ಶನಿವಾರ, ಮಾರ್ಚ್ 16, 2019

ಉನ್ನತ ಶಿಕ್ಷಣ 4

ಕರ್ನಾಟಕದಲ್ಲಿ ಈ ಶತಮಾನದ ಸವಾಲುಗಳು
ಸಂಪಾದಿಸಿ

ಸಂಪನ್ಮೂಲಗಳ ಕೊರತೆಗಳ ನಡುವೆಯೂ ನಾವು ಸಮರ್ಥವಾದ ಶಿಕ್ಷಣವನ್ನು ನೀಡುವಲ್ಲಿ ಯಶಸ್ಸನ್ನು ಕಂಡಿಲ್ಲ; ಉನ್ನತ ಶಿಕ್ಷಣ ಕ್ಷೇತ್ರವು ನಮ್ಮ ಸಮಾಜದಲ್ಲಿ ತನ್ನ ಜವಾಬ್ದಾರಿಯನ್ನು ನಿರ್ವಹಿಸಿಲ್ಲ ಎಂಬ ಅಭಿಪ್ರಾಯವಿದೆ. ಸಂಪನ್ಮೂಲಗಳ ಕೊರತೆಗಳೂ ಇವೆ.
"ಇಂದು ನಾವು ನೀಡುತ್ತಿರುವ ಶಿಕ್ಷಣದ ಗುಣಮಟ್ಟವು ಅಷ್ಟೇನು ಉತ್ತಮವಾದುದಲ್ಲ ಹಾಗೂ ನಮ್ಮ ಉನ್ನತ ಶಿಕ್ಷಣ ಸಂಸ್ಥೆಗಳು ಬಹುಮಟ್ಟಿಗೆ ಒಳ್ಳೆಯ ಸಂಸ್ಥೆಗಳಲ್ಲ ಎನ್ನುವುದು ಸಹ ಎಲ್ಲರಿಗೂ ಗೊತ್ತಿರುವ ವಿಚಾರಗಳೆ. ಈ ಸಂಸ್ಥೆಗಳಲ್ಲಿ ಬೋಧಿಸುವ ಅಧ್ಯಾಪಕರು ಶೈಕ್ಷಣಿಕವಲ್ಲದ ವಿಚಾರಗಳಲ್ಲಿಯೇ ಹೆಚ್ಚಿನ ಆಸಕ್ತಿ ಹೊಂದಿರುವವರು. ಅವರ ಬದ್ಧತೆಯಷ್ಟೆ ಸಮಸ್ಯಾತ್ಮಕವಾಗಿದೆ ಅವರ ಶೈಕ್ಷಣಿಕ ಸಾಮರ್ಥ್ಯ ಮತ್ತು ಜ್ಞಾನಾರ್ಜನೆಯ ಸಂಕಲ್ಪ.
ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಸಂಶೋಧನೆಗಳು ಹಿಂದೆಂದಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ನಡೆಯುತ್ತಿವೆ. ಸಾಕಷ್ಟು ಸಂಪನ್ಮೂಲಗಳು, ಅದರಲ್ಲೂ ವಿದ್ಯಾರ್ಥಿವೇತನಗಳು, ಸಂಶೋಧಕರಿಗೆ ಲಭ್ಯವಿದೆ. ಆದರೂ ಸಂಶೋಧನೆಯ ಗುಣಮಟ್ಟ ಸಂಪೂರ್ಣ ಕುಸಿದಿದೆ. ಒಟ್ಟಾರೆಯಾಗಿ ಹೇಳುವುದಾದರೆ, ನಮ್ಮ ವಿಶ್ವವಿದ್ಯಾನಿಲಯಗಳು ತಮ್ಮ ಮೂಲ ಕರ್ತವ್ಯವಾದ ಜ್ಞಾನದ ಉತ್ಪಾದನೆ ಮತ್ತು ಪ್ರಸರಣಗಳಲ್ಲಿ ಶೋಚನೀಯವಾಗಿ ಸೋತಿವೆ. ಉನ್ನತ ಶಿಕ್ಷಣ ಕ್ಷೇತ್ರದ ಹಲವು ರಾಚನಿಕ ಸಮಸ್ಯೆಗಳು ಸಹ ಎದ್ದು ಕಾಣುತ್ತವೆ".ಎನ್ನುತ್ತಾರೆ ಕರ್ನಾಟಕ ಮುಕ್ತವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಪೃಥ್ವಿ ದತ್ತ ಚಂದ್ರ ಶೋಭಿ,
ಕ್ರಿಯಾಶೀಲ ಅಧ್ಯಾಪಕರ ಅಗತ್ಯ
ಸಂಪಾದಿಸಿ

ಹಿಂದೆ ರಾಜ್ಯದ ಉನ್ನತ ಶಿಕ್ಷಣ ಸಂಸ್ಥೆಗಳು ಜ್ಞಾನ ಸೃಷ್ಟಿಸುವ ಶ್ರೇಷ್ಠ ಕೇಂದ್ರಗಳಾಗಿರಲಿಲ್ಲ. ಆದರೂ 1970-80ರ ದಶಕದ ತನಕ ಒಂದು ಮಟ್ಟದ ಸಂಶೋಧನಾ ಮತ್ತು ಜ್ಞಾನಸೃಷ್ಟಿಯ ಸಾಮರ್ಥ್ಯ ಮೈಸೂರು, ಬೆಂಗಳೂರು ಮತ್ತು ಕರ್ನಾಟಕ ವಿಶ್ವವಿದ್ಯಾನಿಲಯಗಳಲ್ಲಿದ್ದವು.ಜಗತ್ತಿನ ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳಲ್ಲಿ ಅಧ್ಯಯನ ಮಾಡಿದ್ದ, ಜಾಗತಿಕ ನಿಯತಕಾಲಿಕಗಳಲ್ಲಿ ಪ್ರಕಟಿಸುತ್ತಿದ್ದ ಪ್ರಾಧ್ಯಾಪಕರು ಸಾಕಷ್ಟು ಸಂಖ್ಯೆಯಲ್ಲಿ ಇರುತ್ತಿದ್ದರು. ಆದರೆ 1980ರ ನಂತರ ಜಾಗತಿಕ ಬೌದ್ಧಿಕ ಬೆಳವಣಿಗೆಗಳಿಗೆ ಸ್ಪಂದಿಸುವ ಶಕ್ತಿಯನ್ನು ಕಳೆದುಕೊಂಡಿದ್ದೇವೆ.
ನಾವು ಮಾಡಲೇಬೇಕಾಗಿರುವ ಬಹುಮುಖ್ಯ ಕೆಲಸವೆಂದರೆ ಅಧ್ಯಾಪಕರ ನೇಮಕಾತಿಯನ್ನು ಸರಿಯಾಗಿ ನಿರ್ವಹಿಸುವುದು. ಅಧ್ಯಾಪಕರ ನೇಮಕಾತಿಯಲ್ಲಿ ಒಂದು ಸರಳ ಸೂತ್ರವನ್ನು ಅನುಸರಿಸುವುದು ಬಹಳ ಮುಖ್ಯ. ಅದೇನೆಂದರೆ ತಮ್ಮ ಅಧ್ಯಯನ ಶಿಸ್ತಿನಲ್ಲಿ ಜಾಗತಿಕ ಮಟ್ಟಿದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಅರ್ಥೈಸಿಕೊಂಡು, ಪ್ರತಿಕ್ರಿಯಿಸುವ ಸಾಮರ್ಥ್ಯ ಇರುವವರನ್ನು ಆದ್ಯತೆಯ ಮೇರೆಗೆ ನಮ್ಮ ವಿಶ್ವವಿದ್ಯಾನಿಲಯಗಳೊಳಗೆ ಎಲ್ಲ ಹಂತಗಳಲ್ಲಿಯೂ ತರಬೇಕು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ