ಶನಿವಾರ, ಮಾರ್ಚ್ 16, 2019

ಉನ್ನತ ಶಿಕ್ಷಣ ಆಯೋಗ

‘ಉನ್ನತ ಶಿಕ್ಷಣ ಆಯೋಗ’ ಮೂಡಿಸಿರುವ ನಿರೀಕ್ಷೆಗಳು

ಸ್ವಾತಂತ್ರ್ಯ ಬಂದ ದಶಕದಲ್ಲಿ 1953ರಲ್ಲಿ ಆರಂಭವಾಗಿ ಇಲ್ಲಿಯವರೆಗೂ ದೇಶದ ಉಚ್ಚ ಶಿಕ್ಷಣವನ್ನು ಮುನ್ನಡೆಸುವ, ಹೊಂದಾಣಿಕೆ ಮಾಡುವ, ಮತ್ತು ಸಂಶೋಧನೆಗಳ ಮಾನದಂಡಗಳನ್ನು ನಿರೂಪಿಸುವ ಜವಾಬ್ದಾರಿ ಹೊಂದಿದ್ದ ವಿಶ್ವವಿದ್ಯಾಲಯ ಧನಸಹಾಯ ಆಯೋಗ (ಯುಜಿಸಿ) ಸಂಸ್ಥೆಯನ್ನು ಹಿಂದಕ್ಕೆ ಪಡೆದು ಅದರ ಸ್ಥಳದಲ್ಲಿ ‘ಹೈಯರ್ ಎಜುಕೇಶನ್ ಕಮಿಶನ್ ಆಫ್ ಇಂಡಿಯಾ’ ಎನ್ನುವ ಹೊಸ ಸಂಸ್ಥೆಯೊಂದನ್ನು ಕೇಂದ್ರ ಸರಕಾರ ಹುಟ್ಟು ಹಾಕಲು ಬಯಸಿರುವುದು ಶಿಕ್ಷಣ ಕ್ಷೇತ್ರದಲ್ಲಿ ಮಹತ್ತರ ಬೆಳವಣಿಗೆ. ಒಮ್ಮೆ ಯುಜಿಸಿಯ ಅಧ್ಯಕ್ಷರಾಗಿದ್ದ ದಿ. ಪ್ರೊ.ಯಶ್‌ಪಾಲ್ ಹೇಳಿದ ಹಾಗೆ ಅತಿ ಆಧುನಿಕ, ಆಧುನಿಕ, ಮಧ್ಯಕಾಲೀನ ಹಾಗೂ ಪುರಾತನ, ಈ ನಾಲ್ಕೂ ಶೈಕ್ಷಣಿಕ ವ್ಯವಸ್ಥೆಗಳನ್ನು ಮುನ್ನಡೆಸುತ್ತ ಹಾಗೂ ಅತ್ಯಂತ ಸಂಕೀರ್ಣ ಸವಾಲುಗಳನ್ನು ಎದುರಿಸುತ್ತಾ ಬೆಳೆಯುತ್ತಿರುವ ಉಚ್ಚಶಿಕ್ಷಣ ವ್ಯವಸ್ಥೆ ನಮ್ಮದು. ಆದ್ದರಿಂದ ಇದು ನಾವು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾದ, ಎಚ್ಚರದಿಂದ, ಕುತೂಹಲದಿಂದ ಗಮನಿಸಬೇಕಾದ ಬೆಳವಣಿಗೆ.

ಹೊಸ ವ್ಯವಸ್ಥೆಯ ಕುರಿತು ಯೋಜಿಸುವ ಮೊದಲು ಈಗ ಔಟ್‌ಡೇಟೆಡ್ ಎಂದು ಮಾನವ ಸಂಪನ್ಮೂಲ ಮಂತ್ರಾಲಯ ಬಹುಶಃ ಭಾವಿಸಿರುವ ಯುಜಿಸಿಯ ಇತಿಹಾಸವನ್ನು, ಅದು ಏನು ಕೆಲಸ ಮಾಡಲು ಹುಟ್ಟಿಕೊಂಡಿತ್ತು, ಏನನ್ನು ಸಾಧಿಸಿತು ಹಾಗೂ ಎಲ್ಲಿ ವಿಫಲವಾಗಿತ್ತು ಎನ್ನುವುದನ್ನು ಗಮನಿಸಿಕೊಳ್ಳಬೇಕು. ಯುನಿವರ್ಸಿಟಿ ಗ್ರಾಂಟ್‌ಸ್ ಬ್ರಿಟಿಷ್ ಉಚ್ಚಶಿಕ್ಷಣ ರೆಗ್ಯುಲೇಟರಿ ಸಂಸ್ಥೆಯಾದ ‘ಯುನಿವರ್ಸಿಟಿ ಗ್ರಾಂಟ್ ಕಮಿಟಿ’ಯನ್ನು ಅನುಸರಿಸಿ ಆರಂಭವಾದಾಗ ಅದರ ಸುಪರ್ದಿಯಲ್ಲಿ ಅಲಿಗಢ, ಬನಾರಸ್ ಮತ್ತು ದೆಹಲಿ ವಿಶ್ವವಿದ್ಯಾಲಯಗಳು ಬಂದಿದ್ದವು. ನಂತರ ದೇಶದ ಎಲ್ಲ ವಿಶ್ವವಿದ್ಯಾಲಯಗಳನ್ನು ಅದರ ವ್ಯಾಪ್ತಿಗೆ ತರಲಾಯಿತು. ಖ್ಯಾತ ವಿದ್ವಾಂಸರಾದ ಮಾಜಿ ರಾಷ್ಟ್ರಪತಿ ಡಾ.ಎಸ್. ರಾಧಾಕೃಷ್ಣನ್ ಹಾಗೂ ಡಾ. ಮೌಲಾನಾ ಅಬುಲ್ ಕಲಾಂ ಆಜಾದ್ ಅವರಂತವರು ಈ ಸಂಸ್ಥೆಯ ಜತೆ ಸಂಬಂಧ ಹೊಂದಿದ್ದವರು. 1956ರಲ್ಲಿ ಪಾರ್ಲಿಮೆಂಟಿನ ವಿಧೇಯಕ ಒಂದರ ಮೂಲಕ ಮಾನವ ಸಂಪನ್ಮೂಲ ಕೆಳಗಡೆ ಬರುವ ಶಾಸನಬದ್ಧ ಸಂಸ್ಥೆಯಾಗಿ ಅದು ಪರಿವರ್ತನೆಗೊಂಡಿತು. ಈಗಿನ ವ್ಯವಸ್ಥೆಯಲ್ಲಿ ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ, ಏ.ಐ.ಸಿ.ಟಿ.ಇ., ಬಾರ್ ಕೌನ್ಸಿಲ್ ಆಫ್ ಇಂಡಿಯಾ ಇತ್ಯಾದಿ 15 ಬೇರೆ ಬೇರೆ ಅಂಗ ಸಂಸ್ಥೆಗಳು ಯುಜಿಸಿಯ ಕೆಳಗೆ ಕೆಲಸ ಮಾಡುತ್ತಾ ಬೇರೆ ಬೇರೆ ಹಾಗೂ ತಾಂತ್ರಿಕ ವಿಷಯಗಳಿಗೆ ಸಂಬಂಧ ಪಟ್ಟ ಕ್ಷೇತ್ರಗಳ ಅಫಿಲಿಯೇಶನ್, ಅಕ್ರೆಡಿಟೇಶನ್ ಮತ್ತು ಮಾನದಂಡಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿ ದೇಶದ ಉಚ್ಚಶಿಕ್ಷಣಕ್ಕೆ ಮಾರ್ಗಸೂಚಿ ಸೂತ್ರಗಳನ್ನು ಸಿದ್ಧಪಡಿಸುತ್ತ ಶಿಕ್ಷಣವನ್ನು ಮುನ್ನಡೆಸುತ್ತಿದ್ದವು.

ಉಚ್ಚ ಶಿಕ್ಷಣದ ಬೆಳವಣಿಗೆಯಲ್ಲಿ ಯುಜಿಸಿಯ ಶ್ರೇಷ್ಠ ಕೊಡುಗೆ ಮರೆಯಲಾಗದ್ದು. 1986ರಲ್ಲಿ ಪ್ರಧಾನಿ ರಾಜೀವ್ ಗಾಂಧಿ ಹಾಗೂ ಮಾನವ ಸಂಪನ್ಮೂಲ ಸಚಿವ ಅರ್ಜುನ್ ಸಿಂಗ್ ಅದಕ್ಕೆ ಬಲವಾದ ಬೆಂಬಲವನ್ನು ಒದಗಿಸಿ ಉತ್ತಮವಾಗಿ ಕೆಲಸ ಮಾಡುವಂತೆ ಪ್ರೇರೇಪಿಸಿದರು. ಇದರ ಫಲವಾಗಿ 86ರ ನಂತರ ಆಯೋಗ, ರಾಷ್ಟ್ರೀಯ ಮಾನದಂಡಗಳನ್ನು ಉಚ್ಚ ಶಿಕ್ಷಣದಲ್ಲಿ ಅನ್ವಯಗೊಳಿಸಲು ಆರಂಭಿಸಿತು. ಪ್ರಾಧ್ಯಾಪಕರುಗಳಿಗೆ ಗೌರವಾನ್ವಿತ ಸಂಬಳ ಸಾರಿಗೆ ಜಾರಿಗೆ ಬಂದವು. ಸೇವೆಯಲ್ಲಿದ್ದ ಪ್ರಾಧ್ಯಾಪಕರುಗಳಿಗೆ ಎಂ.ಫಿಲ್, ಪಿ.ಎಚ್‌ಡಿ ಪದವಿ ಪಡೆಯಲು ಪ್ರೋತ್ಸಾಹಿಸಲು ಆರಂಭವಾದವು. ಮೇಜರ್ ಮತ್ತು ಮೈನರ್ ರೀಸರ್ಚ ಗ್ರಾಂಟ್‌ಗಳು ಕಾಲೇಜು ಶಿಕ್ಷಕರುಗಳಿಗೂ ಆರಂಭವಾದವು. ಸಂತಸದ ವಿಷಯವೆಂದರೆ ವಿಶ್ವವಿದ್ಯಾಲಯ ಹಾಗೂ ಕಾಲೇಜು ಪ್ರಾಧ್ಯಾಪಕರುಗಳಿಗೆ ಹೆಚ್ಚು ಕಡಿಮೆ ಸಮಾನ ಅವಕಾಶಗಳನ್ನು ಕಲ್ಪಿಸಲು ಯುಜಿಸಿ ಪ್ರಯತ್ನಿಸಿದ್ದು. ಬೋಧಕರ ಚಿಂತನೆಯನ್ನು ಜಾಗ್ರತಗೊಳಿಸಲು, ಅವರ ವಿಷಯ ಜ್ಞಾನವನ್ನು ನವೀಕರಿಸಲು ಯುನಿರ್ವಸಿಟಿಗಳ ಆಶ್ರಯದಲ್ಲಿ ಅಕಾಡೆಮಿಕ್ ಸ್ಟಾಫ್ ಕಾಲೇಜುಗಳನ್ನು ಆರಂಭಿಸಿತು. ಈ ಯೋಜನೆಗಳಲ್ಲಿ ಶಿಕ್ಷಕರು ಸಕ್ರಿಯವಾಗಿ ಭಾಗವಹಿಸುವಂತೆ ಮಾಡಲು ರಿಫ್ರೆಶರ್ ಕೋರ್ಸ್‌ಗಳನ್ನು ಎಂ.ಫಿಲ್‌ಗಳನ್ನು, ಪಿ.ಎಚ್‌ಡಿಗಳನ್ನು ಸ್ಥಾನೀಕರಣಕ್ಕೆ ಮಾನದಂಡಗಳನ್ನಾಗಿ ಪರಿಗಣಿಸಲಾಯಿತು. ವಿದೇಶ ಗ್ರಾಂಟ್‌ಗಳನ್ನು ಆರಂಭಿಸಲಾಯಿತು.

ಸಮರ್ಥ ಶಿಕ್ಷಕರ ಕೊರತೆಯನ್ನು ಅರಿತ ಯುಜಿಸಿ ಉಪನ್ಯಾಸಕ ಹುದ್ದೆಗೆ ರಾಷ್ಟ್ರೀಯ ಅರ್ಹತಾ ಪರೀಕ್ಷೆ (ಎನ್‌ಇಟಿ)ಅನ್ನು ಆರಂಭಿಸಿತು. ಹಾಗೆಯೇ ನೇಮಕಾತಿಯಲ್ಲಿ ಪಾರದರ್ಶಕತೆ ತರಲು ಸಮಗ್ರವಾದ ಗೈಡ್‌ಲೈನ್‌ಗಳನ್ನು ರೂಪಿಸಿತು. ಪಿ.ಎಚ್‌ಡಿಗಳ ಗುಣಮಟ್ಟ ಕಡಿಮೆಯಾಗುತ್ತಿರುವುದನ್ನು ಗಮನಿಸಿ ಅಭ್ಯರ್ಥಿಗಳಿಗೆ ಎಂಟ್ರನ್‌ಸ್ ಟೆಸ್‌ಟ್ಗಳನ್ನು ಹಾಗೆಯೇ ಕೋರ್ಸ್‌ವರ್ಕನ್ನು ಕಡ್ಡಾಯಗೊಳಿಸಿತು. ಶ್ರೇಷ್ಠ ಕಾಲೇಜುಗಳನ್ನು ಹಾಗೂ ಆ ಗುಣಮಟ್ಟ ತಲುಪುವ ಸಾಧ್ಯತೆಗಳನ್ನು ಹೊಂದಿದ ಕಾಲೇಜುಗಳನ್ನು, ವಿಶ್ವವಿದ್ಯಾಲಯಗಳನ್ನು ಗುರುತಿಸಿತು. ಹಾಗೆಯೇ, ಯುಜಿಸಿ ಕಾಲೇಜುಗಳ ನ್ಯಾಕ್ ಗುಣಮಟ್ಟವನ್ನು ಆಧರಿಸಿ ಸಾಕಷ್ಟು ಬುಕ್‌ಗ್ರಾಂಟ್, ಬಿಲ್ಡಿಂಗ್‌ಗ್ರಾಂಟ್, ಸ್ಪೆಶಲ್ ಗ್ರಾಂಟ್‌ಗಳನ್ನು ಒದಗಿಸಿದೆ. ಮಹಿಳೆಯರು ಹೆಚ್ಚು ಪ್ರಮಾಣದಲ್ಲಿ ಭಾಗವಹಿಸುವಂತೆ ಮಾಡಲು ದೇಶಾದ್ಯಂತ ಮಹಿಳಾ ಹಾಸ್ಟೆಲ್‌ಗಳ ನಿರ್ಮಾಣಕ್ಕೆ ಧನ ಸಹಾಯ ಒದಗಿಸಿದೆ.

ವಿಶ್ವವಿದ್ಯಾಲಯ ಕಾಲೇಜುಗಳ ಗುಣಮಟ್ಟವನ್ನು ಪರೀಕ್ಷೆಗೆ ಒಳಪಡಿಸಲು ‘ನ್ಯಾಕ್’ ಎನ್ನುವ ಸ್ವಾಯುತ್ತ ಸಂಸ್ಥೆಯನ್ನು ತೊಂಬತ್ತರ ದಶಕದಲ್ಲಿ ಬೆಂಗಳೂರಿನಲ್ಲಿ ಸ್ಥಾಪಿಸಿದ್ದು ಯುಜಿಸಿಯ ಇನ್ನೂ ಒಂದು ಸಾಧನೆ. ಈ ಮೌಲ್ಯಮಾಪನ ಸಂಸ್ಥೆ ಈಗಾಗಲೇ ದೇಶಾದ್ಯಂತ ಸಾವಿರಾರು ಕಾಲೇಜುಗಳ, ವಿಶ್ವವಿದ್ಯಾಲಯಗಳ ಅಕ್ರೆಡಿಟೇಶನ್ ಮಾಡಿದೆ. ದೇಶದ ಹಲವು ಸಂಸ್ಥೆಗಳು ಈಗ 5/6 ಬರುವ ಈ ನ್ಯಾಕ್ ಅಕ್ರೆಡಿಟೇಶನ್ ನಾಲ್ಕನೇ ಆವೃತ್ತದಲ್ಲಿ ಇವೆ. ಈ ಸಂಸ್ಥೆಗಳಲ್ಲಿ ಹಲವು ಭಾರೀ ಪ್ರಮಾಣದಲ್ಲಿ ಗುಣಮಟ್ಟ ವರ್ಧಿಸಿಕೊಂಡಿದ್ದು ಸುಳ್ಳೇನೂ ಅಲ್ಲ.

ಹಾಗೆಯೇ ಯುಜಿಸಿ ಹಲವು ಪ್ರಮುಖ ವೈಫಲ್ಯಗಳನ್ನು ಕಂಡಿದ್ದು ಕೂಡ ಸತ್ಯವೇ. ಇತ್ತೀಚೆಗೆ ಚರ್ಚೆಯಾದಂತೆ, ದೇಶದಲ್ಲಿ ಗುಣಮಟ್ಟವಿಲ್ಲದ ವಿಶ್ವವಿದ್ಯಾಲಯ ಸ್ಥಾಪನೆ ತಡೆಯಲಾಗದೇ ಹೋದದ್ದು, ಗ್ರಾಂಟ್ ಪಡೆದ ಸಂಸ್ಥೆಗಳ ಮೇಲೆ ಅವು ಸರಿಯಾದ ರೀತಿಯಲ್ಲಿ ಅನುದಾನ ಬಳಕೆ ಮಾಡುತ್ತಿವೆಯೇ ಎಂದು ಕಣ್ಣಿಡಲು ವಿಫಲವಾಗಿದ್ದು ಅವುಗಳಲ್ಲಿ ಕೆಲವು. ಬಹುಶಃ, ಅತಿ ಉಚ್ಚಶ್ಷಿಣದತ್ತ ಪ್ರತಿಭಾವಂತ ಯುವಕ ಯುವತಿಯರನ್ನು ಸೆಳೆಯುವುದರಲ್ಲಿ ಅದು ಯಶಸ್ವಿಯಾಗಲಿಲ್ಲ. ದೇಶದಲ್ಲಿ ಇಂದು ಉಚ್ಚ ಶಿಕ್ಷಣ ಪಡೆಯುವ ವಯಸ್ಸಿನವರಲ್ಲಿ ನೂರಕ್ಕೆ ಮೂವತ್ತರಷ್ಟು ಜನ ಮಾತ್ರ ಅದನ್ನು ಪಡೆಯುತ್ತಿದ್ದು ಉಳಿದವರು ಉಚ್ಚಶಿಕ್ಷಣ ಹೊಂದುವಲ್ಲಿ ಆಸಕ್ತಿ ಹೊಂದಿಲ್ಲ. ಇವೆಲ್ಲ ವೈಫಲ್ಯಗಳ ಜತೆಗೆ ಪದವಿಗಳಿಗೆ ಮೌಲ್ಯ ತುಂಬಲು ಕೂಡ ಯುಜಿಸಿ ಸೋತಿತು.

ಯುಜಿಸಿಯ ಬಾಗಿಲು ಹಾಕಿ ಬೇರೊಂದು ಸ್ವರೂಪದ ಸಂಸ್ಥೆಯನ್ನು ರೂಪಿಸುವ ಕಲ್ಪನೆಗಳೂ ಕೂಡ ಹೊಸತಾಗಿ ಬಂದವುಗಳೇನೂ ಅಲ್ಲ. ವಾಜಪೇಯಿ ಪ್ರಧಾನಿಯಾಗಿದ್ದಾಗ ಯುಜಿಸಿಯನ್ನು ಮರುನಾಮಕರಣಗೊಳಿಸಿ ಅಂದರೆ ‘ಯುನಿವರ್ಸಿಟಿ ಡೆವಲೆಪ್‌ಮೆಂಟ್ ಕಮಿಷನ್’ ಮಾಡಿ ಅದಕ್ಕೆ ಬೇರೆ ರೀತಿಯ ರೂಪ-ನಿರ್ದೇಶನಗಳನ್ನು ನೀಡುವ ಕನಸು ಕಂಡಿದ್ದರು. ಕೇವಲ ಅನುದಾನ ನೀಡುವ ಸಂಸ್ಥೆಯಾಗಿ ಇಂತಹವು ಉಳಿಯಬಾರದು ಎನ್ನುವುದು ವಾಜಪೇಯಿಯವರ ಅಭಿಪ್ರಾಯವಾಗಿತ್ತು. ಹಾಗೆಯೇ 2009ರಲ್ಲಿ ಪ್ರಧಾನಿ ಮನ್‌ಮೋಹನ್ ಸಿಂಗ್ ಸರಕಾರದಲ್ಲಿ ಮಾನವ ಸಂಪನ್ಮೂಲ ಸಚಿವರಾಗಿದ್ದ ಕಪಿಲ್ ಸಿಬಲ್ ಯುಜಿಸಿಯನ್ನು ‘ನ್ಯಾಷನಲ್ ಕೌನ್ಸಿಲ್ ಆಫ್ ಹೈಯರ್ ಎಜುಕೇಶನ್ ಆ್ಯಂಡ್ ರಿಸರ್ಚ್ (ಎನ್‌ಸಿಎಚ್‌ಇಆರ್)ಅನ್ನಾಗಿ ಪರಿವರ್ತಿಸುವ ಇಂಗಿತ ವ್ಯಕ್ತಪಡಿಸಿದ್ದರು.

ಈಗ ಕಲ್ಪಿಸಲಾಗಿರುವ ಹೈಯರ್ ಎಜುಕೇಶನ್ ಕಮಿಶನ್ ಇಂಡಿಯಾದ ಸ್ವರೂಪವನ್ನು ಕುರಿತು ಈಗ ಗಮನಿಸಬೇಕು. ಕೇಂದ್ರ ಸರಕಾರ ತನ್ನ ಪ್ರಸ್ತಾವನೆಯಲ್ಲಿ ಹೇಳಿರುವಂತೆ ಹೊಸ ಸಂಸ್ಥೆಯ ಕುರಿತಾದ ವಿಶೇಷವೇನೆಂದರೆ ಅನುದಾನ ನೀಡುವಿಕೆಯನ್ನು ನೇರವಾಗಿ ಮಾನವ ಸಂಪನ್ಮೂಲ ಇಲಾಖೆ ನೋಡಲಿದೆ. ಹೊಸ ಉಚ್ಚಶಿಕ್ಷಣ ಕಮಿಷನ್ ಅಧಿಕಾರದ ವ್ಯಾಪ್ತಿಯಲ್ಲಿ ಅಕಾಡೆಮಿಕ್ ವ್ಯವಹಾರಗಳಿಗೆ ಸಂಬಂಧಿಸಿದ ಅಂದರೆ, ಗುಣಮಟ್ಟ ಯೋಜನೆ ಮತ್ತು ನಿರ್ವಹಣೆ, ಅಫಿಲಿಯೇಶನ್, ಅಕ್ರೆಡಿಟೇಶನ್ ಮತ್ತು ಮೌಲ್ಯ ಮಾಪನ ವ್ಯವಸ್ಥೆಗಳು ಬರಲಿವೆ. ಕೇಂದ್ರ ಸರಕಾರ ಹೇಳುವಂತೆ ಈ ವ್ಯವಸ್ಥೆಯ ಗುರಿಗಳು ತುಂಬ ಸ್ಪಷ್ಟವಾಗಿದ್ದು ಮತ್ತು ಅಕಾಡೆಮಿಕ್ ವಿಷಯಗಳನ್ನು ಪ್ರತ್ಯೇಕಿಸಲಾಗಿದೆ. ಕೇಂದ್ರ ಸರಕಾರದ ವಾದದಂತೆ ಇದರಿಂದಾಗಿ ಇನ್‌ಸ್ಪೆಕ್ಷನ್ ರಾಜ್ಯ ಕೊನೆಗೊಳ್ಳಲಿದೆ. ಹಾಗೂ ಗುಣಮಟ್ಟದ ಶಿಕ್ಷಣದ ಮೇಲೆ ಒತ್ತು ಸಿಗಲಿದೆ. ಬೋಗಸ್ ಶಿಕ್ಷಣ ಸಂಸ್ಥೆಗಳು ಅಂತ್ಯ ಕಾಣಲಿವೆ. ಏಕೆಂದರೆ ಕೇಂದ್ರ ಸರಕಾರ ಹೇಳುವಂತೆ ಮೋಸದ ಶಿಕ್ಷಣ ಸಂಸ್ಥೆಗಳ ಮೇಲೆ ಕಠಿಣ ಕ್ರಮ ಜರುಗಿಸುವ ಶಕ್ತಿ ಈ ವ್ಯವಸ್ಥೆಯಲ್ಲಿ ಕೇಂದ್ರ ಸರಕಾರದ ಬಳಿ ಇರುತ್ತದೆ.

ಆದರೆ ದೇಶಾದ್ಯಂತ ಇರುವ ಉಚ್ಚ ಶಿಕ್ಷಣಕ್ಕೆ ಸಂಬಂಧಿಸಿದ ಶಿಕ್ಷಕ ಸಂಘಟನೆಗಳು ಹಾಗೂ ಸಂಘಟನೆಗಳು ಈ ಮಾತುಗಳಿಂದ ತೃಪ್ತಗೊಂಡಿಲ್ಲ. ಹೊಸ ವ್ಯವಸ್ಥೆಗೆ ಅವು ಇಗಾಗಲೇ ತೀವ್ರ ವಿರೋಧ ವ್ಯಕ್ತಪಡಿಸಿವೆ. ಅವು ಹೇಳುವುದೆಂದರೆ ಇದರಿಂದಾಗಿ ಗ್ರಾಂಟ್ ನೀಡುವ ಸಚಿವಾಲಯ ತುಂಬ ಪ್ರಭಾವಶಾಲಿಯಾಗಿ ಪರಿವರ್ತನೆಯಾಗಬಹುದು. ಅಲ್ಲದೇ ಉಚ್ಚಶಿಕ್ಷಣದ ಸರಕಾರೀಕರಣದ ದಿನಗಳು ಆರಂಭವಾಗಿ ಹೊಸ ಐಡಿಯಾಗಳು, ಚಿಂತನೆಗಳು, ವ್ಯಾಪಕವಾದ ಸುಧಾರಣೆಗಳು ಅಗತ್ಯವಾಗಿರುವ ಇಂದಿನ ದಿನಗಳಲ್ಲಿ ಅದು ಅಧಿಕಾರಶಾಹಿಯಲ್ಲಿ ಸಿಲುಕುವ ಸಾಧ್ಯತೆ ಇರುತ್ತದೆ.

ವಿರೋಧಿ ಧ್ವನಿಗಳು ಹೇಳುವುದೆಂದರೆ ಕೇವಲ ಅಕ್ರೆಡಿಟೇಶನ್ ನೀಡುವ ಸಂಸ್ಥೆ ಕ್ರಮೇಣ ಶಕ್ತಿಹೀನವಾಗಿ ಹೋಗುತ್ತದೆ. ಅಲ್ಲದೆ ಕೋರ್ಸ್‌ಗಳ ಆರಂಭದ ಸಂದರ್ಭದಲ್ಲಿಯಂತೂ ಅವುಗಳ ಆರಂಭ ಹಣಕಾಸಿನೊಂದಿಗೆ ತಳಕು ಹಾಕಿಕೊಂಡಿರುತ್ತದೆ. ಹಾಗಾಗಿ ಒಂದೇ ಸಂಸ್ಥೆ ಇವೆರಡನ್ನೂ ತೂಗಿ ನೋಡುವುದು ಒಳ್ಳೆಯದು ಎನ್ನುವುದು ಅವರ ಅಭಿಪ್ರಾಯ. ಎರಡೂ ವಾದಗಳಲ್ಲಿಯೂ ಕೆಲವು ಸತ್ಯಾಂಶಗಳಿವೆ. ಆದರೂ ಕೂಡ ದೇಶಾದ್ಯಂತ ಮನೆ ಮನೆಗೂ ತಿಳಿದಿರುವ ಯುಜಿಸಿಯನ್ನು ಒಮ್ಮೆಲೇ ಬಂದ್ ಮಾಡಿ ಹೊಸ ವ್ಯವಸ್ಥೆ ಕಟ್ಟುವುದಕ್ಕಿಂತಲೂ ಇರುವ ಆಯೋಗಕ್ಕೇ ಇನ್ನೂ ಹೆಚ್ಚು ಕಾನೂನಾತ್ಮಕ ಶಕ್ತಿ ನೀಡಿ ಹೊಸ ನಿರ್ದೇಶನಗಳನ್ನು ನೀಡುವುದು ಹಾಗೂ ಜಾಗತಿಕ ಮಟ್ಟದ, ದೇಸಿ ಅಂಶಗಳನ್ನು ಮರೆಯದ ಗೊತ್ತು ಗುರಿಗಳನ್ನು ಅದರ ಮುಂದಿಡುವುದು ಸಾಧ್ಯವಿತ್ತು. ಆದರೆ ಒಪ್ಪಿಕೊಳ್ಳಲೇ ಬೇಕಾದ ವಿಷಯವೆಂದರೆ ಯುಜಿಸಿಯ ಕಾರ್ಯ ವಿಧಾನಗಳನ್ನು ಹೊಸ ಬೆಳಕಿನಲ್ಲಿ ನೋಡುವ ಅಗತ್ಯ ಮಾತ್ರ ಖಂಡಿತಕ್ಕೂ ಇತ್ತು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ