ಚಾಮರಸ
ಚಾಮರಸ
ಸು. 1430.ಕನ್ನಡದ ಪ್ರಸಿದ್ಧ ಕವಿ.
ಕೃತಿ:- "ಪ್ರಭುಲಿಂಗ ಲೀಲೆಯು ಭಾಮಿನಿ ಷಟ್ಪದಿಯಲ್ಲಿ ಬರೆಯಲಾದ ಈತನ ಪ್ರಸಿದ್ಧ ಕಾವ್ಯ.
ರಾಜಾಶ್ರಯ:-ಇಮ್ಮಡಿ ಪ್ರೌಢದೇವರಾಯ.
ಬಿರುದುಗಳು:- ಅನ್ಯಮತ ಕೋಳಾಹಲ, ವೀರಶೈವಾಚಾರ ಮಾರ್ಗ ಸಾರೋದ್ಧಾರ.
ಸ್ಥಳ:- ಗದುಗ ತಾಲೂಕಿನ ನಾಗಣಾಪುರ. .
ಈಕಾವ್ಯವು ನಾಲ್ಕು ಭಾಷೆಗಳಿಗೆ ಅನುವಾದವಾಗಿದೆಯೆಂದರೆ ಇದರ ಮಹತ್ವವನ್ನು ಅರಿಯಬಹುದು.ಪಿಡುಪರ್ತಿ ಬಸವ ಕವಿಯು ಇದನ್ನು ಚಂಪೂ ರೂಪದಲ್ಲಿ , ಪಿಡುಪರ್ತಿ ಸೋಮನಾಥನು ದ್ವಿಪದಿಯಲ್ಲಿ ತೆಲುಗಿಗೆ ಅನುವಾದಿಸಿದ್ದಾರೆ. ತಿರುವಣ್ನಾಮಲೈಯ ಶಿವಪ್ರಕಾಶ ಸ್ವಾಮಿಯು ತಮಿಳಿಗೆ, ಬ್ರಹ್ಮದಾಸನು ಮರಾಠಿಗೆ ಅನುವಾದಿಸಿದ್ದಾರೆ. ಈ ಕಾವ್ಯವು ಸಂಸ್ಕೃತ ಭಾಷೆಗೂ ಸಹ ಭಾಷಾಂತರವಾಗಿದೆ.
ಪ್ರಸಿದ್ಧಿಸಂಪಾದಿಸಿ
ನಡುಗನ್ನಡದ ಶ್ರೇಷ್ಠ ಕಾವ್ಯ ಎಂದು ಪ್ರಸಿದ್ಧವಾಗಿರುವ ಪ್ರಭುಲಿಂಗಲೀಲೆಯ ಕರ್ತೃ. ವೀರಶೈವ ಕವಿ. ವಿಜಯನಗರದ ಪ್ರೌಢ ದೇವರಾಯನ ಕಾಲದ ನೂರೊಂದು ವಿರಕ್ತರಲ್ಲಿ ಗಣನೆಯಾಗಿದ್ದಾನೆ. ವೀರಶೈವಾಚಾರಮಾರ್ಗಸಾರೋದ್ಧಾರ, ಅನ್ಯಮತಕೋಳಾಹಳ ಎಂಬ ಬಿರುದುಗಳನ್ನು ಪಡೆದಿದ್ದ ಈತನ ಸ್ಥಳ ಗದಗು ಇಲ್ಲವೆ ನಾಗಣಾಪುರ ಎಂದು ಹೇಳಲಾಗಿದೆ.
ಕಾವ್ಯಸಂಪಾದಿಸಿ
ಹರಿಹರ ರಾಘವಾಂಕರ ತರುವಾಯ ಐತಿಹಾಸಿಕ ವ್ಯಕ್ತಿಗಳನ್ನು ಕುರಿತು ಕಾವ್ಯ ಬರೆದವರಲ್ಲಿ ಚಾಮರಸ ಅಗ್ರಗಣ್ಯ. 25 ಗತಿಗಳು ಮತ್ತು 1111 ಪದ್ಯಗಳನ್ನು ಒಳಗೊಂಡಿರುವ ಪ್ರಭುಲಿಂಗಲೀಲೆ ಮಧ್ಯಮ ಗಾತ್ರದ ಕಾವ್ಯ. ಪ್ರಭುಲಿಂಗಲೀಲೆ, ಎಂದರೆ ಪ್ರಭುವೇ ಲಿಂಗಲೀಲೆಯಲ್ಲಿ ಮೆರೆದುದು ಎಂಬ ಭಾವ ಬರುವಂತೆ ಹೆಸರಿಸಿ, ಕಾವ್ಯದ ಉದ್ದಕ್ಕೂ ಅದೇ ರೀತಿ ಅಲ್ಲಮನ ಚರಿತ್ರೆಯನ್ನು ಕವಿ ಉಜ್ಜ್ವಲವಾಗಿ ಚಿತ್ರಿಸಿದ್ದಾನೆ. ಕವಿಯ ವಿಷಯವಾಗಿ ಹೆಚ್ಚಿನ ಯಾವ ಮಾಹಿತಿ ಸಿಗದಿದ್ದರೂ ಆತ ಚಿತ್ರಿಸಿರುವ ಅಲ್ಲಮನ ಚರಿತ್ರೆಯನ್ನೇ ಆಧರಿಸಿ ಊಹಿಸುವುದಾದರೆ ಚಾಮರಸನೂ ತನ್ನ ಕಥಾನಾಯಕನಂತೆ ವಿರಕ್ತನೂ, ಸಂಯಮಿಯೂ ಸದಾಜಾರ ಸಂಪನ್ನನೂ ಆಗಿದ್ದನೆಂದು ಊಹಿಸಬಹುದಾಗಿದೆ.
ಹನ್ನೆರಡನೆಯ ಶತಮಾನದಲ್ಲಿ ಮಾನವಕುಲದ ಉದ್ಧಾರಕ್ಕಾಗಿ ನಡೆದ ಶಿವಶರಣರ ಕ್ರಾಂತಿಯಲ್ಲಿ ಅಲ್ಲಮಪ್ರಭು ಜ್ಞಾನನಿಧಿಯಾಗಿ ವೈರಾಗ್ಯ ಮೂರ್ತಿಯಾಗಿ ಕಂಗೊಳಿಸಿದ್ದಾನೆ. ಅಂಧಾಭಿಮಾನಕ್ಕೆ ಒಳಗಾಗದೆ ಸಾಧಕರ ಲೋಪ ದೋಷಗಳ ಮೇಲೆ ಜ್ಞಾನದ ಬೆಳಕನ್ನು ಬೀರಿ ಅವರನ್ನು ಒರೆದು, ಕೆಡೆನುಡಿದು, ದಾರಿ ತೋರಿ ಸಮಸ್ತಜಾತಿಯ ಜಾಲವನ್ನು ಸರ್ವವನ್ನು ಕರುಣಿಸಿ, ಉದ್ಧರಿಸುತ್ತ ಸಾಗಿದ ಈ ಮಹಾತ್ಮನ ದಿವ್ಯ ವ್ಯಕ್ತಿತ್ವವನ್ನು ಈ ಕಾವ್ಯ ಅಪೂರ್ವವಾದ ರೀತಿಯಲ್ಲಿ ಚಿತ್ರಿಸುತ್ತದೆ. ಅಲ್ಲಮ ಪ್ರಭುವಿನ ಚರಿತ್ರೆಯನ್ನು ಮೊಟ್ಟಮೊದಲು ಬರೆದ ಹರಿಹರ ತನ್ನ ಪ್ರಭುದೇವರ ರಗಳೆಯಲ್ಲಿ ಅಲ್ಲಮ ಕಾಮಲತೆಗೆ ಮರುಳಾಗಿ ವಿರಹದಿಂದ ಬೆಂದು ವೈರಾಗ್ಯ ಪಡೆದಂತೆ ಚಿತ್ರಿಸಿದ್ದರೆ `ಲಲಿತನಿರ್ಮಲ ಚಂದ್ರಕಾಂತದ ಶಿಲೆಯ ಹತ್ತಿರ ಲತೆಯ ದಾವಾನಳನು ಕೊಳಲಾಜ್ವಾಲೆಯಾ ಶಿಲೆಯೊಳಗೆ ತೋರ್ಪಂತೆ ತಿಳಿಯದಯದ ಜನಕೆ ಮಾಯೆಯ ತಳಿತ ಕಾಮಜ್ವಾಲೆಯಲ್ಲಮನೊಳಗೆ ಪ್ರತಿಬಿಂಬಿಸಿದುದಾತನೆ ಕಾಮಿಯೆಂಬಂತೆ-ಎಂದು ಚಾಮರಸ ಅಲ್ಲಮನ ಗುರುಗುಹೇಶ್ವರ ಸ್ವರೂಪದ ದರ್ಶನ ಮಾಡಿಸಿದ್ದಾನೆ. ತನ್ನ ಕಾವ್ಯ `ಸತ್ತವರ ಕಥೆಯಲ್ಲ ಜನನದ ಕುತ್ತದಲ್ಲಿ ಕುದಿ ಕುದಿದು ಕರ್ಮದ ಕತ್ತಲೆಗೆ ಸಿಲುಕುವರ ಸೀಮೆಯ ಮಾತು ತಾನಲ್ಲ ಎಂದು ಘೋಷಿಸಿ `ಸತ್ಯಶರಣರು ತಿಳಿವುದೀ ಪ್ರಭುಲಿಂಗಲೀಲೆಯನು ಎಂದಿರುವುದು ಕವಿಯ ಉದ್ದೇಶಕ್ಕೆ ಸಾಕ್ಷಿ.
ಮಲಯಜದ ಮರ ಗಾಳಿ ಸೋಂಕಿನಲುಳಿದ ಮರ ಪರಿಮಳಿಸುವಂತೆ ಅಲ್ಲಮನ ದಿವ್ಯ ಸಂಪರ್ಕದಿಂದ ಬಸವಣ್ಣ, ಸಿದ್ಧರಾಮ, ಗೊಗ್ಗಯ್ಯ, ಗೋರಕ್ಷ, ಮಾಯಾದೇವಿ, ಮಹಾದೇವಿಯಕ್ಕ, ಮುಕ್ತಾಯಕ್ಕ ಮೊದಲಾದವರು ಕಣ್ಗೆಸೆದರೂ ಆಯಾ ಪಾತ್ರವೃಕ್ಷಗಳು ತಮ್ಮ ಸತ್ತ್ವದಿಂದಲೇ ಬೆಳೆದು, ತಂತಮ್ಮ ನೆಲೆಯಲ್ಲಿ ನಿಂತು ಅಲ್ಲಮನ ಪಾದಕ್ಕೆ ಬಾಗಿ ಹೂ ಬಿಟ್ಟಿವೆ. ಒಂದು ದೃಷ್ಟಿಯಿಂದ ಪಾರ್ವತಿಯ ತಾಮಸಕಳೆಯಾಗಿ ಬಂದ ಮಾಯೆ ಅವಳಿಗೆ ತಿಳಿವನ್ನು ಕೊಟ್ಟ ವಿಮಳೆ, ಸಾತ್ತ್ವಿಕ ಕಳೆಯಾಗಿ ಬಂದ ಅಕ್ಕಮಹಾದೇವಿ, ಸುಜ್ಞಾನಿ ನಿರಹಂಕಾರರ ಮಗನಾಗಿ ಹುಟ್ಟಿದ ಅಲ್ಲಮ-ಈ ಮುಂತಾದ ಕಥಾರಚನೆಯಲ್ಲಿ ಆಧ್ಯಾತ್ಮಿಕವಾದ ಸಾಂಕೇತಿಕ ಧ್ವನಿಯ ಏಕತೆ ಕಾಣುತ್ತದೆ. `ಶಿವನ ನಟ ನಾಟಕದ ಮಹಿಮೆಯನ್ನು ತೆರೆದು ತೋರಿಸುವ ಈ ಕಾವ್ಯದಲ್ಲಿ ಎಲ್ಲ ಪಾತ್ರಗಳೂ ಜೀವಕಳೆಯಿಂದ ಕೂಡಿ ಶಿವಕಳೆಯನ್ನು ಬೆಳಗುತ್ತವೆ.
ತಿಳಿಗನ್ನಡದ ತುಂಬಿದ ತೊರೆಯಂತೆ ನಿರರ್ಗಳವಾಗಿ ಹರಿಯುವ ಚಾಮರಸನ ಭಾಮಿನೀ ಷಟ್ಟದಿಯ ಶೈಲಿಯನ್ನು ಕುಮಾರವ್ಯಾಸನೊಡನೆ ಹೋಲಿಸಬಹುದಾದರೂ ಇವನ ಭಾಷೆ ನಯಗಾರಿಕೆಯಿಂದ ಕೂಡಿದೆ. ಆ ಕಾಲದ ಶಿವಶರಣರ ವಚನಗಳನ್ನು ಕವಿ ಚೆನ್ನಾಗಿ ಅಭ್ಯಾಸಮಾಡಿದ್ದ ಎಂಬುದಕ್ಕೆ ಇವನ ವಾಣಿ ಸಾಕ್ಷಿ ಹೇಳುತ್ತದೆ. ಭಾವ ಭಾಷೆಗಳಲ್ಲಿನ ಅಪೂರ್ವವಾದ ಹೊಂದಾಣಿಕೆಯಿಂದಲೂ ಉಜ್ಜ್ವಲವಾದ ಉಪಮೆ ರೂಪಕ ದೃಷ್ಟಾಂತಗಳಿಂದಲೂ ಸಮಯೋಚಿತವಾದ ವರ್ಣನೆ ಮತ್ತು ದೇಶೀಯ ಬೆಡಗಿನ ಪರಿಣಾಮದ ಉತ್ಕಟತೆಯಿಂದಲೂ ಇವನ ಶೈಲಿ ಇವನ ಸ್ವತಂತ್ರ ಕವಿತಾಮಾರ್ಗದ ಮುಖಬಿಂಬದಂತಿದೆ.
ಚಾಮರಸನ ಪ್ರಭುಲಿಂಗಲೀಲೆ ಸಂಸ್ಕೃತ, ತಮಿಳು, ತೆಲುಗು ಹಾಗೂ ಮರಾಠಿ ಭಾಷೆಗಳಿಗೆ ಪರಿವರ್ತನ ಹೊಂದಿದ ಕೀರ್ತಿ ಪಡೆದ ಏಕಮಾತ್ರ ಕನ್ನಡ ಕಾವ್ಯವಾಗಿದೆ.
ಚಾಮರಸ
ಲೇಖಕನ ಹೆಸರು: ಚಾಮರಸ
ಕಾಲ: 15 ನೆಯ ಶತಮಾನ, ಸುಮಾರು ಕ್ರಿ.ಶ. 1430
ಸ್ಥಳ: ಧಾರವಾಡ ಜಿಲ್ಲೆಯ ಗದಗು ತಾಲ್ಲೂಕಿನ ನಾರಾಯಣಪುರದಲ್ಲಿ(ನಾಗನಪುರ?) ಹುಟ್ಟಿದವನು. ವಿಜಯನಗರ ಸಾಮ್ರಾಜ್ಯದ ಕೇಂದ್ರವಾದ ಹಂಪಿಯಲ್ಲಿ ಜೀವನ.
ಮತ-ಧರ್ಮ: ವೀರಶೈವ
ರಾಜಾಶ್ರಯ: ವಿಜಯನಗರದ ದೊರೆಯಾದ ಪ್ರೌಢದೇವ ರಾಯ-2.
ಬಿರುದುಗಳು:
ಕಿರು ಪರಿಚಯ:
ಚಾಮರಸನು ನಡುಗನ್ನಡದ ಪ್ರಮುಖ ಕವಿಗಳಲ್ಲಿ ಒಬ್ಬ. ಅವನು ಹನ್ನೆರಡನೆಯ ಶತಮಾನದ ಸಂತ-ಅನುಭಾವಿ-ಕವಿಯಾದ ಅಲ್ಲಮಪ್ರಭುವಿನ ಜೀವನ ಮತ್ತು ಸಾಧನೆಗಳನ್ನು ಕೇಂದ್ರವಾಗಿಟ್ಟುಕೊಂಡು, ‘ಪ್ರಭುಲಿಂಗಲೀಲೆ’ಯೆಂಬ ಕಾವ್ಯವನ್ನು ರಚಿಸಿದ್ದಾನೆ. ಚಾಮರಸನು, ಸರಿಸುಮಾರು ಅದೇ ಪ್ರದೇಶದಲ್ಲಿ ಕಾವ್ಯರಚನೆ ಮಾಡಿದ ಇನ್ನೊಬ್ಬ ಪ್ರಮುಖ ಕವಿ ಕುಮಾರವ್ಯಾಸನ ಸಮಕಾಲೀನನಾಗಿದ್ದನು. ಚಾಮರಸನಿಗೆ ತಾನು, ರಕ್ತರಂಜಿತವಾದ ಯುದ್ಧಗಳ ಬಗ್ಗೆ ಹಾಗೂ ದುರಾಸೆಯಿಂದ ಕೊರಗುತ್ತಾ ಜನನಮರಣಗಳ ಚಕ್ರದಲ್ಲಿ ಸಿಕ್ಕಿಕೊಂಡ ಸಾಮಾನ್ಯ ಮನುಷ್ಯರ ಬಗ್ಗೆ ಬರೆಯುತ್ತಿಲ್ಲವೆನ್ನುವುದು ಹೆಮ್ಮೆಯ ಸಂಗತಿ. ಬದಲಾಗಿ, ಅವನು ಕನ್ನಡ ಭಾಷೆಯನ್ನು ಇನ್ನಿಲ್ಲದ ಎತ್ತರಗಳಿಗೆ ಸೇರಿಸಿದ ಮಹಾಪುರುಷನೊಬ್ಬನ ಬಗ್ಗೆ ಬರೆದನು. ಚಾಮರಸನು, ಮಧ್ಯಕಾಲೀನ ಕರ್ನಾಟಕವನ್ನು ಅದರ ಬಹುಮುಖಿಯಾದ ಅಸ್ತಿತ್ವದಲ್ಲಿ ಕಟ್ಟಿಕೊಡುವ ಕೆಲಸದಲ್ಲಿ ಯಶಸ್ವಿಯಾಗಿದ್ದಾನೆ. ಗೋರಕ್ಷ, ಸಿದ್ದರಾಮ, ಅಕ್ಕಮಹಾದೇವಿ ಮುಂತಾದ ಶರಣರು ಹಾಗೂ ಮಾಯಾದೇವಿಯಂತಹ ರಾಜಕುಮಾರಿಯ ಚಿತ್ರಣಗಳು ಬಹಳ ಆಕರ್ಷಕವಾಗಿವೆ.ಮಾಯಾದೇವಿಯ ಅರಮನೆಯ ಪರಿಸರದ ವರ್ಣನೆಯೂ ಸಹಜವಾಗಿ ಮೂಡಿಬಂದಿದೆ.
ಪ್ರಭುಲಿಂಗಲೀಲೆಯು, ಧಾರ್ಮಿಕ ನಾಯಕನೊಬ್ಬನನ್ನು ಪುರಾಣಗಳ ಬಗೆಯಲ್ಲಿ ಕಟ್ಟಿಕೊಡುವ ಮತ್ತು ದೈವತ್ವಕ್ಕೇರಿಸುವ ಸಾರ್ಥಕವಾದ ಪ್ರಯತ್ನ. ಈ ಕಾವ್ಯದಲ್ಲಿ ಹದಿನೈದು ಅಧ್ಯಾಯಗಳೂ ಸುಮಾರು ಆರು ನೂರು ಪದ್ಯಗಳೂ ಇವೆ. ಕಾವ್ಯವು ನಡುಗನ್ನಡ ಭಾಷೆಯಲ್ಲಿ, ಭಾಮಿನೀ ಷಟ್ಪದಿಯಲ್ಲಿ ರಚಿತವಾಗಿದೆ. ಕಾವ್ಯಶೈಲಿಯು ಸರಳವೂ ಪ್ರಭಾವಶಾಲಿಯೂ ಆಗಿದೆ. ಕಾವ್ಯಭಾಷೆಯಲ್ಲಿ ಪಾಂಡಿತ್ಯದ ಭಾರವಿಲ್ಲ. ಮಾಯಾದೇವಿಯ ಬಾಲ್ಯದ ವರ್ಣನೆ, ಅಲ್ಲಮ ಹಾಗೂ ಇತರ ಸಾಧಕರ ಮುಖಾಮುಖಿ ಮುಂತಾದ ಭಾಗಗಳು ಆಕರ್ಷಕವಾಗಿವೆ; ಅವುಗಳಲ್ಲಿ ಪರಿಣಾಮಕಾರಿಯಾದ ನಾಟಕದ ಗುಣಗಳಿವೆ. ತಮಿಳು, ತೆಲುಗು, ಮರಾಠಿ ಮತ್ತು ಸಂಸ್ಕೃತ ಭಾಷೆಗಳಿಗೆ ಅನುವಾದವಾಗಿರುವ ಕೆಲವೇ ಕೆಲವು ಕನ್ನಡ ಕಾವ್ಯಗಳಲ್ಲಿ ಪ್ರಭುಲಿಂಗಲೀಲೆಯೂ ಒಂದು. ವೀರಶೈವ ತಾತ್ವಿಕತೆ ಮತ್ತು ಧರ್ಮಗಳನ್ನು ಕಟ್ಟುವ ಕೆಲಸದಲ್ಲಿ ಪ್ರಭುಲಿಂಗಲೀಲೆ ಮತ್ತು ಅಂತಹುದೇ ಅನೇಕ ಕೃತಿಗಳು ಮುಖ್ಯವಾದ ಪಾತ್ರವನ್ನು ವಹಿಸಿವೆ. ಅದಕ್ಕೆ ಸಾಹಿತ್ಯಕೃತಿಯಾಗಿಯೂ ಎತ್ತರದ ಸ್ಥಾನವು ಮೀಸಲಾಗಿದೆ.
ಇತಿಹಾಸ ಮತ್ತು ಸಾಹಿತ್ಯಗಳ ನಡುವೆ ಅರ್ಥಪೂರ್ಣವಾದ ಸಂಬಂಧಗಳನ್ನು ಕಟ್ಟಿಕೊಡಲು ಹವಣಿಸಿರುವ ಕೆಲವೇ ಕೆಲವು ಕನ್ನಡ ಕವಿಗಳಲ್ಲಿ ಚಾಮರಸನಿಗೆ ವಿಶಿಷ್ಟವಾದ ಸ್ಥಾನವು ಮೀಸಲಾಗಿದೆ.
ಕೃತಿಗಳು: ಪ್ರಭುಲಿಂಗಲೀಲೆ
ಮುಂದಿನ ಓದು ಮತ್ತು ಲಿಂಕುಗಳು:
ಅ. ಅಲ್ಲಮಪ್ರಭು, ಜಿ.ಪಿ. ರಾಜರತ್ನಂ, 1954, ಬೆಂಗಳೂರು.
ಆ. ಪ್ರಭುಲಿಂಗಲೀಲೆ ಮತ್ತು ಪ್ರಭುಲಿಂಗಲೀಲೆಯ ಸಂಗ್ರಹಗಳಿಗೆ ಶಿ.ಶಿ.ಬಸವನಾಳ ಮತ್ತು ಎಂ.ಆರ್.ಶ್ರೀ.ಯವರು ಬರೆದಿರುವ ಪ್ರಸ್ತಾವನೆಗಳು.
ಇಂತಿ
ಮಂಜುನಾಥ ಕೆ ಎಂ
ಜನತಾಸರ್ಕಾರಿಪ್ರಥಮದರ್ಜೆಕಾಲೇಜು
ಬಸವಪಟ್ಟಣ [ಚಿರಡೋಣಿ]
Tq..sir.
ಪ್ರತ್ಯುತ್ತರಅಳಿಸಿಈ ಲೇಖನದ ಸುಮಾರು ಯಥಾವತ್ ಭಾಗವು Wikipedia.org ಯಿಂದ ತೆಗೆದುಕೊಂದಿದ್ದು. ಹಾಗಾಗಿ 'ಕೃಪೆ' ಎಂದು ಹಾಕುವುದು ಶೋಭೆ ಎನಿಸುತ್ತದೆ.
ಪ್ರತ್ಯುತ್ತರಅಳಿಸಿ