ಗುಣಾತ್ಮಕ ಉನ್ನತ ಶಿಕ್ಷಣ: ಹೊಸ ಸಾಧ್ಯತೆ, ಸವಾಲುಗಳು
ಕಳೆದ ಎರಡು ದಶಕಗಳಲ್ಲಿ ಭಾರತದ ಉನ್ನತ ಶಿಕ್ಷಣ ಅಗಾಧವಾದ ಬೆಳವಣಿಗೆ ಕಂಡಿದೆ. ಚೀನಾ ಮತ್ತು ಅಮೆರಿಕಾ ಬಿಟ್ಟರೆ ಭಾರತದಲ್ಲಿ ಜಗತ್ತಿನಲ್ಲೇ ಹೆಚ್ಚಾಗಿ ಉನ್ನತ ಶಿಕ್ಷಣವನ್ನು ವಿದ್ಯಾರ್ಥಿಗಳು ಪಡೆಯುತ್ತಿದ್ದಾರೆ. ವರ್ಷಕ್ಕೆ ಶೇಕಡಾ 8.5 ವಿದ್ಯಾರ್ಥಿಗಳು ಇಂದು ವಿವಿಧ ರೀತಿಯ ಉನ್ನತ ಶಿಕ್ಷಣಕ್ಕೆ ದಾಖಲಾಗುತ್ತಿದ್ದಾರೆ.
ಸುಮಾರು 380 ವಿವಿಗಳು (ವಿಶ್ವವಿದ್ಯಾಲಯಗಳು), 23 ಸಾವಿರ ವಿವಿಧ ಪದವಿ ಕಾಲೇಜುಗಳು, 80-100 ಸ್ವಾಯತ್ತ ವಿವಿಗಳು, 140-150 ಉನ್ನತ ಸಂಶೋಧನಾ ಸಂಸ್ಥೆಗಳು ದೇಶದಾದ್ಯಂತ ಕಾರ್ಯ ನಿರ್ವಹಿಸುತ್ತಿವೆ.
ಆದರೂ ಉನ್ನತ ಶಿಕ್ಷಣಕ್ಕೆ ಬೇಡಿಕೆ ಹೆಚ್ಚುತ್ತಿದ್ದಂತೆ, ಇಂದು ಖಾಸಗಿ ಶಿಕ್ಷಣ ವ್ಯವಸ್ಥೆ ಉನ್ನತ ಶಿಕ್ಷಣ ಕ್ಷೇತ್ರವನ್ನು ನಿಧಾನವಾಗಿ ಆಕ್ರಮಿಸಿಕೊಳ್ಳುತ್ತಿದೆ. ಇಲ್ಲಿ ಯಾವುದೇ ಗುಣಮಟ್ಟಕ್ಕೆ ಆದ್ಯತೆ ಇಲ್ಲ.
ಸರ್ಕಾರದ ದ್ವಂದ್ವ ನಿಲುವು, ರಾಜಕೀಯ ಇಚ್ಛಾಶಕ್ತಿಯ ಕೊರತೆ , ಜೊತೆಗೆ ಹಲವಾರು ರಾಜಕಾರಣಿಗಳು ಖಾಸಗಿ ಶಿಕ್ಷಣಕ್ಷೇತ್ರದಲ್ಲಿ ಹೂಡಿರುವ ಬಂಡವಾಳ (ಕಪ್ಪು ಹಣ)ದಿಂದ ಉನ್ನತ ಶಿಕ್ಷಣದ ಗುಣಮಟ್ಟ ಹೇಳಹೆಸರಿಲ್ಲದಂತಾಗಿ ಹಣ ಮಾಡುವ ಪ್ರವೃತ್ತಿಯೇ ಹೆಚ್ಚಾಗಿದೆ.
ಸುಮಾರು 70 ಸಾವಿರ ಕೋಟಿ ಹಣ ಇಂದು ಖಾಸಗಿಯವರು ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಹೂಡಿದ್ದಾರೆ ಎಂದರೆ ತಪ್ಪಿಲ್ಲ. ಕೈಯಲ್ಲಿ ಹಲವು ಲಕ್ಷ ಹಣ ಇದ್ದರೆ ಯಾರು ಬೇಕಾದರೂ ಇಂದು ದೇಶದಲ್ಲಿ ಒಂದು ಖಾಸಗಿ ವಿವಿಯನ್ನು ತೆರೆಯಬಹುದು.
ಅದರ ಮೂಲಕ ಆ ವ್ಯಕ್ತಿ ಇನ್ನೂ ಹಲವು ಕೋಟಿಗಳನ್ನು ಗಳಿಸಬಹುದು. ಮುಂದೊಂದು ದಿನ ಪ್ರಾಥಮಿಕ ಶಾಲೆಗಳಿಗಿಂತ ವಿ.ವಿಗಳ ಸಂಖ್ಯೆಯೇ ಹೆಚ್ಚಿದರೂ ಆಶ್ಚರ್ಯವಿಲ್ಲ. ಜಿಲ್ಲೆಗೊಂದು, ತಾಲ್ಲೂಕಿಗೊಂದು ವಿ.ವಿಗಳು ಬರುವ ದಿನ ಸಹ ದೂರವಿಲ್ಲ.
ಭಾರತದ ಉನ್ನತ ಶಿಕ್ಷಣ ಇಂದು ಹಲವಾರು ಸಮಸ್ಯೆಗಳಿಂದ ನರಳುತ್ತಿದೆ. ಮೂಲಭೂತ ಸೌಕರ್ಯಗಳ ಕೊರತೆ, ಶಿಕ್ಷಣದ ಖಾಸಗೀಕರಣ, ನುರಿತ ಅಧ್ಯಾಪಕರ ಕೊರತೆ, ಅವೈಜ್ಞಾನಿಕ ರೀತಿಯ ಬೋಧನಾ ವಿಧಾನ, ಕುಂಠಿತ ಸಂಶೋಧನಾ ಗುಣಮಟ್ಟ, ಕೃತಿಚೌರ್ಯ, ವಿದ್ಯಾರ್ಥಿಗಳಲ್ಲಿ ಕಲಿಕಾ ಆಸಕ್ತಿ ಕಡಿಮೆಯಾಗಿರುವುದು, ಕೆಲವೊಮ್ಮೆ ತುಂಬಿ ತುಳುಕುವ ತರಗತಿಗಳು, ಶಿಕ್ಷಣ ಕ್ಷೇತ್ರಕ್ಕೆ ರಾಜಕೀಯದ ಪ್ರವೇಶ, ಉನ್ನತ ಶಿಕ್ಷಣಕ್ಕೆ ಸರ್ಕಾರದ ಅನುದಾನದ ಕೊರತೆ, ಖಾಸಗಿ ಶಿಕ್ಷಣ ಕ್ಷೇತ್ರದ ಮೇಲೆ ಸರ್ಕಾರದ ಹಿಡಿತ ಇಲ್ಲದೇ ಇರುವುದು, ಪೋಷಕರ ಅತಿಯಾದ ನಿರೀಕ್ಷೆ, ಉದ್ಯೋಗದ ಭರವಸೆ ಇಲ್ಲದಿರುವುದು, ನಿರ್ದಿಷ್ಟ ನಿಯಂತ್ರಣ ಮತ್ತು ಮೌಲ್ಯಮಾಪನ ವ್ಯವಸ್ಥೆ ಇಲ್ಲದೇ ಇರುವುದು ಇತ್ಯಾದಿ.
ಆರ್ಥಿಕ ಸುಧಾರಣೆಯ ಅಂಗವಾಗಿ, ಉನ್ನತ ಶಿಕ್ಷಣಕ್ಕೆ ನೀಡುತ್ತಿರುವ ಅನುದಾನವನ್ನೂ 1990ರಿಂದ ಕೇಂದ್ರ ಸರ್ಕಾರ ನಿಧಾನವಾಗಿ ಕಡಿಮೆ ಮಾಡುತ್ತಿದೆ. 1990ರಿಂದ 2003ರವರೆಗೆ ಸುಮಾರು ಶೇ. 25ರಷ್ಟು ಅನುದಾನ ಉನ್ನತ ಶಿಕ್ಷಣಕ್ಕೆ ಕಡಿಮೆಯಾಗಿದೆ. ಇದರಿಂದ ಉನ್ನತ ಶಿಕ್ಷಣದ ಗುಣಮಟ್ಟ ಪಾತಾಳ ತಲುಪಿದೆ. ಹೆಚ್ಚಿನ ಉನ್ನತ ಶಿಕ್ಷಣ ಸಂಸ್ಥೆಗಳು ಸರ್ಕಾರದ ಅನುದಾನವನ್ನೇ ನೆಚ್ಚಿಕೊಂಡು ಕಾರ್ಯನಿರ್ವಹಿಸುತ್ತಿವೆ.
ವಿದ್ಯಾರ್ಥಿಗಳ ಶುಲ್ಕ ಸಂಗ್ರಹಣೆ ಕಡಿಮೆಯಾಗುತ್ತಿದೆ. ಸರ್ಕಾರದ ಹಣದ ಹೆಚ್ಚಿನ ಭಾಗ ವೇತನ ಭತ್ಯೆಗೆ ಖರ್ಚಾಗುತ್ತಿದೆ. ಅಭಿವೃದ್ಧಿಗೆ ಹಣ ಸಾಲುತ್ತಿಲ್ಲ. ಈ ಎಲ್ಲಾ ಕಾರಣದಿಂದ ಉದ್ಯೋಗ ಮಾರುಕಟ್ಟೆ ಬೇಡುವ ಪ್ರತಿಭಾವಂತ, ಜಾಣ್ಮೆಯ ವಿದ್ಯಾರ್ಥಿಗಳನ್ನು ಸೃಷ್ಟಿಸಲು ಭಾರತದ ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಇಂದು ಸಾಧ್ಯವಾಗುತ್ತಿಲ್ಲ.
ಉನ್ನತ ಶಿಕ್ಷಣಕ್ಕೆ ವಿದ್ಯಾರ್ಥಿಗಳಿಗೆ ಸಾಲ ಯೋಜನೆಯನ್ನು 2000-2001 ರಿಂದ ಜಾರಿಗೆ ತರಲಾಯಿತು. ಆದರೆ ಇಂದೂ ಸಹ ಅಷ್ಟು ಸುಲಭವಾಗಿ ಈ ಸಾಲ ವಿದ್ಯಾರ್ಥಿಗಳಿಗೆ ದೊರಕುತ್ತಿಲ್ಲ.
ಹಿಂದುಳಿದ ವಿದ್ಯಾರ್ಥಿಗಳಿಗೆ ಬ್ಯಾಂಕ್ ಸಾಲದ ವಿಚಾರದಲ್ಲಿ ಕೆಲವು ರಿಯಾಯಿತಿ ಇರಬೇಕೆಂಬ ಬೇಡಿಕೆಗೆ ಇನ್ನೂ ಮನ್ನಣೆ ದೊರಕಿಲ್ಲ. ಇದರಿಂದ ಉನ್ನತ ಶಿಕ್ಷಣ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಗಗನ ಕುಸುಮವಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಇಂತಹ ಸಾಲ ನೀಡಿಕೆಯ್ಲ್ಲಲಿ ಬಡ ವಿದ್ಯಾರ್ಥಿಗಳಿಗೆ ಹಲವು ರಿಯಾಯಿತಿ ನೀಡಲಾಗಿದೆ.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ