೂಪಣೆ - ಈ ಎಲ್ಲಾ ವಿಷಯಗಳಿಗೂ ಸರ್ಕಾರ ತ್ವರಿತ ಗಮನ ಮತ್ತು ಆದ್ಯತೆ ನೀಡಬೇಕಾಗುತ್ತದೆ.

ನಿರ್ಣಾಯಕ ಯೋಜನೆ ಮತ್ತು ನೀತಿ ನಿರೂಪಣೆಯನ್ನು ನಿರ್ಧರಿಸಲು ಪ್ರತಿಯೊಂದು ಉನ್ನತ ಶಿಕ್ಷಣ ಸಂಸ್ಥೆಯು ಪ್ರತ್ಯೇಕ ವ್ಯವಸ್ಥೆಯನ್ನು ಹೊಂದಿರಬೇಕು. ಐ.ಎ.ಎಸ್. ಮಾದರಿಯಲ್ಲಿ ಭಾರತ ಉನ್ನತ ಶಿಕ್ಷಣ ಸೇವೆಯನ್ನು ಆರಂಭಿಸಲು ಚಿಂತಿಸಬೇಕು.

ಅಭಿವೃದ್ಧಿಯ ವೇಗಕ್ಕೆ ಹೊಂದುವಂತೆ ಹೊಸ ಮಾನವ ಸಂಪನ್ಮೂಲ ಅಭಿವೃದ್ಧಿ ನೀತಿಯ ಅವಶ್ಯಕತೆ ಇದೆ. ಇದರಿಂದ ನಿರಂತರವಾಗಿ ಹೊಸ ಪ್ರತಿಭೆಗಳು  ಐಚ್ಛಿಕ ವೃತ್ತಿಯನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಉತ್ತಮ ಸಾಧನೆ ತೋರುವ ಶೈಕ್ಷಣಿಕ ಸಂಸ್ಥೆಗಳಿಗೆ ತ್ವರಿತವಾಗಿ ಸ್ವಾಯತ್ತತೆ ನೀಡಬೇಕಾಗುತ್ತದೆ.

ವಿ.ವಿಗಳಿಗೆ ಹೊಸ ರೀತಿಯ ಹಣಕಾಸಿನ ನಿರ್ವಹಣಾ ಯೋಜನೆಯನ್ನು ರೂಪಿಸಬೇಕಿದೆ. ವಿ.ವಿಗಳಲ್ಲಿನ ವಿವಿಧ ಶೈಕ್ಷಣಿಕ, ಆಡಳಿತ, ಹಣಕಾಸು ಮಂಡಳಿಗಳಲ್ಲಿ ಅತ್ಯುನ್ನತ ಪಾರದರ್ಶಕತೆಯ ಅವಶ್ಯಕತೆ ಇದೆ.

ವಿಶ್ವವಿದ್ಯಾಲಯಗಳಿಗೆ ರಾಜಕೀಯ ಪ್ರವೇಶಿಸುವುದನ್ನು ಸಂಪೂರ್ಣವಾಗಿ ನಿಷೇಧಿಸಬೇಕು. ಗ್ರಾಮೀಣ, ನಗರ ಮತ್ತು ಲಿಂಗ ಭೇದದ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಉನ್ನತ ಶಿಕ್ಷಣದ ನೀತಿ ನಿಯಮಾವಳಿಗಳನ್ನು ರೂಪಿಸಬೇಕು.

ಬೇರೆ ಇಲಾಖೆಗೆ ಸೇರಿದ ಅಧಿಕಾರಿಗಳನ್ನು ಕುಲಪತಿ ಅಥವಾ ಕುಲಸಚಿವರನ್ನಾಗಿ ನೇಮಿಸುವುದು ತೀರಾ ಅವೈಜ್ಞಾನಿಕ. ದೇಶಿ ಮಾದರಿಯ ಸಂಶೋಧನೆ ಮತ್ತು ಬೋಧನೆಗಳಿಗೆ ಒತ್ತು ನೀಡಬೇಕು. ರಾಜ್ಯ ಸರ್ಕಾರಗಳು ತನ್ನ ವಿ.ವಿಗಳಿಗೆ  ಸಾಕಷ್ಟು ಹಣಕಾಸು ನೆರವು ನೀಡಬೇಕು.

ಜೊತೆಗೆ ವಿ.ವಿಗಳು ಸಾಧ್ಯವಾದಷ್ಟು ತಮ್ಮ ಆದಾಯದ ಮೂಲವನ್ನು ತಾವೇ ಕಂಡುಕೊಳ್ಳಲು ಪ್ರಯತ್ನಿಸಬೇಕು. ಆಡಳಿತಾತ್ಮಕ ವೆಚ್ಚವನ್ನು ಸಾಧ್ಯವಾದಷ್ಟು ತಗ್ಗಿಸಬೇಕು. ರಾಷ್ಟ್ರದಾದ್ಯಂತ ಒಂದೇ ರೀತಿಯ ಪಠ್ಯಕ್ರಮ, ಶೈಕ್ಷಣಿಕ ವೇಳಾಪಟ್ಟಿ ಮತ್ತು ಮೌಲ್ಯಮಾಪನ ವ್ಯವಸ್ಥೆಯನ್ನು ಸಾಧ್ಯವಾದಷ್ಟು ಅನುಸರಿಸಬೇಕು.

ಶಿಕ್ಷಕರು ಸಹ ಸಾಧ್ಯವಾದಷ್ಟು ತಮ್ಮ ಜ್ಞಾನವನ್ನು ಉತ್ತಮೀಕರಿಸಿಕೊಳ್ಳಬೇಕು. ಹೆಸರುವಾಸಿ ವಿದೇಶಿ ವಿ.ವಿಗಳೊಂದಿಗೆ ಶೈಕ್ಷಣಿಕ ಒಪ್ಪಂದಗಳು ತೀರಾ ಅವಶ್ಯಕ. ಆನ್‌ಲೈನ್ ಶಿಕ್ಷಣ ನೀಡುವುದರ ಬಗ್ಗೆ ವಿ.ವಿಗಳು ಮತ್ತು ಇತರೆ ಉನ್ನತ ಶಿಕ್ಷಣ ಸಂಸ್ಥೆಗಳು ಯೋಚಿಸಬೇಕು.                      ಒಂದು ವಿವಿ ಅಥವಾ ಸಂಸ್ಥೆಯಿಂದ ಮತ್ತೊಂದು ವಿ.ವಿ. ಅಥವಾ ಸಂಸ್ಥೆ ಶಿಕ್ಷಕರನ್ನು ನಿಯೋಜನೆ ಮೇಲೆ ಕಳಿಸುವ ವ್ಯವಸ್ಥೆಯನ್ನು ತರಬೇಕಿದೆ. ತಮ್ಮ ಸಂಶೋಧನೆ ಮತ್ತು ಇತರೆ ಚಟುವಟಿಕೆಗಳನ್ನು ಸಮಾಜಕ್ಕೆ ತಿಳಿಸಲು ಪ್ರತಿ ಉನ್ನತ ಶಿಕ್ಷಣ ಸಂಸ್ಥೆಯು ಪ್ರಸಾರಾಂಗ ವ್ಯವಸ್ಥೆಯನ್ನು ಹೊಂದಿರಬೇಕು.

ಸಾಧ್ಯವಾದಷ್ಟು ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಾಯೋಜಿತ ಯೋಜನೆಗಳು ಮತ್ತು ಪೇಟೆಂಟ್‌ಗಳನ್ನು ಪಡೆಯಲು ಯತ್ನಿಸಬೇಕು. ಪ್ರತಿ ಸಂಸ್ಥೆಗಳು ಸುಧಾರಿತ ತಂತ್ರಜ್ಞಾನವನ್ನು ಬಳಸಬೇಕು. ದೂರಶಿಕ್ಷಣ ವ್ಯವಸ್ಥೆಗೆ ಪ್ರತ್ಯೇಕ ಕಾಯಕಲ್ಪದ ಅಗತ್ಯವಿದೆ.

ಅತಿಥಿ, ಗುತ್ತಿಗೆ ಮತ್ತು ಖಾಸಗಿ ವಿ.ವಿಗಳಲ್ಲಿನ  ಶಿಕ್ಷಕರ ವೇತನ ಮತ್ತು ಇತರೆ ಸೌಲಭ್ಯಗಳ ಬಗ್ಗೆ ತೀವ್ರ ಮತ್ತು ತ್ವರಿತ ಸುಧಾರಣೆಯ ಅಗತ್ಯವಿದೆ. ಸಾಧ್ಯವಾದಷ್ಟು ಸ್ಥಳೀಯ ಅವಶ್ಯಕತೆ ಮತ್ತು ಮಾರುಕಟ್ಟೆ ಬೇಡಿಕೆ ಆಧಾರಿತ ಕೋರ್ಸ್‌ಗಳನ್ನು ಉನ್ನತ ಶಿಕ್ಷಣ ಸಂಸ್ಥೆಗಳು ಹಮ್ಮಿಕೊಳ್ಳಬೇಕು.

ಗುಣಾತ್ಮಕತೆಯ ಭರವಸೆ

ಅಂತರರಾಷ್ಟ್ರೀಯ ಮಟ್ಟದಲ್ಲಿ ಭಾರತದ ಉನ್ನತ ಶಿಕ್ಷಣ ವ್ಯವಸ್ಥೆ ಸೆಣಸಬೇಕಾದರೆ ನಾವು ಅತ್ಯುನ್ನತ ಮಟ್ಟದ ಗುಣಾತ್ಮಕತೆಗೆ ಗಮನ ನೀಡಬೇಕಿದೆ. ಸಮಂಜಸವಾದ ಮೌಲ್ಯಮಾಪನ ಮತ್ತು ಅಕ್ರಿಡೇಷನ್ ವ್ಯವಸ್ಥೆಯನ್ನು ಪುನರ್‌ರೂಪಿಸಬೇಕಿದೆ.

ಇಂದು ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಜ್ಞಾನದ ನಿರ್ವಹಣೆ ಎಂದು ಪರಿಗಣಿಸಬೇಕಿದೆ. ಕ್ರೋಢೀಕೃತ ವಿಧಾನ, ಬಹುಶಾಸ್ತ್ರೀಯ ಪಠ್ಯಕ್ರಮ ಮತ್ತು ಖಾಸಗಿ ಕ್ಷೇತ್ರಗಳೊಂದಿಗೆ ಸಂಪರ್ಕ ಜಾಲವನ್ನು ಬೆಳೆಸುವುದರ ಬಗ್ಗೆ ಉನ್ನತ ಶಿಕ್ಷಣ ಸಂಸ್ಥೆಗಳು ಚಿಂತಿಸಬೇಕಾಗಿದೆ.

ವಿಶ್ವವಿದ್ಯಾಲಯಗಳು ಜ್ಞಾನಾಧಾರಿತ ಕೇಂದ್ರಗಳಾಗಬೇಕಿದೆ. ದೇಶಿ ತಂತ್ರಜ್ಞಾನಕ್ಕೆ ಮಹತ್ವ ನೀಡಬೇಕಾಗಿದೆ. ಜ್ಞಾನ ಮತ್ತು ಕೌಶಲ ಎರಡನ್ನೂ ಒಟ್ಟಿಗೆ ನೀಡುವ ಅರ್ಥಪೂರ್ಣ ಪಠ್ಯಕ್ರಮದ ಅಗತ್ಯತೆ ಇದೆ.

` ನ್ಯಾಕ್~ ಕಮಿಟಿಯನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿದರೆ ಉನ್ನತ ಶಿಕ್ಷಣ ವ್ಯವಸ್ಥೆ ಕ್ರಮೇಣ ಸುಧಾರಣೆ ಕಾಣುವ ಸಾಧ್ಯತೆ ಹೆಚ್ಚು. ಬಹುಶಾಸ್ತ್ರೀಯ, ಅಂತರ್‌ಶಿಸ್ತಿನ ವಿಷಯಗಳಲ್ಲಿನ ಸಂಶೋಧನೆಗಳಿಗೆ ಹೆಚ್ಚಿನ ಉತ್ತೇಜನ ಬೇಕಿದೆ.

ಮುಖ್ಯವಾಗಿ ಸಮಾಜವಿಜ್ಞಾನ ಕಲಿಕೆ, ಬೋಧನೆ ಮತ್ತು ಸಂಶೋಧನೆಯ ವಿಧಾನವನ್ನು ಸಂಪೂರ್ಣವಾಗಿ ಪುನರ್ ರೂಪಿಸಬೇಕಾಗಿದೆ. ಕೇವಲ ಸಾಮರ್ಥ್ಯ ಮತ್ತು ಸಾಧನೆಯ ಆಧಾರದ ಮೇಲೆ ಬಡ್ತಿ ನೀಡಬೇಕಾಗಿದೆ. ಬಡ್ತಿ ನೀಡುವಿಕೆಯಲ್ಲಿ ಹೆಚ್ಚಿನ ಪಾರದರ್ಶಕತೆಯ ಅಗತ್ಯವಿದೆ.

ಉನ್ನತ ಶಿಕ್ಷಣದ ಸವಾಲುಗಳು 1

ಉನ್ನತ ಶಿಕ್ಷಣ’ ಇತ್ತೀಚೆಗೆ ಹೆಚ್ಚು ಹೆಚ್ಚು ಚರ್ಚಿತವಾಗುತ್ತಿರುವ ವಿಚಾರ. ಯುಜಿಸಿಯಂತಹ ಸಂಸ್ಠೆಗಳ ಪಾತ್ರದ ಬಗ್ಗೆ, ಉನ್ನತ ಶಿಕ್ಷಣದ ಮಾನದಂಡಗಳು, ಉಪನ್ಯಾಸಕರುಗಳಿಗೆ ಕೊಡುವ ವೇತನ ಸಹಿತ ಆಮೂಲಾಗ್ರವಾಗಿ ಪರಿಶೀಲನೆಗೊಳ್ಳುತ್ತಿರುವ ಕಾಲ ಇದು. ಹೆಚ್ಚು ಹೆಚ್ಚು ಮಂದಿ ಉನ್ನತ ಶಿಕ್ಷಣಕ್ಕೆ ತೆರೆದುಕೊಳ್ಳಬೆಕು ಎಂಬ ಆಶಯದೊಂದಿಗೆ, ಬದಲಾಗುತ್ತಿರುವ ಭಾರತದ ಸಾಂಸ್ಕೃತಿಕ, ಶೈಕ್ಶಣಿಕ ವಿದ್ಯಮಾನಗಳತ್ತ ಒಂದಿಷ್ಟು ಮಾತು. ನಮಗೆಲ್ಲ ಗೊತ್ತೇ ಇರುವ ಹಾಗೆ ಇದು ತಂತ್ರ ಜ್ಞಾನ ದಾಪುಗಾಲಿಕ್ಕಿತ್ತಿರುವ ಕಾಲ. ಇನ್ನು ಭಾರತವೆಂದರೆ ‘ಯಂಗ್ ಇಂಡಿಯಾ’. ಅಂಕಿ ಅಂಶಗಳ ಪ್ರಕಾರ ದೇಶದ ಜನಸಂಖ್ಯೆಯ 40 % ರಷ್ಟು 30  ವರ್ಷಕ್ಕಿತ ಕಡಿಮೆ ವಯಸ್ಸಿನವರು ಇದ್ದಾರಂತೆ. ಬದಲಾಗುತ್ತಿರುವ ಕಾಲದೊಂದಿಗೆ ಉದ್ಯೋಗದ ಸಾಧ್ಯತೆಗಳು, ಅವಕಾಶಗಳೂ ಬದಲಾಗುತ್ತಿರುತ್ತವೆ; ಬದಲಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರು ಜಗತ್ತಿನಲ್ಲೇ ಅತ್ಯಂತ ಜವಾಬ್ದಾರಿಯ ಹುದ್ದೆಯಲ್ಲಿದ್ದಾರೆ ಎನ್ನಬಹುದು. ತಮ್ಮನ್ನು ನಂಬಿ ಶಾಲೆ, ಕಾಲೇಜುಗಳಿಗೆ ಮಕ್ಕಳನ್ನು ಕಳುಹಿಸುವ ಪಾಲಕರ ಕಳಕಳಿ, ಅಂತೆಯೇ ಕನಸುಗಣ್ಣಿನ ಎಳೆಯರನ್ನು ಪೊರೆಯುವ ಜವಾಬ್ದಾರಿ ಎರಡೂ ಅವರಿಗಿದೆ.

ಶಿಕ್ಷಕ ದಿನಾಚರಣೆಯಂದು ಶಿಕ್ಷಕರಿಗೆ ಒಂದು ರೀತಿಯ ಧನ್ಯತಾ ಭಾವ ಮೂಡುವುದು ಹೌದಾದರೂ ಉನ್ನತ ಶಿಕ್ಷಣದ ಸವಾಲುಗಳು ಕಠಿಣವಾಗುತ್ತಿರುವುದು ಹೌದು. ಬದಲಾದ ಕಾಲಘಟ್ಟದಲ್ಲಿನ ಸಹಜವಾದ ಗೊಂದಲಗಳು ವಿದ್ಯಾರ್ಥಿಗಳಲ್ಲಿ, ಪೋಷಕರಲ್ಲಿ, ಹಾಗೆಯೇ ಉಪನ್ಯಾಸಕರಲ್ಲೂ ಇವೆ . ಹೀಗಾಗಿಯೇ ನಿರಂತರವಾಗಿ ಬದಲಾಗುತ್ತಿರುವ ಜಾಗತಿಕ, ಸ್ಠಳೀಯ ವಿಷಯಗಳಿಗೆ ತೆರೆದುಕೊಳ್ಳುವ ಅವಶ್ಯಕತೆ ಉಪನ್ಯಾಸಕರುಗಳಿವೆ. ಇನ್ನು ರಿಫ಼್ರೆಶರ್ ಕೋರ್ಸ್ ಗಳು, ಓರಿಯೆಂಟೇಶನ್ ಕೋರ್ಸ್ ಗಳು, ವೃತ್ತಿ ಬುನಾದಿ ತರಬೇತಿಗಳು ಹೀಗೆ ಅನೇಕ ತರಬೇತಿಗಳಿವೆ ಹಾಗೂ ಉತ್ತಮ ಸ್ಪಂದನವಿದೆ ಕೂಡ.

ಧಾರವಾಡದಲ್ಲಿರುವ ಹೈಯರ್ ಎಜುಕೇಶನ್ ಅಕಾಡಮಿಯ ಡೈರೆಕ್ಟರ್ ಆಗಿರುವ ಪ್ರೊ. ಶಿವಪ್ರಸಾದ್ ಅವರ ಪ್ರಕಾರ ಪ್ರತಿಯೊಂದು ವಿದ್ಯಾರ್ಥಿಯೂ ಚೈತನ್ಯದ ಚಿಲುಮೆಯೇ ಆಗಿದ್ದು ಅವರನ್ನು ವಜ್ರದಂತೆ ಸಾಣೆ ಹಿಡಿಯುವ ಜವಾಬ್ದಾರಿ ಉಪನ್ಯಾಸಕರದ್ದು. ಜಗತ್ತು ತೀವ್ರವಾಗಿ ಬದಲಾಗುತ್ತಿದೆ. ರಾಜಕೀಯ ತಲ್ಲಣಗಳು, ಶರ ವೇಗದಲ್ಲಿ ಬದಲಾಗುತ್ತಿರುವ ಟೆಕ್ನಾಲಜಿ, ವಾಟ್ಸಾ‌ಅಪ್ . ಫ಼ೇಸ್ ಬುಕ್ ಗಳಂತಹ ನವ ಮಾಧ್ಯಮಗಳು.. ಶಿಕ್ಷಕರೆದುರಿನ ಸವಾಲುಗಳು ಸುಲಭವೇನಲ್ಲ. ಎಲ್ಲ ಸೌಕರ್ಯಗಳಿರುವ ಮನೆಗಳಿಂದ ಬರುವ, ಮುಚ್ಚಟೆಯಿಂದ ಪಾಲಿಸಲ್ಪಟ್ಟ ಮಕ್ಕಳು ಕೆಲವಾದರೆ ಅವರಿವರ ಮನೆ ಪಾತ್ರೆ ತೊಳೆದು, ಕಸ ಗುಡಿಸಿ, ತಿಂಡಿ ಕೂಡ ತಿನ್ನದೆ ಬರುವ ಮಕ್ಕಳು ಕೆಲವು. ಟಿ ವಿ ಸೀರಿಯಲ್, ಸಿನೆಮಾ ಪ್ರಭಾವದಿಂದಲೋ, ಇಂಟರ್ ನೆಟ್ ವೀಕ್ಷಣೆಯಿಂದಲೋ ತಮ್ಮದೇ ಆದ ಭಾವ ವಲಯವನ್ನು ಸೃಷ್ಟಿಸಿಕೊಂಡು ಅದರಲ್ಲಿಯೇ ಮುಳುಗೇಳುವ ಮಕ್ಕಳನ್ನು ತಮ್ಮ ಮಾತಿನಿಂದಲೇ ಸೆಳೆದು, ಅಕ್ಷರಗಳು ಕಾಣಿಸುವ ಬೆಳಕಿನ ಜಗತ್ತಿಗೆ ಕೊಂಡೊಯ್ಯಲು ಶಿಕ್ಷಕರಿಗೆ ಅಪಾರ ತಾಳ್ಮೆ, ಚಾಕ ಚಕ್ಯತೆ ಬೇಕು.

ಶನಿವಾರ, ಮಾರ್ಚ್ 16, 2019

ಉನ್ನತ ಶಿಕ್ಷಣ ಆಯೋಗ

‘ಉನ್ನತ ಶಿಕ್ಷಣ ಆಯೋಗ’ ಮೂಡಿಸಿರುವ ನಿರೀಕ್ಷೆಗಳು

ಸ್ವಾತಂತ್ರ್ಯ ಬಂದ ದಶಕದಲ್ಲಿ 1953ರಲ್ಲಿ ಆರಂಭವಾಗಿ ಇಲ್ಲಿಯವರೆಗೂ ದೇಶದ ಉಚ್ಚ ಶಿಕ್ಷಣವನ್ನು ಮುನ್ನಡೆಸುವ, ಹೊಂದಾಣಿಕೆ ಮಾಡುವ, ಮತ್ತು ಸಂಶೋಧನೆಗಳ ಮಾನದಂಡಗಳನ್ನು ನಿರೂಪಿಸುವ ಜವಾಬ್ದಾರಿ ಹೊಂದಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಂಸ್ಥೆಯನ್ನು ಹಿಂದಕ್ಕೆ ಪಡೆದು ಅದರ ಸ್ಥಳದಲ್ಲಿ ‘ಹೈಯರ್ ಎಜುಕೇಶನ್ ಕಮಿಶನ್ ಆಫ್ ಇಂಡಿಯಾ’ ಎನ್ನುವ ಹೊಸ ಸಂಸ್ಥೆಯೊಂದನ್ನು ಕೇಂದ್ರ ಸರಕಾರ ಹುಟ್ಟು ಹಾಕಲು ಬಯಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ. ಒಮ್ಮೆ ಯುಜಿಸಿಯ ಅಧ್ಯಕ್ಷರಾಗಿದ್ದ ದಿ. ಪ್ರೊ.ಯಶ್‌ಪಾಲ್ ಹೇಳಿದ ಹಾಗೆ ಅತಿ ಆಧುನಿಕ, ಆಧುನಿಕ, ಮಧ್ಯಕಾಲೀನ ಹಾಗೂ ಪುರಾತನ, ಈ ನಾಲ್ಕೂ ಶೈಕ್ಷಣಿಕ ವ್ಯವಸ್ಥೆಗಳನ್ನು ಮುನ್ನಡೆಸುತ್ತ ಹಾಗೂ ಅತ್ಯಂತ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಾ ಬೆಳೆಯುತ್ತಿರುವ ಉಚ್ಚಶಿಕ್ಷಣ ವ್ಯವಸ್ಥೆ ನಮ್ಮದು. ಆದ್ದರಿಂದ ಇದು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ, ಎಚ್ಚರದಿಂದ, ಕುತೂಹಲದಿಂದ ಗಮನಿಸಬೇಕಾದ ಬೆಳವಣಿಗೆ.

ಹೊಸ ವ್ಯವಸ್ಥೆಯ ಕುರಿತು ಯೋಜಿಸುವ ಮೊದಲು ಈಗ ಔಟ್‌ಡೇಟೆಡ್ ಎಂದು ಮಾನವ ಸಂಪನ್ಮೂಲ ಮಂತ್ರಾಲಯ ಬಹುಶಃ ಭಾವಿಸಿರುವ ಯುಜಿಸಿಯ ಇತಿಹಾಸವನ್ನು, ಅದು ಏನು ಕೆಲಸ ಮಾಡಲು ಹುಟ್ಟಿಕೊಂಡಿತ್ತು, ಏನನ್ನು ಸಾಧಿಸಿತು ಹಾಗೂ ಎಲ್ಲಿ ವಿಫಲವಾಗಿತ್ತು ಎನ್ನುವುದನ್ನು ಗಮನಿಸಿಕೊಳ್ಳಬೇಕು. ಯುನಿವರ್ಸಿಟಿ ಗ್ರಾಂಟ್‌ಸ್ ಬ್ರಿಟಿಷ್ ಉಚ್ಚಶಿಕ್ಷಣ ರೆಗ್ಯುಲೇಟರಿ ಸಂಸ್ಥೆಯಾದ ‘ಯುನಿವರ್ಸಿಟಿ ಗ್ರಾಂಟ್ ಕಮಿಟಿ’ಯನ್ನು ಅನುಸರಿಸಿ ಆರಂಭವಾದಾಗ ಅದರ ಸುಪರ್ದಿಯಲ್ಲಿ ಅಲಿಗಢ, ಬನಾರಸ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳು ಬಂದಿದ್ದವು. ನಂತರ ದೇಶದ ಎಲ್ಲ ವಿಶ್ವವಿದ್ಯಾಲಯಗಳನ್ನು ಅದರ ವ್ಯಾಪ್ತಿಗೆ ತರಲಾಯಿತು. ಖ್ಯಾತ ವಿದ್ವಾಂಸರಾದ ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಹಾಗೂ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರಂತವರು ಈ ಸಂಸ್ಥೆಯ ಜತೆ ಸಂಬಂಧ ಹೊಂದಿದ್ದವರು. 1956ರಲ್ಲಿ ಪಾರ್ಲಿಮೆಂಟಿನ ವಿಧೇಯಕ ಒಂದರ ಮೂಲಕ ಮಾನವ ಸಂಪನ್ಮೂಲ ಕೆಳಗಡೆ ಬರುವ ಶಾಸನಬದ್ಧ ಸಂಸ್ಥೆಯಾಗಿ ಅದು ಪರಿವರ್ತನೆಗೊಂಡಿತು. ಈಗಿನ ವ್ಯವಸ್ಥೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಏ.ಐ.ಸಿ.ಟಿ.ಇ., ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇತ್ಯಾದಿ 15 ಬೇರೆ ಬೇರೆ ಅಂಗ ಸಂಸ್ಥೆಗಳು ಯುಜಿಸಿಯ ಕೆಳಗೆ ಕೆಲಸ ಮಾಡುತ್ತಾ ಬೇರೆ ಬೇರೆ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧ ಪಟ್ಟ ಕ್ಷೇತ್ರಗಳ ಅಫಿಲಿಯೇಶನ್, ಅಕ್ರೆಡಿಟೇಶನ್ ಮತ್ತು ಮಾನದಂಡಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿ ದೇಶದ ಉಚ್ಚಶಿಕ್ಷಣಕ್ಕೆ ಮಾರ್ಗಸೂಚಿ ಸೂತ್ರಗಳನ್ನು ಸಿದ್ಧಪಡಿಸುತ್ತ ಶಿಕ್ಷಣವನ್ನು ಮುನ್ನಡೆಸುತ್ತಿದ್ದವು.

ಉಚ್ಚ ಶಿಕ್ಷಣದ ಬೆಳವಣಿಗೆಯಲ್ಲಿ ಯುಜಿಸಿಯ ಶ್ರೇಷ್ಠ ಕೊಡುಗೆ ಮರೆಯಲಾಗದ್ದು. 1986ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅದಕ್ಕೆ ಬಲವಾದ ಬೆಂಬಲವನ್ನು ಒದಗಿಸಿ ಉತ್ತಮವಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದರು. ಇದರ ಫಲವಾಗಿ 86ರ ನಂತರ ಆಯೋಗ, ರಾಷ್ಟ್ರೀಯ ಮಾನದಂಡಗಳನ್ನು ಉಚ್ಚ ಶಿಕ್ಷಣದಲ್ಲಿ ಅನ್ವಯಗೊಳಿಸಲು ಆರಂಭಿಸಿತು. ಪ್ರಾಧ್ಯಾಪಕರುಗಳಿಗೆ ಗೌರವಾನ್ವಿತ ಸಂಬಳ ಸಾರಿಗೆ ಜಾರಿಗೆ ಬಂದವು. ಸೇವೆಯಲ್ಲಿದ್ದ ಪ್ರಾಧ್ಯಾಪಕರುಗಳಿಗೆ ಎಂ.ಫಿಲ್, ಪಿ.ಎಚ್‌ಡಿ ಪದವಿ ಪಡೆಯಲು ಪ್ರೋತ್ಸಾಹಿಸಲು ಆರಂಭವಾದವು. ಮೇಜರ್ ಮತ್ತು ಮೈನರ್ ರೀಸರ್ಚ ಗ್ರಾಂಟ್‌ಗಳು ಕಾಲೇಜು ಶಿಕ್ಷಕರುಗಳಿಗೂ ಆರಂಭವಾದವು. ಸಂತಸದ ವಿಷಯವೆಂದರೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಪ್ರಾಧ್ಯಾಪಕರುಗಳಿಗೆ ಹೆಚ್ಚು ಕಡಿಮೆ ಸಮಾನ ಅವಕಾಶಗಳನ್ನು ಕಲ್ಪಿಸಲು ಯುಜಿಸಿ ಪ್ರಯತ್ನಿಸಿದ್ದು. ಬೋಧಕರ ಚಿಂತನೆಯನ್ನು ಜಾಗ್ರತಗೊಳಿಸಲು, ಅವರ ವಿಷಯ ಜ್ಞಾನವನ್ನು ನವೀಕರಿಸಲು ಯುನಿರ್ವಸಿಟಿಗಳ ಆಶ್ರಯದಲ್ಲಿ ಅಕಾಡೆಮಿಕ್ ಸ್ಟಾಫ್ ಕಾಲೇಜುಗಳನ್ನು ಆರಂಭಿಸಿತು. ಈ ಯೋಜನೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ರಿಫ್ರೆಶರ್ ಕೋರ್ಸ್‌ಗಳನ್ನು ಎಂ.ಫಿಲ್‌ಗಳನ್ನು, ಪಿ.ಎಚ್‌ಡಿಗಳನ್ನು ಸ್ಥಾನೀಕರಣಕ್ಕೆ ಮಾನದಂಡಗಳನ್ನಾಗಿ ಪರಿಗಣಿಸಲಾಯಿತು. ವಿದೇಶ ಗ್ರಾಂಟ್‌ಗಳನ್ನು ಆರಂಭಿಸಲಾಯಿತು.

ಸಮರ್ಥ ಶಿಕ್ಷಕರ ಕೊರತೆಯನ್ನು ಅರಿತ ಯುಜಿಸಿ ಉಪನ್ಯಾಸಕ ಹುದ್ದೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಅನ್ನು ಆರಂಭಿಸಿತು. ಹಾಗೆಯೇ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಸಮಗ್ರವಾದ ಗೈಡ್‌ಲೈನ್‌ಗಳನ್ನು ರೂಪಿಸಿತು. ಪಿ.ಎಚ್‌ಡಿಗಳ ಗುಣಮಟ್ಟ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಅಭ್ಯರ್ಥಿಗಳಿಗೆ ಎಂಟ್ರನ್‌ಸ್ ಟೆಸ್‌ಟ್ಗಳನ್ನು ಹಾಗೆಯೇ ಕೋರ್ಸ್‌ವರ್ಕನ್ನು ಕಡ್ಡಾಯಗೊಳಿಸಿತು. ಶ್ರೇಷ್ಠ ಕಾಲೇಜುಗಳನ್ನು ಹಾಗೂ ಆ ಗುಣಮಟ್ಟ ತಲುಪುವ ಸಾಧ್ಯತೆಗಳನ್ನು ಹೊಂದಿದ ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ಗುರುತಿಸಿತು. ಹಾಗೆಯೇ, ಯುಜಿಸಿ ಕಾಲೇಜುಗಳ ನ್ಯಾಕ್ ಗುಣಮಟ್ಟವನ್ನು ಆಧರಿಸಿ ಸಾಕಷ್ಟು ಬುಕ್‌ಗ್ರಾಂಟ್, ಬಿಲ್ಡಿಂಗ್‌ಗ್ರಾಂಟ್, ಸ್ಪೆಶಲ್ ಗ್ರಾಂಟ್‌ಗಳನ್ನು ಒದಗಿಸಿದೆ. ಮಹಿಳೆಯರು ಹೆಚ್ಚು ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡಲು ದೇಶಾದ್ಯಂತ ಮಹಿಳಾ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಧನ ಸಹಾಯ ಒದಗಿಸಿದೆ.

ವಿಶ್ವವಿದ್ಯಾಲಯ ಕಾಲೇಜುಗಳ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲು ‘ನ್ಯಾಕ್’ ಎನ್ನುವ ಸ್ವಾಯುತ್ತ ಸಂಸ್ಥೆಯನ್ನು ತೊಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ್ದು ಯುಜಿಸಿಯ ಇನ್ನೂ ಒಂದು ಸಾಧನೆ. ಈ ಮೌಲ್ಯಮಾಪನ ಸಂಸ್ಥೆ ಈಗಾಗಲೇ ದೇಶಾದ್ಯಂತ ಸಾವಿರಾರು ಕಾಲೇಜುಗಳ, ವಿಶ್ವವಿದ್ಯಾಲಯಗಳ ಅಕ್ರೆಡಿಟೇಶನ್ ಮಾಡಿದೆ. ದೇಶದ ಹಲವು ಸಂಸ್ಥೆಗಳು ಈಗ 5/6 ಬರುವ ಈ ನ್ಯಾಕ್ ಅಕ್ರೆಡಿಟೇಶನ್ ನಾಲ್ಕನೇ ಆವೃತ್ತದಲ್ಲಿ ಇವೆ. ಈ ಸಂಸ್ಥೆಗಳಲ್ಲಿ ಹಲವು ಭಾರೀ ಪ್ರಮಾಣದಲ್ಲಿ ಗುಣಮಟ್ಟ ವರ್ಧಿಸಿಕೊಂಡಿದ್ದು ಸುಳ್ಳೇನೂ ಅಲ್ಲ.

ಹಾಗೆಯೇ ಯುಜಿಸಿ ಹಲವು ಪ್ರಮುಖ ವೈಫಲ್ಯಗಳನ್ನು ಕಂಡಿದ್ದು ಕೂಡ ಸತ್ಯವೇ. ಇತ್ತೀಚೆಗೆ ಚರ್ಚೆಯಾದಂತೆ, ದೇಶದಲ್ಲಿ ಗುಣಮಟ್ಟವಿಲ್ಲದ ವಿಶ್ವವಿದ್ಯಾಲಯ ಸ್ಥಾಪನೆ ತಡೆಯಲಾಗದೇ ಹೋದದ್ದು, ಗ್ರಾಂಟ್ ಪಡೆದ ಸಂಸ್ಥೆಗಳ ಮೇಲೆ ಅವು ಸರಿಯಾದ ರೀತಿಯಲ್ಲಿ ಅನುದಾನ ಬಳಕೆ ಮಾಡುತ್ತಿವೆಯೇ ಎಂದು ಕಣ್ಣಿಡಲು ವಿಫಲವಾಗಿದ್ದು ಅವುಗಳಲ್ಲಿ ಕೆಲವು. ಬಹುಶಃ, ಅತಿ ಉಚ್ಚಶ್ಷಿಣದತ್ತ ಪ್ರತಿಭಾವಂತ ಯುವಕ ಯುವತಿಯರನ್ನು ಸೆಳೆಯುವುದರಲ್ಲಿ ಅದು ಯಶಸ್ವಿಯಾಗಲಿಲ್ಲ. ದೇಶದಲ್ಲಿ ಇಂದು ಉಚ್ಚ ಶಿಕ್ಷಣ ಪಡೆಯುವ ವಯಸ್ಸಿನವರಲ್ಲಿ ನೂರಕ್ಕೆ ಮೂವತ್ತರಷ್ಟು ಜನ ಮಾತ್ರ ಅದನ್ನು ಪಡೆಯುತ್ತಿದ್ದು ಉಳಿದವರು ಉಚ್ಚಶಿಕ್ಷಣ ಹೊಂದುವಲ್ಲಿ ಆಸಕ್ತಿ ಹೊಂದಿಲ್ಲ. ಇವೆಲ್ಲ ವೈಫಲ್ಯಗಳ ಜತೆಗೆ ಪದವಿಗಳಿಗೆ ಮೌಲ್ಯ ತುಂಬಲು ಕೂಡ ಯುಜಿಸಿ ಸೋತಿತು.

ಯುಜಿಸಿಯ ಬಾಗಿಲು ಹಾಕಿ ಬೇರೊಂದು ಸ್ವರೂಪದ ಸಂಸ್ಥೆಯನ್ನು ರೂಪಿಸುವ ಕಲ್ಪನೆಗಳೂ ಕೂಡ ಹೊಸತಾಗಿ ಬಂದವುಗಳೇನೂ ಅಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗ ಯುಜಿಸಿಯನ್ನು ಮರುನಾಮಕರಣಗೊಳಿಸಿ ಅಂದರೆ ‘ಯುನಿವರ್ಸಿಟಿ ಡೆವಲೆಪ್‌ಮೆಂಟ್ ಕಮಿಷನ್’ ಮಾಡಿ ಅದಕ್ಕೆ ಬೇರೆ ರೀತಿಯ ರೂಪ-ನಿರ್ದೇಶನಗಳನ್ನು ನೀಡುವ ಕನಸು ಕಂಡಿದ್ದರು. ಕೇವಲ ಅನುದಾನ ನೀಡುವ ಸಂಸ್ಥೆಯಾಗಿ ಇಂತಹವು ಉಳಿಯಬಾರದು ಎನ್ನುವುದು ವಾಜಪೇಯಿಯವರ ಅಭಿಪ್ರಾಯವಾಗಿತ್ತು. ಹಾಗೆಯೇ 2009ರಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸರಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಕಪಿಲ್ ಸಿಬಲ್ ಯುಜಿಸಿಯನ್ನು ‘ನ್ಯಾಷನಲ್ ಕೌನ್ಸಿಲ್ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಎನ್‌ಸಿಎಚ್‌ಇಆರ್)ಅನ್ನಾಗಿ ಪರಿವರ್ತಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಈಗ ಕಲ್ಪಿಸಲಾಗಿರುವ ಹೈಯರ್ ಎಜುಕೇಶನ್ ಕಮಿಶನ್ ಇಂಡಿಯಾದ ಸ್ವರೂಪವನ್ನು ಕುರಿತು ಈಗ ಗಮನಿಸಬೇಕು. ಕೇಂದ್ರ ಸರಕಾರ ತನ್ನ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಹೊಸ ಸಂಸ್ಥೆಯ ಕುರಿತಾದ ವಿಶೇಷವೇನೆಂದರೆ ಅನುದಾನ ನೀಡುವಿಕೆಯನ್ನು ನೇರವಾಗಿ ಮಾನವ ಸಂಪನ್ಮೂಲ ಇಲಾಖೆ ನೋಡಲಿದೆ. ಹೊಸ ಉಚ್ಚಶಿಕ್ಷಣ ಕಮಿಷನ್ ಅಧಿಕಾರದ ವ್ಯಾಪ್ತಿಯಲ್ಲಿ ಅಕಾಡೆಮಿಕ್ ವ್ಯವಹಾರಗಳಿಗೆ ಸಂಬಂಧಿಸಿದ ಅಂದರೆ, ಗುಣಮಟ್ಟ ಯೋಜನೆ ಮತ್ತು ನಿರ್ವಹಣೆ, ಅಫಿಲಿಯೇಶನ್, ಅಕ್ರೆಡಿಟೇಶನ್ ಮತ್ತು ಮೌಲ್ಯ ಮಾಪನ ವ್ಯವಸ್ಥೆಗಳು ಬರಲಿವೆ. ಕೇಂದ್ರ ಸರಕಾರ ಹೇಳುವಂತೆ ಈ ವ್ಯವಸ್ಥೆಯ ಗುರಿಗಳು ತುಂಬ ಸ್ಪಷ್ಟವಾಗಿದ್ದು ಮತ್ತು ಅಕಾಡೆಮಿಕ್ ವಿಷಯಗಳನ್ನು ಪ್ರತ್ಯೇಕಿಸಲಾಗಿದೆ. ಕೇಂದ್ರ ಸರಕಾರದ ವಾದದಂತೆ ಇದರಿಂದಾಗಿ ಇನ್‌ಸ್ಪೆಕ್ಷನ್ ರಾಜ್ಯ ಕೊನೆಗೊಳ್ಳಲಿದೆ. ಹಾಗೂ ಗುಣಮಟ್ಟದ ಶಿಕ್ಷಣದ ಮೇಲೆ ಒತ್ತು ಸಿಗಲಿದೆ. ಬೋಗಸ್ ಶಿಕ್ಷಣ ಸಂಸ್ಥೆಗಳು ಅಂತ್ಯ ಕಾಣಲಿವೆ. ಏಕೆಂದರೆ ಕೇಂದ್ರ ಸರಕಾರ ಹೇಳುವಂತೆ ಮೋಸದ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜರುಗಿಸುವ ಶಕ್ತಿ ಈ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ಬಳಿ ಇರುತ್ತದೆ.

ಆದರೆ ದೇಶಾದ್ಯಂತ ಇರುವ ಉಚ್ಚ ಶಿಕ್ಷಣಕ್ಕೆ ಸಂಬಂಧಿಸಿದ ಶಿಕ್ಷಕ ಸಂಘಟನೆಗಳು ಹಾಗೂ ಸಂಘಟನೆಗಳು ಈ ಮಾತುಗಳಿಂದ ತೃಪ್ತಗೊಂಡಿಲ್ಲ. ಹೊಸ ವ್ಯವಸ್ಥೆಗೆ ಅವು ಇಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿವೆ. ಅವು ಹೇಳುವುದೆಂದರೆ ಇದರಿಂದಾಗಿ ಗ್ರಾಂಟ್ ನೀಡುವ ಸಚಿವಾಲಯ ತುಂಬ ಪ್ರಭಾವಶಾಲಿಯಾಗಿ ಪರಿವರ್ತನೆಯಾಗಬಹುದು. ಅಲ್ಲದೇ ಉಚ್ಚಶಿಕ್ಷಣದ ಸರಕಾರೀಕರಣದ ದಿನಗಳು ಆರಂಭವಾಗಿ ಹೊಸ ಐಡಿಯಾಗಳು, ಚಿಂತನೆಗಳು, ವ್ಯಾಪಕವಾದ ಸುಧಾರಣೆಗಳು ಅಗತ್ಯವಾಗಿರುವ ಇಂದಿನ ದಿನಗಳಲ್ಲಿ ಅದು ಅಧಿಕಾರಶಾಹಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ವಿರೋಧಿ ಧ್ವನಿಗಳು ಹೇಳುವುದೆಂದರೆ ಕೇವಲ ಅಕ್ರೆಡಿಟೇಶನ್ ನೀಡುವ ಸಂಸ್ಥೆ ಕ್ರಮೇಣ ಶಕ್ತಿಹೀನವಾಗಿ ಹೋಗುತ್ತದೆ. ಅಲ್ಲದೆ ಕೋರ್ಸ್‌ಗಳ ಆರಂಭದ ಸಂದರ್ಭದಲ್ಲಿಯಂತೂ ಅವುಗಳ ಆರಂಭ ಹಣಕಾಸಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಹಾಗಾಗಿ ಒಂದೇ ಸಂಸ್ಥೆ ಇವೆರಡನ್ನೂ ತೂಗಿ ನೋಡುವುದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ. ಎರಡೂ ವಾದಗಳಲ್ಲಿಯೂ ಕೆಲವು ಸತ್ಯಾಂಶಗಳಿವೆ. ಆದರೂ ಕೂಡ ದೇಶಾದ್ಯಂತ ಮನೆ ಮನೆಗೂ ತಿಳಿದಿರುವ ಯುಜಿಸಿಯನ್ನು ಒಮ್ಮೆಲೇ ಬಂದ್ ಮಾಡಿ ಹೊಸ ವ್ಯವಸ್ಥೆ ಕಟ್ಟುವುದಕ್ಕಿಂತಲೂ ಇರುವ ಆಯೋಗಕ್ಕೇ ಇನ್ನೂ ಹೆಚ್ಚು ಕಾನೂನಾತ್ಮಕ ಶಕ್ತಿ ನೀಡಿ ಹೊಸ ನಿರ್ದೇಶನಗಳನ್ನು ನೀಡುವುದು ಹಾಗೂ ಜಾಗತಿಕ ಮಟ್ಟದ, ದೇಸಿ ಅಂಶಗಳನ್ನು ಮರೆಯದ ಗೊತ್ತು ಗುರಿಗಳನ್ನು ಅದರ ಮುಂದಿಡುವುದು ಸಾಧ್ಯವಿತ್ತು. ಆದರೆ ಒಪ್ಪಿಕೊಳ್ಳಲೇ ಬೇಕಾದ ವಿಷಯವೆಂದರೆ ಯುಜಿಸಿಯ ಕಾರ್ಯ ವಿಧಾನಗಳನ್ನು ಹೊಸ ಬೆಳಕಿನಲ್ಲಿ ನೋಡುವ ಅಗತ್ಯ ಮಾತ್ರ ಖಂಡಿತಕ್ಕೂ ಇತ್ತು.

ಉನ್ನತ ಶಿಕ್ಷಣ 11

ಆಯೋಗ: ಖಾಸಗೀಕರಣ ಮತ್ತು ಶ್ರೇಣೀಕೃತ ಶಿಕ್ಷಣ ವ್ಯವಸ್ಥೆ ಕಡೆಗೆ

ಯುಜಿಸಿಯ ಮಾಜಿ ಅಧ್ಯಕ್ಷ ಶಿಕ್ಷಣ ತಜ್ಞ ಸುಖದೇವ ಥೋರಟ್ ಅವರು ‘‘ಯಶಪಾಲ್ ಮತ್ತು ಜ್ಞಾನ ಆಯೋಗವು ಮೇಲಿನ ಮಾದರಿಯ ಬಿಡಿ ಬಿಡಿಯಾದ ಆಡಳಿತ ವ್ಯವಸ್ಥೆಯು ಎಂದಿಗೂ ಅನುಕೂಲಕರವಲ್ಲ, ಉನ್ನತ ಶಿಕ್ಷಣದಲ್ಲಿ ಏಕ ಗವಾಕ್ಷಿಯ ಕೇಂದ್ರೀಕೃತ ಆಡಳಿತ ವ್ಯವಸ್ಥೆ ಇರಬೇಕಾಗುತ್ತದೆ, ಆಗಲೇ ನಿಯಂತ್ರಣ ಸುಲಭವಾಗುತ್ತದೆ ಎಂದು ವರದಿ ನೀಡಿದೆ. ಆ ವರದಿಯೇ ಇಂದಿನ ಈ ಹೊಸ ಉನ್ನತ ಶಿಕ್ಷಣ ಆಯೋಗದ ಪ್ರಸ್ತಾವನೆಗೆ ಬುನಾದಿಯಾಗಿದೆ. ಈ ಹೊಸದಾದ ಉನ್ನತ ಶಿಕ್ಷಣ ಆಯೋಗದಲ್ಲಿ ಕೇಂದ್ರ ಮತ್ತು ರಾಜ್ಯ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳಿಗೆ ಆಡಳಿತ ಮತ್ತು ಶೈಕ್ಷಣಿಕ ನೀತಿ ರೂಪಿಸುವ ಪ್ರಕ್ರಿಯೆಯಲ್ಲಿ ಯಾವುದೇ ಜವಾಬ್ದಾರಿಯಿರುವುದಿಲ್ಲ. ಇಲ್ಲಿ ಶಿಕ್ಷಣಕ್ಕಾಗಿ ಕೇಂದ್ರ ಸಲಹಾ ಸಮಿತಿ ಇರುತ್ತದೆ. ಈ ಸಮಿತಿಯು ತನ್ನ ಅಧ್ಯಕ್ಷ ಮತ್ತು ಸದಸ್ಯರಿಂದ ಸಲಹೆ, ಅಭಿಪ್ರಾಯಗಳನ್ನು ಪಡೆದುಕೊಳ್ಳುತ್ತದೆ. ಆದರೆ ಅದಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರವಿರುವುದಿಲ್ಲ, ಕಡೆಗೂ ಮಾನವ ಸಂಪನ್ಮೂಲ ಇಲಾಖೆಗೆ ಅಂತಿಮವಾದ ನಿರ್ಣಾಯಕ ತೀರ್ಮಾನ ಕೈಗೊಳ್ಳುವ ಅಧಿಕಾರವಿರುತ್ತದೆ. ಉನ್ನತ ಶಿಕ್ಷಣದಲ್ಲಿ ರಾಜ್ಯಗಳನ್ನು ಒಳಗೊಳ್ಳಬೇಕಾಗುತ್ತದೆ, ಅವರಿಗೂ ನೀತಿ ನಿರೂಪಣೆಯಲ್ಲಿ ಉತ್ತರದಾಯಿತ್ವವಿರುತ್ತದೆ ಮತ್ತು ಬಾಧ್ಯತೆಯಿರುತ್ತದೆ. ಆದರೆ ಈ ಹೊಸ ಕರಡಿನಲ್ಲಿ ರಾಜ್ಯಗಳಿಗೆ ಬಾಧ್ಯತೆಯ, ಉತ್ತರದಾಯಿತ್ವದ ಅವಕಾಶವನ್ನು ನೀಡಿಲ್ಲ. ಈ ಹಿಂದೆ ಯುಜಿಸಿಯು ಎರಡು ಶ್ರೇಣಿಯ ವ್ಯವಸ್ಥೆಯನ್ನು ಶಿಫಾರಸು ಮಾಡಿತ್ತು. ಅದರಲ್ಲಿ ಆಯೋಗ ಮತ್ತು ಆಡಳಿತ ಮಂಡಳಿ ಇರುತ್ತದೆ. ಈ ಆಡಳಿತ ಮಂಡಳಿಯು ರಾಜ್ಯಗಳ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ ಮತ್ತು ವೈದ್ಯಕೀಯ, ತಂತ್ರಜ್ಞಾನ, ಇಂಜಿನಿಯರಿಂಗ್, ಕೃಷಿ, ಪಶು ವೈದ್ಯಕೀಯ, ನರ್ಸಿಂಗ್ ವಲಯಗಳಿಂದಲೂ ಪ್ರತಿನಿಧಿಗಳನ್ನು ಒಳಗೊಂಡಿರುತ್ತದೆ. ಈ ಪ್ರತಿನಿಧಿಗಳಿಗೆ ನೀತಿ-ನಿರೂಪಣೆಯಲ್ಲಿ, ನಿರ್ಣಯ ರೂಪಿಸುವಲ್ಲಿ ಗುರುತರವಾದ ಜವಾಬ್ದಾರಿಯಿರುತ್ತದೆ ಮತ್ತು ಉತ್ತರದಾಯಿತ್ವವಿರುತ್ತದೆ. ಪ್ರತಿ ಹಂತದಲ್ಲಿಯೂ ಅವರ ಸಲಹೆ ಪಡೆದುಕೊಂಡು ತೀರ್ಮಾನ ಕೈಗೊಳ್ಳಬೇಕಾಗುತ್ತದೆ. ಇದು ಅತ್ಯಂತ ಸೌಹಾರ್ದವಾದ ವ್ಯವಸ್ಥೆಯಾಗುತ್ತದೆ. ಆದರೆ ಈ ಹೊಸದಾದ ಉನ್ನತ ಶಿಕ್ಷಣ ಆಯೋಗವು ಈ ಎಲ್ಲಾ ಆಶಯಗಳನ್ನು ಕೈಬಿಟ್ಟಿದೆ’’ ಎಂದು ಹೇಳುತ್ತಾರೆ. ಮತ್ತೊಂದು ಗಮನಾರ್ಹ ಶಿಫಾರಸೆಂದರೆ ಈ ಹೊಸದಾದ ಉನ್ನತ ಶಿಕ್ಷಣ ಆಯೋಗಕ್ಕೆ ಹಣಕಾಸಿನ ಜವಾಬ್ದಾರಿ ನೀಡಿಲ್ಲ. ಎಚ್‌ಇಸಿಐ ಆಡಳಿತ ಮತ್ತು ಶೈಕ್ಷಣಿಕ ಗುಣಮಟ್ಟದ ಮೇಲೆ ಮಾತ್ರ ಹೆಚ್ಚಿನ ಸುಧಾರಣೆಗಳನ್ನು ತರಬೇಕು, ಅದಕ್ಕೆ ಹಣಕಾಸಿನ ನಿರ್ವಹಣೆ ಹೆಚ್ಚುವರಿ ಹೊರೆಯಾಗುತ್ತದೆ ಎಂದು ಪ್ರತಿಪಾದಿಸಿರುವ ಮಾನವ ಸಂಪನ್ಮೂಲ ಇಲಾಖೆ ಆಡಳಿತ/ಶೈಕ್ಷಣಿಕ ಹಾಗೂ ಹಣಕಾಸಿನ ನಿರ್ವಹಣೆ ಎರಡನ್ನು ಪ್ರತ್ಯೇಕಿಸಿದೆ. ಎಚ್‌ಇಸಿಐ ಕೇವಲ ಶೈಕ್ಷಣಿಕ ಮತ್ತು ಆಡಳಿತದ ಜವಾಬ್ದಾರಿ ಹೊಂದಿರುತ್ತದೆ. ಹಣಕಾಸಿನ ನಿರ್ವಹಣೆಯ ಎಲ್ಲಾ ಜವಾಬ್ದಾರಿಯನ್ನು ಮಾನವ ಸಂಪನ್ಮೂಲ ಇಲಾಖೆಗೆ ವಹಿಸಲಾಗಿದೆ. ಇದರಿಂದಾಗಿ ಈ ಹೊಸ ಆಯೋಗವು ತನ್ನ ಆಡಳಿತಾತ್ಮಕ ನಿರ್ಣಯಗಳಿಗೆ ಅವಶ್ಯಕವಾದ ಹಣಕಾಸಿನ ನೆರವನ್ನು ಶಿಕ್ಷಣ ಇಲಾಖೆಯ ಮೇಲೆ ಅವಲಂಬಿತವಾಗಬೇಕಾಗುತ್ತದೆ. ಉನ್ನತ ಶಿಕ್ಷಣದ ಹಣಕಾಸಿನ ಜವಾಬ್ದಾರಿಯು ನೇರವಾಗಿ ಒಂದು ರಾಜಕೀಯ ಪಕ್ಷ ಆಡಳಿತವಿರುವ ಇಲಾಖೆಯ ಸುಪರ್ದಿಗೆ ಸೇರಿದಾಗ ಇಡೀ ಧನ ಸಹಾಯದ, ವಿನಿಯೋಗದ ಪ್ರಕ್ರಿಯೆಯು ರಾಜಕೀಯಗೊಳ್ಳುತ್ತದೆ. ಆಗ ಎಲ್ಲಾ ಕೇಂದ್ರ, ರಾಜ್ಯ ವಿವಿಗಳು ಈ ಇಲಾಖೆಯ ಮರ್ಜಿಯಲ್ಲಿರಬೇಕಾಗುತ್ತದೆ. ರಾಜ್ಯಗಳು ತನ್ನ ಭಿನ್ನಾಭಿಪ್ರಾಯಗಳನ್ನು ವ್ಯಕ್ತಪಡಿಸಿದರೆ ಇಲಾಖೆಯಿಂದ ಸೂಕ್ತ ಹಣಕಾಸಿನ ನೆರವು ಕಡಿತಗೊಳ್ಳುವ ಭಯದ ಕತ್ತಿ ಸದಾ ತೂಗಾಡುತ್ತಿರುತ್ತದೆ. ಈ ಪರಾವಲಂಭಿತನವು ಶಿಕ್ಷಣದ ಆಯೋಗದ ಹಲ್ಲು, ಉಗುರುಗಳನ್ನು ಕಿತ್ತಂತಾಗುತ್ತದೆ. ಜೊತೆಗೆ ಮಾನವ ಸಂಪನ್ಮೂಲ ಇಲಾಖೆಯು ವಿಶ್ವ ವಿದ್ಯಾನಿಲಯಗಳ ಆಡಳಿತದಲ್ಲಿ ನೇರವಾಗಿ ಹಸ್ತಕ್ಷೇಪ ಮಾಡುವ ಅವಕಾಶ ಕಲ್ಪಿಸಿಕೊಡುತ್ತದೆ. ಅಲ್ಲಿಗೆ ಅದರ ಸ್ವಾಯತ್ತತೆಗೆ ಧಕ್ಕೆ ಉಂಟಾಗುತ್ತದೆ. ಶಿಕ್ಷಣದಲ್ಲಿ ಸಾರ್ವಜನಿಕ ಹೂಡಿಕೆಯನ್ನು ಉತ್ತೇಜಿಸಬೇಕಾದ ಸಂದರ್ಭದಲ್ಲಿ ಈ ಉನ್ನತ ಶಿಕ್ಷಣ ಆಯೋಗದ ಸ್ವರೂಪವು ಸರಕಾರವೇ ಆರ್ಥಿಕ ಅನುದಾನವನ್ನು ಕಡಿತಗೊಳಿಸಲು ಸಹಕಾರಿಯಾಗುವಂತೆ ರಚನೆಯಾಗಲಿದೆ. (2017ರಲ್ಲಿ ಸಿಎಜಿ ತನ್ನ ವರದಿಯಲ್ಲಿ ಕಳೆದ ಹತ್ತು ವರ್ಷಗಳಲ್ಲಿ ( 2006-2017) ಶಿಕ್ಷಣ ಸೆಸ್ ಮೂಲಕ 83,497 ಕೋಟಿ ಮೊತ್ತವನ್ನು ಸಂಗ್ರಹಿಸಲಾಗಿದೆ. ಆದರೆ ಇದುವರೆಗೂ ಒಂದು ಪೈಸೆಯನ್ನು ಖರ್ಚು ಮಾಡಿಲ್ಲ ಎಂದು ಹೇಳಿದೆ)

ಥೋರಟ್ ಅವರು ‘‘ಇಂಗ್ಲೆಂಡ್ ಒಳಗೊಂಡಂತೆ ಅನೇಕ ರಾಷ್ಟ್ರಗಳಲ್ಲಿ ಉನ್ನತ ಶಿಕ್ಷಣದಲ್ಲಿನ ಹಣಕಾಸಿನ ಹಂಚಿಕೆ ಮತ್ತು ಅನುದಾನದ ಜವಾಬ್ದಾರಿಯು ಆಯೋಗಕ್ಕೆ ವಹಿಸಲಾಗುತ್ತದೆ, ಇಲಾಖೆಗಳ ವ್ಯಾಪ್ತಿಗೆ ಬರುವುದಿಲ್ಲ. ಧನ ಸಹಾಯದ ಎಲ್ಲಾ ಚಟುವಟಿಕೆಗಳು ರಾಜಕಾರಣದಿಂದ ಮುಕ್ತವಾಗಿರಬೇಕು ಎಂದು ಹೇಳುತ್ತಾರೆ. ಯೋಜನಾ ಆಯೋಗದಲ್ಲಿ ಶಿಕ್ಷಣಕ್ಕೆ ಕುರಿತಂತೆ ಪ್ರಧಾನ ಸಲಹೆಗಾರರಾಗಿದ್ದ ಅಮಿತಾಭ್ ಭಟ್ಟಾಚಾರ್ಯ ಅವರು ಶೇ. 50 ಪ್ರಮಾಣಕ್ಕಿಂತಲೂ ಹೆಚ್ಚಿನ ಪ್ರಮಾಣದ ವಿದ್ಯಾರ್ಥಿ/ವಿದ್ಯಾರ್ಥಿನಿಯರು ರಾಜ್ಯ ವಿಶ್ವ ವಿದ್ಯಾನಿಲಯಗಳಲ್ಲಿ ವ್ಯಾಸಂಗ ಮಾಡುತ್ತಾರೆ. ಈ ರಾಜ್ಯ ವಿವಿಗಳಿಗೆ ಧನ ಸಹಾಯ ಮಾಡುವಾಗ ಎಲ್ಲಿಯೂ ಆರ್ಥಿಕ ಕೊರತೆ ಉಂಟಾಗದಂತೆ ಎಚ್ಚರ ವಹಿಸಬೇಕಾಗುತ್ತದೆ. ಪಾರದರ್ಶಕ ವ್ಯವಸ್ಥೆಯಿರಬೇಕಾಗುತ್ತದೆ. ಆದರೆ ಉನ್ನತ ಶಿಕ್ಷಣ ಆಯೋಗವು ಹಣಕಾಸಿನ ನಿರ್ವಹಣೆ ಮೇಲೆ ಅಧಿಕಾರವಿಲ್ಲದೆ ಎಷ್ಟರ ಮಟ್ಟಿಗೆ ಆಡಳಿತದಲ್ಲಿ ಸುಧಾರಣೆ ತರಬಲ್ಲದು ಎನ್ನುವ ಪ್ರಶ್ನೆಗೆ ಇನ್ನೂ ಉತ್ತರ ದೊರಕಿಲ್ಲ.’’ ಎಂದು ಹೇಳುತ್ತಾರೆ ನವ ಉದಾರೀಕರಣದ ಡಬ್ಲ್ಲೂಟಿಒ-ಗ್ಯಾಟ್ ಆದೇಶದಲ್ಲಿ ಬಂಡವಾಳಶಾಹಿ ಹಣಕಾಸಿನ ಕುರಿತು ಹೇಳುವಾಗ, ‘‘ಶಿಕ್ಷಣವು ಒಂದು ಹಕ್ಕಲ್ಲ ಬದಲಾಗಿ ಲಾಭದಾಯಕವಾದ ಉದ್ಯಮ ಎಂದು ಪರಿಗಣಿಸಬೇಕು ಹೀಗಾಗಿ ಅದನ್ನು ವ್ಯಾಪಾರೀಕರಣಗೊಳಿಸಬೇಕು’’ ಎಂದು ಉಲ್ಲೇಖಿಸಿದೆ. ಪಿ.ವಿ.ನರಸಿಂಹರಾವ್‌ರಿಂದ ಮೊದಲುಗೊಂಡು ವಾಜಪೇಯಿ, ಮನಮೋಹನ್ ಸಿಂಗ್ ಸರಕಾರಗಳೂ ಸಹ ಡಬ್ಲ್ಲೂಟಿಒ-ಗ್ಯಾಟ್‌ನ ಈ ಆದೇಶವನ್ನು ಚಾಚೂ ತಪ್ಪದೆ ಬದ್ಧತೆಯಿಂದ ಪಾಲಿಸುತ್ತಲೇ ಬಂದಿವೆ. ಮೋದಿ ಸರಕಾರ ಇದನ್ನು ಮತ್ತಷ್ಟು ತೀವ್ರವಾಗಿ ಮುಂದುವರಿಸುತ್ತಿದೆ. ಯುಜಿಸಿಯ ಕಾರ್ಯವೈಖರಿಯಲ್ಲಿನ ತಪ್ಪುಗಳನ್ನು, ಅದರ ರಚನೆಯಲ್ಲಿನ ದೋಷಗಳನ್ನು ಸರಿಪಡಿಸಲು ಕಾರ್ಯಯೋಜನೆಗಳನ್ನು ಹಮ್ಮಿಕೊಳ್ಳಬೇಕಾಗಿದ್ದ ಕೇಂದ್ರ ಶಿಕ್ಷಣ ಇಲಾಖೆ ಯುಜಿಸಿಯನ್ನೇ ವಿಸರ್ಜಿಸಿ ಭಾರತೀಯ ಉನ್ನತ ಶಿಕ್ಷಣ ಆಯೋಗವನ್ನು ಸ್ಥಾಪಿಸಿರುವುದು ಯಾವ ಉದ್ದೇಶಕ್ಕೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಮೋದಿ ಸರಕಾರ ಉನ್ನತ ಶಿಕ್ಷಣದ ವ್ಯಾಪಾರೀಕರಣಕ್ಕೆ ಅವಶ್ಯಕವಾದ ನೀತಿನಿಯಮಗಳನ್ನು ರೂಪಿಸಲು ಎಚ್‌ಇಸಿಐಯನ್ನು ಸ್ಥಾಪಿಸಿದೆ. ಇಂದು ಉನ್ನತ ಶಿಕ್ಷಣ ತನ್ನ ಈಗಿನ ಸ್ವರೂಪದಲ್ಲಿ ಅನುತ್ಪಾದಕವಾದ ಉದ್ಯಮ ಎಂದೇ ಮೋದಿ ಸರಕಾರ ಬಲವಾಗಿ ನಂಬಿದೆ. ಇದನ್ನು ಲಾಭದಾಯಕ ಉದ್ಯಮವನ್ನಾಗಿಸಲು ಈ ಮಾದರಿಯ ವ್ಯಾಪಾರೀಕರಣದ ಅವಶ್ಯಕತೆ ಇದೆ ಎಂದು ಜನರನ್ನು ನಂಬಿಸುತ್ತಿದೆ. ಉನ್ನತ ಶಿಕ್ಷಣ ಕೈಗಾರಿಕೀಕರಣವಾಗದೆ ಉಳಿಗಾವಿಲ್ಲ ಎಂದು ಪ್ರತಿಪಾದಿಸುತ್ತದೆ. ಮುಂದಿನ ದಿನಗಳಲ್ಲಿ ಈ ಶಿಕ್ಷಣ ಆಯೋಗಕ್ಕೆ ಮಾನ್ಯತೆ ದೊರೆತು ತನ್ನ ಕಾರ್ಯನೀತಿಗಳನ್ನು ಜಾರಿಗೊಳಿಸಲು ಮುಂದಾದರೆ ಅಗ ಅವಶ್ಯಕವಾದ ಶೈಕ್ಷಣಿಕ ಸುಧಾರಣೆಗಳು ಹಿನ್ನೆಲೆಗೆ ಸರಿಯಲಿವೆ. ಮಾನವಿಕ ವಿಷಯಗಳ (ಭಾಷೆ, ಸಮಾಜ ವಿಜ್ಞಾನ, ಇತಿಹಾಸ, ಮಾನವಶಾಸ್ತ್ರ, ರಾಜಕೀಯ ವಿಜ್ಞಾನ, ಮಾಧ್ಯಮ, ಇತ್ಯಾದಿ) ಅಧ್ಯಯನಕ್ಕೆ ಬೆಂಬಲ ದೊರಕುವುದಿಲ್ಲ ಮತ್ತು ಉದ್ಯೋಗ ಆಧರಿತ ಶಿಕ್ಷಣಕ್ಕೆ, ಮಾರುಕಟ್ಟೆ ಸ್ನೇಹಿ ವಿಷಯಗಳಿಗೆ ವ್ಯಾಪಕ ಪ್ರಚಾರ ಕೊಡಲಾಗುತ್ತದೆ. ವಿಶ್ವವಿದ್ಯಾನಿಲಯಗಳು ವೈಜ್ಞಾನಿಕ ಅನ್ವೇಷಣೆಗೆ, ಸಂಶೋಧನೆಗಳಿಗೆ ತಾಣವಾಗಬೇಕು ಎನ್ನುವ ಆಶಯವೇ ಮೂಲೆಗುಂಪಾಗಲಿದೆ

ಈಗಾಗಲೇ ಮೋದಿ ಸರಕಾರ ಶಿಕ್ಷಣದಲ್ಲಿ ಆರ್ಥಿಕ ಅನುದಾನವನ್ನು ಕಡಿತಗೊಳಿಸುತ್ತ ಬಂದಿರುವುದರಿಂದ ಆ ಜಾಗದಲ್ಲಿ ಬಂಡವಾಳ ಆಧರಿಸಿದ ಹಣಕಾಸು ವ್ಯವಸ್ಥೆ ಪ್ರವೇಶ ಪಡೆಯಲಿದೆ. ಸಾರ್ವಜನಿಕ-ಖಾಸಗಿ-ಸಹಭಾಗಿತ್ವ (ಪಿಪಿಪಿ) ವಿಶ್ವ ವಿದ್ಯಾನಿಲಯಗಳ ನೀತಿನಿಯಮಾವಳಿಯಾಗಲಿದೆ. ಮತ್ತೊಂದೆಡೆ ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯಗಳು ಆರ್ಥಿಕ ಅನುದಾನಕ್ಕಾಗಿ ಸದಾ ಸರಕಾರವನ್ನು ಸಂಪ್ರೀತಿಗೊಳಿಸುತ್ತಲೇ ಇರಬೇಕಾಗುತ್ತದೆ, ಗುಣಮಟ್ಟದ ಹೆಸರಿನಲ್ಲಿ, ಕಲಿಕೆಯ ಹೆಸರಿನಲ್ಲಿ, ಮೂಲಭೂತ ಸೌಕರ್ಯದ ನೆಪದಲ್ಲಿ ಉನ್ನತ ಶಿಕ್ಷಣವು ಅತ್ಯಂತ ದುಬಾರಿಯಾದ ಶಿಕ್ಷಣವಾಗಲಿದೆ. ದುಬಾರಿಯಾದ ಶುಲ್ಕವನ್ನು ಭರಿಸಲು ಈ ಬಂಡವಾಳ ಹಣಕಾಸು ವ್ಯವಸ್ಥೆಯು ಸಾಲದ ರೂಪದಲ್ಲಿ ಆರ್ಥಿಕ ನೆರವನ್ನು ಒದಗಿಸುತ್ತದೆ. ಅಮಿತಾಭ್ ಭಟ್ಟಾಚಾರ್ಯ ಅವರು ‘‘ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸಬ್ಸಿಡಿ ರೂಪದಲ್ಲಿ ವಿದ್ಯಾರ್ಥಿ ಸಾಲವನ್ನು ಪಡೆಯಲೇ ಬೇಕಾದ ಅನಿವಾರ್ಯತೆಗೆ ಸಿಲುಕುತ್ತಾರೆ ಮತ್ತು ಸಾಲದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಾರೆ. ಈ ಕಾರಣಕ್ಕೆ ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳು ಸಾಲ ಮರುಪಾವತಿಸಲಾಗದೆ, ತಲೆಗಂದಾಯದ ಚಕ್ರವ್ಯೆಹಕ್ಕೆ ಸಿಲುಕಿ ತಮ್ಮ ಕಲಿಕೆಯನ್ನೇ ಮೊಟಕುಗೊಳಿಸುವ ಅಪಾಯಕ್ಕೆ ಗುರಿಯಾಗಲಿದ್ದಾರೆ’’ ಎಂದು ವಿಮರ್ಶಿಸುತ್ತಾರೆ. ಎಚ್‌ಇಸಿಐ ಸ್ಥಾಪನೆಯ ಮೂಲಕ ಸಾಲದ ಬಂಡವಾಳ ವ್ಯವಸ್ಥೆ ಕ್ರಮಬದ್ಧ್ದಗೊಳ್ಳುತ್ತದೆ ಮತ್ತು ಕಾನೂನು ಚೌಕಟ್ಟಿನ ಅಡಿಯಲ್ಲಿ ತರಲಾಗುತ್ತದೆ

ಎಚ್‌ಇಸಿಐ ಕರಡಿನಲ್ಲಿ ಯುಜಿಸಿಯು ಕೇಂದ್ರ, ರಾಜ್ಯ ವಿಶ್ವವಿದ್ಯಾನಿಲಯ ಗಳಿಗೆ ನಿರ್ದಿಷ್ಟ ಶ್ರೇಣಿಯೊಳಗೆ ಅವುಗಳ ಸ್ಥಾನಮಾನವೇನು ಎಂದು ಎಲ್ಲಿಯೂ ಸ್ಪಷ್ಟಗೊಳಿಸಿಲ್ಲ, ಇದು ಅದರ ಒಂದು ನಕರಾತ್ಮಕ ಅಂಶವಾಗಿದೆ ಎಂದು ವಿವರಿಸಲಾಗಿದೆ. ಅಂದರೆ ಇನ್ನು ಮುಂದೆ ಈ ಉನ್ನತ ಶಿಕ್ಷಣ ಆಯೋಗದ ರಚನೆಯ ಮೂಲಕ ವಿಶ್ವವಿದ್ಯಾನಿಲಯಗಳಿಗೆ ದರ್ಜೆಗಳನ್ನು ನಿಗದಿಪಡಿಸಲು ಶಿಕ್ಷಣದಲ್ಲಿ ಶ್ರೇಣೀಕೃತ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತದೆ. ಸಂಶೋಧನಾ ವಿದ್ಯಾರ್ಥಿ ಸಾಕಿಬ್ ಖಾನ್ ‘‘ಈ ಶ್ರೇಣೀಕೃತ ವ್ಯವಸ್ಥೆಯಲ್ಲಿ ಸಂಪೂರ್ಣ ಸ್ವಾಯತ್ತೆ, ದುಬಾರಿ ಶುಲ್ಕವನ್ನು ವಿಧಿಸುವ ವಿವಿಗಳನ್ನು ವಿಶ್ವ ದರ್ಜೆಯ ಸಂಸ್ಥೆಗಳೆಂದು ಕರೆಯಲಾಗುತ್ತದೆ ಸಾಮಾನ್ಯ ವಿದ್ಯಾರ್ಥಿಗಳಿರುವ ವಿವಿಗಳನ್ನು ಕೆಳದರ್ಜೆ ಎಂದು ಕಪ್ಪುಪಟ್ಟಿಗೆ ಸೇರಿಸುತ್ತಾರೆ’’ ಎಂದು ಬರೆಯುತ್ತಾರೆ.

ಮೋದಿ ಸರಕಾರವು ಈ ಮೇಲಿನಂತೆ ತೀವ್ರವಾದ ಬದಲಾವಣೆಗಳ ಮೂಲಕ ಅಂತಿಮವಾಗಿ ಉನ್ನತ ಶಿಕ್ಷಣವನ್ನು ಹಂತ ಹಂತವಾಗಿ ಖಾಸಗೀಕರಣಗೊಳಿಸುವ ತಮ್ಮ ಅಜೆಂಡಾಗಳನ್ನು ಜಾರಿಗೊಳಿಸಲು ಪ್ರಯತ್ನಿಸುತ್ತಿದೆ. ಆದರೆ ಉಪಕಾರಕ್ಕೆ ಎಂಬಂತೆ ಶಿಕ್ಷಣ ತಜ್ಞರಿಗೆ, ಸಾರ್ವಜನಿಕರಿಗೆ ತಮ್ಮ ಸಲಹೆ, ಅಭಿಪ್ರಾಯಗಳನ್ನು ನೀಡಲು ಜುಲೈ 7ರ ಸಂಜೆಯವರೆಗೆ ಗಡುವು ನೀಡಿದೆ. ಮುಂದೇನು ????