ಸರ್ಕಾರದ ಜವಾಬ್ದಾರಿ
ಉನ್ನತ ಶಿಕ್ಷಣವನ್ನು ಪ್ರತಿಯೊಬ್ಬರಿಗೂ ದೊರಕಿಸಿಕೊಡುವುದು ಸರ್ಕಾರದ ಜವಾಬ್ದಾರಿಯಾಗಿರುತ್ತದೆ. ಸರ್ಕಾರದ ಬಿಗಿಯಾದ ನಿಯಂತ್ರಣ ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ಹೆಚ್ಚಿಸುವುದರ ಬದಲಾಗಿ ಸರಬರಾಜು ಬೇಡಿಕೆಯಲ್ಲಿ ಅಸಮಾನತೆ ಉಂಟಾಗಿ ಒಂದು ರೀತಿಯ ಕೃತಕ ಕೊರತೆಯನ್ನು ಮಾರುಕಟ್ಟೆಯಲ್ಲಿ ಉಂಟು ಮಾಡುತ್ತಿದೆ ಎಂಬುದು ಇನ್ನೂ ಹಲವು ತಜ್ಞರ ವಾದ. ಇನ್ನೂ ಕೆಲವರು ಇಂದು ನಿಯಂತ್ರಣ ಪ್ರಕ್ರಿಯೆಯು ಸಂಪೂರ್ಣವಾಗಿ ರಾಜಕೀಯವಾಗಿದೆ.
ಇಂದು ಅತಿ ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ರಾಜಕಾರಣಿಗಳು ಅಥವಾ ಕಾರ್ಪೊರೇಟ್ ವರ್ಗದ ಹಿಡಿತದಲ್ಲಿದೆ. ಆದ್ದರಿಂದ ಸರ್ಕಾರಗಳು ಎಷ್ಟೇ ಬಿಗಿಯಾದ ನಿಯಮಗಳನ್ನು ಜಾರಿಗೆ ತಂದರೂ ಅವುಗಳನ್ನು ಅನುಸರಿಸುವ ಗೋಜಿಗೆ ಹೋಗುವುದಿಲ್ಲ.
ಮತ್ತು ಕನಿಷ್ಠ ಮಾರ್ಗದರ್ಶಿ ಸೂತ್ರಗಳ ಪಾಲನೆಯನ್ನು ಖಾತ್ರಿ ಪಡಿಸಿಕೊಳ್ಳುವ ಜವಾಬ್ದಾರಿಯನ್ನು ಸಹಾ ಸರ್ಕಾರಗಳು ಇತ್ತೀಚೆಗೆ ನಿಭಾಯಿಸದಿರುವುದು ತುರ್ತಾಗಿ ಯೋಚಿಸಬೇಕಾದ ವಿಚಾರ ಎನ್ನುತ್ತಾರೆ.
ಆದುದರಿಂದ ನಿಯಂತ್ರಣ ಅಥವಾ ನಿಯಮಗಳು ಮುಖ್ಯವಾಗಿ ಅವಶ್ಯಕತೆ, ಪ್ರಸ್ತುತತೆ, ಪ್ರಾಯೋಗಿಕ ಆಚರಣೆ ನಿರ್ಬಂಧ ಮತ್ತು ಮಾರುಕಟ್ಟೆಯ ಬೇಡಿಕೆಯಂತಹ ರಚನಾತ್ಮಕ ವಿಚಾರಗಳನ್ನು ಹೊಂದಿರಬೇಕಾದ ಅವಶ್ಯಕತೆ ಇದೆ.
ಉನ್ನತ ಶಿಕ್ಷಣವನ್ನು ಬೇಡಿಕೆಗೆ ಅನುಗುಣವಾಗಿ ನೀಡುವುದು ಇಂದಿನ ಅವಶ್ಯಕತೆಗಳಲ್ಲಿ ಒಂದು, ಕಳೆದ ಕೆಲವು ದಶಕಗಳಿಂದ ಉನ್ನತ ಶಿಕ್ಷಣವನ್ನು ಒಂದು ನಿರ್ದಿಷ್ಟ ದಿಕ್ಕಿನಲ್ಲಿ ಕೊಂಡೊಯ್ಯುವ ಪ್ರಯತ್ನ ಆಗುತ್ತಿಲ್ಲ. ಜೊತೆಗೆ ಮಾನ್ಯತಾ ಪ್ರಕ್ರಿಯೆಯು ಒಂದು ಶ್ರಮದಾಯಕ ಅಧಿಕಾರಿಶಾಹಿ ಪ್ರಕ್ರಿಯೆಯಾಗಿ ಇಂದಿಗೂ ಉಳಿದಿದೆ.
ಕೇವಲ `ನ್ಯಾಕ್~ನಂತಹ ಸಂಸ್ಥೆಗಳಿಂದ ರಾತ್ರೋರಾತ್ರಿ ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆ ತರಲು ಸಾಧ್ಯವಿಲ್ಲ. ಉನ್ನತ ಶಿಕ್ಷಣದಲ್ಲಿ ಗುಣಾತ್ಮಕತೆಯನ್ನು ಕಾಪಾಡಲು ವಿಕೇಂದ್ರೀಕರಣವನ್ನು ಜಾರಿಗೆ ತರಬೇಕೆಂಬುದು ತಜ್ಞರ ಅಭಿಪ್ರಾಯ.
ಉನ್ನತ ಶಿಕ್ಷಣದ ನಿರ್ವಹಣೆ
ಭಾರತದಲ್ಲಿ ಇಂದು ಸಾವಿರಾರು ಉನ್ನತ ಶಿಕ್ಷಣ ಸಂಸ್ಥೆಗಳಿದ್ದರೂ ಅವೈಜ್ಞಾನಿಕ ನಿರ್ವಹಣೆಯಿಂದ ಅವುಗಳ ಕಾರ್ಯಕ್ಷಮತೆ ಕುಂಠಿತಗೊಂಡಿದೆ. ಸ್ವಾತಂತ್ರ್ಯ ಪೂರ್ವ ನಿರ್ವಹಣ ವ್ಯವಸ್ಥೆಯನ್ನೇ ಅವುಗಳು ನೆಚ್ಚಿಕೊಂಡಿವೆ.
ಸಮಾಜದ ಬೇಡಿಕೆ ಸ್ವರೂಪ ಬದಲಾದಂತೆ ಇವುಗಳು ಸಹ ಬದಲಾಗಬೇಕಾದ ಅವಶ್ಯಕತೆ ಇದೆ. ಡಬ್ಲ್ಯು.ಟಿ.ಓ. ಒಪ್ಪಂದದ ನಂತರ ಭಾರತದ ಪ್ರತಿಭೆಗಳಿಗೆ ವಿಶ್ವದಾದ್ಯಂತ ಅತ್ಯುನ್ನತ ಮನ್ನಣೆ ದೊರಕುತ್ತಿದೆ. ಅಷ್ಟೇ ಮಟ್ಟದಲ್ಲಿ ಉನ್ನತ ಶಿಕ್ಷಣದಲ್ಲಿ ವಿಶ್ವದಾದ್ಯಂತ ಸ್ಪರ್ಧಾತ್ಮಕತೆ ಸಹ ಹೆಚ್ಚಾಗುತ್ತಿದೆ.
ಆದುದರಿಂದ ಭಾರತ ಸಹ ತನ್ನ ಮಾನವ ಸಂಪನ್ಮೂಲವನ್ನು ಅಂತರರಾಷ್ಟ್ರೀಯ ಮಟ್ಟಕ್ಕೆ ಪುನರ್ರೂಪಿಸಬೇಕಾಗಿದೆ. ಭಾರತ ಮಾದರಿಯ ಉನ್ನತ ಶಿಕ್ಷಣವನ್ನು ವಿದೇಶಗಳಿಗೆ ರಫ್ತು ಮಾಡಬೇಕಾಗಿದೆ. ದೇಶದಲ್ಲಿ ಲಭ್ಯವಿರುವ ವಿ.ವಿಗಳು ಸಂಶೋಧನಾ ವ್ಯವಸ್ಥೆಯನ್ನು ಪುನರ್ರೂಪಿಸಬೇಕಾಗಿದೆ.
ಸಾರ್ವಜನಿಕ - ಖಾಸಗಿ ತತ್ವವನ್ನು ಅಳವಡಿಸಿಕೊಳ್ಳುವುದು ಇಂದಿನ ತುರ್ತು ಅಗತ್ಯಗಳಲ್ಲಿ ಒಂದು. ಇದರಿಂದ ವಿಶೇಷ ವಿವಿಗಳು, ಖಾಸಗಿ ವಿವಿಗಳು, ಸ್ವಾಯತ್ತ ವಿವಿಗಳಿಂದ ಸಹ ಉನ್ನತ ಶಿಕ್ಷಣ ಕ್ಷೇತ್ರ ವಿಸ್ತಾರಗೊಳ್ಳುವ ಸಾಧ್ಯತೆ ಇರುತ್ತದೆ.
ರಾಷ್ಟ್ರೀಯ ಮಾನವ ಸಂಪನ್ಮೂಲ ಅಭಿವೃದ್ಧಿ ನಿಧಿ ಎಂಬ ಹೊಸ ಸಂಸ್ಥೆಯನ್ನು ಸ್ಥಾಪಿಸಿ ನಿಧಿಯ ಶೇಕಡಾ 2ರಷ್ಟನ್ನು ಇದಕ್ಕೆ ಬಳಕೆ ಮಾಡಿಕೊಳ್ಳುವುದರ ಬಗ್ಗೆ ಸರ್ಕಾರದ ತೀರ್ಮಾನ ಈ ನಿಟ್ಟಿನಲ್ಲಿ ತುಂಬಾ ಸಹಕಾರಿಯಾಗಿದೆ. ಇದರ ಮೂಲಕ ದೇಶದ ಅಸಂಖ್ಯಾತ ಪ್ರತಿಭೆಗಳಿಗೆ ಉನ್ನತ ಶಿಕ್ಷಣ ದೊರಕಲು ನೆರವಾಗುತ್ತದೆ.
ದೇಶದ ಸಂಪನ್ಮೂಲ ಬಳಸಿ ಉನ್ನತ ಸ್ಥಾನ ಪಡೆದ ಪ್ರತಿಭೆಗಳಿಂದ ವಿಶೇಷ ತೆರಿಗೆ ಸಂಗ್ರಹಿಸುವ ಯೋಜನೆಯ ಸಾಧಕ - ಬಾಧಕಗಳ ಬಗ್ಗೆ ಚಿಂತಿಸಬೇಕಾಗಿದೆ. ದೇಶದ ಕೈಗಾರಿಕಾ ರಂಗ ಸಹ ಉನ್ನತ ಶಿಕ್ಷಣದ ಗುಣಾತ್ಮಕತೆಗೆ ಕೈಜೋಡಿಸುವ ಅಗತ್ಯ ಇದೆ.
ನಿರ್ದಿಷ್ಟ ವಿಶೇಷತೆ ಹೊಂದಿರುವ ಉನ್ನತ ಸಂಶೋಧನೆ ಸಂಸ್ಥೆಗಳನ್ನು ಸಾಧಿಸುವತ್ತ ಕೈಗಾರಿಕಾ ರಂಗಕ್ಕೆ ಉತ್ತೇಜನ ನೀಡಬೇಕಾಗಿದೆ. ಖಾಸಗಿ ರಂಗಕ್ಕೆ ಆಸಕ್ತಿ ಇಲ್ಲದಿರುವ ಕ್ಷೇತ್ರಗಳಲ್ಲಿ ಸರ್ಕಾರ ಬಂಡವಾಳ ಹೂಡಲೇಬೇಕು. ಸಮತೋಲಿತ ಪ್ರತಿಭಾ ಬೆಳವಣಿಗೆಗೆ ಇದು ತೀರಾ ಅವಶ್ಯ.
ಹೊಸ ವಿವಿಗಳ ಆರಂಭಕ್ಕಿಂತ ಈಗಾಗಲೇ ಇರುವ ವಿವಿಗಳಿಗೆ ಸಾಕಷ್ಟು ಧನ ಸಹಾಯದ ಅಗತ್ಯ ಇದೆ. ಉನ್ನತ ಶಿಕ್ಷಣ ಸಂಸ್ಥೆಗಳಿಂದ ಬರುವ ಪಿಎಚ್.ಡಿ. ಪದವಿಗಳು ಗುಣಾತ್ಮಕತೆಗೆ ಹೆಚ್ಚಿನ ಒತ್ತು ನೀಡಬೇಕಾಗುತ್ತದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ